ಜಲವೊಂದೆ ಸಕಲ ಜೀವಾತ್ಮರಿಗೆ

Update: 2016-11-13 10:58 GMT

 ಬಯಲು ಸೀಮೆಯ ಬಲು ಮಾಡಿಕೊಳ್ಳುತ್ತಿರುವ ರೈತರನ್ನು ಗಮನಿಸಿದರೆ ಅತಿ ನೀರಿನ ಲಭ್ಯತೆಯೂ ಶಾಪವೇ. ಇಬ್ಬರೂ ಕಷ್ಟ ಪರಿಹಾರಕ್ಕಾಗಿ ದೊಡ್ಡ ಹೊಟ್ಟೆಯ ಟಿ.ವಿ.ಯ ಜ್ಯೋತಿಷಿಗಳ ಮುಂದೆ ಕೂತಿದ್ದಾರೆ. ಜನರು ತಮ್ಮ ವಿವೇಕದ, ಜ್ಞಾನದ ಪಂಚೇಂದ್ರಿಯಗಳನ್ನು ಒತ್ತೆಯಿಟ್ಟು ದುಡಿದದ್ದೆಲ್ಲವನ್ನೂ ಈ ನಿಸರ್ಗ ವಿರೋಧಿಗಳ ಹುನ್ನಾರಗಳಿಗೆ ನೈವೇದ್ಯ ಅರ್ಪಿಸುತ್ತಿದ್ದಾರೆ. ನೆಲ- ನೀರು, ಪ್ರಾಣಿ-ಮನುಷ್ಯರನ್ನು ಏಕ ಘಟಕವೆಂದು ಭಾವಿಸಿ ಚಿಂತಿಸುವುದೇ ಆಧ್ಯಾತ್ಮ.

ಮೊದ ಮೊದಲ ನೆನಪುಗಳಿವು. ನಮ್ಮ ಊರ ಮಧ್ಯದಲ್ಲೊಂದು ಬಾವಿಯಿತ್ತು. ಅರವತ್ತು ಅಡಿ ಮೀರಿ ಆಳವಿರಬಹುದು. ಹಗ್ಗ ಹೊರುವುದಕ್ಕೇ ಒಂದಾಳು ಬೇಕಿತ್ತು. ಮನೆ ಮನೆಗಳಲ್ಲಿ ಅಕ್ಕಿ ಮತ್ತು ನೀರು ಪೋಲು ಮಾಡದೆ ಬಳಸುವ ವಸ್ತುಗಳಾಗಿದ್ದವು. ಪಶುಪಾಲನೆಯಿಂದ ನಿಧಾನಕ್ಕೆ ಕೃಷಿಗೆ ಹೊರಳುತ್ತಿದ್ದ ಹಾಗೂ ಬಹುಪಾಲು ಒಂದೇ ಸಮುದಾಯವಿದ್ದ ಊರು ನನ್ನದು.ಇತರ ಊರುಗಳಿಗಿಂತ ಎತ್ತರದಲ್ಲಿತ್ತು. ಪಶುಪಾಲನೆ ಮುಖ್ಯವಾಗಿದ್ದ ಕಾರಣಕ್ಕೆ ಎತ್ತರದ ಪ್ರದೇಶಗಳಲ್ಲಿದ್ದರೆನ್ನಿಸುತ್ತದೆ. ಬ್ರಾಹ್ಮಣರು, ಒಕ್ಕಲಿಗರು, ಲಿಂಗಾಯತರು ಕೆರೆ ಹಿಂದಿನ ಊರುಗಳಲ್ಲಿದ್ದರು.ಆಗ ಅಲ್ಲೆಲ್ಲ ಹಸಿರು ಸಿರಿಯುಕ್ಕಿ ಹರಿಯುತ್ತಿತ್ತು. ಕಬ್ಬು, ಬಾಳೆ, ಸೀಬೆ, ತೆಂಗು ತೋಟಗಳು ಸದಾ ನಲಿದಾಡುತ್ತಿದ್ದವು. ತರಾವರಿ ಹೂವುಗಳ, ಆಲೆಮನೆಯ ಬೆಲ್ಲದ ಸುಗಂಧ ಗಾಳಿಯಲೆಯಲ್ಲಿ ತೇಲುತ್ತಿತ್ತು. ನನ್ನೂರಿನಲ್ಲಿ ನಾಟಿ ಹಸುಗಳು, ಎಮ್ಮೆಗಳು, ಕುರಿ ಮೇಕೆಗಳು ತುಂಬಿ ತುಳುಕುತ್ತಿದ್ದವು. ನಮ್ಮ ಮನೆಯಲ್ಲೇ ಹತ್ತತ್ತಿರ ನೂರೈವತ್ತು ಸಂಖ್ಯೆಯಲ್ಲಿದ್ದವು. ನೀರು ನಲಿಯುತ್ತಿದ್ದ ಊರುಗಳಲ್ಲಿ ಹಾಲಿನ ಡೈರಿಯೂ, ಸೀಮೆ ಹಸುಗಳೂ ಬಂದಿದ್ದವು. ಕೇವಲ ಒಂದೆರಡು ಕಿ.ಮೀ ಅಂತರದಲ್ಲಿದ್ದ ಈ ಊರುಗಳು ಎರಡು ಭಿನ್ನ ಲೋಕಗಳಂತಿದ್ದವು.

