ಹಿಂದೂ ರಾಷ್ಟ್ರವಾದದ ಅಪಾಯಕಾರಿ ಸೂಚನೆಗಳು

Update: 2017-03-26 18:38 GMT

ಬೆಂಕಿ ಉಗುಳುವ ಭಾಷಣಕಾರ ಯೋಗಿ ಆದಿತ್ಯನಾಥ್ ಉತ್ತರಪ್ರದೇಶದ ಮುಖ್ಯಮಂತ್ರಿಯಾದರು. ಅಧಿಕಾರ ವಹಿಸಿಕೊಂಡ ತಕ್ಷಣ ಅನಧಿಕೃತ ಕಸಾಯಿಖಾನೆಗೆ ಬೀಗ ಜಡಿದರು. ಸಾರ್ವಜನಿಕ ಉದ್ಯಾನಗಳಲ್ಲಿ ಮಾತನಾಡುತ್ತ ಕುಳಿತ ಯುವಜೋಡಿಗಳನ್ನು ಅಲ್ಲಿನ ಪೊಲೀಸರು ಹಿಡಿದು ತದಕುತ್ತಿದ್ದಾರೆ. ಉತ್ತರಪ್ರದೇಶದಲ್ಲಿ ಬಿಜೆಪಿ ಪಡೆದ ಮತಗಳ ಪ್ರಮಾಣ ಶೇ.39ರಷ್ಟು ಇದ್ದರೂ ಕೂಡ ಹೆಚ್ಚು ಸ್ಥಾನಗಳನ್ನು ಪಡೆದು ಅಧಿಕಾರಕ್ಕೆ ಬಂತು. ಬಿಜೆಪಿ ವಿರೋಧಿ ಮತಗಳ ವಿಭಜನೆಯಿಂದ ದೇಶದ ಅತ್ಯಂತ ದೊಡ್ಡ ರಾಜ್ಯ ಸಂಘ ಪರಿವಾರದ ಮಡಿಲಿಗೆ ಬಿತ್ತು. ಇದು ಒಂದು ಚುನಾವಣೆಯ ಸೋಲು ಗೆಲುವಿನ ಪ್ರಶ್ನೆಯಲ್ಲ. ಭಾರತ ಈವರೆಗೆ ನಡೆದು ಬಂದ ದಾರಿಗೆ ಭಿನ್ನವಾಗಿ ಇನ್ನೊಂದು ದಾರಿಯತ್ತ ಚಲಿಸುತ್ತಿರುವ ಸಂಕೇತವಿದು. ನೆಹರೂ, ಗಾಂಧಿ, ಅಂಬೇಡ್ಕರ್ ಅವರಿಗೆ ಪರ್ಯಾಯವಾಗಿ ಸಾವರ್ಕರ್ ಮತ್ತು ಗೋಳ್ವಾಲ್ಕರ್ ಅವರ ಹಿಂದುತ್ವ ಈಗ ಸೌಹಾರ್ದ ಭಾರತಕ್ಕೆ ಸವಾಲಾಗಿ ನಿಂತಿದೆ.

ಭಾರತದಲ್ಲಿ ಮುಸಲ್ಮಾನರು ಮತ್ತು ಕ್ರೈಸ್ತರು ಜೀವನ ಮಾಡಬೇಕೆಂದರೆ, ಯಾವುದೇ ನಾಗರಿಕ ಹಕ್ಕುಗಳನ್ನು ಕೇಳದೇ ಎರಡನೆ ದರ್ಜೆ ಪ್ರಜೆಗಳಾಗಿ ಜೀವನ ಮಾಡಬೇಕೆಂದು ಗೋಳ್ವಾಲ್ಕರ್ ಹೇಳಿದ್ದರು. ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಬೇಕು ಎಂಬುದನ್ನು ಅಲ್ಪಸಂಖ್ಯಾತ ಮತಗಳು ನಿರ್ಧರಿಸಬಾರದು. ಹಿಂದೂಗಳೇ ನಿರ್ಣಾಯಕ ಶಕ್ತಿಯಾಗಬೇಕು ಎಂದು ಸಂಘ ಪರಿವಾರ ಹೇಳುತ್ತಾ ಬಂದಿದೆ. ಈಗ ಉತ್ತರ ಪ್ರದೇಶದಲ್ಲಿ ಅಲ್ಪಸಂಖ್ಯಾತರ ಮತಗಳನ್ನು ಅವಲಂಬಿಸದೇ ದಲಿತರನ್ನು, ಹಿಂದುಳಿದವರನ್ನು ವಿಭಜಿಸಿ ತನ್ನದೇ ಆದ ವೋಟ್‌ಬ್ಯಾಂಕ್ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದಿದೆ.

