×
Ad

ದುರ್ಬಲ ವರ್ಗದವರ ಆರ್ಥಿಕ ಸಬಲೀಕಣ: ಮುಖ್ಯಮಂತ್ರಿ ಆಶಯ

Update: 2016-07-16 19:28 IST

-ಎಲ್ಲ ಜಿಲ್ಲೆಗೂ ವೈದ್ಯಕೀಯ ಕಾಲೇಜು
-ಪರಿಶಿಷ್ಟರ ಆರ್ಥಿಕ ಸಬಲೀಕರಣ
-ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ

 ಬೆಂಗಳೂರು, ಜು. 16: ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸರಕಾರಿ ವೈದ್ಯಕೀಯ ಕಾಲೇಜುಗಳಿರಬೇಕೆಂಬುದು ರಾಜ್ಯ ಸರಕಾರದ ಆಶಯ. ಸರಕಾರಿ ವೈದ್ಯಕೀಯ ಕಾಲೇಜುಗಳಿಲ್ಲದ ಜಿಲ್ಲೆಗಳಲ್ಲಿ ಸರಕಾರಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಶನಿವಾರ ಮಾಧ್ಯಮ ಅಕಾಡಮಿಯಿಂದ ವಿಕಾಸಸೌಧದ ಸಮ್ಮೇಳನ ಸಭಾಂಗಣದಲ್ಲಿ ಏರ್ಪಡಿಸಿದ್ದ ‘ಕರ್ನಾಟಕ ಮುನ್ನಡೆ; ಮುಖ್ಯಮಂತ್ರಿಗಳೊಂದಿಗೆ ಪತ್ರಕರ್ತರ ಮಾತುಕತೆ’ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಸರಕಾರ ಅಧಿಕಾರಕ್ಕೆ ಬಂದ ಬಳಿಕ 12 ಸರಕಾರಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ.
  ಪ್ರತಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ 600ಕೋಟಿ ರೂ. ವೆಚ್ಚ ಆಗಲಿದ್ದು, ಕಾಲೇಜು ಮತ್ತು 500 ಹಾಸಿಗೆಯ ಆಸ್ಪತ್ರೆ, ಗ್ರಂಥಾಲಯ ಪ್ರಯೋಗಾಲಯ ಸೇರಿ ಕಾಲೇಜು ಕಟ್ಟಡ ನಿರ್ಮಾಣಕ್ಕೆ ವೆಚ್ಚವಾಗಲಿದೆ ಎಂದು ತಿಳಿಸಿದರು.
 ಮುಖ್ಯವಾಹಿನಿಗೆ ಶೋಷಿತರು: ಶೋಷಿತರು ಮತ್ತು ದುರ್ಬಲ ವರ್ಗದವರ ಪರವಾಗಿ ನಮ್ಮ ಸರಕಾರ ಕೆಲಸ ಮಾಡುತ್ತಿದೆ. ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿ ಪರಿಣಾಮಕಾರಿ ಅನುಷ್ಠಾನಗೊಳಿಸುತ್ತಿದೆ. ಆ ಮೂಲಕ ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಜನರನ್ನು ಮುಖ್ಯವಾಹಿನಿಗೆ ತರುವುದೆ ಸರಕಾರದ ಮುಖ್ಯ ಉದ್ದೇಶ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
  
