ಜಾತಿ ತಾರತಮ್ಯ ಜೀವಂತ: ಡಾ.ಎಲ್.ಹನುಮಂತಯ್ಯ
ಬೆಂಗಳೂರು, ಎ.17: ದೇಶದ ಆರೂವರೆ ಲಕ್ಷ ಹಳ್ಳಿ ಹಾಗೂ ನಗರ ಪ್ರದೇಶಗಳಲ್ಲಿ ಈಗಲೂ ಜಾತಿ ತಾರತಮ್ಯವಿದ್ದು, ಇದನ್ನು ಸರಿಪಡಿಸಲು ಹೋದರೆ ಕೋಟ್ಯಂತರ ಜನರು ಜೈಲು ಪಾಲಾಗುತ್ತಾರೆ ಎಂದು ಕೆಎಸ್ಐಐಡಿಸಿ ಎಸ್ಸಿ, ಎಸ್ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಾ.ಎಲ್.ನುಮಂತಯ್ಯ ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ನಗರದ ಖನಿಜ ಭವನದ ಸಭಾಂಗಣದಲ್ಲಿ ಕೆಎಸ್ಐಐಡಿಸಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ರವರ 126ನೆ ಜನ್ಮ ದಿನಾಚರಣೆ ಅಂಗವಾಗಿ ಒಂದು ಚಿಂತನೆ, ಅಭಿವೃದ್ಧಿಗಾಗಿ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಜಾತಿ ತಾರತಮ್ಯವನ್ನು ಹೋಗಲಾಡಿಸುವುದಕ್ಕಾಗಿಯೇ ಸಂವಿಧಾನವನ್ನು ರಚಿಸಿದರು. ಆದರೆ, ದೇಶದ ಹಳ್ಳಿಗಳು ಹಾಗೂ ನಗರ ಪ್ರದೇಶಗಳಲ್ಲಿ ಜಾತಿ ತಾರತಮ್ಯ ಇನ್ನೂ ಜೀವಂತವಾಗಿದೆ ಎಂದು ಅಭಿಪ್ರಾಯಿಸಿದರು.
ಎಸ್ಸಿ, ಎಸ್ಟಿಗಳಿಗೆ ರಾಜಕೀಯ ಶಕ್ತಿ ಲಭಿಸಿದೆ. ಆದರೆ, ಆರ್ಥಿಕ ಹಾಗೂ ಸಾಮಾಜಿಕ ಶಕ್ತಿ ಇನ್ನೂ ಲಭಿಸಿಲ್ಲ. ಈ ಲಭಿಸಲಾರದ ಶಕ್ತಿಗಳು ಲಭಿಸಬೇಕಾದರೆ ಯೋಗ್ಯರ ಕೈಯಲ್ಲಿ ಸಂವಿಧಾನ ಸಿಗಬೇಕೆಂದು ಹೇಳಿದರು.
ಅಂಬೇಡ್ಕರ್ ಅವರು 1951ರಲ್ಲಿಯೇ ಮಹಿಳೆಯರಿಗೆ ಆಸ್ತಿ ಹಕ್ಕನ್ನು ಕೊಡಿಸಲು ಹಾಗೂ ಕಾರ್ಮಿಕರು 8 ಗಂಟೆ ಮಾತ್ರ ಕೆಲಸ ಮಾಡಬೇಕು ಸೇರಿ ಇನ್ನಿತರ ಅನುಕೂಲಕರ ಹಿಂದು ಕೋಡ್ ಬಿಲ್ನ್ನು ಜಾರಿಗೆ ತರಲು ಹೊರಟ್ಟಿದ್ದರು. ಆದರೆ, ಕಾರಣಾಂತರಗಳಿಂದ ಆ ಬಿಲ್ ಜಾರಿಗೆ ಬರದಿದ್ದರೂ ಇತ್ತೀಚಿನ ದಶಕಗಳಲ್ಲಿ ಅವರ ಆಶಯದಂತೆ ಮಹಿಳೆಯರಿಗೆ ಆಸ್ತಿಯ ಹಕ್ಕು ಲಭಿಸಿತು ಹಾಗೂ ಕಾರ್ಮಿಕರಿಗೆ 8 ಗಂಟೆ ಮಾತ್ರ ಕೆಲಸ ಮಾಡಬೇಕೆಂಬುದನ್ನು ಕಡ್ಡಾಯಗೊಳಿಸಲಾಯಿತು ಎಂದು ತಿಳಿಸಿದರು.
ಸ್ವಾತಂತ್ರ, ಸಹೋದರತ್ವ ಹಾಗೂ ಸಮಾನತೆ ಈ ಮೂರು ಅಂಶಗಳನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕೆಂದು ನಾಯಕರು ಹೇಳುತ್ತಾರೆ. ಆದರೆ, ಮೇಲ್ಜಾತಿಯ ಹುಡುಗನೊಬ್ಬ ಕೆಳಜಾತಿಯ ಹುಡುಗಿಯನ್ನು ಪ್ರೀತಿಸಿ ಮದುವೆಯಾದರೆ ಮೇಲ್ಜಾತಿಯವರು ಆ ಹುಡುಗನನ್ನು ಕೊಲೆ ಮಾಡಿರುವ ಉದಾಹರಣೆಗಳು ಸಾಕಷ್ಟಿವೆ ಎಂದು ಬೇಸರ ವ್ಯಕ್ತಪಡಿಸಿದರು.
