×
Ad

ಜ್ಞಾಪಕ ಶಕ್ತಿಯ ವೃದ್ಧಿ

Update: 2016-08-05 22:57 IST

ನಾವು ಕಣ್ಣುಗಳ ಮೂಲಕ ನೋಡುತ್ತೇವೆ. ಕಿವಿಯಿಂದ ಕೇಳುತ್ತೇವೆ. ಚರ್ಮದಿಂದ ಸ್ಪರ್ಶ, ನೋವಿನ ಅನುಭವವನ್ನು ಪಡೆಯುತ್ತೇವೆ. ಮೂಗಿನಿಂದ ವಾಸನೆಯನ್ನು ಗ್ರಹಿಸುತ್ತೇವೆ. ನಾಲಿಗೆ ರುಚಿಯನ್ನು ಸ್ವಾದಿಸಲು ನೆರವಾಗುತ್ತದೆ. ಹೀಗೆ ಪಂಚೇಂದ್ರಿಯಗಳಿಂದ ಮಾಹಿತಿ ನರತಂತುಗಳ ಮೂಲಕ ಮಿದುಳನ್ನು ಸೇರಿ ಅಲ್ಲಿ ಆವಶ್ಯಕತೆ ಬಿದ್ದಾಗ ಅಥವಾ ಶರೀರದ ವಿವಿಧ ಚಟುವಟಿಕೆಗಳನ್ನು ರೂಪಿಸುವಾಗ ಪ್ರಯೋಜನಕ್ಕೆ ಬರುವ ಕ್ರಿಯೆಯೇ ನೆನಪು.

ಒಮ್ಮೆ ಬೆಂಕಿಗೆ ಕೈಯಿಟ್ಟು ಸುಟ್ಟುಗೊಂಡ ಮಗು ನಂತರ ಬೆಂಕಿಯ ಹತ್ತಿರ ಎಚ್ಚರದಿಂದಿರುತ್ತದೆ. ಒಂದು ಹೊಟೇಲ್‌ನಲ್ಲಿ ರುಚಿಯಾದುದನ್ನು ತಿಂದ ನೆನಪು ಪದೇ ಪದೇ ಆ ಹೋಟೆಲಿಗೇ ಹೋಗಲು ನಮ್ಮನ್ನು ಪ್ರಚೋದಿಸುತ್ತದೆ. ಹೀಗೆ ನೆನಪು ನಮ್ಮ ಎಲ್ಲ ಚಟುವಟಿಕೆಯನ್ನೂ ನಿಯಂತ್ರಿಸುತ್ತದೆ, ರೂಪಿಸುತ್ತದೆ. ಮನುಷ್ಯ ಇತರೇ ಪ್ರಾಣಿಗಳನ್ನು ಮೀರಿ, ಪ್ರಕೃತಿಯ ಮೇಲೆ ಹತೋಟಿ ಸಾಧಿಸಲು ಮತ್ತು ಈಗಿರುವ ಸುಖ ಸೌಲಭ್ಯಗಳನ್ನು ಹೊಂದಲು ಕಾರಣ ಅವನ ಅಗಾಧ ನೆನಪಿನ ಶಕ್ತಿ.

ನೆನಪಿನ ಎರಡು ಬಗೆ:

ಅಲ್ಪಕಾಲದ ಅಥವಾ ಇತ್ತೀಚಿನ ನೆನಪು ಮತ್ತು ದೀರ್ಘಕಾಲದ ಅಥವಾ ಹಿಂದಿನ ನೆನಪು ಹೀಗೆ ನೆನಪಿನ ಎರಡು ಬಗೆಗಳು.

