×
Ad

275 ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಕೇವಲ 4 ನಗರಗಳು ‘ಬಯಲು ಶೌಚ ಮುಕ್ತ’: ರಾಜ್ಯದ ಪ್ರಗತಿಗೆ ಸ್ವಚ್ಛ ಭಾರತ್ ಮಿಷನ್ ಬೇಸರ

Update: 2017-03-04 20:37 IST

ಬೆಂಗಳೂರು, ಮಾ. 4: ಕರ್ನಾಟಕ ರಾಜ್ಯದ 275 ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಕೇವಲ 4 ನಗರಗಳು ಮಾತ್ರ ಬಯಲು ಶೌಚ ಮುಕ್ತ ನಗರಗಳಾಗಿದ್ದು, ಮಹಿಳೆಯರು ಮತ್ತು ಬಡ ಜನರ ಘನತೆಯಿಂದ ಜೀವಿಸಲು ಶೌಚಾಲಯಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕೆಂದು ಸ್ವಚ್ಛ ಭಾರತ್ ಮಿಷನ್ ನಿರ್ದೇಶಕ ಪ್ರವೀಣ್ ಪ್ರಕಾಶ್ ಸಲಹೆ ನೀಡಿದ್ದಾರೆ.

 ಶನಿವಾರ ವಿಕಾಸಸೌಧದಲ್ಲಿ ಕೇಂದ್ರ ಸರಕಾರದ ಸ್ವಚ್ಛ ಭಾರತ್ ಅಭಿಯಾನ ಹಾಗೂ ಅಮೃತ್ ಯೋಜನೆ ಪ್ರಗತಿ ಪರಿಶೀಲನೆ ಬಳಿಕ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸ್ವಚ್ಛ ಭಾರತ್ ಅಭಿಯಾನದಡಿ ಬಯಲು ಶೌಚ ಮುಕ್ತ ಯೋಜನೆಯಲ್ಲಿ ಕರ್ನಾಟಕ ಅತ್ಯಂತ ಹಿಂದುಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.

2014ರ ಅಕ್ಟೋಬರ್ 2ರಂದು ಪ್ರಧಾನಿ ಮೋದಿ ಸ್ವಚ್ಛ ಭಾರತ್ ಅಭಿಯಾನಕ್ಕೆ ಚಾಲನೆ ನೀಡಿದ್ದು, 2019ರ ಅಕ್ಟೋಬರ್ 2ಕ್ಕೆ ‘ಬಯಲು ಶೌಚ ಮುಕ್ತ’ ಭಾರತ ನಿರ್ಮಾಣ ಘೋಷಣೆ ಮಾಡಿದ್ದಾರೆ. ಆ ನಿಟ್ಟಿನಲ್ಲಿ ನೆರೆಯ ಆಂಧ್ರ 110 ನಗರ ಸ್ಥಳೀಯ ಸಂಸ್ಥೆಗಳು ಬಯಲು ಶೌಚ ಮುಕ್ತ ಎಂದು ಘೋಷಿಸಲಾಗಿದೆ ಎಂದರು.

ಅದೇ ಮಾದರಿಯಲ್ಲಿ ಮಹಾರಾಷ್ಟ್ರ-100, ತಮಿಳುನಾಡು-40, ಗುಜರಾತ್-178 ಸ್ಥಳೀಯ ಸಂಸ್ಥೆಗಳನ್ನು ಈಗಾಗಲೇ ಬಯಲು ಶೌಚ ಮುಕ್ತವೆಂದು ಘೋಷಿಸಲಾಗಿದೆ. ಆದರೆ, ಕರ್ನಾಟಕ ರಾಜ್ಯದ 275 ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಕೇವಲ 4 ‘ಬಯಲು ಶೌಚ ಮುಕ್ತ’ ಎಂದು ಘೋಷಿಸಿದ್ದು, ಇದು ಅತ್ಯಂತ ಬೇಸರದ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.

ಬೆಂಗಳೂರಲ್ಲೆ ಇನ್ನೂ ಬಯಲು ಶೌಚ: ದೇಶದ ಬಹುತೇಕ ಮೆಟ್ರೋ ಪಾಲಿಟನ್ ಸಿಟಿಗಳು ಬಯಲು ಶೌಚ ಮುಕ್ತ ನಗರಗಳಾಗಿವೆ. ಆದರೆ, ಸಿಲಿಕಾನ್ ಸಿಟಿ, ಉದ್ಯಾನನಗರಿ ಎಂಬ ಖ್ಯಾತಿ ಗಳಿಸಿರುವ ಬೆಂಗಳೂರು ನಗರ ಯಾವಾಗ ‘ಬಯಲು ಶೌಚ ಮುಕ್ತ’ ಆಗಲಿದೆ ಎಂದು ಅವರು ಪ್ರಶ್ನಿಸಿದರು.

