×
Ad

ನಗರದ ಕಸ-ತ್ಯಾಜ್ಯ ನೀರು ಸಮಸ್ಯೆ ಉಲ್ಬಣಕ್ಕೆ ಹಿಂದಿನ ಸರಕಾರಗಳು ಕಾರಣ: ಸಿದ್ದರಾಮಯ್ಯ

Update: 2017-05-15 20:22 IST

ಬೆಂಗಳೂರು, ಮೇ 15: ನಗರದಲ್ಲಿ ತಲೆದೋರಿರುವ ಕಸ ಹಾಗೂ ತ್ಯಾಜ್ಯ ನೀರು ಸಮಸ್ಯೆ ಉಲ್ಬಣವಾಗಿರುವುದಕ್ಕೆ ಈ ಹಿಂದಿನ ಎಲ್ಲ ಸರಕಾರಗಳು ಕಾರಣವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
 

ಸೋಮವಾರ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಜೈಕಾ ಅನುದಾನದಡಿ ಕೋರಮಂಗಲ ಮತ್ತು ಚಲ್ಲಘಟ್ಟ ಕಣಿವೆಯಲ್ಲಿ ಹೊಸದಾಗಿ ನಿರ್ಮಿಸಿರುವ 60ಎಂಎಲ್‌ಡಿ ಸಾಮರ್ಥ್ಯದ ತ್ಯಾಜ್ಯನೀರು ಸಂಸ್ಕರಣಾ ಘಕಟವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಬೆಂಗಳೂರು ನಗರದಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ಹೇಗೆ ನಿರ್ವಹಣೆ ಮಾಡಬೇಕೆಂದು ಈ ಹಿಂದಿನ ಯಾವ ಸರಕಾರಗಳು ಚಿಂತಿಸಿಲ್ಲ. ಇದರಿಂದಾಗಿ ಪ್ರಸ್ತುತ ನಗರದಲ್ಲಿ ಕಸದ ನಿರ್ವಹಣೆಯೇ ದೊಡ್ಡ ಸಮಸ್ಯೆಯಾಗಿದ್ದು, ಪ್ರತಿದಿನ 4 ಸಾವಿರ ಟನ್ ಕಸ ಉತ್ಪತ್ತಿಯಾಗುತ್ತದೆ. ಈ ಕಸವನ್ನು ಸಮರ್ಪಕವಾಗಿ ನಿರ್ವಹಿಸಲು ನಮ್ಮ ಸರಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು.

 ನಗರದಲ್ಲಿ ಉತ್ಪತ್ತಿಯಾಗುವ ಕಸವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ನಿಟ್ಟಿನಲ್ಲಿ 7 ತ್ಯಾಜ್ಯ ಸಂಸ್ಕರಣ ಘಟಕಗಳನ್ನು ಸ್ಥಾಪಿಸಲಾಗಿದೆ. ಅಲ್ಲಿ ಉತ್ಪತ್ತಿಯಾಗುವ ಗೊಬ್ಬರವನ್ನು ರೈತರಿಗೆ ಸರಬರಾಜು ಮಾಡಲು ಕೃಷಿ ಇಲಾಖೆ ಮುಂದಾಗಿದೆ. ಇದರ ಜೊತೆಗೆ ಕಸ ಸಂಸ್ಕರಣ ಘಟಕದಲ್ಲಿ ಕಸದಿಂದ ವಿದ್ಯುತ್ ತಯಾರಿಸಲು ಜರ್ಮನಿ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಜಿಎಸ್‌ಟಿ ಸೂಚನೆಗೂ ಮೊದಲೇ ಯೋಜನೆ ತಯಾರಿ: ಬೆಳ್ಳಂದೂರು ಕೆರೆಯ ಶುದ್ಧೀಕರಣಕ್ಕೆ ಜಿಎಸ್‌ಟಿ (ಹಸಿರು ನ್ಯಾಯ ಪೀಠ) ಸೂಚಿಸುವ ಏಳು ತಿಂಗಳ ಮೊದಲೆ ರಾಜ್ಯ ಸರಕಾರ ತಜ್ಞರ ಸಮಿತಿಯೊಂದನ್ನು ರಚಿಸಿ ಕೆರೆಯ ಶುದ್ಧೀಕರಣಕ್ಕೆ ಸಲಹೆಗಳನ್ನು ಪಡೆದು ಕಾರ್ಯ ಪ್ರವೃತ್ತರಾಗಿದ್ದೆವು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮೊದಲ ಹಂತವಾಗಿ ಬೆಳ್ಳಂದೂರು ಹಾಗೂ ವರ್ತೂರು ಕೆರೆಯನ್ನು ಸಂಪೂರ್ಣವಾಗಿ ಶುದ್ಧೀಕರಿಸಲು ಎಲ್ಲ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ತದನಂತರ ರಾಮ್‌ಪುರ ಕೆರೆ ಸೇರಿದಂತೆ ನಗರದ ಪ್ರತಿಯೊಂದು ಕೆರೆಯ ಸ್ವಚ್ಛತೆಯನ್ನು ಹಂತ, ಹಂತವಾಗಿ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