ಆದರೆ ನನ್ನೂರಿನಲ್ಲಿ ಅಪಾರ ಸಂಖ್ಯೆಯ ಹಲಸು ಮತ್ತು ಮಾವಿನ ಮರಗಳಿದ್ದವು. ಒಂದೊಂದು ಹಲಸಿನ ಮರವೂ ಮುಕ್ಕಾಲು ಎಕರೆ ಭೂಮಿಯನ್ನು ತಬ್ಬಿ ತೊನೆಯುತ್ತಿದ್ದವು. ಹೂತ ಮಾಮರಗಳ ಗುಂಪು ಪಂಪನ ಬನವಾಸಿಯ ಭ್ರಮೆಯುಟ್ಟಿಸುತ್ತಿದ್ದವು. ಅರೆ ಕೆಂಪು, ಕೆನೆಗೆಂಪು ಬಣ್ಣದ ಹೂಗಳು, ಗಿಣಿ ಹಸಿರಿನ,ಕೆಂಪು ಹಸಿರಿನ ಮಾವಿನ ಮರಗಳು ಇಂದು ನನ್ನ ಎದೆಯ ಗೋರಿಯೊಳಗೆ ಕುಂತು ಬಿಕ್ಕಳಿಸುತ್ತಿವೆ. ಕೈಚಾಚಿದ ಕಡೆಯೆಲ್ಲ ಜೇನುಗಳು, ಮಳೆಗಾಲದಲ್ಲಿ ನೋಟ ನೆಟ್ಟ ಕಡೆಯೆಲ್ಲ ಬುಟ್ಟಿ ಬುಟ್ಟಿ ಅಣಬೆಗಳು, ಮರ ಮರಗಳಲ್ಲೂ ಹಕ್ಕಿಗಳು.ಕುವೆಂಪು ಕಾದಂಬರಿಗಳನ್ನು ಓದುವಾಗಲೆಲ್ಲ ನಾವು ಪಾತ್ರಗಳಾಗಿ ಬಿಡುವುದು ಈ ನೆನಪುಗಳ ಕಾರಣಕ್ಕೇ ಅನ್ನಿಸುತ್ತದೆ.ಅಣಬೆ ನೆಲದ ಆರೋಗ್ಯವನ್ನು, ಜೇನು-ಹಕ್ಕಿಗಳು ಮರ ಗಿಡಗಳ ಆರೋಗ್ಯವನ್ನು ಸಾರಿ ಹೇಳುವ ಗಂಧರ್ವ ಗೀತೆಯ ಪಾತ್ರಗಳು.ಊರ ಸುತ್ತೆಲ್ಲ ಬಾವಿಗಳಿದ್ದವು. ರಾಟೆಗಳಲ್ಲಿ ಎತ್ತುಗಳ ಗಾಣಗಳಲ್ಲಿ ನೀರುಂಡ ನೆಲ ಬಂಗಾರ ಬೆಳೆಯುತ್ತಿತ್ತು. ಊರಾಚೆ ಕಾಡಿನಲ್ಲಿ ಎಂದೂ ಬತ್ತಲಾರವೆಂಬ ಭ್ರಮೆ ಹುಟ್ಟಿಸುವ ಹಳ್ಳಗಳಿದ್ದವು.ಹಾಲಿನಂಥ ನೀರು. ನಾವು ಈಜು ಕಲಿತದ್ದೇ ಅಲ್ಲಿ. ಎಷ್ಟೊಂದು ಹಣ್ಣುಗಳು, ಮರೆಯಲಾಗದೆ ಕೂತು ನೆನಪು ನೇವರಿಸುತ್ತವೆ.
(ಗ್ರಾಮಗಳ ಕುರಿತು ಹೀಗೆ ರಮ್ಯವಾಗಿ ಬರೆಯುವಾಗ ಡಾ.ಬಿ.ಆರ್.ಅಂಬೇಡ್ಕರರು ಕೆಂಗಣ್ಣು ಮಾಡಿ ಬಯ್ಯಬಹುದೆಂಬ ಎಚ್ಚರಿಕೆ ಖಂಡಿತ ಇದೆ. ನಮ್ಮ ಊರಿನ ಅಕ್ಕ ಪಕ್ಕದ ಗ್ರಾಮಗಳಲ್ಲೇ ದಲಿತರು ಮತ್ತು ದಲಿತೇತರರ ನಡುವೆ ತಾರತಮ್ಯಗಳನ್ನು ನೋಡಿದ್ದೇನೆ. ದಲಿತರಿಗೆ ಪ್ರತ್ಯೇಕವಾಗಿಯೇ ಇದ್ದ ಬಾವಿಯನ್ನು ನೋಡಿದ್ದೇನೆ. ಅದಕ್ಕಾಗಿ ಮೊದಲಿಗೇ ಬಾಬಾಸಾಹೇಬರ ಕ್ಷಮೆಕೇಳಿ ಮುಂದುವರಿಯುತ್ತೇನೆ. ಫ್ಲೋರೈಡ್ ನೀರು ಕುಡಿದು ಕೈ ಮುರುಟಿದ, ಮಯ್ಯ ಮೂಳೆಗಳೆಲ್ಲ ನೋಡ ನೋಡುತ್ತಲೇ ಸೊರಗಿ ಹೋಗುತ್ತಿರುವ, ಹಲ್ಲುಗಳು ಹಳದಿಯಾಗಿ ಕರಗಿ ಹೋಗುತ್ತಿರುವ ಜನರನ್ನು ನೋಡಿದರೆ, ನಗರೀಕರಣವನ್ನು ಬಾಬಾಸಾಹೇಬರು ಇಂದು ಬೇರೆ ರೀತಿಯೇ ನಿರ್ವಚಿಸುತ್ತಿದ್ದರು ಎಂದು ಅನ್ನಿಸುತ್ತದೆ. ನಗರದ ಸ್ಲಂಗಳಲ್ಲಿ ವಾಸಿಸುತ್ತಿರುವ ಬಹುಪಾಲು ದಲಿತ ಬಂಧುಗಳು ದಾರುಣ ಸ್ಥಿತಿಯನ್ನು ಎದುರಿಸುತ್ತಿರುವ ಕುರಿತ ಅನೇಕ ವರದಿಗಳಿವೆ. ಒಂದು ವರದಿಯ ಪ್ರಕಾರ ಮುಂಬೈನ ಶೇ.6ರಷ್ಟು ಭೂಪ್ರದೇಶದಲ್ಲಿ ಶೇ 50 ರಷ್ಟು ಜನ ವಾಸ ಮಾಡುತ್ತಿದ್ದಾರೆಂದು ಹೇಳಲಾಗುತ್ತಿದೆ. ಇಂಥ ನಗರೀಕರಣವನ್ನು ತಾನೆ ಬಾಬಾಸಾಹೇಬರು ಹೇಗೆ ಸಮರ್ಥಿಸುತ್ತಾರೆ.)
