ಸೌದಿಯಲ್ಲಿ ಮೃತಪಟ್ಟ ಸುಳ್ಯದ ಯುವಕನ ಅಂತ್ಯಕ್ರಿಯೆಗೆ ಕೆಸಿಎಫ್, ದಾರುಲ್ ಹಿಕ್ಮ ನೆರವು

Update: 2016-12-04 09:55 GMT

ದಮ್ಮಾಮ್, ಡಿ.4: ಇಲ್ಲಿಗೆ ಸಮೀಪದ ಉರೈರಾ ಎಂಬಲ್ಲಿ ರಸ್ತೆ ಅಪಘಾತಕ್ಕೊಳಗಾಗಿ ಕಳೆದ ವಾರ ಮೃತಪಟ್ಟಿದ್ದ ಸುಳ್ಯ ತಾಲೂಕಿನ ಪಂಜ ನೆಕ್ಕಿಲ ನಿವಾಸಿ ಇಸ್ಮಾಯೀಲ್(38) ಎಂಬವರ ಅಂತ್ಯಕ್ರಿಯೆಯು ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆಸಿಎಫ್), ’’ದಾರುಲ್ ಹಿಕ್ಮ ಬೆಳ್ಳಾರೆ’’ ನೆರವಿನೊಂದಿಗೆ ಇಲ್ಲಿನ ಅಲ್ ಫುರ್ಖಾನ್ ಮಸೀದಿ ಖಬರಸ್ಥಾನದಲ್ಲಿ ನೆರವೇರಿತು. 

ಕಳೆದ ಎಂಟು ವರ್ಷಗಳಿಂದ ಸೌದಿ ರಿಯಾದ್ ಪ್ರಾಂತದ ಗೊರ್ನಾಥ ಎಂಬಲ್ಲಿ ಮನೆ ಚಾಲಕನಾಗಿ ದುಡಿಯುತ್ತಿದ್ದ ಇಸ್ಮಾಯೀಲ್ ಇತ್ತೀಚೆಗಷ್ಟೆ ಹೊಸ ವೀಸಾವೊಂದನ್ನು ಖರೀದಿಸಿ ಸ್ವಂತ ವಾಹನದಲ್ಲಿ ದುಡಿಯಲಾರಂಭಿಸಿದ್ದರು. ನವೆಂಬರ್ 23ರಂದು ಪ್ರಯಾಣಿಕರನ್ನು ರಿಯಾದ್‌ನಿಂದ ದಮ್ಮಾಮ್ ವಿಮಾನ ನಿಲ್ದಾಣಕ್ಕೆ ಕರೆದೊಯ್ದು ವಾಪಸ್ ಬರುತ್ತಿದ್ದ ವೇಳೆ ಇಸ್ಮಾಯೀಲ್‌ರ ವಾಹನ ದಮ್ಮಾಮ್‌ನಿಂದ 180 ಕಿ.ಮೀ. ದೂರದ ಉರೈರಾ ಎಂಬ ಸ್ಥಳದಲ್ಲಿ ಅಪಘಾತಕ್ಕೀಡಾಗಿದೆ. ರಸ್ತೆಯಲ್ಲಿ ಉರುಳಿಬಿದ್ದ ವಾಹನದಿಂದ ಇಸ್ಮಾಯೀಲ್ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಅಪಘಾತ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಸ್ಥಳೀಯ ಕಿಂಗ್ ಖಾಲಿದ್‌ಆಸ್ಪತ್ರೆಯ ಶವಾಗಾರದಲ್ಲಿರಿಸಿದ್ದರು.

