ಮುಂದುವರಿದ ಠಾಕ್ರೆ ಆಸ್ತಿ ವಿವಾದ, ದಂಡ ಕಟ್ಟಿದರೂ ಮಾಹಿತಿ ನೀಡುವುದಿಲ್ಲ!

Update: 2016-07-04 18:33 GMT

90 ಲಕ್ಷ ರೇಶನ್ ಕಾರ್ಡ್‌ದಾರರಿಗೆ
ಎಲ್.ಪಿ.ಜಿ. ಜೊತೆಗೆ ಸೀಮೆಎಣ್ಣೆಯೂ!

ಅಡುಗೆ ಗ್ಯಾಸ್‌ನ ಕನೆಕ್ಷನ್ ಇರುವ ಹೊರತಾಗಿಯೂ ಮಹಾರಾಷ್ಟ್ರ ರಾಜ್ಯದಲ್ಲಿ 90 ಲಕ್ಷ ರೇಶನ್ ಕಾರ್ಡ್‌ದಾರರು ಸೀಮೆಎಣ್ಣೆ ಕೂಡಾ ಪಡೆಯುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಸಬ್ಸಿಡಿಯ ಗ್ಯಾಸ್ ಪಡೆದುಕೊಂಡ ನಂತರವೂ ರಾಜ್ಯ ಸರಕಾರಕ್ಕೆ ಸುಮಾರು ಎರಡೂವರೆ ಸಾವಿರ ಕೋಟಿ ರೂಪಾಯಿ ವಂಚಿಸುತ್ತಿರುವ ಸಂಗತಿ ಇದೀಗ ಬಯಲಾಗಿದೆ. ಇಂತಹ ರೇಶನ್ ಕಾರ್ಡ್ ಹೊಂದಿರುವವರ ವಿರುದ್ಧ ಅಭಿಯಾನ ಕೈಗೊಳ್ಳಲು ರಾಜ್ಯದ ಸಂಬಂಧ ಪಟ್ಟ ಇಲಾಖೆ ನಿರ್ಧರಿಸಿದೆ.
 ಈ ವಂಚನೆಯಿಂದಾಗಿ ಅಗತ್ಯವಿರುವ ಸೀಮೆಎಣ್ಣೆ ನೈಜ ಫಲಾನುಭವಿಗಳಿಗೆ ಸಿಗುತ್ತಿಲ್ಲ. ಕೇಂದ್ರ ಸರಕಾರದ ನೀತಿಯಂತೆ ಗ್ರಾಮೀಣ ವಲಯಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಗ್ಯಾಸ್ ಕನೆಕ್ಷನ್ ನೀಡಿ ಸೀಮೆ ಎಣ್ಣೆ ಪೂರೈಕೆ ನಿಲ್ಲಿಸಲಾಗುತ್ತಿದೆ. ಇದೀಗ ರಾಜ್ಯದ ಎಲ್ಲಾ ರೇಶನ್ ಕಾರ್ಡ್‌ಧಾರರ ಪಟ್ಟಿಯನ್ನು ಗ್ಯಾಸ್ ಏಜೆನ್ಸಿಗಳ ಬಳಿಗೆ ಕಳುಹಿಸಲಾಗುವುದು. ಜೊತೆಗೆ ಗ್ಯಾಸ್ ಕನೆಕ್ಷನ್ ಪಡೆಯುವವರ ಪಟ್ಟಿಯನ್ನೂ ತಯಾರಿಸಲಾಗುತ್ತಿದೆ. ಈ ಕೆಲಸದಲ್ಲಿ ಯೂನಿಕ್ ಐಡಿ ಸಹಾಯಕವಾಗಲಿದೆಯಂತೆ.