ಗೆಳೆಯನಿಗೆ ಫೋನ್ ಮಾಡಬೇಕು. ಫೋನ್ ಡೈರೆಕ್ಟ್ಟರಿಯಲ್ಲಿ ಆತನ ನಂಬರ್ ನೋಡುತ್ತೇವೆ .......8725703....... ಬಾಯಲ್ಲಿ ಹೇಳಿಕೊಂಡು ಫೋನ್ ಮಾಡುತ್ತೇವೆ. ನಂತರ ಈ ಅಂಕೆಗಳು ಮರೆತು ಹೋಗುತ್ತವೆ. ರಸ್ತೆಯ ಬದಿಯಲ್ಲಿ ಹೋಗುತ್ತಿರುವಾಗ ಅನೇಕ ಅಂಗಡಿಗಳ ನಾಮಫಲಕಗಳನ್ನು ನೋಡುತ್ತೇವೆ. ಮರುಕ್ಷಣ ಮರೆಯುತ್ತೇವೆ. ಹೀಗೆ ಕೇವಲ ಕೆಲವು ಸೆಕೆಂಡುಗಳು ಹೆಚ್ಚೆಂದರೆ ಒಂದು ನಿಮಿಷ ಇರುವ ಈ ನೆನಪನ್ನು ಅಲ್ಪಕಾಲದ ನೆನಪು ಎಂದು ಕರೆಯುತ್ತಾರೆ

ಆದರೆೆ ನಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುವ ವಿಷಯಗಳು, ನಮಗೆ ಅತಿ ಆವಶ್ಯಕವಾಗಿ ಬೇಕಾದ ಅಂಶಗಳು ದೀರ್ಘಕಾಲದ ನೆನಪಾಗಿ ಉಳಿಯುತ್ತವೆ. ಮಿದುಳಿನ ಜೀವಕೋಶದಲ್ಲಿ ಸಂಗ್ರಹಿಸಲ್ಪಡುತ್ತವೆ. ಅಪಘಾತದಲ್ಲಿ ಮಿದುಳಿಗೆ ಪೆಟ್ಟಾದಾಗ ಉಂಟಾಗುವ ಹಿನ್ನಡೆ ಮರೆವಿನ ನೋವು, ವೃದ್ಧಾಪ್ಯದಲ್ಲಿ ಕಂಡಿದ್ದನ್ನು ಕೇಳಿದ್ದನ್ನು ಮರುಕ್ಷಣ ಮರೆಯುವ ವೃದ್ಧರು, ತಮ್ಮ ಚಿಕ್ಕಂದಿನ ಯೌವನದ ಘಟನೆಗಳನ್ನು ಸ್ಪಷ್ಟವಾಗಿ ವಿವರಿಸಬಲ್ಲರು.

ನೆನಪು-ಮಿದುಳಿನ ಪಾತ್ರ

ಪ್ರಧಾನವಾಗಿ ಮಿದುಳಿನ ಮಸ್ತಿಷ್ಕದ ಮೇಲ್ಮೈನ ಅಸಂಖ್ಯಾತ ನರಕೋಶಗಳು ಅನುಭವಗಳನ್ನು ನೆನಪಿನಲ್ಲಿಡಲು ದುಡಿಯುತ್ತವೆ. ಮಿದುಳಿನ ಹಿಪ್ಪೋಕಾಂಪಸ್ ಭಾಗವು ಅಲ್ಪಕಾಲದ ನೆನಪಿಗೆ ಕಾರಣವೆನ್ನಲು ಆಧಾರವಿದೆ. ದೀರ್ಘಕಾಲದ ನೆನಪಿನಲ್ಲಿ ಮಿದುಳಿನ ನರಕೋಶಗಳಲ್ಲಿ ರಾಸಾಯನಿಕ ಬದಲಾವಣೆಗಳಾಗುತ್ತವೆ. ಜೀವಕೋಶದಲ್ಲಿರುವ ಆರ್‌ಎನ್‌ಎ ಕಣಗಳು ನೆನಪಿನ ಕ್ರಿಯೆಯಲ್ಲಿ ಭಾಗವಹಿಸುತ್ತವೆ. ಆರ್‌ಎನ್‌ಎ ಕಣಗಳು ನಡೆಸುವ ಪ್ರೊಟೀನ್ ಉತ್ಪಾದನೆಗೆ ಅಡ್ಡಿಯುಂಟಾದರೆ, ಅಲ್ಪಕಾಲದ ನೆನಪುಗಳು ಅಳಿಸಿ ಹೋಗುತ್ತದೆ.