ರಿಯಾದ್‌ನಿಂದ ಬಾಡಿಗೆಗೆ ತೆರಳಿದ್ದ ಇಸಾಯೀಲ್ ಬಗ್ಗೆ ಮೂರು ದಿನಗಳ ತನಕ ಸೌದಿಯಲ್ಲೇ ಇರುವ ಆತನ ಸಂಬಂಧಿಕರಿಗಾಗಲೀ ಮಿತ್ರರಿಗಾಗಲೀ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ಈ ನಡುವೆ ಕೇರಳ ಮೂಲದ ಸಾಮಾಜಿಕ ಕಾರ್ಯಕರ್ತರೊಬ್ಬರು ಸಾಮಾಜಿಕ ತಾಣಗಳ ಮೂಲಕ ಆಸ್ಪತ್ರೆಯಲ್ಲಿರುವ ಕನ್ನಡಿಗನೊಬ್ಬನ ಅಪರಿಚಿತ ಮೃತದೇಹದ ಬಗ್ಗೆ ಮಾಹಿತಿ ರವಾನಿಸಿದ್ದರು. ಇದರ ಆಧಾರದಲ್ಲಿ ಪರಿಶೀಲಿಸಿದಾಗ ಇಸ್ಮಾಯೀಲ್ ಮೃತಪಟ್ಟಿರುವುದು ತಿಳಿದುಬಂದಿದೆ.

ವಿಷಯ ತಿಳಿದು ತಕ್ಷಣ ಕಾರ್ಯಪ್ರವೃತ್ತರಾದ ಕೆಸಿಎಫ್ ಕಾರ್ಯಕರ್ತರು ಹಾಗೂ ರಿಯಾದ್‌ನಲ್ಲಿರುವ ’’ದಾರುಲ್ ಹಿಕ್ಮ ಬೆಳ್ಳಾರೆ’’ ಕಾರ್ಯಕರ್ತರು ಭಾರತೀಯ ರಾಯಭಾರಿ ಕಚೇರಿ, ಸೌದಿ ಪೊಲೀಸ್ ಸೌದಿ ಕಾರ್ಮಿಕ ಪ್ರಾಧಿಕಾರದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡರು. ಕುಟುಂಬಸ್ಥರ ಒಪ್ಪಿಗೆಯ ಮೇರೆಗೆ ಇಸ್ಮಾಯೀಲ್‌ರ ಅಂತ್ಯಸಂಸ್ಕಾರವನ್ನು ನೆರವೇರಿಸಿದರು.

ಕೆಸಿಎಫ್ ಸೌದಿ ಕೇಂದ್ರೀಯ ಸಮಿತಿಯ ಕೋಶಧಿಕಾರಿ ಅಬ್ಬಾಸ್ ಅಹ್ಮದ್ ಉಳ್ಳಾಲ್ ದಾರುಲ್ ಹಿಕ್ಮದ ರಿಯಾದ್ ಸಮಿತಿಯ ಅಧ್ಯಕ್ಷ ಮುಹಮ್ಮದ್ ಮುಸ್ತಫಾ ಸಅದಿ ಎಣ್ಮೂರು, ಕಾರ್ಯದರ್ಶಿ ಝಕರಿಯಾ ಪಂಜ, ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿಯ ಕಾರ್ಯದರ್ಶಿ ಫಾರೂಕ್ ಕಾಟಿಪಳ್ಳ, ಕೆಸಿಎಫ್ ದಮ್ಮಾಮ್, ಅಲ್ ಹಸಾ ಕಾರ್ಯಕರ್ತ ಹಕೀಮ್ ಜೋಹರಿ, ಸಾಮಾಜಿಕ ಕಾರ್ಯಕರ್ತ ಹುಸೈನ್ ಕೇರಳ, ರಿಯಾದ್‌ ಝೋನಲ್ ಕೋಶಾಧಿಕಾರಿ ಹನೀಫ್ ಬೆಳ್ಳಾರೆ, ದಾರುಲ್ ಹಿಕ್ಮದ ಸದಸ್ಯರು, ಕೆಸಿಎಫ್ ಶಿಫಾ ಸೆಕ್ಟರ್ ಅಧ್ಯಕ್ಷ ಯೂಸುಫ್ ಚೆನ್ನಾರ್, ಮೃತರ ಬಂಧು ಮಿತ್ರರು ಹಾಗೂ ಸ್ಥಳೀಯರೂ ಸೇರಿದಂತೆ ನೂರಾರು ಮಂದಿ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News