ಉತ್ತರಪ್ರದೇಶದಲ್ಲಿ ದೊರೆತ ಅಧಿಕಾರವನ್ನು ಬಳಸಿಕೊಂಡು 2019ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಜಯಭೇರಿಯಾಗಲು ಬಿಜೆಪಿ ಸನ್ನದ್ಧವಾಗಿದೆ. ಬಿಜೆಪಿ ಮೂಲಕ ತನ್ನ ಹಿಂದೂರಾಷ್ಟ್ರ ಕಾರ್ಯಸೂಚಿಯನ್ನು ಜಾರಿಗೆ ತರಲು ಆರೆಸ್ಸೆಸ್ ತಂತ್ರ ರೂಪಿಸಿದೆ. ಅದರ ಭಾಗವಾಗಿಯೇ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗೂ ಸ್ಪರ್ಧಿಸದ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದರು. ಉತ್ತರಪ್ರದೇಶದಲ್ಲಿ ನಿರೀಕ್ಷೆ ಮೀರಿ ದೊರೆತ ಜಯದಿಂದ ಸಂಭ್ರಮಪಟ್ಟ ಬಿಜೆಪಿ ಅಲ್ಲಿನ ಮುಖ್ಯಮಂತ್ರಿಯಾಗಿ ಯಾರನ್ನು ಆಯ್ಕೆ ಮಾಡಬೇಕು ಎಂಬ ಬಗ್ಗೆ ಒಂದು ವಾರ ತಾಕಲಾಟ ನಡೆಸಿತು. ಮಾಧ್ಯಮಗಳಲ್ಲಿ ವರದಿಯಾದಂತೆ ಪ್ರಧಾನಿ ನರೇಂದ್ರ ಮತ್ತು ಅಮಿತ್ ಶಾ ಅವರು ಮನೋಜ್ ಸಿನ್ಹಾ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಬಯಸಿದ್ದರು. ಆದರೆ ಕೊನೆಯ ಘಳಿಗೆಯಲ್ಲಿ ಆರೆಸ್ಸೆಸ್ ಸರಸಂಘ ಚಾಲಕ ಮೋಹನ್ ಭಾಗವತ್ ನಾಗಪುರದಿಂದ ಫೋನ್ ಮಾಡಿದರು. ಯೋಗಿ ಆದಿತ್ಯನಾಥ್ ಅವರನ್ನೇ ಮುಖ್ಯಮಂತ್ರಿ ಮಾಡಬೇಕೆಂದು ಪಟ್ಟು ಹಿಡಿದರು. ಈ ಒತ್ತಡಕ್ಕೆ ಮೋದಿ ಮಣಿಯಲೇಬೇಕಾಯಿತು.