 ಮನೆಗಾದರೂ ಪೇಟೆಯಿಂದ ಏನು ಬರುತ್ತಿತ್ತು? ಕತ್ತೆಗಳ ಮೇಲೆ ಉಪ್ಪಿನ ಮೂಟೆಗಳು ಬರುತ್ತಿದ್ದವು.ಬೆಂಕಿಪೊಟ್ಟಣ, ಟೆರಿಲಿನ್ ಬಟ್ಟೆ, ಕಾಯಿಲೆ ಬಂದರೆ ಔಷಧ.. ನೆನಪಿಗೆ ದಕ್ಕಿ ಬರುವುದು ಇಷ್ಟೆ. ತರಕಾರಿ, ಕಾಳು-ಕಡ್ಡಿ, ಮುಂತಾದವುಗಳನ್ನು ಪೇಟೆಯಿಂದ ತಂದರೆ ಮನೆ ಭಿಕಾರಿಯಾಗುತ್ತದೆಂದು ನಂಬಿ ಬದುಕುತ್ತಿದ್ದರು. ಅಮ್ಮ ನಾಟಿ ಕೋಳಿಗಳ ಮೊಟ್ಟೆ ಮಾರಿಯೇ ಹೊಲ ಕೊಂಡ ಉದಾಹರಣೆ ನಮ್ಮ ಮನೆಯಲ್ಲಿದೆ. ಇದು ಯಾವುದೋ ಶತಮಾನದ ಕಥೆಯಲ್ಲ. ಈ ದೇಶಕ್ಕೆ ತುರ್ತು ಪರಿಸ್ಥಿತಿ ಘೋಷಿಸಿದ ನಾಲ್ಕು ಗಂಟೆಗಳ ನಂತರ ಹುಟ್ಟಿದವನು ನಾನು. ಇವತ್ತಿಗೆ ಸುಂದರವೆನ್ನಿಸುವ ನೆನಪುಗಳೆಲ್ಲ ನನಗೆ ಇಪ್ಪತ್ತು ವರ್ಷಗಳಾಗುವವರೆಗೆ ಹಾಗೇ ಇದ್ದವು. ಹಾಗೆಂದು ಎಲ್ಲವೂ ಸರಿಯಾಗಿದ್ದವೆಂದೇನೂ ಅಲ್ಲ. 75ಕ್ಕೆ ಮೊದಲು ತೀವ್ರ ಹಸಿವಿತ್ತು. ಅನ್ನಕ್ಕೆ ಹಾತೊರೆದ ನೆನಪುಗಳಿದ್ದವು.ಮಾತೆತ್ತಿದರೆ ಪುಷ್ಪಕ ವಿಮಾನದ ಬಗ್ಗೆ ಮಾತನಾಡುವ ನಾವು ಬೆಳೆದಿದ್ದನ್ನು ಸರಿಯಾಗಿ ಕಾಪಿಡಲು ಸೂಕ್ತವಾದ ಕಣಜಗಳಿರಲಿಲ್ಲ.ಹಗೇವುಗಳಲ್ಲಿ ಕೂಡಿಟ್ಟು ಮಳೆ ನೀರು ನುಗ್ಗಿ ದವಸ ಧಾನ್ಯಗಳೆಲ್ಲ ಕೊಳೆತು ಹಾಳಾಗುತ್ತಿದ್ದ ನೆನಪು ಹಲವರಿಗಿದೆ. ಸಾವಿರಗಟ್ಟಲೆ ವರ್ಷಗಳಿಂದ ಮರದ ನೇಗಿಲಿನಲ್ಲಿ ಎರಡು ಇಂಚು ನೆಲ ಉಳುತ್ತಾ ಬೆವರು ಬಸಿಯುತ್ತಾ ಜನ ದುಡಿಯುತ್ತಿದ್ದರು.
ಕಳೆದ ಶತಮಾನದ 90ರ ದಶಕವೆಂಬುದು ದೇಶದ ಚರಿತ್ರೆಯಲ್ಲಿ ಅನೇಕ ಪಲ್ಲಟಗಳು ಸಂಭವಿಸಿದ ದಶಕ. ದೇಶದ ರಾಜಕಾರಣದಲ್ಲಿ ಮಂದಿರ ಮಸೀದಿಗಳು ರಂಗಸ್ಥಳಕ್ಕೆ ಬಂದವು. ಇಲ್ಲಿನ ಸಕಲ ಆಗು ಹೋಗುಗಳಲ್ಲಿ ಅಂತಾರಾಷ್ಟ್ರೀಯ ಶಕ್ತಿಗಳು ಕೇಂದ್ರಶಕ್ತಿ ಎನ್ನಿಸಿಕೊಂಡವು. ಜಗತ್ತಿನ ದುಡ್ಡಿರುವ ಜನರು ಕೊಳ್ಳಬಹುದಾದ್ದೆಲ್ಲವನ್ನು ಮಾರಲು ಬೇಕಾದ ವೇದಿಕೆಯೊಂದು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಸಿದ್ಧವಾಯಿತು. ನೀರು ಕೂಡ ಮಾರಾಟದ ವಸ್ತುವಾಯಿತು. ಈ ಸಂದರ್ಭದಲ್ಲಿ ವೇಗಗೊಂಡ ನಗರೀಕರಣದ ಪರಿಣಾಮ ನೇರವಾಗಿ ಕೃಷಿಯ ಮೇಲಾಯಿತು. ಬಹುಸಂಖ್ಯೆಯ ಜನರು ನಗರಗಳ ಕಡೆಗೆ ಮುಖಮಾಡಿದರು. ಮಕ್ಕಳು ಕಾನ್ವೆಂಟ್ ಶಾಲೆಗಳ ಕಡೆಗೆ ಹೊರಳಿ ‘ರೈನ್ ರೈನ್ ಗೋ ಅವೇ’ ಎಂಬ ಹಾಡುಗಳನು ಹಾಡಲಾರಂಭಿಸಿದರು. ‘ಬಾರೋ ಬಾರೋ ಮಳೆರಾಯ’ ಹಾಡುವ ಮಕ್ಕಳೆದೆಯೊಳಗೆ ಕೀಳರಿಮೆಯೊಂದು ಸಣ್ಣಗೆ ಕೊರೆಯಲಾರಂಭಿಸಿತು. ಹೋಗು ಮಳೆಯೇ ಹೋಗು ಎಂಬ ಇಂಗ್ಲಿಷ್ ಕಲಿವ ಮಕ್ಕಳ ವೃಂದಗಾನಕ್ಕೆ ಹೆದರಿದಂತೆ ಕಂಡ ಮೋಡಗಳು ಮಳೆ ಸುರಿಸದೇ ಹಾರಲಾರಂಭಿಸಿದವು.ಹವಾಮಾನ ವೈಪರೀತ್ಯದ ಸಮಸ್ಯೆ ಜೋರಾಗತೊಡಗಿತು. ಎಂದೂ ಆತ್ಮಹತ್ಯೆ ಮಾಡಿಕೊಳ್ಳದ ರೈತರು ನೇಣಿನ ಕುಣಿಕೆಗೆ, ವಿಷದ ಬಾಟಲಿಗೆ ಕೈಯೊಡ್ಡಿದರು. ಕೃಷಿ ನಿಧಾನಕ್ಕೆ ಭೀಕರವಾದ ಸಂಕಷ್ಟಕ್ಕೆ ಸಿಕ್ಕಿಕೊಳ್ಳಲಾರಂಭಿಸಿತು. ಟಿ.ವಿ. ಕಾರಣದಿಂದ ಸಮುದಾಯ ಪ್ರಜ್ಞೆ ಕುಸಿಯತೊಡಗಿತು. ಕೆರೆ ಕೊಳ್ಳಗಳ ನಿರ್ವಹಣೆ ಸರಕಾರದ್ದು ಎಂಬ ನಿಲುವು ಬೆಳೆಯಿತು.
