ಮದ್ಯ ನಿಷೇಧಕ್ಕೆ ಆಗ್ರಹಿಸಿ 800 ಕಿ.ಮೀ ಪಾದಯಾತ್ರೆ
ಬೆಂಗಳೂರು, ಜ.4: ಜನರ ಆರೋಗ್ಯ ಹಾಳು ಮಾಡಿ ಮದ್ಯದಿಂದ ಸಂಗ್ರಹಿಸಿದ ಪಾಪದ ಹಣದಿಂದ ಅಭಿವೃದ್ಧಿ ಕೆಲಸ ಮಾಡಬಾರದು. ಹೀಗಾಗಿ, ಕೂಡಲೇ ಕರ್ನಾಟಕದಲ್ಲಿ ಮದ್ಯಪಾನ ನಿಷೇಧ ಮಾಡುವಂತೆ ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಆಗ್ರಹಿಸಿದ್ದಾರೆ.
ಬುಧವಾರ ಕರ್ನಾಟಕ ಮದ್ಯಪಾನ ನಿಷೇಧ ಆಂದೋಲನ ಬಸವ ಕಲ್ಯಾಣದಿಂದ ಆರಂಭಿಸಿ ನಗರಕ್ಕೆ ಇಂದು ತಲುಪಿರುವ ಪಾದಯಾತ್ರೆ ಮೌರ್ಯ ವತ್ತದಲ್ಲಿ ಸಮಾಪ್ತಿಗೊಂಡಿತು. ಬಳಿಕ ಧರಣಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಗತಿ ಹೆಸರಿನಲ್ಲಿ ಮದ್ಯದಂಗಡಿಗಳನ್ನು ಹೆಚ್ಚಿಸುವುದು ಸರಿಯಲ್ಲ. ಜನರ ಜೇಬು ಕತ್ತರಿಸಿ ಅವರನ್ನು ಚಟಕ್ಕೆ ದೂಡಿ ಯಾವ ಸರಕಾರಗಳು ಅಭಿವೃದ್ಧಿ ಕಾರ್ಯ ಮಾಡಬಾರದು. ಪಾಪದ ಹಣದಲ್ಲಿ ಆಡಳಿತ ನಡೆಸಬಾರದು ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬರುವ ಮೊದಲು ಮದ್ಯಪಾನ ನಿಷೇಧ ಮಾಡುವುದಾಗಿ ಹೇಳಿದ್ದರು. ಆದರೆ, ಇದೀಗ ಮದ್ಯದಂಗಡಿಗಳನ್ನು ಹೆಚ್ಚಿಸುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದ ಅವರು, ಕುಡಿತದಿಂದ ಹಲವು ರೋಗಗಳು ಬರುತ್ತವೆ. ಸರಕಾರ ಆಸ್ಪತ್ರೆಗಳಿಗೆ ಖರ್ಚು ಮಾಡುವ ಹಣವನ್ನು ಹೆಚ್ಚು ಮಾಡಬೇಕಾಗುತ್ತದೆ. ಇದು ರಾಜ್ಯದ ಬೊಕ್ಕಸಕ್ಕೆ ಭಾರಿ ಹೊಡೆತ ನೀಡುತ್ತದೆ. ಮದ್ಯದಿಂದ ಬರುವ ಹಣಕ್ಕಿಂತ ಆಸ್ಪತ್ರೆಗಳಿಗೆ ಖರ್ಚು ಮಾಡುವ ಹಣ ಹೆಚ್ಚಾಗಿರುತ್ತದೆ. ಇದನ್ನು ಅಂಕಿ ಅಂಶಗಳೆ ಸ್ಪಷ್ಟಪಡಿಸುತ್ತಿವೆ ಎಂದರು.
