ಯಡಿಯೂರಪ್ಪ ಬಣದ ಶಾಸಕರಿಂದ ಈಶ್ವರಪ್ಪ ವಿರುದ್ಧ ಆಕ್ರೋಶ: ಅತೃಪ್ತರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹ

Update: 2017-04-27 15:54 GMT

ಬೆಂಗಳೂರು, ಎ. 27: ಅತೃಪ್ತರ ಹೆಸರಿನಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರಗಿಸಬೇಕು ಎಂದು ಯಡಿಯೂರಪ್ಪ ಬಣದ ಶಾಸಕರು ಬಿಜೆಪಿಯ ಕೇಂದ್ರ ವರಿಷ್ಠರಿಗೆ ಆಗ್ರಹಿಸಿದ್ದಾರೆ.

ಗುರುವಾರ ನಗರದ ಅರಮನೆ ಮೈದಾನದಲ್ಲಿ ಅತೃಪ್ತರ ಹೆಸರಿನಲ್ಲಿ ಬಿಜೆಪಿಯ ಮುಖಂಡ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಆಯೋಜಿಸಿದ್ದ ಸಮಾವೇಶವನ್ನು ಖಂಡಿಸಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಡಾ.ಅಶ್ವತ್ಥ ನಾರಾಯಣ, ಮುನಿರಾಜು, ವೈ.ಎ.ನಾರಾಯಣಸ್ವಾಮಿ, ಸಂಸದ ಪಿ.ಸಿ.ಮೋಹನ್, ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಪಕ್ಷವಿರೋಧಿ ಚಟುವಟಿಕೆಯಲ್ಲ ಭಾಗವಹಿಸಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರಗಿಸಬೇಕು ಎಂದು ಒಕ್ಕೊರಲಿನಿಂದ ಒತ್ತಾಯಿಸಿದರು.

ಶಾಸಕ ಡಾ.ಅಶ್ವತ್ಥ ನಾರಾಯಣ ಮಾತನಾಡಿ, "ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡಿದ್ದ ಕೆ.ಎಸ್.ಈಶ್ವರಪ್ಪರಿಗೆ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಕೊಟ್ಟಿದ್ದು ಪಕ್ಷಕ್ಕೆ ಇಂದು ಮುಳವಾಗಿ ಪರಿಣಿಮಿಸಿದೆ. ಹಿಂದೆ ನೀನು(ಕೆ.ಎಸ್.ಈಶ್ವರಪ್ಪ)ಯಾವ ಸ್ಥಾನದಲ್ಲಿದ್ದೆ ಎಂಬುದನ್ನು ಮರೆಯಬಾರದು. ನಿನ್ನ ಯೋಗ್ಯತೆ, ದಕ್ಷತೆ ಏನು ಎಂಬುವುದು ರಾಜ್ಯದ ಜನತೆಗೆ ಗೊತ್ತಿದೆ. ಪಕ್ಷದಿಂದ ಎಲ್ಲ ಅಧಿಕಾರವನ್ನು ಅನುಭವಿಸಿ, ಈಗ ಪಕ್ಷಕ್ಕೆ ದ್ರೋಹ ಎಸಗುವುದು ಸರಿಯಲ್ಲ. ಜಾತಿ ಆಧಾರಿತವಾಗಿ ಸಮಾಜವನ್ನು ಒಡೆಯುವ ವ್ಯಕ್ತಿ ಬಿಜೆಪಿ ಮತ್ತು ರಾಜ್ಯಕ್ಕೆ ಬೇಕಿಲ್ಲ. ಇಂತಹ ವ್ಯಕ್ತಿಯನ್ನು ಪಕ್ಷದಿಂದ ಹೊರಗಿಡಬೇಕು" ಎಂದು ಆಕ್ರೋಶಭರಿತವಾಗಿ ಏಕವಚನದಲ್ಲಿಯೇ ಕಿರಿಕಾರಿದರು.

ಶಾಸಕ ವೈ.ಎ. ನಾರಾಯಣಸ್ವಾಮಿ ಮಾತನಾಡಿ, ಬಿಜೆಪಿಯನ್ನು ಮುಂದಿನ ವರ್ಷ ಅಧಿಕಾರಕ್ಕೆ ತರಲು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ವಿರುದ್ಧ ತೊಡೆತಟ್ಟಿ ನಿಲ್ಲದೆ, ಪಕ್ಷವನ್ನೇ ಹೋಳು ಮಾಡಲು ಕೆ.ಎಸ್.ಈಶ್ವರಪ್ಪ ಪ್ರಯತ್ನಿಸುತ್ತಿದ್ದಾರೆ. ಐನೂರು, ಆರನೂರು ಜನರನ್ನು ಬೆನ್ನ ಹಿಂದೆ ಕಟ್ಟಿಕೊಂಡು ನಾನೇ ನಾಯಕ ಎಂದು ಸಂತೆ ಬೀದಿಯಲ್ಲಿ ಹೇಳಿಕೊಳ್ಳಲು ಕೆ.ಎಸ್.ಈಶ್ವರಪ್ಪ ಪ್ರಯತ್ನಿಸಿದ್ದಾರೆ ಎಂದು ಲೇವಡಿ ಮಾಡಿದರು.

