ಕೆಆರ್ಎಸ್ಗೆ ಭೇಟಿ: ಕೆ.ಆರ್.ಪೇಟೆ ತಾಲೂಕಿನಲ್ಲಿ ಪ್ರವಾಸ ಕುಂಟನಹಳ್ಳಿ ಮಲ್ಲೇಶ
ಮಂಡ್ಯ, ಅ.8: ಕಾವೇರಿ ಕೊಳ್ಳದ ವಸ್ತುಸ್ಥಿತಿ ಅಧ್ಯಯನಕ್ಕೆ ಜಿಲ್ಲೆಗೆ ಆಗಮಿಸಿರುವ ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್.ಝಾ ನೇತೃತ್ವದ ತಾಂತ್ರಿಕ ತಂಡ ಎರಡನೆ ದಿನವಾದ ಶನಿವಾರವೂ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಅಧ್ಯಯನ ಪ್ರವಾಸ ನಡೆಸಿತು.
ಕೆಆರ್ಎಸ್ ಜಲಾಶಯ ಅಚ್ಚುಕಟ್ಟು ಪ್ರದೇಶದ ಮದ್ದೂರು, ಮಳವಳ್ಳಿ, ಮಂಡ್ಯ, ಶ್ರೀರಂಗಪಟ್ಟಣ, ಪಾಂಡವಪುರ ತಾಲೂಕಿನಲ್ಲಿ ಶುಕ್ರವಾರ ಪ್ರವಾಸ ನಡೆಸಿದ್ದ ತಂಡ, ಶನಿವಾರ ಹೇಮಾವತಿ ಜಲಾಶಯ ವ್ಯಾಪ್ತಿಯ ಕೆ.ಆರ್.ಪೇಟೆ ತಾಲೂಕಿನಲ್ಲಿ ಪ್ರವಾಸ ಕೈಗೊಂಡಿತು. ಮೊದಲು ಕೃಷ್ಣರಾಜಸಾಗರ (ಕೆಆರ್ಎಸ್) ಜಲಾಶಯಕ್ಕೆ ಭೇಟಿ ನೀಡಿದ ತಂಡ ಜಲಾಶಯದಲ್ಲಿನ ನೀರಿನ ಪ್ರಮಾಣ, ಒಳ ಮತ್ತು ಹೊರ ಹರಿವಿನ ಪ್ರಮಾಣ, ಸಂಬಂಧಿತ ಇನ್ನಿತರ ಅಂಶಗಳ ಬಗ್ಗೆ ಕಾವೇರಿ ನೀರಾವರಿ ನಿಗಮದ ಹಿರಿಯ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿತು. ಜಲಾಶಯದ ಸ್ಥೂಲ ಪರಿಚಯ, ನೀರಿನ ಸಂಗ್ರಹಣೆಯ ಸಾಮರ್ಥ್ಯ, ಪ್ರಸ್ತುತ ಸಂಗ್ರಹವಿರುವ ನೀರು, ಒಳ ಮತ್ತು ಹೊರ ಹರಿವಿನ ಪ್ರಮಾಣ, ಸುಪ್ರೀಂಕೋರ್ಟ್ ಆದೇಶದ ನಂತರ ತಮಿಳುನಾಡಿಗೆ ಬಿಡುಗಡೆ ಮಾಡಿರುವ ನೀರು, ಡೆಡ್ ಸ್ಟೋರೇಜ್, ತೂಬುಗಳ ಸಂಖ್ಯೆ ಇತ್ಯಾದಿ ವಿವರಗಳನ್ನು ಅಧಿಕಾರಿಗಳು ತಂಡಕ್ಕೆ ವಿವರಿಸಿದರು.ಲಾಶಯದಲ್ಲಿ ಸಂಗ್ರಹವಾಗುವ ನೀರಿನ ಪ್ರಮಾಣ, ಪ್ರಸ್ತುತ ಪರಿಸ್ಥಿತಿ ಬಗ್ಗೆ ತಜ್ಞರ ತಂಡಕ್ಕೆ ಮಾಹಿತಿ ಒದಗಿಸಲಾಯಿತು. ಹಾಗೆಯೇ ಜಲಾಶಯದ ನೀರಿನಮಟ್ಟ ಡೆಡ್ ಸ್ಟೋರೇಜ್ಗೆ (7 ಟಿ.