2000ನೆ ಇಸವಿಯ ಹೊತ್ತಿಗೆ ಊರ ಸೂತ್ರವೆಲ್ಲ ತಾರಾ ಮಾರಾ ಆಗತೊಡಗಿತು. ಅಲ್ಲಿಂದ ಬರೀ ಬಿಸಿಯುಸಿರು.ಆತ್ಮಹತ್ಯೆಗಳು, ಬರಡು ಬರಡಾಗುತ್ತಿರುವ ನೆಲ, ಎಂದೂ ಕಾಣದ ತಲ್ಲಣ. ನನಗೆ ನೆನಪಿರುವಂತೆ ಇದಕ್ಕೆ 15 ವರ್ಷಗಳ ಚರಿತ್ರೆಯಿದೆ. 1984-85ರ ಹೊತ್ತಿಗೆ ಊರ ಮಧ್ಯೆ ಮಾಯಾರೂಪಿ ಬೃಹದಾಕಾರದ ಲಾರಿಗಳೆರಡು ಬಂದು ನಿಂತವು. ಒಂದು ನೆಲವನ್ನು ಗರಗರಾ ಕೊರೆದು ಹಾಕಿತು. ಅವತ್ತಿಗೆ 120 ಅಡಿ ಮೀರಿ ಕೊರೆಯಲಾಗದೆ ನಿಲ್ಲಿಸಿದರು. ಲಾರಿಯನ್ನೆ ಎತ್ತಿ ಎಸೆಯುವಂತೆ ನೀರು ನುಗ್ಗುತ್ತಿತ್ತು. ನೀರು ಕಂಡು ಊರು ಸಂಭ್ರಮಿಸಿತು. ಹೊಸ ಕೊಳವೆಯೇ ನವ ಗಂಗೆಯೆಂದು ಜನ ಪೂಜೆ ಮಾಡಿ ಸಂಭ್ರಮಿಸಿದರು.ವಾರೊಪ್ಪತ್ತಿನಲ್ಲಿ ಕೈಪಂಪು ಕೂರಿಸಿದರು.ಅವತ್ತಿಗೆ ಹಗ್ಗ ಗಿಗ್ಗಗಳೆಲ್ಲ ಮೂಲೆ ಸೇರಿಹೋದವು. ಜನರ ನಿಷ್ಕರುಣೆಗೆ ಹಗ್ಗ ಮಾತ್ರವಲ್ಲ ಹಗ್ಗ ಹೊಸೆವವರೂ ಕೊರಗಿದರು. ಶತಮಾನಗಳ ಅವಲಂಬನೆಯೊಂದು ಈ ಮೂಲಕ ಮುರಿದು ಬಿತ್ತು. ತಮ್ಮ ಕಷ್ಟಕ್ಕೆ ದೇವರು ನೀಡಿದ ವರವೆಂದು ಹೆಂಗಸರು ಹಿಗ್ಗಿದರು. ಮಜ್ಜನದ್ವೇಷಿ ಒಂದಿಷ್ಟು ಮಕ್ಕಳಿಗೆ ಇದೊಂದು ಶಾಪವಾಯಿತಷ್ಟೆ.

ಬೋರು ಕೊರೆದ ಒಂದೂವರೆ ವರ್ಷಕ್ಕೆ ಬಾವಿ ಬತ್ತಿಹೋಯಿತು. 86ರಲ್ಲಿ ಊರಿಗೆ ಕರೆಂಟು ಬಂತು. ದುಡ್ಡಿರುವವರು ಒಬ್ಬೊಬ್ಬರೆ ತಮ್ಮ ಹೊಲಗಳಲ್ಲಿ ಬೋರು ಕೊರೆಸಿ, ಬೇಸಿಗೆಯಲ್ಲೂ ನೆಲ ನಗುವಂತೆ ಮಾಡಿದರು. ದುಡ್ಡಿಲ್ಲದವರು ಮನೆಯ ಸದಸ್ಯರಂತಿದ್ದ ಆಡು-ಕುರಿ ಹಸು-ಎಮ್ಮೆಗಳನ್ನು ಮಾರಿ ಬಂದ ದುಡ್ಡಿನಲ್ಲಿ ಬಾವಿ ಕೊರೆಸಿದರು. 2000ದ ಹೊತ್ತಿಗೆ 120 ಮನೆಯ ಊರಲ್ಲಿ 200ಕ್ಕೂ ಮಿಕ್ಕಿನ ಬೋರುಗಳು ಕೋಟ್ಯಂತರ ವರ್ಷಗಳ ನೀರನ್ನು ನೆಲದಾಳದಿಂದ ಬಾಚಿ ಬಾಚಿ ಬರಿದು ಮಾಡತೊಡಗಿದವು.ತರಕಾರಿ ಹಣ್ಣುಗಳಿಂದ ಊರ ಮನೆಗಳಲ್ಲಿ ದುಡ್ಡು ಹರಿಯತೊಡಗಿತು. ನಾಗರಿಕತೆ ಹೊಸ ದಿಕ್ಕಿಗೆ ಹೊರಳತೊಡಗಿತು. ದನ ಕರುಗಳನ್ನು ಹೀಗೆ ನಿಷ್ಕರುಣೆಯಿಂದ ಮಾರಿಬಿಡಲು ಕಾರಣ ಹಣದ ಸಮಸ್ಯೆಯೊಂದೇ ಅಲ್ಲ. ಅವುಗಳನ್ನು ಮೇಯಿಸುವುದು ದಂಡವೆಂದು ಭಾವಿಸಿದ್ದೂ ಕಾರಣವಾದರೆ, ಅವು ಕಂಡ ಕಂಡವರ ತೋಟಗಳಿಗೆ ನುಗ್ಗಿ ಜಗಳವೇಳುತ್ತದೆಂಬುದು ಇನ್ನೊಂದು ಕಾರಣವಾಗಿತ್ತು. ಮೊದಲಾಗಿದ್ದರೆ ಹೊಲ ಕುಯಿಲು ಮುಗಿದ ನಂತರ ಅವುಗಳನ್ನು ಯಾರೂ ಹಿಂದೆ ಬಿದ್ದು ಮೇಯಿಸುತ್ತಿರಲಿಲ್ಲ. ತಮ್ಮ ಪಾಡಿಗೆ ತಾವು