×
Ad

ಸರಕಾರದ ನೀತಿಗಳನ್ನು ರೂಪಿಸಲು ವಕೀಲರ ಅಗತ್ಯವಿದೆ: ಅರುಣ್ ಜೇಟ್ಲಿ

Update: 2016-07-23 21:01 IST

ಬೆಂಗಳೂರು, ಜು. 23: ಕಾರ್ಪೋರೇಟ್ ವಕೀಲರ ಮಾದರಿಯಂತೆ ಸರಕಾರದ ನೀತಿಗಳನ್ನು ರೂಪಿಸುವ ವಕೀಲರು ದೇಶಕ್ಕೆ ಬೇಕಾಗಿದ್ದಾರೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
 ಶನಿವಾರ ನಗರದ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ನೂತನವಾಗಿ ನಿರ್ಮಿಸಿರುವ ಕೆಎಲ್‌ಇ ಸಂಸ್ಥೆಯ ನೂತನ ಕಾನೂನು ವಿದ್ಯಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಂಪ್ರದಾಯಿಕ ಕಾನೂನು ಅಧ್ಯಯನ ಈಗ ಹಳೆದಾಯಿತು. ವಿಜ್ಞಾನ ತಂತ್ರಗಾರಿಕೆ ಹೆಚ್ಚಾದಂತೆಲ್ಲ ಕಾನೂನು ಹೊಸ ರೂಪ ಪಡೆದುಕೊಳ್ಳಬೇಕಿದೆ. ಕಾರ್ಪೊರೇಟ್ ವಕೀಲರು ಇರುವಂತೆ ಈಗ ಸರಕಾರದ ಪಾಲಿಸಿ ಮೇಕಿಂಗ್ ವಕೀಲರು ಬೇಕಾಗಿದ್ದಾರೆ. ವಕೀಲರು ನ್ಯಾಯಾಂಗದ ವಿವಿಧ ವಿಭಾಗಗಳಲ್ಲಿ ಸೂಕ್ತ ತಜ್ಞತೆಯನ್ನು ಪಡೆದುಕೊಳ್ಳಬೇಕಿದೆ. ಆಧುನಿಕ ಕಾಲದಲ್ಲಿ ಅಪರಾಧಗಳ ಸ್ವರೂಪ ಬದಲಾಗುತ್ತಿದೆ. ಹೀಗಾಗಿ ಅಪರಾಧ ಕಾಯ್ದೆಯ ವ್ಯಾಖ್ಯೆ ಹಾಗೂ ಅಧ್ಯಯನದ ಸ್ವರೂಪವು ಬದಲಾಗಬೇಕು ಎಂದು ತಿಳಿಸಿದರು.
  ನಾನೂ ಕಾನೂನು ವಿದ್ಯಾರ್ಥಿಯಾಗಿದ್ದಾಗ ಕಾನೂನು ಅಧ್ಯಯನ ಕೊನೆಯ ಆಯ್ಕೆ ಆಗಿತ್ತು. ಕಾನೂನು ಅಧ್ಯಯನ ಮಾಡಿ ಕೆಲವರು ರಾಜಕಾರಣಕ್ಕೆ ಹೋದರು. ಕೆಲವರು ಉದ್ಯೋಗ ಬಯಸಿ ಬೇರೆ ವಲಯಗಳಿಗೆ ಹೋಗಿದ್ದಾರೆ. ಆದರೆ ಕಾನೂನು ಶಿಕ್ಷಣ ಈಗ ಅತ್ಯಂತ ಆದ್ಯತಾ ವಿಷಯವಾಗಿದೆ. ಕಾನೂನು ಶಿಕ್ಷಣ ಬದಲಾವಣೆಯ ರೂಪವನ್ನು ಪಡೆದುಕೊಳ್ಳಬೇಕಿದೆ ಎಂದರು.
 ದೇಶದ ಆರ್ಥಿಕತೆಯ ಆಧಾರವಾಗಿರುವ ಕೃಷಿ ಸಮಾನಾಂತರವಾಗಿ ಸೇವಾ ಕ್ಷೇತ್ರ ಆರ್ಥಿಕ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿದೆ. ವಿದೇಶಗಳ ಮಾದರಿಯಲ್ಲಿ ದೇಶದಲ್ಲಿನ ಮಾನವ ಸಂಪನ್ಮೂಲವನ್ನು ನೈಸರ್ಗಿಕ ಸಂಪನ್ಮೂಲಕ್ಕೆ ಸರಿ ಸಮನಾದಾಗ ದೇಶ ಅಭಿವೃದ್ಧಿಯಾಗುತ್ತದೆ. ಹೀಗಾಗಿ ಜನಸಂಖ್ಯೆ ನಿಯಂತ್ರಣ ಮಾಡಲು ಕುಟುಂಬ ಕಲ್ಯಾಣ ಯೋಜನೆಯನ್ನು ಇನ್ನಷ್ಟು ಸದೃಢಗೊಳಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
    