ಎಂ.ಸಿ.) ಇಳಿದಾಗ ಅದನ್ನು ಅಣೆಕಟ್ಟೆ ಸುರಕ್ಷಾ ದೃಷ್ಟಿಯಿಂದ ಬಳಸಿಕೊಳ್ಳಲು ಸಾಧ್ಯವಿಲ್ಲದ ಬಗ್ಗೆಯೂ ತಿಳಿಸಲಾಯಿತು ಎಂದು ಹಿರಿಯ ಅಧಿಕಾರಿಯೊಬ್ಬರು ಪತ್ರಿಕೆಗೆ ತಿಳಿಸಿದರು.ನಂತರ, ಹೇಮಾವತಿ ಜಲಾಶಯದ ಕೆ.ಆರ್.ಪೇಟೆ ತಾಲೂಕು ಅಚ್ಚುಕಟ್ಟು ಪ್ರದೇಶದ ಕಡೆಗೆ ತೆರಳಿದ ತಂಡ, ವಳ್ಳೇಕಟ್ಟೆ ಕೊಪ್ಪಲು, ಗುಮ್ಮನಹಳ್ಳಿ, ಚಿನಕುರಳಿ, ತೆಂಡೇಕೆರೆ, ಅಂಚನಹಳ್ಳಿ, ಬಣ್ಣನಕೆರೆ, ಬೂಕನಕೆರೆ, ಚೋಕನಹಳ್ಳಿ. ಯಗಚಗುಪ್ಪೆ, ದೊದ್ದನ ಕಟ್ಟೆ, ಮಡಿವಿನಕೋಡಿ, ಹರಿಹರಪುರ, ಅಕ್ಕಿಹೆಬ್ಬಾಳು, ಇತರ ಗ್ರಾಮಗಳಲ್ಲಿ ಪ್ರವಾಸ ಮಾಡಿ, ಹಾಸನ ಜಿಲ್ಲೆಯ ಅಚ್ಚುಕಟ್ಟು ಪ್ರದೇಶಕ್ಕೆ ತೆರಳಿತು.
ತಂಡದ ಪ್ರವಾಸದುದ್ದಕ್ಕೂ ಜತೆಯಲ್ಲಿದ್ದ ಸ್ಥಳೀಯ ಶಾಸಕ ಕೆ.ಸಿ.ನಾರಾಯಣಗೌಡ ಅವರು ತಾಲೂಕಿನ ಪರಿಸ್ಥಿತಿಯನ್ನು ತಂಡಕ್ಕೆ ತಿಳಿಸಿದ್ದಲ್ಲದೆ, ರೈತರ ಅಹವಾಲನ್ನು ಹಿಂದಿ ಭಾಷೆಯಲ್ಲಿ ತಂಡದ ತಜ್ಞರಿಗೆ ಒದಗಿಸಿದರು.
ಸಂಸದ ಸಿ.ಎಸ್.ಪುಟ್ಟರಾಜು, ಜಿಪಂ ಅಧ್ಯಕ್ಷೆ ಜೆ.ಪ್ರೇಮ ಕುಮಾರಿ,ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ, ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಸುಧೀರ್ಕುಮಾರ್ ರೆಡ್ಡಿ, ಜಿಪಂ ಸಿಇಒ ಬಿ.ಶರತ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜ ಸುಲೋಚನಾ, ಎಸಿ ಯಶೋಧಾ, ಗೊರೂರು ಜಲಾಶಯದ ಮುಖ್ಯ ಅಭಿಯಂತರ ಪ್ರಸನ್ನ ಸೇರಿದಂತೆ ಇತರೆ ಮುಖಂಡರು ಹಾಗೂ ಅಧಿಕಾರಿಗಳು ಹಾಜರಿದ್ದರು.
