×
Ad

ಕಾವೇರಿ ನೀರು ಪೋಲಾಗುತ್ತಿದ್ದರೂ ಕಣ್ಣು ಮುಚ್ಚಿ ಕುಳಿತ ಬಿಡಬ್ಲೂಎಸ್‌ಎಸ್‌ಬಿ

Update: 2017-05-09 21:32 IST

ಬೆಂಗಳೂರು, ಮೇ 9: ಸಿಲಿಕಾನ್‌ಸಿಟಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವ ಬೆನ್ನಲ್ಲೆ ಯಶವಂತಪುರ ಹಾಗೂ ಮೇಕ್ರಿ ಸರ್ಕಲ್ ಮಧ್ಯದಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್(ಟಾಟಾ ಇನ್‌ಸ್ಟಿಟ್ಯೂಟ್) ಮುಂಭಾಗ ಪೈಪ್ ಒಡೆದು ಕಾವೇರಿ ನೀರು ಒಂದು ವರ್ಷದಿಂದ ರಸ್ತೆಗೆ ಹರಿದು ಹೋಗುತ್ತಿದ್ದರೂ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(ಬಿಡಬ್ಲೂಎಸ್‌ಎಸ್‌ಬಿ)ಯವರು ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಈ ನೀರಿನ ಪೈಪ್ ಒಡೆದಿದ್ದರಿಂದ ಟಾಟಾ ಇನ್‌ಸ್ಟಿಟ್ಯೂಟ್ ಮುಂಭಾಗದ ರಸ್ತೆ ಕೂಡ ಕೆಟ್ಟು ಹೋಗಿ ಟ್ರಾಫಿಕ್ ಸಮಸ್ಯೆ ತಲೆದೋರಿದೆ. ಇದರಿಂದ, ವಾಹನ ಸವಾರರು ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳಿಂದ ಪಾರಾಗಲು ಫುಟ್‌ಪಾತ್ ಮೇಲೆಯೇ ದ್ವಿಚಕ್ರ ವಾಹನಗಳನ್ನು ಓಡಿಸಿಕೊಂಡು ಹೋಗುತ್ತಿದ್ದಾರೆ. ಆದರೂ ಬಿಡಬ್ಲೂಎಸ್‌ಎಸ್‌ಬಿಯ ಅಧಿಕಾರಿಗಳಾಗಲಿ, ಸಿಬ್ಬಂದಿಯಾಗಲಿ ಯಾವುದೇ ಕ್ರಮ ಕೈಗೊಳ್ಳದೆ ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರೆ ಎನ್ನುವುದು ಸಾರ್ವಜನಿಕರ ಆಕ್ರೋಶವಾಗಿದೆ.

ಸರಿಯಾಗಿ ಮಳೆಯಾಗದ ಹಿನ್ನೆಲೆಯಲ್ಲಿ ನಗರದ ನಾಗರಿಕರಿಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ವಾರಕ್ಕೊಂದು ಸಲವೂ ಕಾವೇರಿ ನೀರು ಬರದಂತಾಗಿದೆ. ಹೀಗಾಗಿ ಖಾಸಗಿ ನೀರು ಸರಬರಾಜುದಾರರಿಗೆ ಬೆಲೆ ಹೆಚ್ಚು ಕೊಟ್ಟು ಖರೀದಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಮತ್ತೊಂದು ಕಡೆ ಕೆಆರ್‌ಎಸ್ ಡ್ಯಾಂನಿಂದ ಸಿಲಿಕಾನ್‌ಸಿಟಿಗೆ ನೀರು ಹರಿದು ಬರುತ್ತಿರುವ ಪ್ರಮಾಣ ಕಡಿಮೆಯಾಗುತ್ತಿದೆ ಎನ್ನುತ್ತಲೇ ಬಿಡಬ್ಲೂಎಸ್‌ಎಸ್‌ಬಿ ಅವರು ನೀರಿನ ಬೆಲೆಯನ್ನು ಪ್ರತಿ ವರ್ಷ ಹೆಚ್ಚು ಮಾಡುತ್ತಲೇ ಇದ್ದಾರೆ. ಆದರೆ, ಪೈಪ್‌ಗಳು ಒಡೆದು ಹೋಗಿ ನೀರು ಸೋರಿಕೆಯಾಗುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಇಲಾಖೆಯ ಬೇಜವಾಬ್ದಾರಿ ಎದ್ದು ಕಾಣಿಸುತ್ತಿದೆ. ಆದಷ್ಟು ಬೇಗ ಕ್ರಮ ಕೈಗೊಳ್ಳಲು ನಗರದ ನಾಗರಿಕರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಒಂದು ವಾರದಲ್ಲಿ ಕ್ರಮ

 ‘ಟಾಟಾ ಇನ್‌ಸ್ಟಿಟ್ಯೂಟ್ ಬಳಿ ಪೈಪ್ ಒಡೆದು ಹೋಗಿ ನೀರು ವ್ಯರ್ಥವಾಗುತ್ತಿರುವುದು ತಮ್ಮ ಗಮನಕ್ಕೂ ಬಂದಿದ್ದು, ಬಿಬಿಎಂಪಿ ಹಾಗೂ ಪೊಲೀಸರು ಆ ಪೈಪ್‌ನ್ನು ಬದಲಾಯಿಸಲು ಪರವಾನಿಗೆ ನೀಡಿದ್ದಾರೆ. ಹೀಗಾಗಿ, ಒಂದು ವಾರದಲ್ಲಿ ಹಳೆಯ ಪೈಪ್‌ನ್ನು ತೆಗೆದು ಆ ಸ್ಥಳದಲ್ಲಿ ಹೊಸ ಪೈಪ್‌ನ್ನು ಅಳವಡಿಸಲಾಗುವುದು.’

-ಕೆಂಪರಾಜು, ಮುಖ್ಯ ಎಂಜಿನಿಯರ್

‘ಪೈಪ್ ಒಡೆದಿದ್ದರಿಂದ ಕಾವೇರಿ ನೀರು ವ್ಯರ್ಥವಾಗಿ ರಸ್ತೆಗೆ ಹೋಗುತ್ತಿದೆ. ಇದರಿಂದ, ರಸ್ತೆಯೆಲ್ಲ ಹಾಳಾಗಿ ಟ್ರಾಫಿಕ್ ಜಾಮ್ ಹೆಚ್ಚಾಗುತ್ತಿದೆ. ಇತ್ತ ಟ್ರಾಫಿಕ್ ಪೊಲೀಸರೂ ಕ್ರಮ ಕೈಗೊಳ್ಳುತ್ತಿಲ್ಲ, ಅತ್ತ ವ್ಯರ್ಥವಾಗಿ ಪೋಲಾಗುತ್ತಿರುವ ನೀರನ್ನು ತಡೆಹಿಡಿಯಲು ಬಿಡಬ್ಲೂಎಸ್‌ಎಸ್‌ಬಿ ಸಿಬ್ಬಂದಿಯೂ ಮುಂದಾಗುತ್ತಿಲ್ಲ. ಬಿಬಿಎಂಪಿಯ ಬದುಕಿದೆಯಾ ಎಂಬುದೇ ಗೊತ್ತಾಗುತ್ತಿಲ್ಲ. ಒಟಿ್ಟನಲ್ಲಿ ಅರಾಜಕ ಆಡಳಿತ ಚಾಲ್ತಿಯಲ್ಲಿದೆ.

-ಜೆ.ಪಿ.ಬಜಾಜ್ , ವಾಹನ ಸವಾರ

     

‘ಬೆಂಗಳೂರಿನಲ್ಲಿ ನೀರಿನದೆ ಒಂದು ದೊಡ್ಡ ಸಮಸ್ಯೆಯಾಗಿದೆ. ಆದರೆ, ಟಾಟಾ ಇನ್‌ಸ್ಟಿಟ್ಯೂಟ್ ಮುಂಭಾಗ ಪೈಪ್ ಒಡೆದು ನೀರು ವ್ಯರ್ಥವಾಗುತ್ತಿದ್ದರೂ ಕ್ರಮ ಕೈಗೊಳ್ಳದಿರುವುದು ನಾಚಿಕೆಯ ಸಂಗತಿ. ಆದಷ್ಟೂ ಬೇಗ ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು.’

-ಶಹಾಬ್  , ವಾಹನ ಸವಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News