 * * *
ಶಿವಸೇನೆ ತಾಣಗಳಿಗೆ ಲಗ್ಗೆ ಇಡಲು
ಬಿಜೆಪಿಯಿಂದ ಮರಾಠಿ ಮಾಣುಸ್

ಶಿವಸೇನೆಯ ಸುವರ್ಣ ಜಯಂತಿ ಸಂದರ್ಭದಲ್ಲಿ ಬಿಜೆಪಿಗೆ ಸಾಧ್ಯವಿದ್ದಷ್ಟು ಉದ್ಧವ್ ಠಾಕ್ರೆ ಎಚ್ಚರಿಕೆಯ ನುಡಿಗಳನ್ನಾಡಿದ್ದರು. ಇದನ್ನೆಲ್ಲ ಗಮನಿಸಿದ ಬಿಜೆಪಿ ಇದೀಗ ತನ್ನದೇ ಆದ ನೀತಿ ಅನುಸರಿಸಿ ಶಿವಸೇನೆ ತಾಣಗಳಲ್ಲಿ ಒಳನುಗ್ಗಲಿದೆಯಂತೆ. ಅದಕ್ಕಾಗಿ ಮರಾಠಿ ಭಾಷೆಯವರ ಮತಗಳನ್ನು ಪಡೆಯಲು ಶಿಕ್ಷಣ ಮಂತ್ರಿ ವಿನೋದ್ ತಾವ್ಡೆ ಮತ್ತು ಆಶಿಷ್ ಶೇಲಾರ್‌ರಿಗೆ ವಿಶೇಷ ಜವಾಬ್ದಾರಿ ಬಿಜೆಪಿ ನೀಡಲಿದೆ.

ಇನ್ನೊಂದೆಡೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯಿಂದ ಬಂದಿರುವ ಪ್ರವೀಣ್ ದರೇಕರ್ ಮತ್ತು ರಾಮ್‌ಕದಮ್ ಅವರಿಗೂ ಮರಾಠಿ ಮತಗಳು ಬಿಜೆಪಿಗೆ ಬರುವಂತೆ ಹೆಚ್ಚಿನ ಜವಾಬ್ದಾರಿ ವಹಿಸಲಾಗಿದೆ. ಮರಾಠಿ ಭಾಷಿಕರ ಮತ ಸೆಳೆಯುವಲ್ಲಿ ಮುಂಬೈ ಮಹಾನಗರದಲ್ಲಿ ವಿನೋದ್ ತಾವ್ಡೆ ಮತ್ತು ಆಶಿಷ್ ಶೇಲಾರ್ ಇದ್ದರೆ, ದರೇಕರ್ ಮತ್ತು ಕದಮ್ ಉಪನಗರಗಳಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡಲಿದ್ದಾರೆ. ಈ ನಡುವೆ ಮರಾಠಿ ಭಾಷಿಕರ ಮತ ಬ್ಯಾಂಕ್‌ನ ಧ್ರುವೀಕರಣಕ್ಕಾಗಿ ರಾಜ್‌ಠಾಕ್ರೆಯ ಜೊತೆ ಕೈಜೋಡಿಸಿ ಶಿವಸೇನೆಗೆ ಮುಂದಿನ ದಿನಗಳಲ್ಲಿ ಸಡ್ಡು ಹೊಡೆಯಲೂ ತಂತ್ರ ರೂಪಿಸುತ್ತಿದೆ ಬಿಜೆಪಿ. ಇತ್ತ ಕಾಂಗ್ರೆಸ್‌ನ ಒಳಜಗಳದ ಲಾಭ ಪಡೆಯಲೂ ಬಿಜೆಪಿ ಸಿದ್ಧತೆ ಮಾಡುತ್ತಿದೆ.
ಮುಂದಿನ 2017ರ ಚುನಾವಣೆಯಲ್ಲಿ ಸುಮಾರು 27 ಸಾವಿರ ಕೋಟಿ ರೂಪಾಯಿಯ ಬಜೆಟ್‌ನ ಮುಂಬೈ ಮಹಾನಗರಪಾಲಿಕೆಯ ಆಡಳಿತದ ಮೇಲೆ ಕಣ್ಣಿಟ್ಟಿರುವ ಭಾಜಪಾ, ಆಡಳಿತವನ್ನು ತಾನು ವಶಪಡಿಸಿಕೊಳ್ಳುವ ಸಿದ್ಧತೆಗೆ ತನ್ನನ್ನು ತೊಡಗಿಸಿಕೊಂಡಿದೆ.
