ಜೂನ್ 5ರಿಂದ 16ರ ವರೆಗೆವಿಧಾನ ಮಂಡಲ ಅಧಿವೇಶನ

Update: 2017-05-17 16:05 GMT

ಬೆಂಗಳೂರು, ಮೇ 17: ರಾಜ್ಯ ವಿಧಾನ ಮಂಡಲದ ಮುಂದುವರೆದ ಆಯವ್ಯಯ ಅಧಿವೇಶನವನ್ನು ಜೂ. 5ರಿಂದ 16ರ ವರೆಗೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಜರುಗಿದ ಸಚಿವ ಸಂಪುಟವು ತೀರ್ಮಾನಿಸಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.

ಬುಧವಾರ ಸಂಪುಟ ಸಭೆ ಬಳಿಕ ಸಮ್ಮೇಳನ ಸಭಾಂಗಣದಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಧಾನ ಮಂಡಲ ಅಧಿವೇಶನದಲ್ಲಿ ಆಯವ್ಯಯಕ್ಕೆ ಒಪ್ಪಿಗೆ ಹಾಗೂ ಇಲಾಖೆ ಬೇಡಿಕೆಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

ಕೃಷಿ ವಿವಿಗೆ ಜಮೀನು: ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾಲಯಕ್ಕೆ ಅದೇ ತಾಲ್ಲೂಕಿನ ಇರುವಕ್ಕಿ ಗ್ರಾಮದ ಸಮೀಪ 600 ಎಕರೆ ಜಮೀನು ಮಂಜೂರು, 138.69 ಕೋಟಿ ರೂ.ವೆಚ್ಚದಲ್ಲಿ 2 ವರ್ಷಗಳೊಳಗೆ ಸ್ವಂತ ಕಟ್ಟಡ ನಿರ್ಮಿಸಿಕೊಳ್ಳಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಅವರು ಹೇಳಿದರು.

ಆಯ್ಕೆ ಫಲಾನುಭಗಳಿಗೆ: ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಿರುವಂತೆ ‘ಅನ್ನಭಾಗ್ಯ’ ಯೋಜನೆಯಲ್ಲಿ ಎಪ್ರಿಲ್ ತಿಂಗಳಿನಿಂದ ನೀಡುತ್ತಿರುವ ಆಹಾರ ಧಾನ್ಯದ ಪ್ರಮಾಣ 7ಕೆ.ಜಿ.ಗೆ ಹೆಚ್ಚಿಸಲು ಘಟನೋತ್ತರ ಮಂಜೂರಾತಿ ನೀಡಿದ್ದು, ಫಲಾನುಭವಿಗಳು ತಮ್ಮ ಇಚ್ಛೆಯಂತೆ ಆಹಾರಧಾನ್ಯ (ಅಕ್ಕಿ ಅಥವಾ ಗೋಧಿ) ಪಡೆಯುವ ಆಯ್ಕೆಯನ್ನು ಫಲಾನುಭಗಳಿಗೆ ನೀಡಿದೆ ಎಂದು ಹೇಳಿದರು.

ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ-2013ರ ಅಡಿ ಆಧ್ಯತಾ (ಬಿಪಿಎಲ್) ಕುಟುಂಬಗಳನ್ನು ಗುರುತಿಸಲು ಕುಟುಂಬದ ವಾರ್ಷಿಕ ಆದಾಯ ಮಿತಿ 1.20ಲಕ್ಷ ರೂ.ಗಳಿಗಿಂತಲೂ ಕಡಿಮೆಗೆ ನಿಗಧಿಪಡಿಸಲು ಸಚಿವ ಸಂಪುಟವು ಘಟನೋತ್ತರ ಮಂಜೂರಾತಿ ನೀಡಿದೆ.

