ಬ್ಯಾಂಕಿನ ಸರದಿ ಸಾಲಿನಲ್ಲಿ ನಿಂತಿದ್ದ ವ್ಯಕ್ತಿ ಹೃದಯಾಘಾತಕ್ಕೆ ಬಲಿ
Update: 2016-12-13 17:40 GMT
ಮುಂಬೈ,ಡಿ.13: ನೆರೆಯ ಪಾಲ್ಘರ್ ಜಿಲ್ಲೆಯಲ್ಲಿ ಮಂಗಳವಾರ ಬ್ಯಾಂಕಿನಲ್ಲಿ ಹಣವನ್ನು ಪಡೆಯಲು ಸರದಿ ಸಾಲಿನಲ್ಲಿ ನಿಂತಿದ್ದ 72ರ ಹರೆಯದ ನಿವೃತ್ತ ಸರಕಾರಿ ಅಧಿಕಾರಿ ಯೋರ್ವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಮೂರು ದಿನಗಳ ರಜೆಯ ಬಳಿಕ ಬ್ಯಾಂಕು ಪುನರಾರಂಭಗೊಂಡಿದ್ದರಿಂದ ಗ್ರಾಹಕರ ದಟ್ಟಣೆಯಿತ್ತು. ಪ್ರಭಾಕರ ನಾರಾಯಣ ರಾಣೆ ಚಿಂಚಿಣಿಯ ದೇನಾ ಬ್ಯಾಂಕ್ ಶಾಖೆಗೆ ಹಣವನ್ನು ಹಿಂಪಡೆಯಲು ಬಂದಿದ್ದರು. ಸರದಿ ಸಾಲು ಬ್ಯಾಂಕಿನಿಂದ ಹೊರಕ್ಕೂ ಬೆಳೆದಿತ್ತು. ಹಿರಿಯ ನಾಗರಿಕರಿಗೆ ಪ್ರತ್ಯೇಕ ಸರದಿ ಸಾಲಿನ ವ್ಯವಸ್ಥೆಯಿದ್ದಿರಲಿಲ್ಲ,ಹೀಗಾಗಿ ರಾಣೆ ಕೂಡ ಅದೇ ಸಾಲಿನಲ್ಲಿ ನಿಂತಿದ್ದರು. ಎರಡು ಗಂಟೆಗಳ ಕಾಲ ಸಾಲಿನಲ್ಲಿ ನಿಂತು ಹೈರಾಣಾದ ರಾಣೆ ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಹೃದಯಾಘಾತದಿಂದ ಕುಸಿದು ಬಿದ್ದಿದ್ದರು. ಅವರನ್ನು ತಕ್ಷಣವೇ ಸಮೀಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಯಿತಾದರೂ ಆ ವೇಳೆಗಾಗಲೇ ಕೊನೆಯುಸಿರೆಳೆದಿದ್ದರು.