300 ವರ್ಷಗಳ ಕೊಲಂಬಿಯಾ ವಿವಿಯ ಇತಿಹಾಸದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರೆ ಅತ್ಯುತ್ತಮ ವಿದ್ಯಾರ್ಥಿ ಎಂದು ಘೋಷಿಸಿದ್ದಾರೆ. ಆದರೆ, ವಿಶ್ವ ನಾಯಕನಾಗಿರುವ ಅಂಬೇಡ್ಕರ್ ಅವರನ್ನು ಕೆಲವರು ದಲಿತ ನಾಯಕನೆಂದು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ. ಅದೇ ಮೇಲ್ಜಾತಿಯ ನಾಯಕನನ್ನು ಒಂದು ವರ್ಗಕ್ಕೆ ಸೀಮಿತಗೊಳಿಸದೆ ವಿಶ್ವ ನಾಯಕನೆಂದು ಕರೆಯುತ್ತಾರೆ ಎಂದು ಹೇಳಿದರು.
ಜಾತಿ ತಾರತಮ್ಯವನ್ನು ಹೋಗಲಾಡಿಸಲು ಅಂಬೇಡ್ಕರ್ ಅವರು ರೂಪರೇಷಗಳನ್ನು ತಯಾರಿಸುತ್ತಿದ್ದಾಗ ಮಹಾತ್ಮ ಗಾಂಧೀಜಿ ಅವರು ಉಪವಾಸ ಸತ್ಯಾಗ್ರಹ ಕುಳಿತು ಅಂಬೇಡ್ಕರ್ ಅವರಿಂದ ಪೂನಾ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡು ರೂಪರೇಷಕ್ಕೆ ಕಡಿಾಣ ಹಾಕಿದರು ಎಂದು ತಿಳಿಸಿದರು.
ಕೆಎಸ್ಐಐಡಿಸಿ ಅಧ್ಯಕ್ಷ ಸಿ.ಎಂ.ಧನಂಜಯ ಮಾತನಾಡಿ, ನಮ್ಮ ದೇಶದ ಲೋಕಸಭೆಯಲ್ಲಿ 545 ಸಂಸದರಿದ್ದಾರೆ. ಇದರಲ್ಲಿ 84 ಸ್ಥಾನಗಳು ಸಂವಿಧಾನದಲ್ಲಿ ಮೀಸಲಾತಿಗೆ ಒಳಪಟ್ಟಿವೆ. ಆದರೆ ಸಚಿವ ಸ್ಥಾನಮಾನದ ಹಂಚಿಕೆ ಸಂದರ್ಭದಲ್ಲಿ ಮೀಸಲಾತಿ ವರ್ಗಗಳಿಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ. ಇವರು ಲೆಕ್ಕಕ್ಕಷ್ಟೇ ಬೇಕಾದ ಸಂಸದರು. ಸ್ಥಾನಮಾನಕ್ಕೆ ಬೇಕಿಲ್ಲ ಎಂಬ ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತಿದೆ.
ಸಂವಿಧಾನದಲ್ಲಿ ನೀಡಿದ ಸೌಲಭ್ಯ ಒದಗಿಸುವ ಕೆಲಸವನ್ನು ಕೇಂದ್ರ ಸರಕಾರ ಮಾಡಬೇಕು. ಇಲ್ಲವಾದರೆ ಅದಕ್ಕೆ ಹೊಣೆ ಯಾರು? ಈ ಸಮುದಾಯದವರು ರಾಜಕೀಯ ಹಕ್ಕು, ಅಧಿಕಾರ ಪಡೆಯಲು ಹೋರಾಡುತ್ತಿಲ್ಲ. ಅದು ಸಾಧ್ಯವಾಗದ ಕಾರಣ, ಬೇರೆಯವರು ಅದರ ಲಾಭ ಪಡೆಯುತ್ತಿದ್ದಾರೆ. ಹೋರಾಡದಿದ್ದರೆ ಅಂಬೇಡ್ಕರ್ ಕಂಡ ಕನಸು ನಸಾಗುವುದಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೆಎಸ್ಐಐಡಿಸಿ ಅಧ್ಯಕ್ಷ ಸಿ.ಎಂ.ಧನಂಜಯ, ಬೆಂವಿವಿ ಸಹಾಯಕ ಪ್ರಾಧ್ಯಾಪಕ ಡಾ.ಶ್ರೀಕಂಠಯ್ಯ, ಕೆಎಸ್ಐಐಡಿಸಿ ವ್ಯವಸ್ಥಾಪಕ ನಿರ್ದೇಶಕ ಪಿ.ಹೇಮಲತಾ, ಕೆಎಸ್ಐಐಡಿಸಿ ಕಾರ್ಯನಿರ್ವಾಹಕ ನಿರ್ದೇಶಕ ಎನ್.ಆರ್.ಎನ್.ಸಿಂಹ ಮತ್ತಿತರರು ಉಪಸ್ಥಿತರಿದ್ದರು.