ಉದ್ಯಾನದ ಸೊಬಗನ್ನುಆಸ್ವಾದಿಸಿದ ತಂಡ
ಅಧ್ಯಯನ ಪ್ರವಾಸದಲ್ಲಿದ್ದ ತಜ್ಞರ ತಂಡದ ಸದಸ್ಯರು ಕೃಷ್ಣ ರಾಜಸಾಗರ ಜಲಾಶಯ (ಕೆಆರ್ಎಸ್)ಕ್ಕೆ ಭೇಟಿ ನೀಡಿದ ವೇಳೆ, ಕಾವೇರಿ ನದಿಗೆ ಪೂಜೆ ಸಲ್ಲಿಸಿದರು.ಪ್ರವಾಸ ಆರಂಭಕ್ಕೆ ಮುನ್ನ ಕಾವೇರಿ ನದಿಗಿಳಿದ ತಂಡ, ಕಾವೇರಿಗೆ ಪೂಜೆ ಸಲ್ಲಿಸಿ ನಂತರ, ವಿಶ್ವವಿಖ್ಯಾತ ಬೃಂದಾವನ ಉದ್ಯಾನದಲ್ಲಿ ಸುತ್ತಾಡಿ ಸೊಬಗನ್ನು ಆಸ್ವಾದಿಸಿತು.ಲಾಶಯ ನಿರ್ಮಾಣ ಕಾಲಕ್ಕೆ ಕೆಆರ್ಎಸ್ ಜಲಾಶಯ ದೇಶದ ಅತಿದೊಡ್ಡ ಎರಡನೆಯ ಜಲಾಶಯವೆಂಬ ಮಾಹಿತಿ, ಬೃಂದಾವನದ ಸೊಬಗು ತಂಡದ ಸದಸ್ಯರನ್ನು ಚಕಿತಗೊಳಿಸಿತು.
ಸಚಿವ ಜಯಚಂದ್ರರಿಂದ ವಸ್ತುಸ್ಥಿತಿ ವರದಿ ಸಲ್ಲಿಕೆ
ತುಮಕೂರು, ಅ.8: ಸುಪ್ರೀಂಕೋರ್ಟ್ ನಿರ್ದೇಶನದಂತೆ ಕಾವೇರಿ ಕೊಳ್ಳದ ಜಲಾಶಯಗಳ ಸ್ಥಿತಿ ಅಧ್ಯಯನ ನಡೆಸಲು ಎರಡು ದಿನಗಳ ಪ್ರವಾಸ ಕೈಗೊಂಡಿರುವ ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್.ಝಾ ನೇತೃತ್ವದ ಉನ್ನತ ಮಟ್ಟದ ತಾಂತ್ರಿಕ ಸಮಿತಿಗೆ ತುಮಕೂರು ಜಿಲ್ಲೆಯ ಹೇಮಾವತಿ ಅಚ್ಚುಕಟ್ಟು ಪ್ರದೇಶದಲ್ಲಿ ತಲೆದೊರಿರುವ ಮಳೆಯ ಕೊರತೆ, ಕುಡಿಯುವ ನೀರಿನ ಬವಣೆ, ಬೆಳೆ ನಷ್ಠ ಮತ್ತಿತರ ವಾಸ್ತವಾಂಶಗಳ ಬಗ್ಗೆ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಮಾಹಿತಿ ನೀಡಿದರು.
ಹಾಸನ ಜಿಲ್ಲೆಯ ಗೊರೂರು ಜಲಾಶಯ ವೀಕ್ಷಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಜಿ.ಎಸ್.