ಮೇಯ್ದು, ಹಳ್ಳಕೊಳ್ಳಗಳಲ್ಲಿ ನೀರು ಕುಡಿದು ಕಾಡು ಮೇಡುಗಳಲ್ಲಿ ಕರು ಹಾಕಿ, ದೊಡ್ಡ ದೊಡ್ಡ ಹಲಸಿನ ಮರದ ಕೆಳಗೆ ಮಲಗಿ ಮೆಲುಕು ಹಾಕಿ ಸಂಜೆಯಾದೊಡನೆ ಸಾಲುಗಟ್ಟಿ ಮನೆ ಸೇರುತ್ತಿದ್ದ ಹಸುಗಳು ಕೊಳವೆ ಬಾವಿಗಳು ಬಂದ ಐದು ವರ್ಷಕ್ಕೆ ಸಾವಿರಾರು ವರ್ಷಗಳ ಒಡನಾಡಿ ಮನುಷ್ಯರ ಹೊಸ ದಾಹದ ನಿಷ್ಕರುಣೆಗೆ ಸಿಕ್ಕಿ ನಾಮಾವಶೇಷವಾಗಿ ಹೋದವು.ಇಲ್ಲ ತಮ್ಮ ಒಡಲನ್ನು ಯಾವುದೋ ದೇಶದ ಹೋರಿಗಳ ವೀರ್ಯಕ್ಕೆ ಜಾಗಕೊಟ್ಟು ಹಾಲು ಕರೆವ ಯಂತ್ರಗಳಿಗೆ ಜನ್ಮಕೊಟ್ಟು ಮರೆಯಾದವು. ಹೊಲದ ಬದುಗಳಲ್ಲಿದ್ದ ದೊಡ್ಡ ದೊಡ್ಡ ಹಲಸು, ಬೇವು ಮುಂತಾದ ಮರಗಳು ಬೆಳೆಗಳಿಗೆ ಅಡ್ಡಿಯೆಂದೂ ಹಕ್ಕಿ ಮಂಗಗಳಂತ ಬೆಳೆಪೀಡಕಗಳಿಗೆ ಆವಾಸಸ್ಥಾನವೆಂದು ಕಡಿದು ಮಾರಿದರು. ತರಕಾರಿ ಮಾರಿ ದುಡ್ಡು ಬಂದ ಕಾರಣಕ್ಕೆ ಮರ ಕಡಿದು ತೊಲೆ ಮಾಡಿ ಕಾಂಕ್ರಿಟು ಮನೆ ಕಟ್ಟಿ ಪ್ರತಿಷ್ಠೆ ಹೆಚ್ಚಿತೆಂದು ಖುಷಿಪಟ್ಟರು.ಊರಾಚೆಯ ಹೊಲಗಳಿಗೆ ನೀಲಗಿರಿ ಕಳೆನೆಟ್ಟು ಹುಲ್ಲು ಹುಲ್ಲಾದ ಭೂಮಿಯನ್ನು ಬೋಳು ಬೋಳಾಗಿಸಿದರು.ಇದಿಷ್ಟು ನಡೆವ ಹೊತ್ತಿಗೆ ಊರ ಮಧ್ಯದ ಕೈಬೋರು ಕೆಸರು ಮಣ್ಣೆತ್ತಿ ತೂರತೊಡಗಿತು. ಮಣ್ಣಿನೆರಡು ಕಣಗಳ ಬೆರೆಸಿ ಜೀವ ತುಂಬಿದ ಅಂಟು ಬೂದಿಯಾಗಿದೆ. ನೀರೆಂದರೆ ಬರೀ ನೀರೇ? ನೀರೆಲ್ಲ ಊ ತೀರ್ಥವೇ!.
ದುರಂತವೆಂದರೆ ಕೆರೆ ಮೇಲಿನವರೂ, ಕೆರೆ ಕೆಳಗಿನವರೆಲ್ಲರೂ ನಿಧಾನಕ್ಕೆ ಸಮಾನ ದುಃಖಿಗಳಾಗತೊಡಗಿದರು. ಈಗ ಯಾರ ಬೋರಲ್ಲೂ ನೀರಿಲ್ಲ. ಆದರೂ ಹಠತೊಟ್ಟಂತೆ ಭೂಗರ್ಭ ಸೀಳುವ ಕೆಲಸ ಮುಂದುವರಿಯುತ್ತಲೇ ಇದೆ. ಸಾವಿರದೈನೂರು ಅಡಿ ಮೀರಿ ಕೊರೆದರೂ ತೇವದ ಪಸೆಯಿಲ್ಲ. ಸಿಮೆಂಟಿನಂಥ ಧೂಳು ನೆಲಗರ್ಭದಿಂದ ಆಕ್ರಂದಿಸುತ್ತಾ ಹಾರುತ್ತದೆ.ಈಗ ಎಲ್ಲವೂ ಬರಡು.ಗಿಳಿ ಗುಬ್ಬಿಗಳು ಬುಟ್ಟಿಗಟ್ಟಲೆ ಅಣಬೆಗಳು ಎಲ್ಲಿಹೋದವೋ? ಮನೆತನಕ್ಕೊಂದು ಆತ್ಮಹತ್ಯೆ ಕುಣಿಯುತ್ತಿದೆ. ಹೊಲಕ್ಕೊಂದು ಕೇಸು ಬಿದ್ದಿದೆ. ಊರ ಹೆಂಗಸರನೇಕರು ಯಾವುದೋ ಬಟ್ಟೆ ಫ್ಯಾಕ್ಟರಿಗಳಲ್ಲಿ ಜುಜುಬಿ ದುಡ್ಡಿಗೆ ಬೆವರು ಹರಿಸುತ್ತಿದ್ದಾರೆ. ಊರ ಗೂಡಂಗಡಿಗಳಿಂದ ದೇಶ ದೇಶಾಂತರಕ್ಕೆ ನನ್ನ ಜನರ ದುಡಿಮೆ ಹರಿದು ಹೋಗುತ್ತಿದೆ. ಸಾಯುವುದಕ್ಕೆ ಕೊಂಡ ವಿಷದ ಬಾಟಲಿಯ ದುಡ್ಡೂ ಸೇರಿ. ಬೀದಿ ಗೊಂದಿಗಳಲ್ಲಿ ಹೆಂಡ ಮಾರುವುದು ಹೆಚ್ಚಿ ಹೋಗಿದೆ. ಊರು ಸಾವಿನ ಕುಲುಮೆಯಂತೆ ಕಾಣುತ್ತಿದೆ.