ನಾವೇಕೆ ಮರೆಯುತ್ತೇವೆ?

ಓದಿದ್ದನ್ನು ಪೂರ್ಣವಾಗಿ ಅರ್ಥಮಾಡಿಕೊಂಡು ಗ್ರಹಿಸದಿದ್ದರೆ, ಸಹಜವಾಗಿ ಆ ವಿಷಯ ಮರೆಯುತ್ತದೆ. ಓದಿದ ವಿಷಯವನ್ನು ಮೆಲುಕು ಹಾಕಿ ಮನನ ಮಾಡಬೇಕು. ಅದೇ ವಿಷಯವನ್ನು ಮತ್ತೆ ಮತ್ತೆ ಪಠಿಸುವುದರಿಂದ ಅದು ನೆನಪಿನಲ್ಲಿ ಉಳಿಯುತ್ತದೆ. ಗಲಾಟೆಯಿಂದ ಕೂಡಿದ ಅತಿಯಾದ ಚಟುವಟಿಕೆಗಳು ಕಲಿತ ವಿಷಯವನ್ನು ಮರೆಸಿದರೆ, ಕಡಿಮೆ ಚಟುವಟಿಕೆ ಅಥವಾ ನಿದ್ದೆ ಅಥವಾ ವಿಶ್ರಾಂತಿ ಕಲಿತ ವಿಷಯವನ್ನು ನೆನಪಿನಲ್ಲಿ ಉಳಿಸುತ್ತದೆ.

ವ್ಯಕ್ತಿಯ ಮನೋಭಾವ

ಕಲಿಯುವ ವಿಷಯ ನಮ್ಮ ಮನೋಭಾವಕ್ಕೆ ಹೊಂದಿದ್ದರೆ ಆ ವಿಷಯ ನೆನಪಿನಲ್ಲಿ ಉಳಿಯದು. ಅಧ್ಯಯನ ಮಾಡಲು ಇಷ್ಟವಿಲ್ಲದ ವಿದ್ಯಾರ್ಥಿ, ತಂದೆ-ತಾಯಿಯರ, ಆತ್ಮೀಯರ ಬಲವಂತದಿಂದ ಓದಿದರೂ ನೆನಪಿನಲ್ಲಿ ಉಳಿಯದು. ವ್ಯಕ್ತಿಯ ಮನಸ್ಸು ಅಸಮಾಧಾನದಿಂದ ಚಂಚಲಗೊಂಡಿದ್ದರೆ ಉದ್ವೇಗ, ಕಾತುರ, ದುಃಖ, ನಿರಾಶೆ, ಸಿಟ್ಟು ಮುಂತಾದ ಅಹಿತ ಭಾವನೆಗಳ ಆಗರವಾಗಿದ್ದರೆ ಕಲಿತ ವಿಷಯ ಜ್ಞಾಪಕದಲ್ಲಿ ಇರದು.

ಜ್ಞಾಪಕಶಕ್ತಿ ಹೆಚ್ಚಲು ಹೀಗೆ ಮಾಡಿ

ಜ್ಞಾಪಕಶಕ್ತಿಯನ್ನು ಔಷಧ, ಮಾತ್ರೆ, ಟಾನಿಕ್, ಇಂಜೆಕ್ಷನ್‌ಗಳಿಂದ ಹೆಚ್ಚಿಸುವುದಕ್ಕೆ ಸಾಧ್ಯವಿಲ್ಲ. ಯೋಗ, ವ್ಯಾಯಾಮ, ಧಾನ್ಯಗಳು ಮನಸ್ಸಿನ ಆತಂಕವನ್ನು ಕಡಿಮೆ ಮಾಡಿ, ತನ್ಮೂಲಕ ನೆನಪನ್ನು ಬಲಪಡಿಸುತ್ತದೆ.