* * *
ಬಾಳಾಠಾಕ್ರೆ ಆಸ್ತಿ ಪತ್ರ ಹಕ್ಕು ವಿವಾದ :
ಜುಲೈ 18 ರಿಂದ ಮುಂದಿನ ವಿಚಾರಣೆ

ಶಿವಸೇನೆಯ ದಿವಂಗತ ಸುಪ್ರಿಮೋ ಬಾಳಾ ಠಾಕ್ರೆಯವರ ಆಸ್ತಿ ಪತ್ರವನ್ನು ವೀಲುನಾಮೆ ಮುಂದಿಟ್ಟು ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ಜುಲೈ 18 ರಿಂದ ಮುಂದಿನ ವಿಚಾರಣೆ ನಡೆಸಲಿದೆ. ಜಯದೇವ ಠಾಕ್ರೆಯವರು ದಿವಂಗತ ಬಾಳಾ ಠಾಕ್ರೆಯವರ ಪುತ್ರರು. ಇವರು ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿ ತನ್ನ ತಂದೆಯ ಆಸ್ತಿ ಪತ್ರದಲ್ಲಿ ತಿದ್ದುಪಡಿ ಮಾಡಲಾಗಿದೆಯೆಂದು ಆಪಾದಿಸಿದ್ದರು. ಹಾಗೂ ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ಜಯದೇವ ಠಾಕ್ರೆಯವರಿಗೆ ತಮ್ಮ ತಂದೆಯ ಜೊತೆ ವಿವಾದವಿತ್ತು.
ಜಯದೇವ ಅವರ ಸಹೋದರ, ಶಿವಸೇನಾ ಪ್ರಮುಖ ಉದ್ಧವ್ ಠಾಕ್ರೆಯ ವಕೀಲರು ಮತ್ತು ಜಯದೇವರು ಜುಲೈ 18ರಿಂದ ಮತ್ತೆ ವಾದ ಮಂಡಿಸಲಿದ್ದಾರೆ ಎಂದು ಜಸ್ಟೀಸ್ ಗೌತಮ್ ಪಟೇಲ್ ತಿಳಿಸಿದ್ದಾರೆ. ಜಯದೇವ ಠಾಕ್ರೆಯವರು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದು ತನ್ನ ತಂದೆಯವರ 13 ಡಿಸೆಂಬರ್ 2011 ರ ವೀಲು ನಾಮೆಗೆ ಸವಾಲು ಹಾಕಿದ್ದಾರೆ. ಯಾಕೆಂದರೆ ಈ ಆಸ್ತಿ ಪತ್ರದಲ್ಲಿ ಜಯದೇವ ಠಾಕ್ರೆಯವರಿಗೆ ಬಾಳಾ ಠಾಕ್ರೆಯವರು ಏನೂ ನೀಡಿರಲಿಲ್ಲ.
ಈ ಬಗ್ಗೆ ನ್ಯಾಯಾಲಯದ ಮೊರೆ ಹೋದ ಜಯದೇವರು ತನ್ನ ತಂದೆ ಅಸ್ಥಿರ ಚಿತ್ತದ ವ್ಯಕ್ತಿಯಾಗಿದ್ದು ಉದ್ದವ್ ಅವರನ್ನು ಪ್ರಭಾವಿತಗೊಳಿಸಿದ್ದಾಗಿ ಆರೋಪಿಸಿದ್ದಾರೆ. ಈ ಮೊಕದ್ದಮೆ ನವಂಬರ್ 2012ರಲ್ಲಿ ಬಾಳಾ ಠಾಕ್ರೆಯರು ಮೃತ್ಯುವಶರಾದ ನಂತರ ದಾಖಲಿಸಲಾಗಿತ್ತು. ಮೊದಲಿಗೆ ನ್ಯಾಯಾಲಯವು ಎರಡೂ ಪಕ್ಷಗಳವರು ತಮ್ಮಾಳಗೇ ವಿವಾದ ಇತ್ಯರ್ಥಗೊಳಿಸುವಂತೆ ಬೈಠಕ್ ನಡೆಸಲು ಹೇಳಿತ್ತು. ಆದರೆ ಹಾಗಾಗದೆ ವಿವಾದ ಇನ್ನಷ್ಟು ಹೆಚ್ಚಳವಾಗಿತ್ತು. ಈ ನಡುವೆ ನ್ಯಾಯಾಲಯದಲ್ಲಿ ಕೆಲವರ ಹೇಳಿಕೆ ಪಡೆಯಲಾಗಿದೆ. ಬಾಳಾ ಠಾಕ್ರೆಯವರು ತನ್ನ ಮೊದಲ ವೀಲುನಾಮೆ 1997ರಲ್ಲಿ ಬರೆದಿದ್ದರು. ನಂತರ 8-9 ವೀಲು ನಾಮೆಗಳನ್ನು ಬರೆದರು. ಅಂತಿಮ ವೀಲುನಾಮೆ 2011ರಲ್ಲಿ ಬರೆದಿದ್ದರು.