110 ಹಳ್ಳಿಗೆ ಕುಡಿಯುವ ನೀರು: ಬಿಬಿಎಂಪಿಗೆ ಹೊಸದಾಗಿ ಸೇರಿರುವ 110 ಹಳ್ಳಿಗಳಿಗೆ ಕುಡಿಯುವ ನೀರಿನ್ನು ಒದಗಿಸುವ ನಿಟ್ಟಿನಲ್ಲಿ ಜೈಕಾ ಸಂಸ್ಥೆಯೊಂದಿಗೆ ಮಾತುಕತೆ ನಡೆಸಲಾಗುತ್ತಿದ್ದು, ಶೀಘ್ರದಲ್ಲಿಯೇ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ರಾಜ್ಯದಲ್ಲಿ 65 ಲಕ್ಷ ವಾಹನಗಳಿದ್ದು, ಸಂಚಾರ ದಟ್ಟಣೆಯನ್ನು ನಿರ್ವಹಿಸಲು ದೊಡ್ಡ ಸವಾಲಾಗಿದೆ. ಈ ನಿಟ್ಟಿನಲ್ಲಿ ಮುಂದಿನ ತಿಂಗಳಲ್ಲಿ 42 ಕಿಮೀ ಉದ್ದದ ಎರಡನೆ ಹಂತದ ಮೆಟ್ರೋ ರೈಲಿಗೆ ಚಾಲನೆ ಸಿಗಲಿದೆ. ನಗರದ ಇತರೆ ಭಾಗಗಳಲ್ಲಿ ಆಧುನಿಕ ಶೈಲಿಯಲ್ಲಿ ರಸ್ತೆ ನಿರ್ಮಾಣಕ್ಕೆ ಜೈಕಾ ಸಂಸ್ಥೆಯೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಬಿಬಿಎಂಪಿ ಮೇಯರ್ ಪದ್ಮಾವತಿ, ಜಪಾನ್ ರಾಯಭಾರಿ ಕೆಂಜಿ ಇರಾಮಟ್ಟು, ಶಾಸಕ ಅರವಿಂದ ಲಿಂಬಾವಳಿ, ಶಾಂತಿ ನಗರದ ಶಾಸಕ ಹಾರಿಸ್, ಜಪಾನ್ ದೂತವಾಸ ಕಚೇರಿಯ ಟಕಾಯುಕಿ ಕಿಟಾಗವ ಹಾಗೂ ಬೆಂಗಳೂರು ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ಮತ್ತಿತರರಿದ್ದರು.

ಬೆಂಗಳೂರಿಗೆ ಅಗತ್ಯವಾದ ಕುಡಿಯುವ ನೀರಿನ ಘಟಕ, ರಸ್ತೆ ನಿರ್ಮಾಣಕ್ಕೆ ಅಗತ್ಯವಾದ ಆರ್ಥಿಕ ನೆರವನ್ನು ಜೈಕಾ ವತಿಯಿಂದ ನೀಡಲಾಗುವುದು. ಈಗಾಗಲೆ ಜಪಾನಿನ ಹಲವು ಕಂಪೆನಿಗಳು ಭಾರತದಲ್ಲಿ ಹೂಡಿಕೆ ಮಾಡಲು ಮುಂದೆ ಬಂದಿದ್ದು, ಆ ಮೂಲಕ ಭಾರತ-ಜಪಾನ್ ನಡುವೆ ಬಾಂಧವ್ಯ ಗಟ್ಟಿಗೊಳಿಸಲಾಗುವುದು.
-ಕೆಂಜಿ ಇರಾಮಟ್ಟು, ಜಪಾನ್ ರಾಯಭಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News