ಇದಿಷ್ಟರ ನಡುವೆ ನಾಡಿನು ದ್ದಗಲಕ್ಕೂ ಊರೂರ ತುಂಬ ಇಂದ್ರನರಮನೆಯಂಥ ದೇವಾಲಯ, ಮಸೀದಿ, ಚರ್ಚುಗಳು ಜಿದ್ದಿಗೆ ಬಿದ್ದಂತೆ ತಲೆಯೆತ್ತುತ್ತಿವೆ. ಮನುಷ್ಯತ್ವವೆಂಬುದು ಕೊಳೆತು ನಾರುತ್ತಿದೆ. ನಮ್ಮ ಹಿರಿಯರಿಗೆ ದೇವಸ್ಥಾನಗಳಿಗಿಂತ ಕೆರೆ-ಕಟ್ಟೆ-ಕುಂಟೆ, ನೆಟ್ಟ ಮರಗಳು ನಿಜದ ದೇವರ ಜಾಗಗಳೆಂದು ಅನ್ನಿಸಿದ್ದವು. ಮೈಮಾರಿ ಬದುಕಿದ್ದ ಹೆಂಗಸರೂ ಕೆರೆ ಕಟ್ಟಿಸಿ ಪುಣ್ಯ ಬೇಡಿದ ನಾಡು ನಮ್ಮದು. ಬೊಗಸೆ ನೀರು ಮತ್ತು ನೆರಳುಗಳಲ್ಲಿ ದೇವರ ಭಾವಿಸಿ ಬದುಕಿದ ಜನಪದಗಳ ವಾರಸುದಾರರು ನಾವು. ಊರ ಸುತ್ತಲು ಇರುವ ಹತ್ತಿಪ್ಪತ್ತು ಕಟ್ಟೆಗಳಿಗೆ ಊರ ಹಿರಿಯರ ಹೆಸರುಗಳಿವೆ. ಎಲ್ಲವೂ ಬತ್ತಿ ಹೋಗಿವೆ. ಮರುಜೀವಕ್ಕೆ ಹಾತೊರೆಯುತ್ತಿವೆ. ಅದ ಬಿಟ್ಟು ಬದುಕುತ್ತಿರುವ ನಮಗೆಂಥ ದರಿದ್ರದ ರೋಗ ಅಂಟಿಕೊಂಡಿದೆ? ಸತ್ತ ಹಸುಗಳನ್ನು ಹೂತು ಬಸವಣ್ಣನೆಂದು ಸಮಾಧಿ ಪೂಜೆ ಮಾಡುತ್ತಾರೆ. ಯಾರನ್ನೂ ದ್ವೇಷಿಸದೆ ಎಲ್ಲರನ್ನೂ ಒಳಗೊಂಡು ಊರುಕಟ್ಟಿದ್ದರು, ಹಿರಿಯರು.
ಕೆರೆ-ಕಟ್ಟೆ,ಗಿಡ-ಗಂಟೆಗಳ ಉಸ್ತುವಾರಿ ಬಿಳಿ ಬಟ್ಟೆಯವರದೆಂಬ ಭಾವ ಜನರೊಳಗಿದೆ. ಊರುಗಳ ನೋಡಿದರೆ ಪುರೋಹಿತರು, ದಲ್ಲಾಳಿಗಳು, ಬಿಳಿ ಬಟ್ಟೆಯವರು ಮಾತ್ರ ಒಂದಿಷ್ಟು ಸುಖವಾಗಿರುವಂತೆ ಕಾಣುತ್ತಾರೆ. ಇಂಥ ಹೊತ್ತಲ್ಲಿ ಚೀನಾದ ತಾವೋಗಳು ನೆನಪಾಗುತ್ತಾರೆ. ಅವರ ತಾತ್ವಿಕ ದರ್ಶನವಿದು. ತಾವೋ ಪ್ರಕಾರ ಆಳುವ ಮಂದಿ ಕುಗ್ಗಿರುವಾಗ ಅಥವಾ ಖಿನ್ನರಾಗಿರುವಾಗ ಜನತೆಯು ಸುಖವಾಗಿರುತ್ತದೆ, ಸಮಾಧಾನದಿಂದಿರುತ್ತದೆ: ಆಳುವವನು ಪುಟಿಯುವಂತಿದ್ದರೆ ಮತ್ತು ಸ್ವಯಂ ದೃಢವಾಗಿದ್ದರೆ ಜನತೆಯು ಗೊಣಗುತ್ತಿರುತ್ತದೆ, ಅತೃಪ್ತಿಯಿಂದಿರುತ್ತದೆ. (ಚೀನಾದಲ್ಲಿ ತತ್ವಶಾಸ್ತ್ರ, ಜಿ.ರಾಮಕೃಷ್ಣ. ಪು. 49, ನವಕರ್ನಾಟಕ-2015) ನಮ್ಮ ಪರಿಸ್ಥಿತಿಗೂ ಇದು ಯಥಾವತ್ತು ಅನ್ವಯವಾಗುವಂತಿದೆ. ಜನರ ಕಷ್ಟವೇ ಆಳುವವರ ಆಧಾರವಾಗಿರುವಂತೆ ಕಾಣುತ್ತಿದೆ. ಬಯಲು ಸೀಮೆಯ ಬಲು ದೊಡ್ಡ ಕಷ್ಟ ನೀರಿನ ಕೊರತೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರನ್ನು ಗಮನಿಸಿದರೆ ಅತಿ ನೀರಿನ ಲಭ್ಯತೆಯೂ ಶಾಪವೇ.