* * *
ದಂಡ ಕಟ್ಟುತ್ತೇವೆ, ಆದರೆ ಮಾಹಿತಿ ನೀಡುವುದಿಲ್ಲ
 ಆರ್.ಟಿ.ಐ. ಮಾಹಿತಿ ಕಾನೂನಿನಡಿ ಅನೇಕ ಭ್ರಷ್ಟಾಚಾರ ಹಗರಣಗಳು ಬೆಳಕಿಗೆ ಬಂದಿವೆ. ಆದರೆ ಈ ಆರ್.ಟಿ.ಐ. ಕಾನೂನನ್ನು ಥಾಣೆ ಜಿಲ್ಲೆಯ ಮುಂಬ್ರಾ ಪ್ರಭಾಗ ಸಮಿತಿಯ ಅಧಿಕಾರಿಗಳು ತಮಾಷೆ ಮಾಡುತ್ತಿದ್ದಾರೆ. ಈ ವಿಭಾಗ ಅಧಿಕಾರಿಗಳು ತಮ್ಮಲ್ಲಿಗೆ ಬಂದ ಯಾವುದೇ ಪತ್ರಗಳಿಗೆ ಮಾಹಿತಿ ನೀಡುವುದಿಲ್ಲ. ದಂಡ ಕಟ್ಟುವ ಪರಿಸ್ಥಿತಿ ಬಂದರೆ ಅದಕ್ಕೂ ತಯಾರಿದ್ದೇವೆ ಎನ್ನುವ ಭಾವನೆಯನ್ನು ಅವರು ತಳೆದಂತಿದೆ.
ಆರ್.ಟಿ.ಐ. ಕಾರ್ಯಕರ್ತ, ಬೃಹನ್ ಮಹಾರಾಷ್ಟ್ರ ಅಪಂಗ ಕಾಮ್‌ಗಾರ್ ಸಂಘಟನೆಯ ಕಾರ್ಯದರ್ಶಿ ಫಾರೂಕ್ ಯೂಸೂಫ್ ಖಾನ್ ಅವರು ಎಪ್ರಿಲ್ 11, 2014ರಂದು ಮಾಹಿತಿ ಹಕ್ಕು ಕಾನೂನಿನಡಿ ಮುಂಬ್ರಾ ಸ್ಟೇಷನ್‌ನಿಂದ ಕದಮ್ ಹಾಲ್ ತನಕದ ರಸ್ತೆಯನ್ನು 2011 ರಿಂದ 2014ರ ತನಕ ಎಷ್ಟು ಬಾರಿ ನಿರ್ಮಿಸಲಾಗಿದೆ ಎಂದು ಮಾಹಿತಿ ಕೇಳಿದ್ದರು. ಆದರೆ ಮುಂಬ್ರಾ ಪ್ರಭಾಗ ಸಮಿತಿ ಅದಕ್ಕೆ ಉತ್ತರವನ್ನೇ ಕೊಡುತ್ತಿಲ್ಲ. ಹಾಗೂ ಮುಂಬ್ರಾ ಪ್ರಭಾಗ ಸಮಿತಿಯ ಕಾರ್ಯಕಾರಿ ಅಭಿಯಂತ ಧನಂಜಯ ಗೋಸಾವಿ ಅವರಿಗೆ ರಾಜ್ಯ ಸೂಚನಾ ಆಯೋಗದ ಕೊಂಕಣ ಖಂಡಪೀಠವು ಜೂನ್ 4, 2015 ರಂದು 5 ಸಾವಿರ ರೂ. ದಂಡ ಕಟ್ಟಲು ಹೇಳಿತ್ತು. ಹಾಗೂ ಖಾನ್ ಅವರಿಗೆ ಖರ್ಚಿನ ರೂಪದಲ್ಲಿ 500 ರೂ. ನೀಡುವಂತೆ ಆದೇಶ ನೀಡಿತ್ತು.