ಝಾ ಅವರನ್ನು ಭೇಟಿ ಮಾಡಿದ ಸಚಿವರು, ಹೇಮಾವತಿ ನಾಲಾ ಅಚ್ಚುಕಟ್ಟು ವ್ಯಾಪ್ತಿಗೆ ಬರುವ ತುಮಕೂರು ಜಿಲ್ಲೆಯ ತಾಲೂಕುಗಳಲ್ಲಿ ಉಂಟಾಗಿರುವ ಮಳೆ ಕೊರತೆ,ಕುಡಿಯುವ ನೀರಿನ ಸಮಸ್ಯೆ, ಬೆಳೆ ನಷ್ಟ ಮತ್ತಿತರ ಅಂಶಗಳನ್ನು ಒಳಗೊಂಡ ಜಿಲ್ಲೆಯಲ್ಲಿನ ಬರದ ಪರಿಸ್ಥಿತಿಯ ಬಗ್ಗೆ ವರದಿ ಸಲ್ಲಿಸಿ, ಕೂಲಂಕಷವಾಗಿ ವಿವರಿಸಿದರು.ಲ್ಲೆಯಲ್ಲಿ ಮಳೆಕೊರತೆ ಬೆಳೆನಷ್ಟ: ನಾಲಾ ಅಚ್ಚುಕಟ್ಟು ಪ್ರದೇಶ ದಲ್ಲಿ ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳಲ್ಲಿ ಸರಾಸರಿ ಶೇ.60ಕ್ಕೂ ಹೆಚ್ಚು ಮಳೆ ಕೊರತೆ ಉಂಟಾಗಿದ್ದು, ಹೇಮಾವತಿ ಅಚ್ಚುಕಟ್ಟಿನ ಒಟ್ಟು 1.20 ಲಕ್ಷ ಹೆಕ್ಟೇರ್ ಪ್ರದೇಶದ ಪೈಕಿ ರಾಗಿ ಮತ್ತಿತರ ಕೃಷಿ ಬೆಳೆಗಳು 43,805.67 ಹೆಕ್ಟೇರ್ನಲ್ಲಿ ಬಿತ್ತನೆಯಾಗಿದ್ದು, ಮಳೆಯ ತೀವ್ರ ಕೊರತೆ ಮತ್ತು ನೀರಾವರಿಗಾಗಿ ಹೇಮಾವತಿ ನಾಲೆಗೆ ನೀರು ಹರಿಸದ ಹಿನ್ನೆಲೆಯಲ್ಲಿ ಬೆಳೆ ನಷ್ಟ ಉಂಟಾಗಿದೆ. ಅಲ್ಲದೆ, 41,660 ಹೆಕ್ಟೇರ್ ಪ್ರದೇಶದಲ್ಲಿರುವ ತೆಂಗು ಮತ್ತು ಅಡಿಕೆ ಬೆಳೆಗಳಿಗೂ ನೀರಿನ ಕೊರತೆ ಉಂಟಾಗಿ ತೊಂದರೆಯಾಗಿದೆ. ಳೆದ ಎರಡು ವರ್ಷಗಳಿಂದಲೂ ತುಮಕೂರು ಜಿಲ್ಲೆಯು ಬರದ ದವಡೆಗೆ ಸಿಲುಕಿದ್ದು, 2015ನೆ ಸಾಲಿನಲ್ಲಿ ಜಿಲ್ಲೆಯ 10 ತಾಲೂಕು ಗಳ ಪೈಕಿ 9 ತಾಲೂಕುಗಳನ್ನು ಬರಪೀಡಿತ ಪ್ರದೇಶ ವೆಂದು ಘೋಷಿಸಿ 84.38 ಕೋಟಿ ರೂ.ಗಳ ಇನ್ಪುಟ್ ಸಬ್ಸಿಡಿಯನ್ನು ರೈತರಿಗೆ ವಿತರಿಸಲಾಗಿದೆ. ಕಳೆದ ವರ್ಷದಂತೆ ಈ ಬಾರಿಯೂ ಜಿಲ್ಲೆಯಲ್ಲಿ ಬರಪರಿಸ್ಥಿತಿ ಎದುರಾಗಿದ್ದು, ಜಿಲ್ಲೆಯ 10 ತಾಲೂಕು ಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ ಹಾಗೂ ಈ ಹಿನ್ನೆಲೆಯಲ್ಲಿ 139.97 ಕೋಟಿ ರೂ. ಇನ್ಪುಟ್ ಸಬ್ಸಿಡಿ ಬೇಡಿಕೆಯನ್ನು ಸಲ್ಲಿಸಲಾಗಿದೆ ಎಂದು ವಿವರಿಸಿದರು.