ಇಬ್ಬರೂ ಕಷ್ಟ ಪರಿಹಾರಕ್ಕಾಗಿ ದೊಡ್ಡ ಹೊಟ್ಟೆಯ ಟಿ.ವಿ ಯ ಜ್ಯೋತಿಷಿಗಳ ಮುಂದೆ ಕೂತಿದ್ದಾರೆ. ಜನರು ತಮ್ಮ ವಿವೇಕದ, ಜ್ಞಾನದ ಪಂಚೇಂದ್ರಿಯಗಳನ್ನು ಒತ್ತೆಯಿಟ್ಟು ದುಡಿದದ್ದೆಲ್ಲವನ್ನೂ ಈ ನಿಸರ್ಗ ವಿರೋಧಿಗಳ ಹುನ್ನಾರಗಳಿಗೆ ನೈವೇದ್ಯ ಅರ್ಪಿಸುತ್ತಿದ್ದಾರೆ.ಇಂಥ ಕತ್ತಲ ನಡುವೆ ಭರವಸೆಯ ದೊಂದಿಗಳು, ಮಿಂಚು ಹುಳುಗಳು ಅಲ್ಲಲ್ಲಿ ಕಾಣುತ್ತಿವೆ. ನೆಲ-ನೀರು,ಪ್ರಾಣಿ-ಮನುಷ್ಯರನ್ನು ಏಕ ಘಟಕವೆಂದು ಭಾವಿಸಿ ಚಿಂತಿಸುವುದೇ ಆಧ್ಯಾತ್ಮ. ನಿಜದ ದೇವರ ಹುಡುಕಾಟ, ನಿಜ ಧಾರ್ಮಿಕತೆ, ನಿಜ ರಾಜಕೀಯ ಎಂದು ಮಾತನಾಡುವವರು ಅಲ್ಲಲ್ಲಿ ಕಾಣಿಸುತ್ತಿದ್ದಾರೆ.ಗಾಂಧಿ, ಪುಕುವೋಕಾ, ವಿಟ್ಮನ್, ಪಾಳೇಕರ್, ರಾಜೇಂದ್ರಸಿಂಗ್, ಬಹುಗುಣ, ತಿಮ್ಮಕ್ಕ, ಬೀರಜ್ಜ ಹೀಗೆ ಎಣಿಸುತ್ತಾ ಹೋಗಬಹುದಾದ ದೊಂದಿಗಳು ಉರಿಯಲಾರಂಭಿಸಿವೆ.

ದೀಪಾವಳಿಯ ದಿನ ರಾಜೇಂದ್ರಸಿಂಗ್
ಮೊನ್ನೆ ದೀಪಾವಳಿಯ ದಿನ ನೀರ ಮಾನವ ಖ್ಯಾತಿಯ ಡಾ. ರಾಜೇಂದ್ರಸಿಂಗ್ ಚಿಕ್ಕಬಳ್ಳಾಪುರಕ್ಕೆ ಬಂದಿದ್ದರು. ಆದಿಚುಂಚನಗಿರಿ ಮಠದ ಸ್ವಾಮೀಜಿಗಳ ನೇತೃತ್ವದಲ್ಲಿ ಬಯಲು ಸೀಮೆಯ ನೀರಿನ ಸಮಸ್ಯೆ ಮತ್ತು ಪರಿಹಾರಗಳಿಗಾಗಿ ನಡೆದ ಈ ಕಾರ್ಯಾಗಾರದಲ್ಲಿ ಮನೆಗಳಲ್ಲಿ ನಡೆಯುತ್ತಿದ್ದ ಹಬ್ಬವನ್ನು ಬಿಟ್ಟು ಜನ ಭಾಗವಹಿಸಿದ್ದರು. ಡಾ.ಸಿಂಗರು ಸರಿಸುಮಾರು ಒಂದು ದಶಕದ ಹಿಂದೆ ದೊಡ್ಡಬಳ್ಳಾಪುರಕ್ಕೆ ಬಂದಿದ್ದನ್ನು ಪ್ರೊ.ಎಂ.ಜಿ.ಚಂದ್ರಶೇಖರಯ್ಯನವರು ನೆನಪಿಸಿದರು. ಸಮಸ್ಯೆ ಆರಂಭವಾಗುತ್ತಿದ್ದ ದಿನಗಳಲ್ಲಿ ಬಂದು ಎಚ್ಚರಿಸಿ ಹೋಗಿದ್ದ ಅವರ ಮಾತುಗಳನ್ನು ಬಹುಪಾಲು ಜನ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ಮೊನ್ನೆ ದೊಡ್ಡ ಸಭಾಂಗಣದಲ್ಲಿ ನೆರೆದಿದ್ದ ಸಾವಿರಗಟ್ಟಲೆ ಜನ ನಿಶ್ಯಬ್ದವಾಗಿ ಕೇಳಿದರು. ಸ್ವತಃ ಸ್ವಾಮೀಜಿ ನಿರ್ಮಲಾನಂದನಾಥರು ವಿದ್ಯಾರ್ಥಿಯಂತೆ ಕೂತು ಟಿಪ್ಪಣಿ ಮಾಡಿಕೊಳ್ಳುತ್ತಿದ್ದರು. ಸಂತರು-ಸಾರ್ವಜನಿಕರು ಮತ್ತು ಸರಕಾರಗಳು ಸೇರಿದರೆ ಅದ್ಭುತವಾದುದನ್ನು ಸೃಷ್ಟಿಸಬಹುದೆಂದು ಡಾ.ಸಿಂಗರು ಹೇಳುತ್ತಾರೆ. ಸ್ವಾಮೀಜಿಗಳ ಸಮ್ಮುಖದಲ್ಲಿ ನಡೆವ ಸಮಾರಂಭಗಳಲ್ಲಿ ಜನ ವಿಚಿತ್ರವಾದ ಶ್ರದ್ಧೆಯನ್ನು ತೋರಿಸುತ್ತಾರೆ.