×
Ad

23 ಸಾವಿರ ಪೊಲೀಸರ ನೇಮಕ: ಡಾ.ಜಿ.ಪರಮೇಶ್ವರ್

Update: 2017-05-11 21:55 IST

ಬೆಂಗಳೂರು, ಮೇ 11: 2014-15 ರಿಂದ 2016-17ನೆ ಸಾಲಿನಲ್ಲಿ ಒಟ್ಟು 23,761 ಕಾನ್ಸ್‌ಟೇಬಲ್‌ಗಳು ಹಾಗೂ ಸಬ್ ಇನ್ಸ್‌ಪೆಕ್ಟರ್‌ಗಳನ್ನು ನೇಮಕ ಮಾಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾಹಿತಿ ನೀಡಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2009ರಲ್ಲಿ 400, 2012ರಲ್ಲಿ 242 ಹೊರತುಪಡಿಸಿ 2008, 2010, 2011ರಲ್ಲಿ ಸಬ್ ಇನ್ಸ್‌ಪೆಕ್ಟರ್‌ಗಳ ನೇಮಕವಾಗಲಿಲ್ಲ. 2013ರಲ್ಲಿ ಸಂವಿಧಾನದ ಕಲಂ 371(ಜೆ) ಅನುಷ್ಠಾನದ ಹಿನ್ನೆಲೆಯಲ್ಲಿ ನೇಮಕಾತಿಗೆ ತಡೆಯಾಜ್ಞೆ ಇತ್ತು ಎಂದರು.

ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ 2014-15ರಲ್ಲಿ 364, 2015-16ರಲ್ಲಿ 215, 2016-17ರಲ್ಲಿ 725 ಸೇರಿದಂತೆ ಒಟ್ಟು 1304 ಸಬ್‌ಇನ್ಸ್‌ಪೆಕ್ಟರ್‌ಗಳನ್ನು ನೇಮಕ ಮಾಡಿದ್ದೇವೆ. 2008ರಲ್ಲಿ 2917, 2010ರಲ್ಲಿ 4000, 2011ರಲ್ಲಿ 3000, 2012ರಲ್ಲಿ 7000 ಪೊಲೀಸ್ ಕಾನ್ಸ್‌ಟೇಬಲ್‌ಗಳ ನೇಮಕವಾಗಿದೆ ಎಂದು ಅವರು ಹೇಳಿದರು.

2014-15ರಲ್ಲಿ 7644, 2015-16ರಲ್ಲಿ 6389, 2016-17ರಲ್ಲಿ 8424 ಮಂದಿ ಸೇರಿದಂತೆ ಒಟ್ಟು 22,457 ಕಾನ್ಸ್‌ಟೇಬಲ್‌ಗಳನ್ನು ನೇಮಕ ಮಾಡಲಾಗಿದೆ. ಅಲ್ಲದೆ, ಮುಂದಿನ ಎರಡು ವರ್ಷಗಳಿಗೆ ನೇಮಕಾತಿಗಾಗಿ ಹಣಕಾಸು ಇಲಾಖೆಯ ಅನುಮತಿಯನ್ನು ಪಡೆದುಕೊಂಡಿದ್ದೇವೆ ಎಂದು ಪರಮೇಶ್ವರ್ ತಿಳಿಸಿದರು.

ಪ್ರತಿವರ್ಷ ಸುಮಾರು 2 ಸಾವಿರ ಮಂದಿ ನಿವೃತ್ತಿ ಹೊಂದುತ್ತಿದ್ದಾರೆ. ಅದರಂತೆ, 2017-18ರಲ್ಲಿ 8 ಸಾವಿರ, 2018-19ರಲ್ಲಿ 8 ಸಾವಿರ ಮಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು. ನಾವು ಪೊಲೀಸ್ ಇಲಾಖೆಯಲ್ಲಿ ಸುಮಾರು 25 ಸಾವಿರ ಹುದ್ದೆಗಳನ್ನು ಹೆಚ್ಚಿಸಿದ್ದೇವೆ ಎಂದು ಅವರು ಹೇಳಿದರು.

