ಅಝಂ ಇಕ್ಕಟ್ಟು

Update: 2017-01-14 18:21 GMT

ಬಾಪ್ ಹಾಗೂ ಬೇಟಾ ನಡುವಿನ ಜಗಳದಲ್ಲಿ ಸಮಾಜವಾದಿ ಪಕ್ಷದ ಮುಸ್ಲಿಂ ಮುಖವಾಣಿ ಬಡಪಾಯಿ ಅಝಂ ಖಾನ್ ಬಲಿಪಶು. ನೇರ- ನಿಷ್ಠುರ ನಡೆನುಡಿಯ ಅಝಂ ಖಾನ್‌ಗೆ ಈಗ ಉಳಿದಿರುವುದು ಒಂದೇ ದಾರಿ. ಮಿಂಚುವ ರಾಜಕೀಯ ವೃತ್ತಿಗೆ ತಿಲಾಂಜಲಿ ಕೊಡುವುದು ಮತ್ತು ಮನೆಯಲ್ಲಿ ಕೂರುವುದು. ಏಕೆಂದರೆ ಮುಲಾಯಂ ಸಿಂಗ್ ಹಾಗೂ ಅಖಿಲೇಶ್ ಯಾದವ್ ರಾಜಿ ಮಾಡಿಕೊಳ್ಳದಿದ್ದರೆ, ಅವರು ಅಪ್ಪ-ಮಗ ಹೀಗೆ ಯಾರ ಪಕ್ಷವನ್ನೂ ವಹಿಸುವಂತಿಲ್ಲ. ಪಕ್ಷದ ಸಂಭಾವ್ಯ ಹೋಳಿನಲ್ಲಿ ದೊಡ್ಡ ಬಲಿಪಶುವಾಗುವುದು ಅಝಂ ಖಾನ್. ಏಕೆಂದರೆ ಇವರು ಇಬ್ಬರಿಗೂ ನಿಕಟವಾಗಿರುವವರು. ಮುಸ್ಲಿಂ ಮತಗಳು ಪಕ್ಷದ ಹಿಡಿತದಿಂದ ಜಾರುತ್ತವೆ ಎನ್ನುವ ಸುಳಿವೂ ಅವರಿಗೆ ಇದೆ. ಇಷ್ಟಾಗಿಯೂ ಅವರು ಕಾಂಗ್ರೆಸ್ ಅಥವಾ ಬಿಜೆಪಿ ಸೇರುವಂತಿಲ್ಲ. ಅಖಿಲೇಶ್ ಅವರಂತೆ ಖಾನ್ ಕೂಡಾ ಅಮರ್ ಸಿಂಗ್ ಸೃಷ್ಟಿಸಿದ ತೊಂದರೆಯನ್ನು ಮರೆಯಲಾರರು. ಇಷ್ಟಾಗಿಯೂ ಇನ್ನೂ ಖಾನ್ ತಮ್ಮ ಪ್ರಯತ್ನ ಬಿಟ್ಟಿಲ್ಲ. ನೇತಾಜಿಯನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಖಾನ್ ಹಾಗೂ ಅಖಿಲೇಶ್ ಜತೆಯಾಗೇ ಹೋಗುತ್ತಿದ್ದರು. ಆದರೆ ಅವರು ವಾಪಸಾಗಲೇಬೇಕಾಯಿತು. ಮುಲಾಯಂ ಸಂಗಡ ಅಮರ್ ಹಾಗೂ ಜಯಪ್ರದಾ ಇದ್ದರು.

