ಹಿಂದೂಗಳನ್ನು ಪ್ರಚೋದಿಸುವ ಮೊದಲು ಮೋಹನ್ ಭಾಗ್ವತ್ 10 ಮಕ್ಕಳನ್ನು ಹುಟ್ಟಿಸಲಿ : ಕೇಜ್ರಿವಾಲ್ ತಿರುಗೇಟು

Update: 2016-08-22 12:43 GMT

ಹೊಸದಿಲ್ಲಿ,ಆ.22: ಹಿಂದು ದಂಪತಿಗಳು ಹೆಚ್ಚೆಚ್ಚು ಮಕ್ಕಳನ್ನು ಹೊಂದಬೇಕು ಎಂಬ ಹೇಳಿಕೆಗಾಗಿ ಆರೆಸ್ಸೆಸ್ ವರಿಷ್ಠ ಮೋಹನ ಭಾಗವತ್ ಅವರ ವಿರುದ್ಧ ಸೋಮವಾರ ಟ್ವಿಟರ್ ದಾಳಿ ನಡೆಸಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, ಹಿಂದುಗಳನ್ನು ಪ್ರಚೋದಿಸುವ ಮುನ್ನ ಭಾಗವತ್ ಅವರು ಸ್ವಯಂ ಹತ್ತು ಮಕ್ಕಳನ್ನು ಹುಟ್ಟಿಸಲಿ ಮತ್ತು ಅವರನ್ನು ಚೆನ್ನಾಗಿ ಬೆಳೆಸಲಿ ಎಂದು ಕುಟುಕಿದ್ದಾರೆ.

ಭಾಗವತ್ ಮುಖ್ಯಸ್ಥರಾಗಿರುವ ಆರೆಸ್ಸೆಸ್ ತನ್ನ ಸದಸ್ಯರನ್ನು ಬ್ರಹ್ಮಚಾರಿಗಳಾಗಲು ಉತ್ತೇಜಿಸುತ್ತದೆ.

ಕಳೆದ ವಾರ ಆಗ್ರಾದಲ್ಲಿ ಕಾರ್ಯಕ್ರಮದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ಭಾಗವತ್, ಹಿಂದುಗಳ ಜನಸಂಖ್ಯೆ ಹೆಚ್ಚಬಾರದು ಎಂದು ಯಾವ ಕಾನೂನು ಹೇಳುತ್ತದೆ? ಅಂತಹ ಯಾವುದೇ ಕಾನೂನು ಇಲ್ಲ. ಇತರರ ಜನಸಂಖ್ಯೆ ಹೆಚ್ಚುತ್ತಿರುವಾಗ ಹಿಂದುಗಳನ್ನು ತಡೆಯುತ್ತಿರುವುದು ಯಾರು? ಈ ವಿಷಯ ವ್ಯವಸ್ಥೆಗೆ ಸಂಬಂಧಿಸಿದ್ದಲ್ಲ,ಸಾಮಾಜಿಕ ವಾತಾವರಣ ಇದಕ್ಕೆ ಕಾರಣ ಎಂದು ಹೇಳಿದ್ದರು.

ಭಾಗವತ್ ಹೇಳಿಕೆ ಶಿವಸೇನೆಗೆ ಅಪಥ್ಯ

ಕುಸಿಯುತ್ತಿರುವ ಹಿಂದುಗಳ ಜನಸಂಖ್ಯೆ ಕುರಿತು ಭಾಗವತ್ ಹೇಳಿಕೆಯನ್ನು ‘ಹಳೆಯ ಕಾಲದ್ದು ’ಎಂದು ಸೋಮವಾರ ಬಣ್ಣಿಸಿರುವ ಶಿವಸೇನೆಯು,‘ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮತೋಲನ ’ವನ್ನು ಕಾಯ್ದುಕೊಳ್ಳಲು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವಂತೆ ಕೇಂದ್ರವನ್ನು ಆಗ್ರಹಿಸಿದೆ.