ಅದೇ ರೀತಿ ಆರಿಫ್ ನವಾಜ್ ಮುಹಮ್ಮದ್ ಮುಸ್ತಾಫಾ ಅವರು 18 ಜುಲೈ 2014ರಂದು ಶೀಲಾಫಾಟಾದಿಂದ ದಿವಾ ಮಾರ್ಗ, ಮುಂಬ್ರಾ ಕೌಸಾದ ಶೌಚಾಲಯಗಳ ನಿರ್ಮಾಣ, ನಗರ ಸೇವಕ ಫಂಡ್, ವಿಧಾಯಕ ನಿಧಿ..... ಹಾಗೂ ಅಲ್ಪಸಂಖ್ಯಾತ ನಿಧಿಯ ಮೂಲಕ ಮಾಡಲಾಗಿರುವ ವಿಕಾಸ ಕಾರ್ಯಗಳ ಗುತ್ತಿಗೆದಾರರಿಗೆ ನೀಡಲಾದ ಮೊತ್ತದ ಬಗ್ಗೆ ಮಾಹಿತಿ ಕೇಳಿದ್ದರು. ಇವರಿಗೂ ಮಾಹಿತಿ ನೀಡದ್ದಕ್ಕೆ ಕೊಂಕಣ ಆಯುಕ್ತರ ಖಂಡ ಪೀಠ ಜುಲೈ 29, 2015ರಂದು ಅಭಿಯಂತ ಧನಂಜಯ ಗೋಸಾವಿಯವರಿಗೆ 8 ಸಾವಿರ ರೂ. ದಂಡ ಕಟ್ಟುವಂತೆ ಆದೇಶಿಸಿದೆ. ಇದೇ ರೀತಿ ಕೊಂಕಣ ಖಂಡ ಪೀಠವು ಇನ್ನೂ ಕೆಲವರಿಗೆ ಮಾಹಿತಿ ನೀಡದ್ದಕ್ಕೆ ದಂಡ ವಿಧಿಸಿದೆ. ಕಳೆದ 5 ವರ್ಷಗಳಿಂದ ಮುಂಬ್ರಾ ಪ್ರಭಾಗ ಸಮಿತಿಯಲ್ಲಿ ಮುಖ್ಯ ಕಾರ್ಯಕಾರಿ ಅಭಿಯಂತರ ರೂಪದಲ್ಲಿರುವ ಧನಂಜಯ ಗೋಸಾವಿಯವರ ವಿರುದ್ಧ ಅನೇಕ ದೂರುಗಳು ಮನಪಾ ಆಡಳಿತಕ್ಕೆ ಬಂದರೂ ಅವರನ್ನು ಎಬ್ಬಿಸುವ ಧೈರ್ಯ ಮನಪಾ ಆಡಳಿತದಲ್ಲಿ ಇನ್ನೂ ಬಂದಿಲ್ಲವಂತೆ. ನಿಯಮದಂತೆ ಒಬ್ಬ ಅಧಿಕಾರಿ ಒಂದೆಡೆ 3 ವರ್ಷಕ್ಕಿಂತ ಹೆಚ್ಚು ಅದೇ ಜಾಗದಲ್ಲಿ ಇರಬಾರದು.
ಹಾಕರ್ಸ್ ವೆಲ್ಫೇರ್ ಎಸೋಸಿಯೇಶನ್ ಪದಾಧಿಕಾರಿ ಹನೀಫ್ ಕಾಮ್‌ದಾರ್ ಅವರು ಥಾಣೆ ಮನಪಾದಿಂದ ಓಪನ್ ಹಾಕರ್ಸ್ ವಲಯದ ಮಾಹಿತಿ ಕೇಳಿದರೆ ಅವರಿಗೂ ಸಿಕ್ಕಿಲ್ಲ. ಮತ್ತು ಮಾಹಿತಿ ನೀಡದಿರುವುದಕ್ಕೆ ಕೊಂಕಣ ಆಯುಕ್ತ ಖಂಡ ಪೀಠವು ಮುಂಬ್ರಾ ಪ್ರಭಾಗ ಸಮಿತಿಯ ಸಹಾಯಕ ಆಯುಕ್ತ ದಯಾನಂದ ಗೋರೆ ಅವರಿಗೆ 25 ಸಾವಿರ ರೂ. ದಂಡ ವಿಧಿಸಿದ ಆದೇಶ ನೀಡಿದೆ. ದಂಡ ಕಟ್ಟಲು ರೆಡಿ ಇರುವ ಇಂತಹ ಅಧಿಕಾರಿಗಳು ಇದ್ದರೆ.........!
* * *
ನಾಲೆ ಸ್ವಚ್ಛತೆಗೆ ಗಟಾರಗಳ ಮೇಲಿನ ಮಂದಿರಗಳು ಅಡ್ಡಿ!