ಕಾನೂನು ಸಚಿವ ಬಿ.ಟಿ.ಜಯಚಂದ್ರ ಮಾತನಾಡಿ, ರಾಷ್ಟ್ರೀಯ ಕಾನೂನು ಕಾಲೇಜು ಪರಿಕಲ್ಪನೆ ಮೊದಲು ಹುಟ್ಟಿದ್ದು ರಾಜ್ಯದಲ್ಲಿ. ಇಂದು ಒಂದು ಕಾನೂನು ವಿವಿಯ ಸ್ವಾಮ್ಯದಲ್ಲಿ ಒಟ್ಟು 96 ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಈ ಕಾಲೇಜುಗಳಿಗೆ ಹೊಸ ರೂಪ ನೀಡಬೇಕಾಗಿದೆ. ಹಿಂದಿನ ಕಾನೂನುಗಳಿಗೆ ಹೊಸ ಸ್ವರೂಪ ನೀಡಲು ಹೆಚ್ಚು ಸಂಶೋಧನೆಗಳು ನಡೆಯಬೇಕಿದೆ. ಹೀಗಾಗಿ ಕಾನೂನು ಶಿಕ್ಷಣ ಕೇಂದ್ರಗಳು ಮೂಲಭೂತ ಚಿಂತನೆಗಳನ್ನು ರೂಪಿಸುವ ಕೇಂದ್ರಗಳಾಗಿ ಬದಲಾಗಬೇಕೆಂದರು. ದೇಶದಲ್ಲಿರುವ ಪ್ರಕರಣಗಳಿಗೆ ಹೋಲಿಕೆ ಮಾಡಿದ್ದರೆ ಕೇವಲ ಶೇ.20 ರಷ್ಟು ವಕೀಲರು ಇದ್ದಾರೆ. ಹೀಗಾಗಿ ಪ್ರಕರಣಗಳು ಇತ್ಯರ್ಥವಾಗಲು ಹಿನ್ನೆಡೆಯಾಗುತ್ತಿದೆ. ಕಾನೂನಿನ ಉನ್ನತ ಶಿಕ್ಷಣಕ್ಕೆ ಸರಕಾರಿ ಅಧ್ಯಯನ ಕೇಂದ್ರಗಳು ಸರಿ ಸಮನಾಗಿ ಸ್ಪರ್ಧೆಗಿಳಿದರೆ ಈ ಸಮಸ್ಯೆಯನ್ನು ಹತೋಟಿಗೆ ತರಬಹುದು ಎಂದರು.
  ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತಕುಮಾರ್ ಮಾತನಾಡಿ, ದೇಶದಲ್ಲಿ ಜನರಿಗೆ ಉಚಿತ ಕಾನೂನು ಸಲಹೆಗಳನ್ನು ಕಾನೂನು ವಿಶ್ವವಿದ್ಯಾಲಯಗಳು ನೀಡಬೇಕಿದೆ. ಬಡವರ, ದಲಿತರ, ಕೃಷಿಕರ, ಶೋಷಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕಿಸುವ ಜವಾಬ್ದಾರಿ ವಕೀಲರ ಮೇಲಿದೆ. ಜೊತೆಗೆ ನ್ಯಾಯಾಂಗದ ನೂತನ ಮಜಲುಗಳನ್ನು ರೂಪಿಸಬೇಕಾಗಿದೆ ಎಂದರು.
ನಾನು ಕೆಎಲ್‌ಇ ಸಂಸ್ಥೆಯಲ್ಲಿ ಶಿಕ್ಷಣ ಪಡೆದಿದ್ದು. ಈ ಸಂಸ್ಥೆ ನನಗೆ ಬಾಳು ರೂಪಿಸಿದ್ದಲ್ಲದೆ, ಜೊತೆಗೆ ಬಾಳ ಸಂಗಾತಿಯನ್ನು ಹುಡುಕಿಕೊಟ್ಟಿತ್ತು ಎಂದು ಸ್ಮರಿಸಿದ ಅವರು, 1940ರ ದಶಕದಲ್ಲಿ ಉತ್ತರ ಕರ್ನಾಟಕದಲ್ಲಿ ಆರಂಭವಾದ ಈ ಸಂಸ್ಥೆ ರಾಜ್ಯದ ದೊಡ್ಡ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಒಟ್ಟು 257 ಶಾಖೆಗಳನ್ನು ಹೊಂದಿರುವ ಈ ಸಂಸ್ಥೆ ತನ್ನ ಜಾಲವನ್ನು ವಿದೇಶಗಳಲ್ಲಿಯೂ ಹರಡಿದೆ ಎಂದು ಶ್ಲಾಘಿಸಿದರು.
 ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡ್ಡಿಯೂರಪ್ಪ, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಸಂಸದ ಪಿ.ಸಿ.ಮೋಹನ್, ಶಾಸಕ ಸೋಮಶೇಖರ್, ವಿಧಾನಪರಿಷತ್ತಿನ ಸದಸ್ಯ ವಿ.ಸೋಮಣ್ಣ, ಕೆಎಲ್‌ಇ ಅಧ್ಯಕ್ಷ ಶಿವಾನಂದ್ ಕೌಜಲಗಿ, ಕಾರ್ಯದರ್ಶಿ ಪ್ರಭಾಕರ್ ಕೋರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಬಾಕ್ಸ್.... ಈ ವರ್ಷ 21 ಹೊಸ ಕಾನೂನು ಕಾಲೇಜುಗಳ ನಿರ್ಮಾಣಕ್ಕೆ ಅನುಮೋದನೆ ನೀಡುವ ಮೂಲಕ ಕಾನೂನು ಶಿಕ್ಷಣಕ್ಕೆ ಶಾಶ್ವತ ನೆಲೆಯನ್ನು ರಾಜ್ಯ ಸರಕಾರ ಕಲ್ಪಿಸಿದೆ.
-ಟಿ.ಬಿ.ಜಯಚಂದ್ರ, ಕಾನೂನು ಸಚಿವ

ದೇಶದಲ್ಲಿ ಅತಿ ಹೆಚ್ಚು ಕಾನೂನು ಶಿಕ್ಷಣ ಕೇಂದ್ರಗಳನ್ನು ಹೊಂದಿರುವ ಕರ್ನಾಟಕ ದೇಶದ ಕಾನೂನು ಹಬ್ ಆಗಿ ಗುರುತಿಸಿಕೊಂಡಿದೆ.
-ಅರುಣ್ ಜೇಟ್ಲಿ, ಕೇಂದ್ರ ವಿತ್ತ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News