ಭಾಗವತ್ ಅವರು ಹಳೆಯ ಕಾಲದ ವಿಚಾರಗಳನ್ನು ಆಧುನಿಕ ರೀತಿಯಲ್ಲಿ ಹೇಳಲು ಪ್ರಯತ್ನಿಸಿದ್ದಾರೆ. ಪ್ರಗತಿಪರ ಹಿಂದು ಸಮುದಾಯವು ಅವರ ಹೇಳಿಕೆಗಳನ್ನು ಒಪ್ಪಿಕೊಳ್ಳುವುದಿಲ್ಲ. ಅಲ್ಲದೆ ಹೆಚ್ಚುತ್ತಿರುವ ಮುಸ್ಲಿಮ್ ಜನಸಂಖ್ಯೆಯನ್ನು ಎದುರಿಸಲು ಹಿಂದು ಜನಸಂಖ್ಯೆಯನ್ನು ಹೆಚ್ಚಿಸುವುದು ಸೂಕ್ತವಾದ ಮಾರ್ಗ ಎಂದು ಪ್ರಧಾನಿ ಮೋದಿಯವರು ಒಪ್ಪುವುದಿಲ್ಲ ಎಂದು ಸೇನೆಯ ಮುಖವಾಣಿ ‘ಸಾಮನಾ ’ದ ಸಂಪಾದಕೀಯವು ಹೇಳಿದೆ.

ಕುಟುಂಬ ಯೋಜನೆಗಾಗಿ ಸರಕಾರವು ಭಾರೀ ಹಣವನ್ನು ವ್ಯಯಿಸುತ್ತಿದೆ. ಮುಸ್ಲಿಮ್ ಜನಸಂಖ್ಯೆಯಲ್ಲಿ ಏರಿಕೆಯು ದೇಶದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮತೋಲನದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ, ಆದರೆ ಹೆಚ್ಚು ಮಕ್ಕಳನ್ನು ಹುಟ್ಟಿಸುವಂತೆ ಹಿಂದುಗಳಿಗೆ ಹೇಳುವುದು ಸಮಸ್ಯೆಗೆ ಪರಿಹಾರವಲ್ಲ. ಎಲ್ಲ ಸಮುದಾಯಗಳ ಜನಸಂಖ್ಯೆಯ ಮೇಲೆ ಮಿತಿ ಹೇರಲು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದೇ ಏಕಮಾತ್ರ ಪರಿಹಾರವಾಗಿದೆ. ಹಿಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಹುಟ್ಟಿಸಿದರೆ ಹಸಿವು,ನಿರುದ್ಯೋಗ ಮತ್ತು ಬೆಲೆಏರಿಕೆಯಂತಹ ಸಮಸ್ಯೆಗಳು ಇನ್ನಷ್ಟು ಹೆಚ್ಚುತ್ತವೆ,ಅಷ್ಟೇ ಎಂದು ಸೇನೆಯು ಹೇಳಿದೆ.

ಸಮುದಾಯದ ಜನಸಂಖ್ಯೆಯನ್ನು ಹೆಚ್ಚಿಸಲು ಹಿಂದುಗಳು ಒಂದಕ್ಕಿಂತ ಹೆಚ್ಚು ಪತ್ನಿಯರನ್ನು ಹೊಂದುವ ವಿಚಾರವನ್ನೇನಾದರೂ ಬೆಂಬಲಿಸುವ ಜಾಣಪ್ರಯತ್ನವನ್ನು ಭಾಗವತ್ ಮಾಡುತ್ತಿದ್ದಾರೆಯೇ ಎಂದೂ ಅದು ಪ್ರಶ್ನಿಸಿದೆ.

 ಭಾಗವತ್ ವಿರುದ್ಧ ಕಾಂಗ್ರೆಸ್ ಟೀಕಾಪ್ರಹಾರ

ಭಾಗವತ್ ಹೇಳಿಕೆಯನ್ನು ಕಟುವಾಗಿ ಟೀಕಿಸಿರುವ ಕಾಂಗ್ರೆಸ್ ಪಕ್ಷವು, ಅವರಿಂದ ಬೇರೆ ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದೆ.
ಅವರು ಧರ್ಮವನ್ನೇ ಅವಲಂಬಿಸಿದ್ದಾರೆ, ಅವರು ಬೇರೆ ಯಾವ ಮಾತು ಆಡಲು ಸಾಧ್ಯ ಎಂದು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್ ಅವರು ರವಿವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ಪ್ರತಿಕ್ರಿಯಿಸಿದ್ದರು.
 ಪ್ರತಿ ಹೇಳಿಕೆಯಲ್ಲಿಯೂ ಭಾಗವತ್ ಸಮಾಜವನ್ನು ವಿಭಜಿಸುವ ಮಾತುಗಳನ್ನೇ ಆಡುತ್ತಿರುತ್ತಾರೆ.ಅವರು ನಿರುದ್ಯೋಗ, ಬೆಲೆಏರಿಕೆ ಕುರಿತು ಮಾತನಾಡಬೇಕಿತ್ತು. ಆದರೆ ಅವರು ಅದನ್ನು ಮಾಡುತ್ತಿಲ್ಲ ಎಂದು ಅವರು ಬೆಟ್ಟು ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News