ಗೆಳೆಯ

Update: 2016-08-07 17:32 GMT

ಅವನು ಬಾಲ್ಯದ ಗೆಳೆಯ. ಎಂಥ ಗೆಳೆಯ ಎಂದು ವಿವರಿಸಬೇಕಾದರೆ, ಒಮ್ಮೆ ಆತ ನದಿಯಲ್ಲಿ ಕೊಚ್ಚಿ ಕೊಂಡು ಹೋಗಿದ್ದ. ನನ್ನ ಪ್ರಾಣವನ್ನೇ ಒತ್ತೆಯಿಟ್ಟು ಅವನನ್ನು ಉಳಿಸಿದ್ದೆ.
ಅಂತಹ ಗೆಳೆಯನನ್ನು ನಾನು ಭೇಟಿಯಾಗಲು ಹೋಗುತ್ತಿದ್ದೇನೆ. ಈಗ ನಾನು ಹಳ್ಳಿಯ ರೈತ. ಹೀಗೆ ಕೆಲಸದ ನಿಮ್ಮಿತ್ತ ಈ ಬೃಹತ್ ಶಹರಕ್ಕೆ ಬಂದಿದ್ದೆ. ಇವನು ಅದ್ಯಾವುದೋ ಕಂಪೆನಿಯಲ್ಲಿ ಬಹುದೊಡ್ಡ ಹುದ್ದೆಯಲ್ಲಿದ್ದಾನೆ ಎಂದು ಕೇಳಿ ಬಹಳ ಕಷ್ಟಪಟ್ಟು ಅವನ ಕಚೇರಿ ಹುಡುಕಿ ಇದೀಗ ಅವನ ಭೇಟಿಗಾಗಿ ಕಾಯುತ್ತಿದ್ದೇನೆ. ಹಳೆಯ ಸಂಗತಿಗಳನ್ನು, ಆಟ, ಪಾಠಗಳನ್ನು ಅವನೊಂದಿಗೆ ಮತ್ತೊಮ್ಮೆ ಹಂಚಿಕೊಳ್ಳುವ ಆತುರ ನನಗೆ.
ಸುಮಾರು ಒಂದು ಗಂಟೆಗಳ ಕಾಲ ಅವನ ಕರೆಗಾಗಿ ಕಾಯುತ್ತಿದ್ದೆ. ಕೊನೆಗೂ ಕರೆ ಬಂತು. ನಾನು ಅವನ ಕೊಠಡಿಗೆ ಧಾವಿಸಿದೆ.
‘‘ಲೋ ವೆಂಕು, ನಾನು ಕಣೋ...’’ ಎಂದು ಕೂಗಿದೆ.

‘‘ಯಾರು ಬೇಕಾಗಿತ್ತು?’’ ಆತ ಗಡಸು ಕಂಠದಿಂದ ಕೇಳಿದ. ಅಪರಿಚಿತ ಸ್ವರ. ನಾನು ನಡುಗಿ ಬಿಟ್ಟೆ. ಛೇ...ಇದು ಅವನಲ್ಲ. ‘‘ಕ್ಷಮಿಸಿ ಅದು ನೀವಲ್ಲ....’’ ಎಂದು ಹೊರ ಬಂದೆ. ಉಸಿರುಕಟ್ಟುವ ಆ ಕಟ್ಟಡದಿಂದ ಅದು ಹೇಗೋ ಪಾರಾಗಿ ರಸ್ತೆ ಬದಿಗೆ ಬಂದೆ.
 ನದಿಯ ಸುಳಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಗೆಳೆಯನನ್ನು ಈಜಿ ಅವನನ್ನು ಉಳಿಸಿದ್ದೆ. ಆದರೆ ಹಲವು ಸುಳಿಗಳಿರುವ ಈ ವೇಗದ ಶಹರದಲ್ಲಿ ಮತ್ತೆ ಈಜಿ ಅವನನ್ನು ರಕ್ಷಿಸುವ ದಾರಿ ನನಗೆ ತಿಳಿಯದೇ ಅಳತೊಡಗಿದೆ.
                                                                         -ಮಗು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಗೊಂದಲ!
ಪ್ರಾರ್ಥನೆ
ಆ ಚಿಂತಕ!
ಹರಾಜು !