ಜಾತ್ಯತೀತ ಭಾರತವನ್ನು ಮನುವಾದಿ ಹಿಂದೂರಾಷ್ಟ್ರವನ್ನಾಗಿ ಮಾಡುವ ದೀರ್ಘಕಾಲೀನ ಗುರಿ ಹೊಂದಿರುವ ಆರೆಸ್ಸೆಸ್ ಅತ್ಯಂತ ದೂರದೃಷ್ಟಿಯಿಂದ ತನ್ನ ತೀರ್ಮಾನಗಳನ್ನು ಕೈಗೊಳ್ಳುತ್ತಾ ಬಂದಿದೆ. ಯೋಗಿ ಆದಿತ್ಯನಾಥ್ ಆಯ್ಕೆಯಲ್ಲೂ ಕೂಡ ಅದು ಎಚ್ಚರದ ಹೆಜ್ಜೆಯಿಟ್ಟಿದೆ. ಮೋದಿ ನಂತರ ಭಾರತದ ಪ್ರಧಾನಿಯನ್ನಾಗಿ ಯೋಗಿ ಆದಿತ್ಯನಾಥ್ ಅವರನ್ನು ಪಟ್ಟಾಭಿಷೇಕ ಮಾಡುವ ವ್ಯೆಹ ರಚನೆ ಮಾಡಿದೆ. ಇದು ಆಕಸ್ಮಿಕ ಆಯ್ಕೆಯಲ್ಲ. ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಫಾಲಿ ಎಸ್.ನಾರಿಮನ್ ಹೇಳಿದಂತೆ ಹಿಂದೂ ರಾಷ್ಟ್ರದ ಶಖೆ ಆರಂಭವಾದಂತಾಗಿದೆ.
ಇದು ಅಂತಿಂಥ ಬೆಳವಣಿಗೆಯಲ್ಲ. ಭಾರತದ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುವ ಷಡ್ಯಂತ್ರ ಈ ತೀರ್ಮಾನದ ಹಿಂದೆ ಇದೆ. ಡಾ. ಅಂಬೇಡ್ಕರ್ ರೂಪಿಸಿದ ಸಂವಿಧಾನಕ್ಕೆ ಹಿಂದೆಂದೂ ಕಂಡರಿಯದ ಗಂಡಾಂತರ ಎದುರಾಗಿದೆ. ದೇಶದ 125 ಕೋಟಿ ಜನಸಂಖ್ಯೆಯಲ್ಲಿ ಶೇ 15ರಷ್ಟು ಇರುವ ಅಲ್ಪಸಂಖ್ಯಾತ ಸಮುದಾಯ ಭೀತಿಯ ನೆರಳಲ್ಲಿ ಬದುಕಬೇಕಾದ ಪರಿಸ್ಥಿತಿ ಬಂದಿದೆ. ಸಂಘ ಪರಿವಾರದ ಮುಂದಿನ ಗುರಿ ದಲಿತ ಸಮುದಾಯ.

ಯೋಗಿ ಆದಿತ್ಯನಾಥ್ ಅಧಿಕಾರ ವಹಿಸಿಕೊಂಡ ತಕ್ಷಣ ಬಡವರ ಅನ್ನದ ತಟ್ಟೆಗೆ ಕೈ ಹಾಕಿದರು. ತಿನ್ನಲು ಸರಿಯಾದ ಆಹಾರವಿಲ್ಲದೇ ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುವ ದನದ ಮಾಂಸದಿಂದ ತಮ್ಮ ದುಡಿಯುವ ಶಕ್ತಿಯನ್ನು ಸಂಚಯಿಸಿಕೊಳ್ಳುತ್ತಿದ್ದಾರೆ. ದಲಿತರು ಮತ್ತು ಅಲ್ಪಸಂಖ್ಯಾತರು ಹೊಟ್ಟೆಗೆ ಕೂಳಿಲ್ಲದೇ ವಿಲಿವಿಲಿ ಒದ್ದಾಡುವ ದಿನಗಳು ಬಂದಿವೆ. ದುಡಿಯುವ ಜನರಿಗೆ ಅವರಿಗೆ ದೊರೆಯುವ ಆದಾಯದಲ್ಲಿ ಸಿಗುತ್ತಿದ್ದ ಕನಿಷ್ಠ ಪೌಷ್ಟಿಕಾಂಶ ಸಿಗುವುದಿಲ್ಲ. ಯೋಗಿ ಆದಿತ್ಯನಾಥ್, ಮೋಹನ್ ಭಾಗವತ್ ಅವರು ಸೇವಿಸುವ ಗೋಡಂಬಿ, ದ್ರಾಕ್ಷಿ, ಪಿಸ್ತಾ, ತುಪ್ಪ, ಬೆಣ್ಣೆ ಈ ಬಡವರಿಗೆ ಸಿಗುವುದಿಲ್ಲ. ಪೌಷ್ಟಿಕಾಂಶಕ್ಕಾಗಿ ಇವರು ದನದ ಮಾಂಸವನ್ನೇ ಅವಲಂಬಿಸಬೇಕಿದೆ. ಭಾರತದ ಶೇ.43ರಷ್ಟು ಮಕ್ಕಳು ಪೌಷ್ಟಿಕಾಂಶದ ಕೊರತೆಯಿಂದ ನರಳುತ್ತಿದ್ದಾರೆಂದು ಅಧಿಕೃತ ಅಂಕಿಅಂಶಗಳೇ ಹೇಳಿವೆ. ಸೋಮಾಲಿಯಾ, ಪಾಕಿಸ್ತಾನಗಳಿಗಿಂತ ಹೆಚ್ಚಿನ ಪ್ರಮಾಣದ ಪೌಷ್ಟಿಕಾಂಶದ ಕೊರತೆ ಇಲ್ಲಿದೆ. ಇಂತಹ ದೇಶದಲ್ಲಿ ಹೇಗೋ ದುಡಿದುಕೊಂಡು ಬದುಕುತ್ತಿದ್ದ ಬಡವರ ತಟ್ಟೆಗೆ ಈ ಫ್ಯಾಶಿಸ್ಟ್ ಶಕ್ತಿಗಳು ಕೈ ಹಾಕಿವೆ.

