ರಮಝಾನ್ ಉಪವಾಸವು ಅಜ್ಞಾನದ ಅಂಧಕಾರದಿಂದ ಜ್ಞಾನದ ಬೆಳಕಿನೆಡೆಗೆ ಸಾಗುವ ಹಾದಿ

Update: 2017-07-01 16:44 GMT

ತಂತ್ರಜ್ಞಾನ ಮುಂದುವರಿದಿರುವ ಇಂದಿನ ಹೈ ಫೈ ದಿನಗಳಲ್ಲಿ ಯುವಜನತೆ ದೇಹದ ಗಾತ್ರ ಕಡಿಮೆ ಮಾಡಲು, ಕೊಬ್ಬಿನಂಶ ಕಡಿಮೆ ಮಾಡಿಕೊಳ್ಳಲು ಡಯಟೀಷಿಯನ್ ಬಳಿ ಹೋಗಿ ಹಣ ಕೊಟ್ಟು ವಿಧವಿಧದ ಆಹಾರೋಪಾಯ, ವ್ಯಾಯಾಮಗಳನ್ನು ಮಾಡುತ್ತಿದ್ದಾರೆ. ಆದರೆ ವಿವಿಧ ಧರ್ಮಗಳು ಉಪವಾಸದ ಕುರಿತಾದ ಆಚರಣೆಗಳ ಬಗ್ಗೆ ತಿಳಿ ಹೇಳಿದೆ ಎಂಬುದು ನಮಗೆ ತಿಳಿದಿರುವ ವಿಚಾರವಾಗಿದ್ದರೂ "ಹಿತ್ತಲ ಗಿಡ ಮದ್ದಲ್ಲ" ಎಂಬ ಭ್ರಮೆ ಯುವ ಪೀಳಿಗೆಯದು. 

ಜಗತ್ಪ್ರಸಿದ್ಧ ಶಸ್ತ್ರವೈದ್ಯ ಅಲೆಕ್ಲಿಸ್ ಕಾರೆಲ್ ತನ್ನ ಖ್ಯಾತಕೃತಿ 'Man the Unknown' (ಅವ್ಯಕ್ತ ಮಾನವ)ನಲ್ಲಿ ಒಂದು ಮಾತು ಹೇಳುತ್ತಾನೆ: “ಮನುಷ್ಯ ತಿಂಗಳಿಗೊಮ್ಮೆ, ಎರಡು ಬಾರಿ ಸಂಪೂರ್ಣ ನಿರಾಹಾರನಾಗಿರಲು ಕಲಿತರೆ ಅನಾರೋಗ್ಯದ ನಿಮಿತ್ತ ವೈದ್ಯರ ಬಳಿ ಹೋಗಬೇಕಾದ ಅಗತ್ಯವಿಲ್ಲ. ಉಪವಾಸವೇ ದೊಡ್ಡ ಚಿಕಿತ್ಸೆ. ಭಾರತೀಯ ಮೂಲದ ಆಯುರ್ವೇದವು “ಅಜೀರ್ಣಪ್ರಭಾವಾ ರೋಗಾಃ.” ಅಂದರೆ ಎಲ್ಲ ರೋಗಗಳಿಗೂ ಅಜೀರ್ಣವೇ ಕಾರಣ ಎನ್ನುತ್ತದೆ.

ಹೊಟ್ಟೆ ಹಾಳಾಗದಂತೆ ಕಾಪಾಡುವ ವಿಧಾನವೆಂದರೆ ಪೂರ್ಣ ವಿಶ್ರಾಂತಿ. ಬೆಳಗ್ಗಿನಿಂದ ರಾತ್ರಿಯ ತನಕವೂ ತಿನ್ನುತ್ತಲೇ ಇದ್ದರೆ, ತಿಂದದ್ದನ್ನು ಬೆಳಗಿನ ತನಕ ಜೀರ್ಣಿಸಿಕೊಳ್ಳಲೂ ಅವಕಾಶ ನೀಡದೆ ಇದ್ದರೆ ಪಚನೇಂದ್ರಿಯಕ್ಕೆ ವಿಶ್ರಾಂತಿಯೇ ಇಲ್ಲ. ಅದು ಸೋತು ಕೈಕಟ್ಟಿ ಕೂತಿತು ಎಂದರೆ ಅಜೀರ್ಣ. ಹಾಗಾಗಿ 15 ದಿನಗಳಿಗೊಮ್ಮೆ 24 ಗಂಟೆಗಳ ಕಾಲ ಪೂರ್ಣ ವಿಶ್ರಾಂತಿ ದೊರಕಿತೆಂದರೆ ಈ ಪಚನೇಂದ್ರಿಯ ಮತ್ತೆ ದಕ್ಷವಾಗಿ ಕೆಲಸ ಮಾಡಲು ಸಿದ್ಧವಾಗುತ್ತದೆ.