ಮುಂಬೈ ಮಹಾನಗರ ಪಾಲಿಕೆಯ ಕ್ಷೇತ್ರದಲ್ಲಿ ಗಟಾರ-ನಾಲೆಗಳ ಮೇಲೆ ಪ್ರತಿಷ್ಠಾಪಿಸಲಾದ ಮಂದಿರಗಳನ್ನು ತೆಗೆದು ಹಾಕಲು ಮನಪಾ ಸಿದ್ಧತೆ ಮಾಡುತ್ತಿದ್ದು ಇದಕ್ಕಾಗಿ ನಾಗರಿಕರ ಸಹಯೋಗವನ್ನು ಅಪೇಕ್ಷಿಸಿದೆ. ಮುಂಬೈಯ ಅನೇಕ ಕಡೆ ಗಟಾರ - ನಾಲೆಗಳ ಮೇಲೆ ಮಂದಿರಗಳನ್ನು ಕಟ್ಟಿದ್ದು ಇದರಿಂದ ನಾಲೆ ಸ್ವಚ್ಛತೆ ಮಾಡಲು ತುಂಬಾ ಕಷ್ಟವಿದೆಯೆಂದು ಮನಪಾ ಕಾರಣ ನೀಡಿದೆ. ಮುಂಬಯಿಯ ಧಾರಾವಿಯ ಮುಖ್ಯಾಧ್ಯಾಪಕ ನಾಲೆ ಮತ್ತು ಧೋಬಿ ಘಾಟ್ ನಾಲೆಗಳ ಸ್ವಚ್ಛತೆ ಸರಿಯಾಗಿ ಆಗದಿರಲು ಈ ನಾಲೆಗಳ ಅಕ್ಕ ಪಕ್ಕಗಳಲ್ಲಿನ ಮಂದಿರಗಳು ಕಾರಣ ಎಂದು ಆರೋಪಿದ್ದಾರೆ. ಎಲ್ಲಿಯ ತನಕ ಈ ಮಂದಿರಗಳನ್ನು ಇಲ್ಲಿಂದ ತೆಗೆಯುವುದಿಲ್ಲವೋ ಅಲ್ಲಿಯ ತನಕ ನಾಲೆಗಳ ಸ್ವಚ್ಛತೆ ಸರಿಯಾದ ರೀತಿಯಲ್ಲಿ ಆಗಲಾರದು ಎಂದು ಮನಪಾ ಹೇಳಿದೆ. ನಾಲೆ ಸ್ವಚ್ಛತೆ ಆಗದಿದ್ದರೆ ಈ ಬಾರಿ ಕೂಡಾ ಮುಂಬೈ ನೀರಿನ ಪ್ರವಾಹದಲ್ಲಿ ಸಂಕಟ ಅನುಭವಿಸಲಿದೆ. ಹೀಗಾಗಿ ಗಟಾರನಾಲೆಗಳ ಮೇಲೆ ಸ್ಥಾಪಿಸಲಾದ ಕೆಲವು ಮಂದಿರಗಳನ್ನು ಇಲ್ಲಿಂದ ಸ್ಥಳಾಂತರಿಸಬೇಕಾಗಿದೆ. ಇದಕ್ಕಾಗಿ ನಾಗರಿಕರ ಸಹಕಾರವನ್ನು ಅಪೇಕ್ಷಿಸಲಾಗಿದೆ.
ಧಾರಾವಿ, ಗಾಂಧಿ ಮಾರ್ಕೆಟ್ ಪರಿಸರದ ಕೆಲವು ಮಂದಿರಗಳನ್ನು ತೆಗೆದು ಹಾಕಲು ಮೇ 26 ಮತ್ತು ಜೂನ್ 2 ರಂದು ಕಾರ್ಯಾಚರಣೆ ನಡೆಯುವುದಿತ್ತು. ಆದರೆ ಕೆಲವು ಸಂಘಟನೆಗಳು ಅದಕ್ಕೆ ವಿರೋಧ ವ್ಯಕ್ತ ಪಡಿಸಿದ್ದವು. ಹಾಗಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಇದೀಗ ನಾಲೆ ಸ್ವಚ್ಛತೆ ನೆಪದಲ್ಲಿ ಮನಪಾ ಇಂತಹ ಮಂದಿರಗಳನ್ನು ತೆಗೆದು ಹಾಕಲು ಮುಂದಾಗಿದೆ. ಹಾಗೂ ನಾಗರಿಕರ ಸಹಯೋಗ ಅಪೇಕ್ಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News