×
Ad

ಕಂಬಳಕ್ಕೆ ತಾತ್ಕಾಲಿಕ ತಡೆ

Update: 2016-11-18 20:11 IST

ಬೆಂಗಳೂರು, ನ.18: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಗ್ರಾಮೀಣ ಕ್ರೀಡೆ ಕಂಬಳ ಆಚರಣೆಗೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಈ ಸಂಬಂಧ ಪೀಪಲ್ ಫಾರ್ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಅನಿಮಲ್ಸ್(ಪೆಟಾ) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಕೆ.ಸೋಮಶೇಖರ್ ಅವರಿದ್ದ ನ್ಯಾಯಪೀಠ, ಈ ಆದೇಶ ನೀಡಿತು.

ಅರ್ಜಿದಾರರ ಪರ ವಾದಿಸಿದ ವಕೀಲರು, ಸುಪ್ರೀಂಕೋರ್ಟ್ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ನಡೆಯುವ ಗ್ರಾಮೀಣ ಕ್ರೀಡೆ ಕಂಬಳಕ್ಕೆ ಈಗಾಗಲೇ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಹೀಗಾಗಿ, ಹೈಕೋರ್ಟ್ ಕೂಡ ಕಂಬಳ ಆಚರಣೆಗೆ ತಡೆಯಾಜ್ಞೆ ನೀಡಬೇಕೆಂದು ನ್ಯಾಯಪೀಠಕ್ಕೆ ಮನವಿ ಮಾಡಿಕೊಂಡರು.

ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ವಿಭಾಗೀಯ ನ್ಯಾಯಪೀಠವು ಸುಪ್ರೀಂಕೋರ್ಟ್ ಕಂಬಳ ಆಚರಣೆಗೆ ತಡೆ ನೀಡಿರುವುದರಿಂದ ಸದ್ಯ ಇಲ್ಲಿಯೂ ನವಂಬರ್ 26ರವರೆಗೆ ಕಂಬಳ ಆಚರಣೆಗೆ  ತಾತ್ಕಾಲಿಕ ತಡೆ ನೀಡಲಾಗುವುದು ಎಂದು ಆದೇಶ ಹೊರಡಿಸಿತು.

ಈ ಹಿಂದೆ ಹೈಕೋರ್ಟ್, 2015ನೆ ಸಾಲಿನಲ್ಲಿ ಕಂಬಳ ಹಬ್ಬದ ಆಚರಣೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಹೊರಡಿಸಿರುವ ನಿಯಮಗಳನ್ನು ಪಾಲಿಸಬೇಕೆಂದು ಆದೇಶಿಸಿ ಕಂಬಳ ಆಚರಣೆಗೆ ಷರತ್ತು ಬದ್ಧ ಅನುಮತಿಯನ್ನು ನೀಡಿತ್ತು. ಆದರೆ, ಸುಪ್ರೀಂಕೋರ್ಟ್ ಕಂಬಳ ಆಚರಣೆಗೆ ಏಕಾಏಕಿ ತಡೆಯಾಜ್ಞೆ ನೀಡಿದ್ದರಿಂದ ಹೈಕೋರ್ಟ್ ಶುಕ್ರವಾರ ಕಂಬಳ ಆಚರಣೆಗೆ ನ.26ರವರೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿ ಆದೇಶಿಸಿತು.

ಪ್ರಕರಣವೇನು:

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಂಬಳವನ್ನು 300 ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಕಂಬಳ ಹಬ್ಬದ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ಹಾಗೂ ತೆಂಗಿನ ಸಸಿಯನ್ನೂ ನೀಡಿ ಗೌರವಿಸುವ ಸಂಪ್ರದಾಯವಿದೆ. ಅಲ್ಲದೆ, ಈ ಬಾರಿಯ ಕಂಬಳ ಆಚರಣೆಗೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಸಮಿತಿಯು ಎಲ್ಲ ರೀತಿಯ ಸಿದ್ಧತೆಗಳನ್ನೂ ಮಾಡಿಕೊಂಡಿತ್ತು. ಆದರೆ, ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಕಂಬಳ ಆಚರಣೆಗೆ ತಡೆ ನೀಡಿದ್ದರಿಂದ ಕಂಬಳ ಆಚರಣೆಯು ಮತ್ತೆ ಮುಂದಕ್ಕೆ ಹೋಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News