ಸರ್ಕಾರಕ್ಕೆ 50 ಸಾವಿರ ಕೋಟಿ ರೂ. ಲಾಭ ತಂದುಕೊಟ್ಟ ಸುಪ್ರೀಂಕೋರ್ಟ್ ತೀರ್ಪು

Update: 2016-12-31 03:29 GMT

ಹೊಸದಿಲ್ಲಿ, ಡಿ.31: ಹೊಸವರ್ಷ ಕೇಂದ್ರ ಸರಕಾರಕ್ಕೆ ಬಂಪರ್ ಲಾಟರಿ ತಂದುಕೊಟ್ಟಿದೆ. ದೇಶದ ಪ್ರಮುಖ ಖನಿಜ ಸಂಪತ್ತುಗಳ ಗಣಿಗಾರಿಕೆಗೆ ಲೈಸನ್ಸ್ ನೀಡುವ ಸಂಬಂಧ ಸಲ್ಲಿಕೆಯಾಗಿರುವ ಎಲ್ಲ ಅರ್ಜಿಗಳ ವಿಲೇವಾರಿಗೆ ಸುಪ್ರೀಂಕೋರ್ಟ್ ಹಸಿರು ನಿಶಾನೆ ತೋರಿರುವುದು ಇದಕ್ಕೆ ಕಾರಣ. ಸುಪ್ರೀಂಕೋರ್ಟ್‌ನ ಈ ತೀರ್ಪಿನಿಂದ ಕೇಂದ್ರಕ್ಕೆ 50 ಸಾವಿರ ಕೋಟಿ ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ.

ಗಣಿಗಾರಿಕೆ ಹಂಚಿಕೆಗೆ ಏಕವಿಧಾನವನ್ನು ಅನುಸರಿಸುವ ಮುನ್ನ ಇದ್ದ ಎಲ್ಲ ಅರ್ಜಿಗಳನ್ನು ವಿಲೇವಾರಿ ಮಾಡಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಗಣಿ ಹಾಗೂ ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆಗೆ ಕಳೆದ ವರ್ಷ ತಿದ್ದುಪಡಿ ತಂದು ಹರಾಜು ಮಾರ್ಗ ಅನುಸರಿಸಲು ನಿರ್ಧರಿಸಲಾಗಿತ್ತು. ಯುಪಿಎ ಸರಕಾರದ ಅವಧಿಯಲ್ಲಿ ಬೇಕಾಬಿಟ್ಟಿಯಾಗಿ ಮಾಡಿದ್ದ ಕಲ್ಲಿದ್ದಲು ಗಣಿ ಹಂಚಿಕೆಯನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದ ಬಳಿಕ ಈ ತಿದ್ದುಪಡಿ ತರಲಾಗಿತ್ತು. ನೈಸರ್ಗಿಕ ಸಂಪತ್ತು ದೇಶದ ಆಸ್ತಿಯಾಗಿದ್ದು, ಅದನ್ನು ಸಮರ್ಪಕವಾಗಿ ಹರಾಜು ಮಾಡಬೇಕು ಎಂದು ಸೂಚಿಸಿತ್ತು.

ಕಬ್ಬಿಣ ಹಾಗೂ ಬಾಕ್ಸೈಟ್ ಗಣಿಗಾರಿಕೆ ಲೀಸಿಂಗ್ ನೀಡುವ ಸಂಬಂಧ ಕೇಂದ್ರದ ಬಳಿ ಇರುವ ಬಾಕಿ ಅರ್ಜಿಗಳ ಸಂಬಂಧ ವಿವಿಧ ಹೈಕೋರ್ಟ್‌ಗಳು ವೈರುದ್ಧ್ಯದ ತೀರ್ಪುಗಳನ್ನು ನೀಡಿರುವುದರಿಂದ ಸಮಸ್ಯೆ ಸೃಷ್ಟಿಯಾಗಿತ್ತು. ಕಾನೂನುಬದ್ಧವಾಗಿರುವ ಅರ್ಜಿಗಳಿಗೆ ಗಣಿಗಾರಿಕೆ ಮಂಜೂರು ಮಾಡಬಹುದು ಎಂದು ಕೆಲ ಹೈಕೋರ್ಟ್‌ಗಳು ತೀರ್ಪು ನಿಡಿದ್ದವು.

ಒಡಿಶಾದ ಸಂಬಾಲಪುರ ಜಿಲ್ಲೆಯಲ್ಲಿ ಉಕ್ಕು ಘಟಕವನ್ನು ನಿರ್ಮಿಸಲು ಉದ್ದೇಶಿಸಿರುವ ಭೂಷಣ್ ಪವರ್ ಅಂಡ್ ಸ್ಟೀಲ್ ಲಿಮಿಟೆಡ್, 2012ರಲ್ಲಿ ಅರ್ಜಿ ಸಲ್ಲಿಸಿ, ಸುತ್ತಮುತ್ತಲ ಪ್ರದೇಶಗಳಲ್ಲಿ ಗಣಿಗಾರಿಕೆಗೆ ಅನುಮತಿ ನೀಡುವಂತೆ ಕೋರಿತ್ತು. ಇದೀಗ ಸುಪ್ರೀಂಕೋರ್ಟ್‌ನಲ್ಲಿ ಕಂಪೆನಿಗೆ ಪರವಾದ ಆದೇಶ ಬಂದಂತಾಗಿದೆ. ಎರಡು ಬ್ಲಾಕ್ ಗಣಿಗಾರಿಕೆಗೆ ಅನುಮತಿ ನೀಡಲು ರಾಜ್ಯ ಸರಕಾರ ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News