ಇದು ಬರೀ ಮಾಂಸಾಹಾರದ ಪ್ರಶ್ನೆಯಲ್ಲ. ಬಸವ, ಬುದ್ಧ, ಗಾಂಧಿ, ಅಂಬೇಡ್ಕರ್ ಕಾಲದಿಂದ ಈ ದೇಶ ನಡೆದು ಬಂದ ಸಮಾನತೆಯ ದಿಕ್ಕನ್ನೇ ಬದಲಿಸಿ ಇನ್ನೊಂದು ದಿಕ್ಕಿಗೆ ದೇಶವನ್ನು ತೆಗೆದುಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಹಿಂದೆಲ್ಲ ಇಂದಿರಾಗಾಂಧಿಯವರ ಕಾಲದಲ್ಲಿ ಅಧಿಕಾರದಲ್ಲಿದ್ದವರು ತಪ್ಪು ಮಾಡಿದರೇ ನ್ಯಾಯಾಲಯಗಳು ಅವರ ಕಿವಿ ಹಿಂಡುತ್ತಿದ್ದವು. ಅಂತಲೇ ಇಂದಿರಾಗಾಂಧಿಯವರ ಆಯ್ಕೆಯನ್ನು ಪ್ರಶ್ನಿಸಿ ರಾಜನಾರಾಯಣ ಕಟ್ಲೆ ಹಾಕಿದಾಗ, ನ್ಯಾಯಾಲಯ ವಿಧಿಸಿದ ಶಿಕ್ಷೆಗೆ ಇಂದಿರಾ ಅವರು ಗುರಿಯಾಗಿದ್ದರು. ಆದರೆ ಈಗ ನ್ಯಾಯಾಲಯಗಳು ಹಿಂದಿನಂತಿಲ್ಲ. ನ್ಯಾಯಾಲಯಗಳು ಹಿಂದಿನಂತೆ ಇದ್ದಿದರೆ ನರೇಂದ್ರ ಮೋದಿ ಪ್ರಧಾನಿ ಮತ್ತು ಅಮಿತ್ ಶಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಆಗುತ್ತಿರಲಿಲ್ಲ. ಅಜ್ಮೀರ್ ದರ್ಗಾದ ಸ್ಫೋಟದ ರೂವಾರಿ ಅಸೀಮಾನಂದ ಬಿಡುಗಡೆಯಾಗಿ ಬರುತ್ತಿರಲಿಲ್ಲ.

ನರೇಂದ್ರ ಮೋದಿ ಪ್ರಧಾನಿಯಾದ ಕಾರಣ ಇದೆಲ್ಲ ಬದಲಾವಣೆಯಾಯಿತು ಎಂದು ಅರ್ಥವಲ್ಲ. ಯಾರೇ ಅಧಿಕಾರದಲ್ಲಿ ಇರಲಿ, ಸರಕಾರದ ಆಡಳಿತ ಅಂಗದ ಎಲ್ಲಾ ಕಡೆ ಆರೆಸ್ಸೆಸ್ ಕಾರ್ಯಕರ್ತರು ನುಸುಳಿದ್ದಾರೆ. ಕಾರ್ಯಾಂಗ, ನ್ಯಾಯಾಂಗ, ಪೊಲೀಸ್ ಇಲಾಖೆ, ಶೈಕ್ಷಣಿಕ ರಂಗ, ಹೀಗೆ ಎಲ್ಲಾ ಕಡೆ ಆಯಕಟ್ಟಿನ ಸ್ಥಾನಗಳನ್ನು ಹಿಡಿದು ಕೂತಿರುವ ಸಂಘದ ಸ್ವಯಂ-ಸೇವಕರು ಸರಕಾರದ ಸಾಮಾಜಿಕ ನ್ಯಾಯದ ಕಾರ್ಯಕ್ರಮಗಳು ಜಾರಿಯಾಗದಂತೆ ನೋಡಿಕೊಳ್ಳುತ್ತಾರೆ. ಉದಾಹರಣೆಗೆ, ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದರೂ ಕೂಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಇಂದಿಗೂ ಸಂಘ ಪರಿವಾರದ ನಿಯಂತ್ರಣದಲ್ಲಿದೆ. ದೇಶದ ಬಹುತೇಕ ಕಡೆ ಇದೇ ಸ್ಥಿತಿಯಿದೆ. ನಮ್ಮ ಸುತ್ತಲಿನ ಸಮಾಜ ಎಷ್ಟು ವಿಕೃತವಾಗುತ್ತಿದೆಯೆಂದರೆ, ಇತ್ತೀಚೆಗೆ ಕಾಸರಗೋಡಿನ ಮದರಸಾದಲ್ಲಿ ಅಧ್ಯಾಪಕನಾಗಿ ಕೆಲಸ ಮಾಡುತ್ತಿದ್ದ ರಿಯಾಝ್ ಎಂಬವರನ್ನು ಆರೆಸ್ಸೆಸ್‌ನ ಇಬ್ಬರು ಕಾರ್ಯಕರ್ತರು ನಡುರಾತ್ರಿ ಹೋಗಿ ಕೊಲೆ ಮಾಡಿದರು.