ದಾಸೋಹ: ಕೇಂದ್ರದ ಕಲ್ಯಾಣ ಯೋಜನೆಯಡಿ ಸಹಾಯಧನದಡಿ ಆಹಾರ ಧಾನ್ಯಗಳನ್ನು ಪಡೆಯುವ ಕಲ್ಯಾಣ ಸಂಸ್ಥೆಗಳಿಗೆ ದಾಸೋಹ ಯೋಜನೆಯಡಿ ಆಹಾರ ಧಾನ್ಯಗಳನ್ನು ಸರಕಾರವೇ ಉಚಿತವಾಗಿ ಒದಗಿಸಲು ಸಂಪುಟವು ಸಮ್ಮತಿಸಿದೆ ಎಂದು ಹೇಳಿದರು.

ಅನಾಥಾಶ್ರಮ, ಅಬಲಾಶ್ರಮ, ವೃದ್ಧಾಶ್ರಮ, ಅಂಧ ಮಕ್ಕಳ ಶಾಲೆ, ವಿಕಲಚೇತನರ ಆಶ್ರಯದಾಣಗಳು, ನಾರಿ ನಿಕೇತನ, ಭಿಕ್ಷುಕರ ಪರಿಹಾರ ಹಾಗೂ ಪುನರ್ವಸತಿ ಕೇಂದ್ರಗಳಿಗೆ ಕೇಂದ್ರ ಪ್ರತಿ ಕೆ.ಜಿಗೆ 5.65ರೂ.ದರದಲ್ಲಿ ಒದಗಿಸುತ್ತಿರುವ ಅಕ್ಕಿ, 4.15ರೂ.ನಂತೆ ಒದಗಿಸುತ್ತಿರುವ ಗೋಧಿ ಸೇರಿ ಅಗತ್ಯ ವಸ್ತುಗಳನ್ನು ಉಚಿತವಾಗಿ ಒದಗಿಸಲು ಸಂಪುಟವು ತೀರ್ಮಾನಿಸಿದೆ.

ಸಂಪುಟದ ಈ ಮಹತ್ವದ ತೀರ್ಮಾನದಿಂದ ಅಕ್ಕಿ ಪೂರೈಕೆಗೆ ವಾರ್ಷಿಕ 35.4 ಕೋಟಿ ರೂ ಹೊರೆ ಬೀಳಲಿದೆ ಎಂದರು.ಸಾಮಾಜಿಕ ಪರಿಶೋಧನೆ: ನ್ಯಾಯಬೆಲೆ ಅಂಗಡಿ ಹಂತದಲ್ಲಿ ಜಾಗೃತ ಸಮಿತಿ ರಚಿಸಿ ಅವುಗಳ ಮೂಲಕ ಪಾರದರ್ಶಕತೆ ಹಾಗೂ ಹೊಣೆಗಾರಿಕೆ ಸದೃಢಗೊಳಿಸಲು ನ್ಯಾಯಬೆಲೆ ಅಂಗಡಿಗಳ ಕಾರ್ಯನಿರ್ವಹಣೆಯನ್ನು ಸಾಮಾಜಿಕ ಪರಿಶೋಧನೆ ಒಳಪಡಿಸಲು ಸಂಪುಟ ತೀರ್ಮಾನಿಸಿದೆ.

ಜಾಗೃತ ಸಮಿತಿ ಸದಸ್ಯರಿಗೆ 150 ರೂ.ಸಭಾ ಭತ್ಯೆ ನೀಡಲೂ ಅವಕಾಶ ಕಲ್ಪಿಸಲಾಗಿದೆ.

ಅಣೆಕಟ್ಟುಗಳ ಪುನಶ್ಚೇತನ: ಸುರಕ್ಷಾ ಮಾನದಂಡಗಳಿಗೆ ಅನುಗುಣವಾಗಿ ಆಲಮಟ್ಟಿ, ಕಬಿನಿ, ಕೆಆರ್‌ಎಸ್, ಭದ್ರಾ, ಹಾರಂಗಿ, ಹಿಡ್ಕಲ್ ಹಾಗೂ ಹೇಮಾವತಿ ಸೇರಿ ರಾಜ್ಯದ 22 ಅಣೆಕಟ್ಟುಗಳನ್ನು 571 ಕೋಟಿ ರೂ.ವೆಚ್ಚದಲ್ಲಿ ಪುನಶ್ಚೇತನಗೊಳಿಸಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಅವರು ವಿವರಿಸಿದರು.

