ಭಯೋತ್ಪಾದನೆ ನಿಗ್ರಹಿಸುವವರ ಭಯೋತ್ಪಾದನೆ: ಮಾಡದ ತಪ್ಪಿಗೆ ಜೈಲಿನಲ್ಲಿ ಕೊಳೆತ ಅಮೀರ್, ಅಬ್ದುಲ್ ವಾಹಿದ್ ರ ಅನುಭವಗಳು

Update: 2017-05-25 12:16 GMT

ಬೆಂಗಳೂರು, ಮೇ 25: "1947ರಲ್ಲಿ ಜಿನ್ನಾರ ಬೆನ್ನ ಹಿಂದೆ ಹೋಗುವ ಅವಕಾಶವಿದ್ದರೂ, ಅದನ್ನು ಧಿಕ್ಕರಿಸಿ ಮಹಾತ್ಮಾ ಗಾಂಧೀಜಿಯವರ ಕೈಹಿಡಿದು ಭಾರತದಲ್ಲೇ ಉಳಿದುಕೊಂಡೆವು. ಜಾತ್ಯತೀತ, ಪ್ರಜಾಪ್ರಭುತ್ವ ದೇಶವನ್ನ ಇಷ್ಟಪಟ್ಟೆವು. ಆದರೂ ಪ್ರತಿ ಕ್ಷಣ ನಮ್ಮ ದೇಶಪ್ರೇಮವನ್ನು ಸಾಬೀತು ಪಡಿಸಬೇಕಾದ ಅನಿವಾರ್ಯತೆ ಎದುರಾಗುತ್ತಿರುವುದು ವಿಪರ್ಯಾಸ"

ಈ ಮಾತುಗಳನ್ನು ಹೇಳಿದವರು ಭಯೋತ್ಪಾದನಾ ನಿಗ್ರಹದಳದಿಂದ 18ರ ಹರೆಯದಲ್ಲಿ ಬಂಧನಕ್ಕೊಳಗಾಗಿ ತನ್ನ ಯೌವನದ 14 ವರ್ಷ ಕಾರಾಗೃಹದಲ್ಲಿ ಕಳೆದು ಹೊರಬಂದಿರುವ ಅಮೀರ್.

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಇಂಡಿಯಾ ಯುನಿವರ್ಸಿಟಿಯಲ್ಲಿ ನಡೆದ "ದ ಟೆರರ್ ಆಫ್ ಆ್ಯಂಟಿ ಟೆರರ್" ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ತಾನು ಮಾಡದ ತಪ್ಪಿಗೆ ಅನುಭವಿಸಿದ ಯಾತನೆಗಳನ್ನು ವಿವರಿಸಿದರು. ನಿರಪರಾಧಿಯಾಗಿದ್ದ ತನ್ನ ಮೇಲೆ ಭಯೋತ್ಪಾದನೆ ಕೃತ್ಯದ ಸುಳ್ಳು ಕೇಸು ದಾಖಲಿಸಿ, ಪೊಲೀಸ್ ಇಲಾಖೆಯ ವಿವಿಧ ಘಟಕಗಳು ಮತ್ತು ನ್ಯಾಯಾಲಯ ನೀಡಿರುವ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ವಿವರಿಸಿದ ಅವರು ಕೆಲ ಸಂದರ್ಭ ಗದ್ಗದಿತರಾದರು.

ಆತ್ಮ ವಿಶ್ವಾಸ ಮತ್ತು ನ್ಯಾಯಾಂಗದ ಮೇಲಿನ ಭರವಸೆಯಿಂದ ಗೆಲುವು ಸಾಧಿಸಿದ್ದೇನೆ ಎಂದ ಅಮೀರ್, ಅನ್ಯಾಯದ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕಾದ ಅಗತ್ಯತೆ, ಅನಿವಾರ್ಯತೆ ಹಾಗೂ ಈ ನಿಟ್ಟಿನಲ್ಲಿ ಪ್ರಜ್ಞಾವಂತ ನಾಗರಿಕರ ಹೊಣೆಗಾರಿಕೆಗಳೇನು ಎಂಬುದನ್ನು ವಿವರಿಸಿದರು.

ಸಂವಾದ ಕಾರ್ಯಕ್ರಮದಲ್ಲಿ ಅಮೀರ್ ರ 14 ವರ್ಷಗಳ ಯಾತನಾಮಯ ಮೇಲೆ ಬೆಳಕು ಚೆಲ್ಲುವ "Framed as a Terror" ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು. ಈ ಸಾಕ್ಷ್ಯಚಿತ್ರವು ಅಂತಾರಾಷ್ಟ್ರೀಯ ಚಲನಚಿತ್ರ ಉತ್ಸವದ ಪ್ರದರ್ಶನಕ್ಕೆ ಆಯ್ಕೆಯಾಗಿದ್ದು, ಅಮೀರ್ ಬರೆದಿರುವ "Framed as a Terror" ಪುಸ್ತಕವೂ ಪ್ರಕಟಗೊಂಡಿದೆ.

