ಒಡೆದುಹೋದ ಮೊಬೈಲ್ ಕೆರಳಿದ ಮೊಮ್ಮಗನಿಂದ ಅಜ್ಜಿಯ ಕೊಲೆ
ಬೆಂಗಳೂರು, ಎ. 26: ಕ್ಷುಲ್ಲಕ ಕಾರಣಕ್ಕಾಗಿ ಮೊಮ್ಮಗನೊಬ್ಬ ತನ್ನ ಅಜ್ಜಿಯನ್ನೇ ಕೊಲೆ ಮಾಡಿ ಪರಾರಿಯಾಗಿರುವ ಹೃದಯ ವಿದ್ರಾವಕ ಘಟನೆ ಇಲ್ಲಿನ ಬನಶಂಕರಿಯ ಕದಿರೇನಹಳ್ಳಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ಕದಿರೇನಹಳ್ಳಿಯ ಸಪಲಮ್ಮ ರಸ್ತೆಯ ಲಕ್ಷ್ಮಮ್ಮ (90) ಮೃತಪಟ್ಟವರು. ಕೃತ್ಯವೆಸಗಿದ ಈಕೆಯ ಮೊಮ್ಮಗ ಶಿವರಾಜ್(22) ತಲೆಮರೆಸಿಕೊಂಡಿದ್ದಾನೆ.
ಕೂಲಿ ಕೆಲಸ ಮಾಡುತ್ತಿದ್ದ ಶಿವರಾಜ ರಾತ್ರಿ 8ರ ವೇಳೆ ಮನೆಗೆ ಬಂದು ಮೊಬೈಲ್ ಚಾರ್ಜ್ಗೆ ಹಾಕಿದ್ದಾನೆ. ಈ ವೇಳೆ ಲಕ್ಷ್ಮಮ್ಮ ಊರುಗೋಲಿನ ಆಸರೆಯಲ್ಲಿ ಬಂದಿದ್ದು, ಊರುಗೋಲಿಗೆ ಚಾರ್ಜರ್ ವೈರ್ ಸಿಕ್ಕಿಹಾಕಿಕೊಂಡು ಮೊಬೈಲ್ ಕೆಳಗೆಬಿದ್ದು ಒಡೆದುಹೋಗಿದೆ.
ಮೊಬೈಲ್ ಒಡೆದು ಹೋಗಿದ್ದನ್ನು ಕಂಡು ಆಕ್ರೋಶಗೊಂಡ ಶಿವರಾಜ ಜಗಳ ತೆಗೆದು ಅಜ್ಜಿಯ ಕೊರಳಿಗೆ ಮರದ ತುಂಡಿನಿಂದ ಬಲವಾಗಿ ಹೊಡೆದಿದ್ದಾನೆ. ಗಾಯಗೊಂಡಿದ್ದ ಲಕ್ಷ್ಮಮ್ಮ ಅವರಿಗೆ ಮನೆಯವರು ಔಷಧಿ ಹಾಕಿ ಮಲಗಿಸಿದ್ದು, ಕೆಲ ಹೊತ್ತಿನಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬನಶಂಕರಿ ಠಾಣಾ ಪೊಲೀಸರು ಶಿವರಾಜ್ಗಾಗಿ ತೀವ್ರ ಶೋಧ ನಡೆಸಿದ್ದಾರೆ.