ಮಾದಕ ವಸ್ತು ಮಾರಾಟ: ಬಂಧನ
Update: 2017-05-26 15:03 GMT
ಬೆಂಗಳೂರು, ಮೇ 26: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬೇಗೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.
ನಗರದ ನಾಗೇನಹಳ್ಳಿಯ ಮುನ್ನಾರಾಂ (30) ಬಂಧಿತ ಆರೋಪಿಯಾಗಿದ್ದು, ಈತ ರಾಜಸ್ತಾನದ ಜೋಧ್ಪುರ ನಿವಾಸಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಐದು ವರ್ಷಗಳಿಂದ ನಾಗೇನಹಳ್ಳಿಯಲ್ಲಿ ವಾಸಿಸುತ್ತ ತನ್ನ ಸಂಬಂಧಿಯ ಜೊತೆ ಬಡಗಿ ಕೆಲಸ ಮಾಡುತ್ತಿದ್ದ ಮುನ್ನಾರಂ, ಮರಗೆಲಸದಿಂದ ಬರುತ್ತಿದ್ದ ಸಂಪಾದನೆ ಸಾಕಾಗದೆ ಮಾದಕವಸ್ತು ಮಾರಾಟದ ದಂಧೆಯಲ್ಲಿ ತೊಡಗಿದ್ದಾನೆ ಎನ್ನಲಾಗಿದೆ.
ಶುಕ್ರವಾರ ಬೇಗೂರಿನ ಕಸವಿಲೇವಾರಿ ಮಾಡುವ ಜಾಗದಲ್ಲಿ ಅಫೀಮು ಮಾರಾಟ ಮಾಡುತ್ತಿದ್ದಾಗ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದು, ಈತನ ವಶದಲ್ಲಿದ್ದ 180 ಗ್ರಾಂ ಅಫೀಮು ವಶಕ್ಕೆ ಪಡೆದು, ಇಲ್ಲಿ ಬೇಗೂರು ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.