"ಮುಸ್ಲಿಮರು ಭಯೋತ್ಪಾದಕರಲ್ಲ. ಶಾಂತಿ ಪ್ರಿಯರು. ಒಂದು ವೇಳೆ ಉಗ್ರವಾದದ ಸಣ್ಣ ಅಂಶವಾದರೂ ನನ್ನಲ್ಲಿದ್ದಿದ್ದರೆ ನಿರಪರಾಧಿಯಾದ ನಾನು 16 ವರ್ಷ ಜೈಲಿನಲ್ಲಿದ್ದು ಹೊರಬಂದ ಮೇಲೆ ಖಡ್ಗವನ್ನು ಎತ್ತಿ ಕೊಳ್ಳಬೇಕಾಗಿತ್ತು. ಆದರೆ ನಾನು ಲೇಖನಿಯನ್ನು ಹಿಡಿದೆ. ಪುಸ್ತಕ ಬರೆದೆ" ಎಂದು ಮುಂಬೈಯ ಅಬ್ದುಲ್ ವಾಹಿದ್ ಹೇಳಿದರು. ವಾಹಿದ್ ಕೂಡ ಅಮೀರ್ ರಂತೆಯೇ ಮಾಡದ ತಪ್ಪಿಗೆ ತನಿಖೆಯ ನೆಪದಲ್ಲಿ ಎಟಿಎಸ್ ನಿಂದ ಚಿತ್ರಹಿಂಸೆ ಅನುಭವಿಸಿ ಶಂಕಿತ ಭಯೋತ್ಪಾದಕನಾಗಿ 16 ವರ್ಷ ಜೈಲುವಾಸ ಅನುಭವಿಸಿದವರು. ತನಗಾದ‌ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ಬಿಚ್ಚಿಟ್ಟ ಅವರು ತಾನು ಮತ್ತು ತನ್ನ ಕುಟುಂಬ ಅನುಭವಿಸಿದ ಯಾತನೆಯನ್ನು ವಿವರಿಸಿ ಅತ್ತುಬಿಟ್ಟರು.

ಅಬ್ದುಲ್‌ ವಾಹಿದ್ ಉರ್ದುವಿನಲ್ಲಿ ಬರೆದಿರುವ ಸುಮಾರು 460 ಪುಟಗಳ "ಬೇ ಗುನಾ ಖೈದಿ" ಪುಸ್ತಕವನ್ನು ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು.
ಮುಂಬೈಯ ಖ್ಯಾತ ನ್ಯಾಯವಾದಿ ಡಾ. ಯುಗ್ ಮೋಹಿತ್ ಚೌದ್ರಿ ಸಂವಾದಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು‌. ನ್ಯಾಷನಲ್ ಲಾ ಸ್ಕೂಲ್ ಇಂಡಿಯಾ ಯುನಿವರ್ಸಿಟಿಯ ಪ್ರಾಧ್ಯಾಪಕ ಪ್ರೊ. ಕುನಾಲ್ ಅಂಬಾಸ್ತಾ ಗೋಷ್ಠಿಯನ್ನು ನಿರ್ವಹಿಸಿದರು.

ಸುಮಾರು 200ಕ್ಕೂ ಹೆಚ್ಚು ಕಾನೂನು ವಿದ್ಯಾರ್ಥಿಗಳಲ್ಲದೆ ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲರಾದ ಜಗದೀಶ್ ಬಿ. ಎನ್., ರಾಬಿನ್ ಕ್ಲಿಸ್ಟೋಫರ್ ಮತ್ತಿತರ ವಕೀಲರು ಹಾಗೂ ಮಾನವ ಹಕ್ಕುಗಳ ಹೋರಾಟಗಾರಾದ ನಗರಿ ಬಾಬಯ್ಯ, ಶಿವಸುಂದರ್, ನಗರಿಗೆರೆ ರಮೇಶ್, ಶಫೀಉಲ್ಲಾ, ಉಮರ್ ಯು.ಎಚ್. ಮತ್ತಿತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Writer - ಉಮರ್ ಯು.ಎಚ್.

contributor

Editor - ಉಮರ್ ಯು.ಎಚ್.

contributor

Similar News