2013ರಲ್ಲಿ ಐಪಿಎಸ್ ಅಧಿಕಾರಿಗಳು ಹೊರತುಪಡಿಸಿ ಪೊಲೀಸ್ ಇಲಾಖೆಯ ಸಿಬ್ಬಂದಿ, ಅಧಿಕಾರಿಗಳ ಸಾಮರ್ಥ್ಯ 75,379 ಇತ್ತು. ಆಗ 19,028 ಹುದ್ದೆಗಳು ಖಾಲಿ ಇದ್ದವು. ಪ್ರಸಕ್ತ ಸಾಲಿನ ಜನವರಿ ವೇಳೆಗೆ ನಮ್ಮ ಸಾಮರ್ಥ್ಯವು 1.56 ಲಕ್ಷಕ್ಕೆ ಹೆಚ್ಚಿದೆ(ಐಪಿಎಸ್ ಹೊರತುಪಡಿಸಿ). 24,399 ಹುದ್ದೆಗಳು ಖಾಲಿಯಿವೆ ಎಂದು ಪರಮೇಶ್ವರ್ ತಿಳಿಸಿದರು.

ನಿವೃತ್ತಿ ಹೊಂದುವವರನ್ನು ಸೇರಿಸಿಕೊಂಡರೆ 17 ಸಾವಿರ ಹುದ್ದೆಗಳು ಖಾಲಿಯಿರುತ್ತವೆ. 2017-18, 2018-19ರಲ್ಲಿ ತಲಾ ಎಂಟು ಸಾವಿರ ಸಿಬ್ಬಂದಿಗಳ ನೇಮಕವಾದರೆ ಎಲ್ಲ ಹುದ್ದೆಗಳು ಭರ್ತಿಯಾಗುವಂತಾಗುತ್ತದೆ. ಇನ್ನುಳಿದಂತೆ ನಿವೃತ್ತಿಯಾಗುವ ಹುದ್ದೆಗಳನ್ನು ಆಯಾ ಸಂದರ್ಭದಲ್ಲಿ ನಿರಂತರವಾಗಿ ಭರ್ತಿ ಮಾಡಿಕೊಳ್ಳುತ್ತೇವೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಪೊಲೀಸ್ ಮಾರ್ಗಸೂಚಿಯನ್ವಯ ನಾವು ಹುದ್ದೆಗಳನ್ನು ಸೃಷ್ಟಿಸಿ, ನೇಮಕಾತಿ ಮಾಡಿಕೊಂಡು ಬರುತ್ತಿದ್ದೇವೆ. ಸುಪ್ರೀಂಕೋರ್ಟ್ ಆದೇಶ, ನಿರ್ದೇಶನ ನೀಡುವ ಮುಂಚಿತವಾಗಿ ನಾವು ನೇಮಕಾತಿ ಮಾಡಿದ್ದೇವೆ. ತಪ್ಪು ಮಾಹಿತಿಯಿಂದ ಸುಪ್ರೀಂಕೋರ್ಟ್ ರಾಜ್ಯದ ಬಗ್ಗೆ ಅಪಸ್ವರ ಎತ್ತಿತ್ತು. ಆದರೆ, ನಾವು ನ್ಯಾಯಾಲಯಕ್ಕೆ ಅಗತ್ಯ ಮಾಹಿತಿ ನೀಡಿ ಮನವರಿಕೆ ಮಾಡಿಕೊಟ್ಟ ಬಳಿಕ, ನಮ್ಮ ರಾಜ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದೆ ಎಂದು ಪರಮೇಶ್ವರ್ ತಿಳಿಸಿದರು.

ಐದು ವರ್ಷಗಳಲ್ಲಿ ನಾವು 25 ಸಾವಿರ ಹುದ್ದೆಗಳನ್ನು ಹೆಚ್ಚಿಸಿದ್ದೇವೆ. ಮುಂದಿನ ಐದು ವರ್ಷಗಳಲ್ಲಿ ಮತ್ತಷ್ಟು ಹುದ್ದೆಗಳು ಸೃಷ್ಠಿಯಾಗಲಿವೆ. ನಮ್ಮಲ್ಲಿ ಎಂಟು ಶಾಶ್ವತ ಹಾಗೂ 22 ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಗಳಿವೆ. ಇವುಗಳಲ್ಲಿ ವಾರ್ಷಿಕವಾಗಿ ಗರಿಷ್ಠ 6500-7000 ಮಂದಿಗೆ ತರಬೇತಿ ನೀಡಬಹುದು. ನಮ್ಮ ಸರಕಾರವು ತರಬೇತಿ ಶಾಲೆಗಳನ್ನು ಹೆಚ್ಚಿಸಿದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಗೃಹ ಸಚಿವ ಸಲಹೆಗಾರ ಕೆಂಪಯ್ಯ, ರಾಜ್ಯ ಪೊಲೀಸ್ ಮಹಾನಿರ್ದೇಶಕ ರೂಪಕ್‌ಕುಮಾರ್ ದತ್ತಾ, ಹಿರಿಯ ಅಧಿಕಾರಿ ರಾಘವೇಂದ್ರ ಔರಾದ್ಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News