ಜಾಗತಿಕ ಮನ್ನಣೆ ಪಡೆದ ಬೆಂಗಳೂರು ಆಕರ್ಷಿತ ನಗರ. ಹೀಗಾಗಿ, ಬೆಂಗಳೂರು ಬಯಲು ಶೌಚ ಮುಕ್ತ ನಗರ ಯಾವಾಗ ಆಗುತ್ತದೆ ಎಂದು ಎಲ್ಲರೂ ಕೇಳುತ್ತಾರೆ. ಮುಂಬೈ, ನವಿಮುಂಬೈ, ಪುಣೆ, ಅಹಮದಬಾದ್, ವಿಜಯವಾಡ ಸೇರಿದಂತೆ ಇನ್ನಿತರ ನಗರಗಳು ಬಯಲು ಶೌಚ ಮುಕ್ತ ಆಗಿವೆ ಎಂದು ಅವರು ತಿಳಿಸಿದರು.

ಬೆರಳ ತುದಿಯಲ್ಲೆ ಮಾಹಿತಿ: ಹೊಸದಿಲ್ಲಿಯಲ್ಲಿ ‘ಗೂಗಲ್ ಟಾಯ್‌ಲೆಟ್ ಲೊಕೇಟರ್’ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಗೂಗಲ್ ನಕ್ಷೆಯಲ್ಲಿ ಸಾರ್ವಜನಿಕ ಶೌಚಾಲಯ ಅಥವಾ ಸ್ವಚ್ಛ ಶೌಚಾಲಯ ಎಂದು ಟೈಪಿಸಿದರೆ ಹೊಸದಿಲ್ಲಿಯ ಎಲ್ಲ ಸಾರ್ವಜನಿಕ ಶೌಚಾಲಯಗಳ ಮಾಹಿತಿ ಬೆರಳ ತುದಿಯಲ್ಲಿ ಸಿಗುತ್ತದೆ.

ಇಂತಹ ಅತ್ಯಾಧುನಿಕ ವ್ಯವಸ್ಥೆ ಮಾಹಿತಿ ತಂತ್ರಜ್ಞಾನ ನಗರದಲ್ಲಿ ಜನರಿಗೆ ದೊರಕಿಸಿಕೊಡುವ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆ ಏಕೆ ಪ್ರಯತ್ನಿಸಬಾರದು ಎಂದ ಪ್ರಶ್ನಿಸಿದ ಅವರು, ಸ್ವಚ್ಛ ಭಾರತ್ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಬೇಕು. ಆ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳ ಜನ ಪ್ರತಿನಿಧಿಗಳು ಆಸ್ಥೆ ವಹಿಸಬೇಕು ಎಂದರು.

ಸ್ವಚ್ಛ ಭಾರತ್ ಅಭಿಯಾನಕ್ಕೆ ಕೇಂದ್ರ ಸರಕಾರ ವಾರ್ಷಿಕ 10 ಸಾವಿರ ಕೋಟಿ ರೂ.ನಂತೆ 3 ವರ್ಷಗಳಿಂದ ಒಟ್ಟು 30 ಸಾವಿರ ಕೋಟಿ ರೂ.ತೆರಿಗೆ ಸಂಗ್ರಹಿಸಿದ್ದು, ಆ ಪೈಕಿ ವಾರ್ಷಿಕ 2ಸಾವಿರ ಕೋಟಿ ರೂ.ನಗರ ಮತ್ತು 8ಸಾವಿರ ಕೋಟಿ ರೂ.ಗಳನ್ನು ಗ್ರಾಮೀಣ ಪ್ರದೇಶಗಳ ಶೌಚಾಲಯ ನಿರ್ಮಾಣಕ್ಕೆ ವೆಚ್ಚ ಮಾಡಲಾಗುತ್ತಿದೆ ಎಂದರು.

ಘನತ್ಯಾಜ್ಯ ನಿರ್ವಹಣಾ ಘಟಕ, ಸಾರ್ವಜನಿಕ ಶೌಚಾಲಯ ಮತ್ತು ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಕೇಂದ್ರದಿಂದ ಹೆಚ್ಚಿನ ಅನುದಾನ ನೀಡಲಾಗುತ್ತಿದೆ. ಅದನ್ನು ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸ್ವಚ್ಛ ಭಾರತ್ ಅಭಿಯಾನ ಯಶಸ್ವಿಗೊಳಿಸಬೇಕು ಎಂದು ಸಲಹೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News