ಸರಕಾರದ ಜನಪರ ಕಾರ್ಯಕ್ರಮಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಬೇಕೆಂಬುದು ಸರಕಾರದ ಆಶಯ. ಸರಕಾರದ ಯೋಜನೆಗಳ ಯಶಸ್ಸು ಅಥವಾ ಲೋಪದೋಷಗಳನ್ನು ಪರಿಣಾಮಕಾರಿಯಾಗಿ ಬಿಂಬಿಸುವ ಮೂಲಕ ಯೋಜನೆಗಳ ಯಶಸ್ಸಿಗೆ ಮಾಧ್ಯಮಗಳು ಸರಕಾರದೊಂದಿಗೆ ಕೈಜೋಡಿಸಬೇಕೆಂದು ಕರೆ ನೀಡಿದರು. ಬರ ತಟ್ಟಲಿಲ್ಲ:  ತುತ್ತು ಅನ್ನಕ್ಕಾಗಿ ಬೇಡುವ ಸ್ಥಿತಿ ಯಾರಿಗೂ ಬರಬಾರದು ಎಂದು ’ಅನ್ನಭಾಗ್ಯ’ ಯೋಜನೆ ಜಾರಿಗೆ ತರಲಾಗಿದ್ದು, ರಾಜ್ಯವನ್ನು ಕಾಡಿದ ಹಿಂದೆಂದೂ ಕಾಣದ ಭೀಕರ ಬರಗಾಲದಲ್ಲೂ ಬಡವರ್ಗದವರಿಗೆ ‘ಅನ್ನಭಾಗ್ಯ’ ಯೋಜನೆಯಿಂದ ಬರದ ಬಿಸಿ ತಟ್ಟಲಿಲ್ಲ. ಈ ಯೋಜನೆಯಡಿ 1.8ಕೋಟಿ ಕುಟುಂಬಗಳ ಮೂರು ಕೋಟಿಗೂ ಅಧಿಕ ಮಂದಿಗೆ ಪ್ರಯೋಜನವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಅನುಭವದ ಮೂಸೆಯಿಂದ:   
ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ವಾರ್ಷಿಕ ಪ್ರತಿ ವಿದ್ಯಾರ್ಥಿಗೆ 15 ಸಾವಿರ ರೂ.ವೇತನ ನೀಡುವ ವಿದ್ಯಾಸಿರಿ ಯೋಜನೆಯಿಂದ 87 ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದ ಅವರು, ರೈತರಿಗೆ ಕೃಷಿಭಾಗ್ಯ, ಮಕ್ಕಳಲ್ಲಿ ಪೌಷ್ಠಿಕಾಂಶ ಹೆಚ್ಚಿಸಲು ಕ್ಷೀರಭಾಗ್ಯ, ಶಾಲಾ ಮಕ್ಕಳಿಗೆ ಶೂ ಭಾಗ್ಯ ಸೇರಿದಂತೆ ಮನಸ್ವಿನಿ, ಮೈತ್ರಿ ಮುಂತಾದ ಯೋಜನೆಗಳನ್ನು ಬಡವರ್ಗದ ಜನತೆಯ ಕಲ್ಯಾಣಕ್ಕಾಗಿ ಜಾರಿಗೆ ತಂದು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು. ಪರಿಶಿಷ್ಟರ ಆರ್ಥಿಕ ಸಬಲೀಕರಣಕ್ಕೆ ಆದ್ಯತೆ: ಯೋಜನಾ ವೆಚ್ಚದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಅನುದಾನವನ್ನು ಮೀಸಲಿಡಲಾಗುತ್ತಿದ್ದು ಎಸ್ಸಿ-ಎಸ್ಟಿ ವರ್ಗದವರ ಆರ್ಥಿಕ ಸಬಲೀಕರಣಕ್ಕೆ ಆದ್ಯತೆ ನೀಡಲಾಗಿದೆ. ಪರಿಶಿಷ್ಟರ ಕಲ್ಯಾಣಕ್ಕೆ ಮೂರು ವರ್ಷಗಳಲ್ಲಿ 60 ಸಾವಿರ ರೂ.ಗಳನ್ನು ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.
ಇನ್ನು ಎರಡು ವರ್ಷಗಳಲ್ಲಿ ಈ ವರ್ಗದವರಿಗೆ 1ಲಕ್ಷ ಕೋಟಿ ರೂ.ಅನುದಾನ ಖರ್ಚು ಮಾಡಲಾಗುವುದು. ಅಂತೆಯೆ ಸರಕಾರಿ ಕಾಮಗಾರಿಗಳಲ್ಲಿ 50ಲಕ್ಷ ರೂ.ಗಳ ವರೆಗೆ ಪರಿಶಿಷ್ಟ ವರ್ಗದ ಗುತ್ತಿಗೆದಾರರಿಗೆ ಮೀಸಲಾತಿ ಕಲ್ಪಿಸುವ ಮಹತ್ವದ ವಿಧೇಯಕವನ್ನು ವಿಧಾನ ಮಂಡಲದಲ್ಲಿ ಅಂಗೀಕರಿಸಲಾಗಿದೆ ಎಂದು ಹೇಳಿದರು.
ಗುಣಮಟ್ಟದ ಶಿಕ್ಷಣ: ಗ್ರಾಮೀಣ ಪ್ರದೇಶದ ಬಡ ರೈತರ, ಅಲ್ಪಸಂಖ್ಯಾತ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ರಾಜ್ಯದ ಎಲ್ಲ ಹೋಬಳಿಗಳಲ್ಲೂ ವಸತಿ ಶಾಲೆಗಳನ್ನು ತೆರೆಯಲು ತೀರ್ಮಾನಿಸಲಾಗಿದೆ ಎಂದ ಅವರು, ಬಡವರಿಗೆ ಉನ್ನತ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ಹಿರಿಯ ಪತ್ರಕರ್ತರಾದ ಸನತ್ ಕುಮಾರ ಬೆಳಗಲಿ, ಎಲ್.ಪ್ರಕಾಶ್, ವಾರ್ತಾಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್, ಮಾಧ್ಯಮ ಅಕಾಡಮಿ ಅಧ್ಯಕ್ಷ ಎಂ.ಸಿದ್ಧರಾಜು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

‘ವೈಚಾರಿಕ-ಪ್ರಗತಿಪರ ಚಿಂತನೆಗಳುಳ್ಳ ಪತ್ರಕರ್ತರ ಸಂಖ್ಯೆ ಹೆಚ್ಚಬೇಕು. ಧ್ವನಿ ಇಲ್ಲದಂತಹ ಜನರಿಗೆ ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲು ಶಕ್ತಿ ಇಲ್ಲದಂತಹ ಶೋಷಿತ ವರ್ಗದವರ ಸಮಸ್ಯೆಗಳನ್ನು ಮಾಧ್ಯಮಗಳು ಎತ್ತಿ ಹಿಡಿಯಬೇಕು’
-ಸಿದ್ದರಾಮಯ್ಯ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News