ಸಂಸದ ಪಿಸಿ ಮೋಹನ್ ಮಾತನಾಡಿ, ಅತೃಪ್ತರ ಹೆಸರಿನಲ್ಲಿ ಈಶ್ವರಪ್ಪ ನೇತೃತ್ವದಲ್ಲಿ ಇವತ್ತು ಸಭೆ ನಡೆದಿರುವುದು ಖಂಡನಾರ್ಹ. ಪಕ್ಷದೊಳಗಿನ ಸಮಸ್ಯೆಗಳನ್ನು ನಾಲ್ಕು ಗೋಡೆಗಳ ಮಧ್ಯೆ ಬಗೆಹರಿಸಕೊಳ್ಳಬಹುದಿತ್ತು. ಇಲ್ಲೂ ಬಗೆಹರಿಯದೇ ಇದ್ದಿದ್ದರೆ ಕೇಂದ್ರದ ವರಿಷ್ಠರ ಬಳಿ ಮನವರಿಕೆ ಮಾಡಿಕೊಳ್ಳಬಹುದಿತ್ತು. ಆದರೆ ಅದಾವುದನ್ನೂ ಮಾಡದೆ, ಹೀಗೆ ಸಭೆ ಮಾಡಿರುವುದು ಪಕ್ಷದ ಶಿಸ್ತು ಉಲ್ಲಂಘಿಸಿದಂತೆ ಎಂದರು.

ಶಾಸಕ ಮುನಿರಾಜು ಮಾತನಾಡಿ, ಪಕ್ಷದಲ್ಲಿ ಇಲ್ಲಸಲ್ಲದ ಗೊಂದಲಗಳನ್ನು ಸೃಷ್ಟಿ ಮಾಡುತ್ತಿದ್ದಾರೆ. ಸ್ವಾರ್ಥಕ್ಕಾಗಿ ಈ ರೀತಿಯ ಸಮಾವೇಶ, ಸಭೆಗಳನ್ನು ಮಾಡುವುದು ಸರಿಯಲ್ಲ. ಬಿಜೆಪಿ ಪಕ್ಷ ನನ್ನ ಹೆತ್ತ ತಾಯಿ ಎಂದು ಭಾಷಣ ಬಿಗಿಯುತ್ತಾರೆ. ಆದರೆ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಮಾತನಾಡಿ, ಪದವಿಗಾಗಿ ಈ ರೀತಿಯ ಸಮಾವೇಶವನ್ನು ಮಾಡುತ್ತಿದ್ದಾರೆ. ಹಿಂದೆ ಬಿಜೆಪಿ ಅಧಿಕಾರಕ್ಕೆ ಬಂದಾಗ ಯಾವ ಬ್ರಿಗೇಡ್ ಇರಲಿಲ್ಲ. ಯಡಿಯೂರಪ್ಪನವರು ಪಕ್ಷವನ್ನು ತೊರೆದಾಗ ಕೆ.ಎಸ್. ಈಶ್ವರಪ್ಪನವರೇ ಖುದ್ದು ಹೋಗಿ ಕೈ ಕಾಲು ಹಿಡಿದು ಮತ್ತೆ ಪಕ್ಷಕ್ಕೆ ಕರೆ ತಂದರು. ಆದರೆ ಈಗ ಪದವಿಯ ಆಸೆಗಾಗಿ ಯಡಿಯೂರಪ್ಪನವರ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ಕಿಡಿ ಕಾರಿದರು.

ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಮಾತನಾಡಿ, ಕೆ.ಎಸ್. ಈಶ್ವರಪ್ಪನವರ ನೇತೃತ್ವದಲ್ಲಿ ನಡೆಯುತ್ತಿರುವ ಸಭೆ ಸಮಾವೇಶಗಳಿಗೆ ಕಾಂಗ್ರೆಸ್ ಪಕ್ಷದ ಬೆಂಬಲವಿದೆ. ಬ್ರಿಗೇಡ್ ಸಮಾವೇಶಕ್ಕೆ ಕಾಂಗ್ರೆಸ್‌ನಿಂದ ಹಣ ಬಂದಿರುವ ಕುರಿತು ಬಲ್ಲ ಮೂಲಗಳಿಂದ ಗೊತ್ತಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News