ವೆಂಕಯ್ಯ ನಾಯ್ಡು ವೇಗ
ಉತ್ತರ ಪ್ರದೇಶದಲ್ಲಿ ಅಪ್ಪ- ಮಗನ ಜಗಳ ತಾರಕಕ್ಕೇರಿದ್ದರೆ, ಯಾರ ಗಮನಕ್ಕೂ ಬಾರದ ವಿಚಾರ ಎಂದರೆ, ಚುನಾವಣಾ ಆಯೋಗ ಚುನಾವಣೆಯ ರಣಕಹಳೆ ಮೊಳಗುವ ಮುನ್ನ ರಾಜ್ಯಕ್ಕೆ ಹೇಗೆ ಲಾಭವಾಯಿತು ಎನ್ನುವುದು. ಚುನಾವಣಾ ಆಯೋಗ ಮತದಾನ ದಿನಾಂಕವನ್ನು ಘೋಷಣೆ ಮಾಡುವ ಕೆಲವೇ ಗಂಟೆಗಳ ಮುನ್ನ ನಗರಾಭಿವೃದ್ಧಿ ಸಚಿವಾಲಯ ಆದ್ಯತೆ ಮೇರೆಗೆ ಉತ್ತರ ಪ್ರದೇಶದ 14 ಪ್ರಸ್ತಾವನೆಗಳನ್ನು ಮಂಜೂರು ಮಾಡಿದೆ. ದಿಲ್ಲಿಯ ನಿರ್ಮಾಣ ಭವನದಲ್ಲಿ, ಕೇಂದ್ರ ನಗರಾಭಿವೃದ್ಧಿ ಖಾತೆ ಸಚಿವ ವೆಂಕಯ್ಯ ನಾಯ್ಡು ಅವರ ವೇಗಕ್ಕೆ ಪ್ರತಿಯೊಬ್ಬರೂ ಅಚ್ಚರಿಪಡುವಂತಾಯಿತು. ಆದರೆ ಎಲ್ಲರಲ್ಲಿ ಸಹಜವಾಗಿ ಎದ್ದಿರುವ ಪ್ರಶ್ನೆ ಎಂದರೆ, ಬಿಜೆಪಿಯ ಈ ವೇಗದ ಲಾಭ ಸಮಾಜವಾದಿ ಪಕ್ಷಕ್ಕೆ ಸಿಗುತ್ತದೆಯೇ ಮತ್ತು ಏಕೆ? ಎನ್ನುವುದು.

ಬಲವಾದ ಗುದ್ದು
ಸದಾ ಸುದ್ದಿವಾಚಕರು ಅಲ್ಪವಿರಾಮದ ನಂತರ ಮರಳುವುದಿಲ್ಲ. ಆದರೆ ಸುದ್ದಿ ಸೃಷ್ಟಿಸುವವರು ಅದನ್ನು ಮಾಡಬಹುದು. ಅದು ಕೂಡಾ ನಕಲಿ ನಗೆ ಇಲ್ಲದೆ. ರಾಹುಲ್ ಉದಾಹರಣೆ ತೆಗೆದುಕೊಳ್ಳಿ. ಬ್ರೇಕ್ ನಂತರ ರಾಹುಲ್ ಮರಳಿದ್ದಾರೆ; ಅದು ಕೂಡಾ ಬದಲಾದ ಚಹರೆಯಿಂದ. ಯುರೋಪಿಯನ್ ವಿಹಾರದಿಂದ ಉಲ್ಲಸಿತರಾಗಿದ್ದಾರೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ ಉನ್ನತ ನಾಯಕರೊಂದಿಗೆ ಚರ್ಚಿಸಲು ಚೀನಾಗೆ ಪಕ್ಷದ ಉನ್ನತ ಮಟ್ಟದ ನಿಯೋಗ ಒಯ್ಯಲು ರಾಹುಲ್‌ಬಾಬಾ ರೆಡಿಯಾಗಿದ್ದಾರೆ. ಆದರೆ ಕೆಲ ಬುದ್ಧಿವಂತರು ಮಾತ್ರ, ಅವರ ಯೂರೋಪ್ ದಂಡಯಾತ್ರೆಯನ್ನು ಭಾರತೀಯರು ಇಷ್ಟಪಟ್ಟಿಲ್ಲ ಎನ್ನುವುದನ್ನು ಅವರಿಗೆ ಮನವರಿಕೆ ಮಾಡಿದ್ದಾರೆ. ಅದು ಕೂಡಾ ಪ್ರವಾಸಕ್ಕೆ ರಾಹುಲ್ ಆಯ್ಕೆ ಮಾಡಿಕೊಂಡ ಸಮಯ ಸೂಕ್ತವಲ್ಲ. ನೋಟು ರದ್ದತಿ ವಿರುದ್ಧ ಪ್ರತಿಭಟನೆಯ ನೇತೃತ್ವ ವಹಿಸಬೇಕಿದ್ದ ಕಾಲವನ್ನು ಅವರು ವಿಹಾರಕ್ಕೆ ಬಳಸಿಕೊಂಡರು. ಆದರೆ ಅವರಿಗೆ ಪಕ್ಷದ ಅಧ್ಯಕ್ಷರಾಗಿ ಭಡ್ತಿ ನೀಡುವ ಯಾವುದೇ ಸೂಚನೆ ಕಾಣುತ್ತಿಲ್ಲ. ಪಂಜಾಬ್ ಚುನಾವಣೆ ಗೆದ್ದ ಬಳಿಕ ಯುವರಾಜ ಪಟ್ಟಾಭಿಷೇಕ ಮಾಡಿಸಿಕೊಳ್ಳುತ್ತಾರೆ ಎಂದು ಪಕ್ಷದ ಒಳಗಿನವರು ಬಾಯಿ ಬಿಟ್ಟಿದ್ದಾರೆ. ಪಕ್ಷ ಉತ್ತರಾಖಂಡದಲ್ಲಿ ಅಧಿಕಾರ ಉಳಿಸಿಕೊಳ್ಳುತ್ತದೆ ಎಂಬ ವಿಶ್ವಾಸವೂ ಅವರಿಗಿದೆ. ಜತೆಗೆ ಅಖಿಲೇಶ್ ಯಾದವ್ ಅವರ ಜಯದ ಅವಕಾಶವನ್ನು ಹಾಳುಮಾಡಿಕೊಂಡಿದ್ದರ ಪ್ರಯೋಜನ ಕೂಡಾ ಪಕ್ಷಕ್ಕೆ ಆಗುತ್ತದೆ ಎನ್ನುವುದು ಅವರ ನಿರೀಕ್ಷೆ. ಇಲ್ಲಿ ಸಮಾಜವಾದಿ ಪಕ್ಷ ಹಾಗೂ ಅಜಿತ್ ಸಿಂಗ್ ಅವರ ರಾಷ್ಟ್ರೀಯ ಲೋಕದಳ ಜತೆ ಕಾಂಗ್ರೆಸ್ ಮೈತ್ರಿಗೆ ಮುಂದಾಗಿದೆ. ರಾಹುಲ್ ಅವರ ಬಟ್ಟಲು ತುಂಬಿದೆ!

ಅಮರೀಂದರ್‌ಗೆ ಆತಂಕ?
ಪಂಜಾಬ್‌ನಲ್ಲಿ ಕಾಂಗ್ರೆಸ್ ಪಕ್ಷದ ಸಿಎಂ ಅಭ್ಯರ್ಥಿ ಎಂದು ಅಮರೀಂದರ್ ಸಿಂಗ್ ಸ್ವಯಂ ಬಿಂಬಿಸಿಕೊಂಡಿದ್ದಾರೆ. ಆದರೆ ರಾಜ್ಯದಲ್ಲಿ ನವಜೋತ್ ಸಿಂಗ್ ಸಿಧು ಪಕ್ಷ ಸೇರಿರುವುದು ಅವರಲ್ಲಿ ಆತಂಕಕ್ಕೆ ಕಾರಣವಾಗಿದೆ. ಅವರಿಗೆ ಜೀರ್ಣಿಸಿಕೊಳ್ಳಲಾಗದ ವಿಚಾರ ಎಂದರೆ, ಕಾಂಗ್ರೆಸ್‌ಗೆ ಬಹುಮತ ಬಂದು, ಶಾಸಕರು ಅಮರೀಂದರ್ ಸಿಂಗ್ ಅವರನ್ನು ಪಕ್ಷದ ನಾಯಕನಾಗಿ ಒಪ್ಪಿಕೊಳ್ಳದಿದ್ದರೆ ಸಿಧು ಅವರಿಗೆ ಪಟ್ಟ ಕಟ್ಟಲು ಕಾಂಗ್ರೆಸ್ ಚಿಂತನೆ ನಡೆಸಿದ ಎಂಬ ಬಗ್ಗೆ ಅಮೃತಸರದಲ್ಲಿ ಹುಟ್ಟಿಕೊಂಡಿರುವ ವದಂತಿಯನ್ನು ರಾಜಧಾನಿಯ ಕಾಂಗ್ರೆಸ್ ವಲಯ ತಳ್ಳಿಹಾಕುತ್ತಿಲ್ಲ. ಪಂಜಾಬ್‌ನಲ್ಲಿ ಅಕಾಲಿದಳ ಸಂಪೂರ್ಣ ಶಕ್ತಿಯೊಂದಿಗೆ ಕಣಕ್ಕೆ ಇಳಿದಿದ್ದು, ಆಮ್ ಆದ್ಮಿ ಪಕ್ಷ ಕೂಡಾ ಮುಂಚೂಣಿಯಲ್ಲಿದೆ. ಆದಾಗ್ಯೂ ಕಾಂಗ್ರೆಸ್ ಪಕ್ಷ ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಯುತ್ತಿದೆ ಎಂಬ ಮಾತುಗಳೂ ದಿಲ್ಲಿಯಲ್ಲಿ ಕೇಳಿಬರುತ್ತಿವೆ. ಈ ಎಲ್ಲದರ ಮಧ್ಯೆ ಅಮರೀಂದರ್ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗಿದೆ.

ಜೆಡಿಯು-ಬಿಜೆಪಿ ಬಾಯಿ-ಬಾಯಿ
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಮೋದಿ ಗುಣಗಾನ ಮಾಡಿರುವುದು ರಾಜಧಾನಿಯಲ್ಲಿ ಹೊಸ ರಾಜಕೀಯ ಲೆಕ್ಕಾಚಾರಗಳಿಗೆ ಮುನ್ನುಡಿಯಾಗಿದೆ. ನಿತೀಶ್ ಕುಮಾರ್, ನೋಟು ರದ್ದತಿ ವಿಚಾರದಲ್ಲಿ ಮೋದಿ ಬೆಂಬಲಕ್ಕೆ ನಿಂತಿರುವುದು ಸಹವರ್ತಿ ಲಾಲೂ ಪ್ರಸಾದ್ ಯಾದವ್ ಅವರ ಕಸಿವಿಸಿಗೆ ಕಾರಣವಾಗಿದೆ. ನೋಟು ರದ್ದತಿ ನಿರೀಕ್ಷಿತ ಫಲ ನೀಡಲು ವಿಫಲವಾದರೂ, ಈ ವಿಚಾರದಲ್ಲಿ ಪಕ್ಷ ನಿಲುವನ್ನು ಪರಾಮರ್ಶಿಸುವ ಪ್ರಶ್ನೆಯೇ ಇಲ್ಲ ಎಂಬ ಸ್ಪಷ್ಟ ಸಂಕೇತವನ್ನು ಜೆಡಿಯು ನೀಡಿದೆ. ಬಿಜೆಪಿ ಹಾಗೂ ಜೆಡಿಯು ನಡುವೆ ಹೊಂದಾಣಿಕೆ ಆಗುತ್ತದೆ ಎಂಬ ವದಂತಿ ರಾಜಧಾನಿಯಲ್ಲಿ ದಟ್ಟವಾಗಿ ಹಬ್ಬಿದೆ. ಲಾಲೂವನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳುವುದಕ್ಕಾಗಿ ನಿತೀಶ್ ಆಡಿರುವ ಕುಟಿಲ ತಂತ್ರ ಇದು ಎಂದೂ ಹೇಳಲಾಗುತ್ತಿದೆ. ಆದರೆ ಯಾರನ್ನು ಯಾರು ಮೀರಿಸುತ್ತಾರೆ ಎನ್ನುವುದು ಪ್ರಶ್ನೆ. ಈ ನಿಲುವು ನಿತೀಶ್‌ಗೆ ಲಾಭ ತರುತ್ತದೆಯೇ ಅಥವಾ ಲಾಲೂ- ಜೆಡಿಯು ಸಖ್ಯ ಮುರಿಯುವುದು ಬಿಜೆಪಿ ತಂತ್ರಗಾರಿಕೆಯೇ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News