ಇದು ಅಲೆಕ್ಸಿಸ್ ಕಾರೆಲ್ ಹೇಳಿದ ಮಾತು. ನಮ್ಮ ಪ್ರಾಚೀನ ಶಾಸ್ತ್ರಕಾರರೂ ಇದೇ ಮಾತನ್ನು ಹೇಳಿದ್ದಾರೆ. ಅಲೆಕ್ಸಿಸ್ ಕಾರೆಲ್ ಇದನ್ನು ವೈಜ್ಞಾನಿಕವಾಗಿ ಬರೆದರೆ ಪ್ರಾಚೀನರು ಏಕೆ-ಏನು ಅನ್ನೋ ವಿವರ ನೀಡದೆ ವಿಧಿವಾಕ್ಯವಾಗಿ ಬರೆದರು. ಹೊಸ ಗಾಳಿ ಕಿವಿಯೊಳಗೆ ಹೊಕ್ಕ ಜನಕ್ಕೆ ಈ ಮಾತು ಪ್ರಿಯವಾಗಲಿಲ್ಲ. ಅದಕ್ಕೆಂದೆ ಕಾರೆಲ್ ಹೀಗೆ ಹೇಳುತ್ತಾನೆ: “ಜನರಿಗೆ ನಾಗರಿಕತೆಯ ಭ್ರಮೆ ಹತ್ತಿದೆ. ಹೀಗೆ ನಾಗರಿಕತೆಯ ಅಮಲು ಹತ್ತಿದ ಜನಕ್ಕೆ ಈ ಉಪವಾಸದ ಉಪದೇಶ ಹಿಡಿಸಲಿಕ್ಕಿಲ್ಲ. ನಾಗರಿಕತೆ ಜನಾಂಗವನ್ನು ಹಾಳುಗೆಡಹುತ್ತಿದೆ. ಅದರಿಂದ ಸಕಾರಣವಾಗಿ ಹೇಳಿದರೂ ಜನ ನಂಬುವುದು ಕಷ್ಟ.”

ಇನ್ನು  ರಮಝಾನ್ ಉಪವಾಸದ ಆಚರಣೆ ಕೇವಲ ಆಹಾರಗಳಿಂದ ದೂರವಿರುವುದಲ್ಲದೆ ತಮ್ಮ ಜೀವಮಾನದ ಅವಧಿಯಲ್ಲಿ ಪ್ರತಿ ಮಾನವನು ಎದುರಿಸಬೇಕಾದ ಪಿಡುಗುಗಳು ಮತ್ತು ಅನಿಷ್ಟಗಳಿಂದ ದೂರವಿರಬೇಕೆಂಬುವ ಮೂಲ ಉದ್ದೇಶವನ್ನು ಹೊಂದಿದೆ.

ರಮಝಾನ್ ಎನ್ನುವ ಪದದ ಅರ್ಥವೇ ತಿಳಿಸಿದಂತೆ ಈ ತಿಂಗಳ ಉಪವಾಸ ಮನುಷ್ಯನ ಆಹಾರಗಳ ಮೇಲೆ ನಿಗಾ ಇಡುವುದು, ಇಂದ್ರಿಯನಿಗ್ರಹದಿಂದ ನಕಾರಾತ್ಮಕ ಅಂಶಗಳನ್ನು ಸಂಪೂರ್ಣವಾಗಿ ಹತ್ತಿಕ್ಕಿಕೊಳ್ಳುವುದು. ಎಲ್ಲಾ ರೀತಿಗಳ ದುರಭ್ಯಾಸಗಳಿಂದ ದೂರವಿದ್ದು ಆ ಪರಿಸ್ಥಿತಿ ಬರದಂತೆ ತನ್ನನ್ನು ತಾನೇ ನಿಗ್ರಹ ಮಾಡಿಕೊಳ್ಳುವುದಾಗಿದೆ ಈ ಸಮಯದ ವೈಶಿಷ್ಟ್ಯ.

ಪ್ರಾಪಂಚಿಕ ವಿನೋದಗಳನ್ನು ತ್ಯಜಿಸಿ ದೇವರ ಕೃಪೆಯನ್ನು  ಪಡೆಯುವುದಕ್ಕೆ ಉಪವಾಸ ಆಚರಣೆ ಒಂದು ಉತ್ತಮ  ವಿಧಾನವಾಗಿದೆ. ಮನುಷ್ಯನು ಪ್ರಾಪಂಚಿಕ ವಿನೋದಗಳಿಂದ ದೂರವಿದ್ದು, ತನ್ನನ್ನು ತಾನೇ ಅರಿತುಕೊಳ್ಳುವುದಕ್ಕೆ ರಮಝಾನ್ ಉತ್ತಮ ಸಮಯವಾಗಿದೆ. ರಮಝಾನ್ ಉಪವಾಸ ದೇವರಿಗೋಸ್ಕರ ಮಾತ್ರವಲ್ಲ, ನಮ್ಮ ಒಳಿತಿಗೂ ಹೌದು. ಇದು ವಾಸ್ತವವಾಗಿ ಪ್ರತಿ ಮನುಷ್ಯ ಅಜ್ಞಾನದ ಅಂಧಕಾರದಿಂದ ಜ್ಞಾನದ ಬೆಳಕಿನೆಡೆಗೆ ತೆರಳಲು ಅನುಸರಿಸುವ ಜೀವನದ ದಾರಿಯಾಗಿದೆ.

-ಭಾಗ್ಯಶ್ರೀ ಐತಾಳ್, ಉಪನ್ಯಾಸಕಿ, ಉಡುಪಿ

Writer - ಭಾಗ್ಯಶ್ರೀ ಐತಾಳ್

contributor

Editor - ಭಾಗ್ಯಶ್ರೀ ಐತಾಳ್

contributor

Similar News