ವಿದ್ಯಾರ್ಥಿಗಳು ಅಧ್ಯಯನ ಮಾಡಲು ಒಂದು ನಿರ್ದಿಷ್ಟ ಅವಧಿಯನ್ನು ಇಟ್ಟುಕೊಳ್ಳಿ. ರಾತ್ರಿ ಮಲಗುವ ಮುನ್ನ ಅಥವಾ ಮುಂಜಾನೆ ಪ್ರಶಸ್ತ ಸಮಯ. ಅಧ್ಯಯನಕ್ಕೆ ಶಾಂತ ವಾತಾವರಣ ಮುಖ್ಯ. ಗದ್ದಲದಿಂದ ಅಧ್ಯಯನ ಕೋಣೆ ದೂರವಿರಲಿ. ಟೀವಿ, ರೇಡಿಯೋವನ್ನು ದೂರವಿಡಿರಿ. ಮೇಜಿನ ಮೇಲೆ ಓದುವ ಪುಸ್ತಕವಲ್ಲದೆ ಬೇರೆನನ್ನೂ ಇಡಬೇಡಿ.

ಏಕಾಗ್ರತೆಯಿಂದ 30 ಅಥವಾ 45 ನಿಮಿಷಗಳ ಕಾಲ ಓದಿ ಓದಿದ್ದನ್ನು ಅರ್ಥಮಾಡಿಕೊಳ್ಳಿರಿ.ಅರ್ಥವಾಗದಿದ್ದರೆ ಮತ್ತೊಮ್ಮೆ ಓದಿರಿ. ನಂತರ ಮುಂದೆ ಹೋಗಿ.

ಈಗ ಓದಿದ್ದನ್ನು ಮೆಲುಕು ಹಾಕಿ ಹಾಳೆಯ ಮೇಲೆ ಬರೆಯಿರಿ, ಎಷ್ಟು ಜ್ಞಾಪಕವಿದೆಯೋ ತಿಳಿದು, ಯಾವುದು ನಿಮಗೆ ನೆನಪಿಲ್ಲವೋ ಆ ಭಾಗವನ್ನು ಮತ್ತೆ ಓದಿ ಮೆಲುಕು ಹಾಕಿ ಸಹಪಾಠಿಯೊಂದಿಗೆ ಚರ್ಚಿಸಿ.

ನಂತರ ಹತ್ತು ನಿಮಿಷಗಳ ವಿಶ್ರಾಂತಿಯ ನಂತರ ಮತ್ತೆ ಅಧ್ಯಯನ ಮಾಡಿರಿ. ಹೀಗೆ 45 ನಿಮಿಷಗಳ ಅಧ್ಯಯನ, ಹತ್ತು ನಿಮಿಷಗಳ ಮನನ ಬಳಿಕ ಹತ್ತು ನಿಮಿಷಗಳ ವಿಶ್ರಾಂತಿ ಪಡೆಯುವುದರಿಂದ ಶರೀರ ಮನಸ್ಸುಗಳಿಗೆ ಆಯಾಸವಾಗುವುದಿಲ್ಲ.

ಗಂಟೆಗಟ್ಟಲೆ ಓದಬೇಡಿ. ಆಹಾರವಿಲ್ಲದೆ ನಿದ್ರೆಗೆಟ್ಟು ಅಧ್ಯಯನ ಮಾಡಬೇಡಿ, ದಣಿದ ದೇಹ, ಮನಸ್ಸುಗಳು ಮರೆವಿಗೆ ದಾರಿ.

ಡೆಕ್ಸಿಡ್ರಿನ್‌ನಂತಹ ನಿದ್ರೆ ದೂರಾಗಿಸುವ ಮಾತ್ರೆಗಳಿಂದ ದೂರವಿರಿ. ವಿಪರೀತ ಟೀ-ಕಾಫಿ ಸೇವನೆ ಮಾಡಬೇಡಿರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News