ಮಧ್ಯರಾತ್ರಿ 12ಕ್ಕೆ ಮಸೀದಿಯ ಒಂದು ಕೊಠಡಿಯೊಳಗೆ ಮಲಗಿದ್ದ ರಿಯಾಝ್‌ರ ಕೊಠಡಿಯ ಬಾಗಿಲು ತಟ್ಟಿದಂತಾಯಿತು. ಯಾರೋ ಸಹಾಯ ಕೋರಿ ಬಂದಿರಬಹುದು ಎಂದು ಅವರು ಬಾಗಿಲು ತೆಗೆದ. ಕೊಲ್ಲಲು ಬಂದವರು ಮಾತನಾಡದೇ ಮಚ್ಚಿನೇಟು ಹಾಕಿ ಕೊಂದು ಹಾಕಿದರು. ಆತನ ಮೇಲೆ ದ್ವೇಷವೇನೆಂದು ಪೊಲೀಸರು ಹಂತಕರನ್ನು ಪ್ರಶ್ನಿಸಿದಾಗ, ಅವರ ಮೇಲೆ ನಮಗೇನೂ ದ್ವೇಷವಿಲ್ಲ. ಆದರೆ ಆತ ಮುಸ್ಲಿಂ ಎಂಬ ಕಾರಣಕ್ಕೆ ಕೊಂದೆವೆಂದು ಆ ಹಂತಕರು ಹೇಳಿದರು. ಕೊಲೆ ಮಾಡಿದ ಈ 20ರೊಳಗಿನ ಯುವಕರು ಆರೆಸ್ಸೆಸ್ ಕಾರ್ಯಕರ್ತರು. ಮುಗ್ಧ ಮಕ್ಕಳನ್ನು ಕೊಲೆಗಡುಕರನ್ನಾಗಿ ಮಾಡುವ ದಿಕ್ಕಿನತ್ತ ಸಾಗಿರುವ ಹಿಂದುತ್ವದ ಈ ಭಯಾನಕ ದಿನಗಳಲ್ಲಿ ಭಾರತದ ಭವಿಷ್ಯದ ಬಗ್ಗೆ ನಾವು ಚಿಂತಿಸಬೇಕಾಗಿದೆ.

ಸಂಘ ಪರಿವಾರದ ಈ ಅಪಾಯಕಾರಿ ಹಿಂದುತ್ವದಿಂದ ದೇಶವನ್ನು ಪಾರು ಮಾಡಬೇಕಾದರೆ, ರಾಜಕೀಯ ಅಧಿಕಾರದಿಂದ ಅದನ್ನು ದೂರವಿಡಬೇಕು. ರಾಜಕೀಯ ಅಧಿಕಾರದಿಂದ ಅದನ್ನು ದೂರವಿಡಬೇಕಾದರೆ, ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕು. ಬಿಜೆಪಿಯನ್ನು ಸೋಲಿಸಬೇಕೆಂದರೆ, ಎಲ್ಲಾ ಬಿಜೆಪಿ ವಿರೋಧಿ ರಾಜಕೀಯ ಪಕ್ಷಗಳು ಒಂದಾಗಬೇಕು. ಇದೊಂದೇ ಉಳಿದಿರುವ ಕೊನೆಯ ದಾರಿ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News