ಮಹಿಳಾ ಉದ್ಯಮಿಗಳಿಗಾಗಿ ಪ್ರತ್ಯೇಕ ಕೈಗಾರಿಕಾ ವಲಯ : ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ
ಬೆಂಗಳೂರು,ಮಾ.8: ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಲು ರಾಜ್ಯದ ಎರಡನೇ ಸ್ತರದ ನಗರಗಳಲ್ಲಿ ಪ್ರತ್ಯೇಕ ಕೈಗಾರಿಕಾ ವಲಯಗಳನ್ನೇ ಅಸ್ತಿತ್ವಕ್ಕೆ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಬುಧವಾರ ನಗರದ ಖಾಸಗಿ ಹೊಟೇಲ್ನಲ್ಲಿ ಸರಕಾರದ ವತಿಯಿಂದ ಬುಧವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈಗಾಗಲೇ ಬೆಂಗಳೂರು ಹೊರವಲಯದ ಹಾರೋಹಳ್ಳಿ ಮಹಿಳಾ ಉದ್ಯಮಿಗಳಿಗೆಂದೇ ಇಂಥದೊಂದು ವಲಯವನ್ನು ನಿರ್ಮಿಸಲಾಗಿದೆ. ಮುಂಬರುವ ದಿನಗಳಲ್ಲಿ ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿ ಸೇರಿದಂತೆ ಉಳಿದ ನಗರಗಳಿಗೂ ವಿಸ್ತರಿಸಲಾಗುವುದು ಎಂದು ಭರವಸೆ ನೀಡಿದರು.
ಮಹಿಳಾ ಉದ್ಯಮಿಗಳನ್ನು ಪ್ರೋತಾಹಿಸಲು ನಮ್ಮ ಸರಕಾರ ಬದ್ಧವಾಗಿದೆ.ರಾಜ್ಯದ ಕೈಗಾರಿಕಾ ನೀತಿಯಲ್ಲೇ ಉದ್ಯಮಶೀಲ ಮಹಿಳೆಯರನ್ನು ಪ್ರೋತ್ಸಾಹಿಸುವ ಆಶಯವನ್ನು ಅಳವಡಿಸಲಾಗಿದೆ ಎಂದರು.
ಸದ್ಯಕ್ಕೆ ನಮ್ಮ ವಿಧಾನಸಭೆಯಲ್ಲಿ ಕೇವಲ ಏಳು ಶಾಸಕಿಯರು ಮಾತ್ರ ಇದ್ದಾರೆ. ಈ ಸಂಖ್ಯೆ ಏನಿಲ್ಲವೆಂದರೂ 70ಕ್ಕಿಂತ ಹೆಚ್ಚಿರಬೇಕು. ಜತೆಗೆ ಸಂಪುಟದಲ್ಲೂ ಕೇವಲ ಒಬ್ಬ ಮಹಿಳೆ ಮಾತ್ರ ಇದ್ದಾರೆ. ಆದರೆ ಸ್ಥಳೀಯ ಸಂಸ್ಥೆಗಳಲ್ಲಿ ಮಾತ್ರ ಶೇ.50ರಷ್ಟು ಮೀಸಲಾತಿನ್ನು ಅನುಷ್ಠಾನಕ್ಕೆ ತರಲಾಗಿದೆ. ಸಮಾಜದಲ್ಲಿ ಅರ್ಧದಷ್ಟಿರುವ ಸೀಯರನ್ನೂ ನಾವು ಸಮಾನವಾಗಿ ಕಾಣಬೇಕು ಎನ್ನುವ ಸಂಸ್ಕಾರ ಅಂತರಂಗದಲ್ಲಿ ಮೂಡಬೇಕು ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.
ತೀರಾ ಇತ್ತೀಚಿನವರೆಗೂ ಮಹಿಳೆಯರನ್ನು ಕೂಡ ದಮನಿತ ವರ್ಗಗಳ ಜನರಂತೆ ಕೀಳಾಗಿ ನೋಡಲಾಗುತ್ತಿತ್ತು. ಮೇಲ್ಜಾತಿಯ ಹೆಣ್ಣು ಮಕ್ಕಳು ಕೂಡ ವಿದ್ಯೆಯಿಂದ ದೂರವಿದ್ದರು. ಆದರೆ, ಗಾಂಧೀಜಿ ಮತ್ತು ಅಂಬೇಡ್ಕರ್ ಅವರಂಥವರ ಹೋರಾಟದಿಂದ ಮಹಿಳೆಯರಿಗೂ ಕಡ್ಡಾಯ ಶಿಕ್ಷಣ ಸಿಗಲು ಆರಂಭವಾಯಿತು ಎಂದರು.
ಬೃಹತ್ ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ಪ್ರತಿ ವರ್ಷ ಲಕ್ಷಾಂತರ ಯುವಜನರು ಪದವೀಧರರಾಗಿ ಹೊರಹೊಮ್ಮುತ್ತಿದ್ದಾರೆ. ಇನ್ನೊಂದೆಡೆ, ಎಲ್ಲ ಕಡೆಗಳಲ್ಲೂ ತಂತ್ರಜ್ಞಾನ ಮತ್ತು ಯಂತ್ರಜ್ಞಾನಗಳು ಪಾರಮ್ಯ ಸಾಧಿಸಿವೆ. ದುಡಿಯುವ ಕೈಗಳಿಗೆ ಕೆಲಸ ಕೊಡುವುದು ಹೇಗೆ ಎನ್ನುವುದೇ ಈಗ ಸವಾಲಾಗಿ ಪರಿಣಮಿಸಿದೆ. ಈ ಅಗತ್ಯವನ್ನು ಗಮನದಲ್ಲಿರಿಸಿಕೊಂಡು ಯುವ ಸಮುದಾಯಕ್ಕೆ ಉದ್ಯೋಗಾವಕಾಶ ಕಲ್ಪಿಸುವ ಉದ್ದಿಮೆಗಳನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು. ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ರಾಜ್ಯದಲ್ಲಿ ಏಳು ಸಾವಿರಕ್ಕಿಂತಲೂ ಹೆಚ್ಚು ನವೋದ್ಯಮಗಳು ಇದ್ದು, ಅವುಗಳಲ್ಲಿ ಹೆಣ್ಣು ಮಕ್ಕಳೇ ಹೆಚ್ಚಾಗಿದ್ದಾರೆ. ಮಹಿಳೆಯರಿಗೆ ಹೆಚ್ಚಿನ ಅವಕಾಶ ನೀಡಲು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಪ್ರವಾಸೋದ್ಯಮ ಇಲಾಖೆಯ ರೆಸಾರ್ಟ್ಗಳಲ್ಲಿ ತಂಗುವ ಮಹಿಳೆಯರಿಗೆ ಶೇ. 50ರಷ್ಟು ರಿಯಾಯಿತಿ ನೀಡಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ, ಮಹಿಳಾ ಉದ್ದಿಮೆದಾರರ ಒಕ್ಕೂಟದ ಅಧ್ಯಕ್ಷೆ ರೂಪಾರಾಣಿ ಸೇರಿದಂತೆ ಹಲವು ಉದ್ಯಮಿಗಳು ಹಾಜರಿದ್ದರು.