ಮದ್ಯ ಸೇವನೆ ಮಾಡಿದ ವ್ಯಕ್ತಿಯಿಂದ ಹೆಚ್ಚಿನ ಕೆಲಸ ಮಾಡಿಸಲು ಸಾಧ್ಯವಿಲ್ಲ. ಆತ ಒಂದು ದಿನ ಕೆಲಸ ಮಾಡಿದರೆ 3 ದಿನ ರಜೆ ತೆಗೆದುಕೊಳ್ಳುತ್ತಾನೆ. ಆದ್ದರಿಂದ ಮದ್ಯದಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ಅಲ್ಲದೆ, ಮದ್ಯ ನಿಷೇಧ ಆಂದೋಲನ ರಾಯಚೂರು ಮತ್ತು ಗುಲ್ಬರ್ಗಾದಲ್ಲಿ ಆರಂಭಗೊಂಡಿತು. ಅಲ್ಲಿ ಮಹಿಳೆಯರೇ ಈ ಚಳವಳಿಯ ನೇತೃತ್ವವಹಿಸಿ ಮದ್ಯದಂಗಡಿಗಳನ್ನು ಮುಚ್ಚುತ್ತಿದ್ದಾರೆ ಎಂದು ದೊರೆಸ್ವಾಮಿ ನುಡಿದರು.
ಶಾಸಕ ಬಿ.ಆರ್.ಪಾಟೀಲ್ ಮಾತನಾಡಿ, ಸ್ವಾತಂತ್ರ ಪೂರ್ವದಿಂದಲೂ ದೇಶದಲ್ಲಿ ಮದ್ಯಪಾನ ನಿಷೇಧ ಆಗಬೇಕು ಎಂಬ ಕೂಗು ಕೇಳಿ ಬರುತ್ತಿದೆ. ರಾಜಕೀಯ ಪಕ್ಷಗಳ ಇಚ್ಛಾಶಕ್ತಿಯ ಕೊರತೆಯಿಂದ ಇದು ಸಾಧ್ಯವಾಗಿಲ್ಲ. ಬಿಹಾರ ಚುನಾವಣೆ ಸಂದರ್ಭದಲ್ಲಿ ಈ ಕೂಗು ಸ್ವಲ್ಪಗಟ್ಟಿಯಾಗಿ ಕೇಳಿ ಬಂತು ಎಂದು ಹೇಳಿದರು.
ಆಂದೋಲನದ ಮುಖ್ಯಸ್ಥ ಎಸ್.ಎಚ್.ಲಿಂಗೇಗೌಡ ಮಾತನಾಡಿ, 2018ರ ಚುನಾವಣೆಯ ವೇಳೆಗೆ ಎಲ್ಲಾ ರಾಜಕೀಯ ಪಕ್ಷಗಳು ಮದ್ಯಪಾನ ನಿಷೇಧದ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಬೇಕು. ಚುನಾವಣಾ ಸಂದರ್ಭದಲ್ಲಿ ಈ ನಿಲುವಿನ ಆಧಾರದಲ್ಲಿ ಯಾವ ಪಕ್ಷಗಳಿಗೆ ಮತ ಹಾಕಬೇಕು ಎಂದು ನಾವು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇವೆ. ಅದೇ ರೀತಿ, ಬಸವ ಕಲ್ಯಾಣದಿಂದ 43 ದಿನಗಳ ಪಾದಯಾತ್ರೆ 800 ಕಿ.ಮೀ. ಚಲಿಸಿ ಬೆಂಗಳೂರಿಗೆ ಆಗಮಿಸಿದ್ದೇವೆ ಎಂದರು.
ಈ ವೇಳೆ ಹೋರಾಟಗಾರ ರವಿಕೃಷ್ಣಾರೆಡ್ಡಿ, ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಲಿಬಾಬಾ, ಆಂದೋಲನದ ಮುಖ್ಯಸ್ಥ ಸಿ.ಆರ್.ಭಾಸ್ಕರ ಮತ್ತಿತರರು ಭಾಗವಹಿಸಿದ್ದರು.