ಬಾಂಗ್ಲಾ ವಲಸಿಗರು ಎಸ್ಸಿ ಪಟ್ಟಿಗೆ: ಬಾಂಗ್ಲಾದೇಶದಿಂದ ವಲಸೆ ಬಂದು ರಾಯಚೂರಿನ ಸಿಂಧನೂರು ತಾಲೂಕಿನಲ್ಲಿ ನೆಲೆಸಿ ಭಾರತೀಯ ಪೌರತ್ವವನ್ನು ಪಡೆದಿರುವ ನಾಮಶೂದ್ರ, ಪೊಡ್-ಪೌಂಡ್ರ ಹಾಗೂ ರಾಜಬುಶಿ ಜಾತಿಗಳನ್ನು ರಾಜ್ಯದ ಪರಿಶಿಷ್ಟ ಜಾತಿ(ಎಸ್ಸಿ)ಪಟ್ಟಿಯಲ್ಲಿ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಸಂಪುಟ ನಿರ್ಧರಿಸಿದೆ.

ಡಿಸೆಂಬರ್ ಒಳಗೆ ಪೂರ್ಣ: ಮಾಗಡಿ ರಸ್ತೆಯಲ್ಲಿ ನಿರ್ಮಿಸಲಾಗುತ್ತಿರುವ ಆರೋಗ್ಯ ಭವನದ ಕಾಮಗಾರಿಗಳಿಗೆ ತಗಲುವ ಹೆಚ್ಚುವರಿ ವೆಚ್ಚ 22.85 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಆರೋಗ್ಯ ಭವನದ ಕಾಮಗಾರಿ ಡಿಸೆಂಬರ್ ಒಳಗೆ ಪೂರ್ಣಗೊಳಿಸಬೇಕೆಂದು ಸೂಚಿಸಲಾಗಿದೆ ಎಂದರು.

ಸಿಬ್ಬಂದಿ ನೇಮಕಕ್ಕೆ ಅಸ್ತು: ಅಂಬೇಡ್ಕರ್, ಬಸವ, ವಾಜಪೇಯಿ, ಆವಾಸ್ ಯೋಜನೆ ಒಳಗೊಂಡಂತೆ ಸೂರಿಲ್ಲದವರಿಗೆ ಸೂರು ಕಲ್ಪಿಸುವ ವಿವಿಧ ಯೋಜನೆಗಳಡಿ ಪ್ರಸಕ್ತ ವರ್ಷ 4 ಲಕ್ಷ ಮನೆಗಳನ್ನು ನಿರ್ಮಿಸಲು ಯೋಜಿಸಲಾಗಿದೆ ಎಂದು ಹೇಳಿದರು.

ಕಳೆದ ಸಾಲಿನಲ್ಲಿ ನಿರ್ಮಿಸಿರುವ-ಪ್ರಸಕ್ತ ಸಾಲಿನಲ್ಲಿ 10 ಲಕ್ಷ ಫಲಾನುಭವಿಗಳನ್ನು ಗುರುತಿಸುವಂತೆ ಸಂಪುಟವು ಒಪ್ಪಿಗೆ ನೀಡಿದೆ. ಮನೆ ನಿರ್ಮಾಣ ಹಾಗೂ ಫಲಾನುಭವಿಗಳ ಗುರುತಿಸುವ ಕಾರ್ಯಕ್ಕೆ ಅನುವಾಗುವಂತೆ ವಸತಿ ಇಲಾಖೆಗೆ ಹೊರಗುತ್ತಿಗೆಯ ಆಧಾರದ ಮೇರೆಗೆ 3ವರ್ಷಗಳ ಅವಧಿಗೆ ಅಗತ್ಯ ಎಂಜಿನಿಯರಿಂಗ್ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಅನುಮೋದನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News