ಅವರು ತೀರ್ಮಾನಿಸಿದರೆ ಸಮಾಜದಲ್ಲಿ ಅನೇಕ ಒಳ್ಳೆಯ ಕೆಲಸಗಳನ್ನು ಮಾಡಲು ಸಾಧ್ಯವಿದೆ. ಸ್ವಾಮೀಜಿಗಳು ತಮ್ಮ ತಮ್ಮ ಜಾತಿಗಳಿಗೆ ಸೀಮಿತರಾಗದೆ ಮನುಕುಲದ ಸಾಮರಸ್ಯ ಮತ್ತು ಏಳಿಗೆ ಬಯಸುವ ಧೀರೋದ್ಧಾತತೆಯ ದಿಕ್ಕಿನ ಕಡೆಗೆ ನಡೆದು ಶಾಶ್ವತರಾಗುವ ಉತ್ಸಾಹವನ್ನೂ ತುಸು ರಿಸ್ಕನ್ನೂ ತೆಗೆದುಕೊಂಡರೆ ಮನುಕುಲಕ್ಕೆ ಒಳ್ಳೆಯದಾದೀತು. ನನಗೆ ಗೊತ್ತಿರುವಂತೆ ತುಸು ಮಟ್ಟಿಗೆ ಚಿತ್ರದುರ್ಗದ ಸಾಣೇಹಳ್ಳಿ ಮಠ ಹೊಸದುರ್ಗ ಭಾಗದಲ್ಲಿ ಮಳೆ ನೀರು ಹಿಡಿದಿಡುವ ಕೆಲಸ ಮಾಡುತ್ತಿದೆ. ನಾಡಿನ ಅನೇಕ ಮಠ, ಮಸೀದಿಗಳು ಜನರನ್ನು ಪ್ರೇರೇಪಿಸುವ ಶಕ್ತಿ ಪಡೆದಿವೆ.ಅವುಗಳು ಈ ಸಂದರ್ಭದಲ್ಲಿ ಜನಮುಖಿಯಾದ ದಿಕ್ಕಿನ ಕಡೆಗೆ ಯೋಚಿಸಲೇಬೇಕಾಗಿದೆ. ಇದು ಸಾಂಸ್ಥೀಕೃತ ಧರ್ಮಕ್ಕಿಂತ ಮಾನವೀಯ ಧರ್ಮವಾದೀತು. ಮೊನ್ನೆ ಅರಸೀಕೆರೆಯ ಶಾಸಕರು ಬಂದಿದ್ದರು ‘‘.ಸಾರ್,ಪ್ರತಿ ವಾರ ಮೂವತ್ತು ಲಾರಿಗಳಷ್ಟು ಎತ್ತು,ದನಗಳನ್ನು ಗಂಡಸಿ ಸಂತೆಯಲ್ಲಿ ಮಾರಲಾಗುತ್ತಿದೆ.ಗೋಮಾತೆಯನ್ನು ಉಳಿಸುವ ಮಾತನಾಡುತ್ತಿರುವ ನಿಮ್ಮ ಕಡೆಯವರು ಯಾರಾದರೂ ಇದ್ದರೆ ದಯಮಾಡಿ ಹೇಳಿ’’ ಎಂದರು. ನನ್ನ ಬಾಯಿ ಕಟ್ಟಿ ಹೋಗಿತ್ತು.ಜನರಿಗೇ ಕುಡಿಯಲು ನೀರಿಲ್ಲದ ಸ್ಥಿತಿ ಬಂದಿದೆ ಎಂದರು. ಇಂಥ ಸ್ಥಿತಿಯಲ್ಲಿ ಧರ್ಮ ಧರ್ಮಗಳ ನಡುವಿನ ಸಂಘರ್ಷಕ್ಕಿಂತ ಸರ್ವರೂ ಉಳಿಯಲೇಬೇಕಾದ ಸೂತ್ರವನ್ನು ಕಂಡು ಹಿಡಿಯಬೇಕಾಗಿದೆ. ಪಶು, ಪಕ್ಷಿ ಮಾನವರೆಲ್ಲರೂ ಶಾಂತಿಯಿಂದ ಬದುಕಲು ಬೇಕಾದ ವಾತಾವರಣವನ್ನು ಆದಷ್ಟು ಬೇಗ ನಿರ್ಮಿಸಬೇಕು.ಜನಪರವಾಗಿರುವ ಮಠಗಳಾದರೂ ಬೇಗನೆ ಈ ದಿಕ್ಕಿನ ಕಡೆ ಯೋಚಿಸಿದರೆ ಫಲಿತಾಂಶವೂ ಒಳ್ಳೆಯದಾಗುತ್ತದೆ.
ಮಳೆಯಿಲ್ಲದೆ ಭರವಸೆಗಳೆಲ್ಲ ಇಂಗಿ ಹೋಗಿ ನಿರಾಸೆಯಲ್ಲಿರುವ ಜನರ ಮುಂದೆ ಡಾ.ಸಿಂಗರು ಮಾತನಾಡಿದರು. ಅವರ ಮಾತುಗಳು ಜನರಲ್ಲಿ ಭರವಸೆಯ ಸಾಧ್ಯತೆಗಳ ಕುರಿತು ಆಸೆ ಹುಟ್ಟಿಸುವಂತೆ ಮಾಡಿದವು.
ಗ್ರಾಮದ ಕೆಲಸಗಳು ಸರಕಾರದ ಮತ್ತು ಸಿವಿಲ್ ಇಂಜಿನಿಯರುಗಳ ಜವಾಬ್ದಾರಿ ಎಂಬ ಮನೋಭಾವವೇ ಈ ದುಸ್ಥಿತಿಗೆ ಕಾರಣವೆಂದು ಡಾ.ಸಿಂಗರು ವಿವರಿಸಿದರು. ಎಲ್ಲವೂ ಸರಕಾರದ ಜವಾಬ್ದಾರಿ ಎಂಬ ಮನಸ್ಥಿತಿಯೇ ಅನೇಕ ಸಮಸ್ಯೆಗಳಿಗೆ ಕಾರಣವಾಗಿರುವುದು.
 ಡಾ.ರಾಜೇಂದ್ರಸಿಂಗರು ನಮಗೆ ಮುಖ್ಯ ಅನ್ನಿಸುವುದು ಈ ಕಾರಣಕ್ಕೆ: ರಾಜಸ್ಥಾನದ ತಮ್ಮ ಕರ್ಮಭೂಮಿಯಲ್ಲಿ ಕಳೆದ ಎರಡೂವರೆ ದಶಕಗಳಿಂದ ತಪಸ್ಸಿನಂತೆ ಜಲಮೂಲಗಳಿಗೆ ಜೀವತರುವ ಕಾಯಕ ಮಾಡುತ್ತಿದ್ದಾರೆ. ವಾರ್ಷಿಕ ಸರಾಸರಿ ಕೇವಲ 200 ಮಿ.ಮೀ. ಮಳೆ ಬೀಳುವ ಪ್ರದೇಶದ ಸಮುದಾಯಗಳಲ್ಲಿ ಬಹುದೊಡ್ಡ ಭರವಸ�

Similar News