ತುಮಕೂರು ನಗರ ಹಾಗೂ 8 ಪಟ್ಟಣಗಳಿಗೆ 4.10 ಟಿಎಂಸಿ ನೀರು ಅಗತ್ಯ: ಹೇಮಾವತಿ ನಾಲಾ ಅಚ್ಚುಕಟ್ಟು ಪ್ರದೇಶದಲ್ಲಿ ಸುಮಾರು 177 ಕೆರೆಗಳಿದ್ದು, 6.10 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯವನ್ನು ಹೊಂದಿವೆ. ಇದರಲ್ಲಿ ಈ ವರ್ಷ 108 ಕೆರೆಗಳಲ್ಲಿ ನೀರು ಇರುವುದಿಲ್ಲ. ಉಳಿದಂತೆ 31 ಕೆರೆಗಳಲ್ಲಿ ಶೇ.50 ರಷ್ಟು ನೀರು ಸಂಗ್ರಹವಾಗಿರುತ್ತದೆ ಹಾಗೂ 38 ಕೆರೆಗಳಲ್ಲಿ ಶೇ. 10 ರಿಂದ 25 ರಷ್ಟು ನೀರು ಇದೆ. 19 ಕುಡಿಯುವ ನೀರಿನ ಯೋಜನೆಗಳು ಮತ್ತು ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳು ಹಾಗೂ ತುಮಕೂರು ನಗರ ಮತ್ತು ಗುಬ್ಬಿ, ತಿಪಟೂರು, ತುರುವೆಕೆರೆ, ಮಧುಗಿರಿ, ಶಿರಾ, ಕೊರಟಗೆರೆ, ಚಿಕ್ಕನಾಯಕನಹಳ್ಳಿ ಮತ್ತು ಕುಣಿಗಲ್ ಈ ಪಟ್ಟಣಗಳಿಗೆ ಕುಡಿಯಲು 4.10 ಟಿಎಂಸಿ ನೀರಿನ ಅಗತ್ಯವಿದೆ. ಅಲ್ಲದೆ, 200 ಹಳ್ಳಿಗಳು ಕುಡಿಯುವ ನೀರಿಗಾಗಿ ಹೇಮಾವತಿಯನ್ನೇ ಆಶ್ರಯಿಸಿವೆ ಎಂದು ಸಮಿತಿಗೆ ವಾಸ್ತವಾಂಶ ಗಳನ್ನು ವಿವರಿಸಿ ಜಿಲ್ಲೆ ಎದುರಿಸುತ್ತಿರುವ ನೀರಿನ ಸಂಕಷ್ಟ ಕುರಿತು ಸಚಿವರು ಮನವರಿಕೆ ಮಾಡಿಕೊಟ್ಟರು.
ಮಳೆಯ ತೀವ್ರ ಕೊರತೆ ಮತ್ತು ನೀರಾವರಿಗಾಗಿ ಹೇಮಾವತಿ ನಾಲೆಗೆ ನೀರು ಹರಿಸದ ಹಿನ್ನೆಲೆಯಲ್ಲಿ ಬೆಳೆ ನಷ್ಟ ಉಂಟಾಗಿದೆ. ಅಲ್ಲದೆ, 41,660 ಹೆಕ್ಟೇರ್ ಪ್ರದೇಶದಲ್ಲಿರುವ ತೆಂಗು ಮತ್ತು ಅಡಿಕೆ ಬೆಳೆಗಳಿಗೂ ನೀರಿನ ಕೊರತೆ ಉಂಟಾಗಿ ತೊಂದರೆಯಾಗಿದೆ. ಟಿ.ಬಿ.ಜಯಚಂದ್ರ, ತುಮಕೂರು ಉಸ್ತುವಾರಿ ಸಚಿವ
ಜಿಲ್ಲೆಯ 11 ಕೆರೆಗಳ ವೈಮಾನಿಕ ಸಮೀಕ್ಷೆ
ಹಾಸನ ಜಿಲ್ಲೆಯ ಗೊರೂರು ಜಲಾಶಯವನ್ನು ಪರಿಶೀಲಿಸಿದ ತಂಡವು ನಂತರ ಹೆಲಿಕಾಪ್ಟರ್ಗಳಲ್ಲಿ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಇಡಗೂರು, ಮಾವಿನಹಳ್ಳಿ ಅರಿಯೂರು, ಎಂ.ಎಚ್.ಪಟ್ಟಣ ಗುಬ್ಬಿ, ನಿಟ್ಟೂರು, ಪುರ, ಕಡಬ, ಕಲ್ಲೂರು ಮತ್ತು ಕೋಡಿಹಳ್ಳಿ ಹಾಗೂ ಕುಣಿಗಲ್ ತಾಲೂಕಿನ ದೊಡ್ಡ ಮದುರೆ ಕೆರೆಗಳ ನೀರಿನ ಸಮೀಕ್ಷೆಯನ್ನು ನಡೆಸಿತು. ಜಿಲ್ಲಾಧಿಕಾರಿ ಕೆ.ಪಿ.ಮೋಹನ್ರಾಜ್,ಅಪರ ಜಿಲ್ಲಾಧಿಕಾರಿ ಸಿ.ಅನಿತಾ, ಹೇಮಾವತಿ ನಾಲೆಯ ಮುಖ್ಯ ಇಂಜಿನಿಯರ್ ಬಾಲಕೃಷ್ಣ,ಅಧೀಕ್ಷಕ ಇಂಜಿನಿಯರ್ ಶಿವಕುಮಾರ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಂತೋನಿ, ತೋಟಗಾರಿಕೆ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಈ ಸಂದರ್ಭ ದಲ್ಲಿದ್ದರು.