ಐಟಿಯಿಂದ 4.8 ಕೋಟಿ ರೂ. ವಶ; ಮರಳಿಸಲು ಮೌದ್ಗಿಲ್‌ಗೆ ಕರೆ ಮಾಡಿದ್ದ ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್

Update: 2024-04-27 05:07 GMT

Photo: facebook

ಬೆಂಗಳೂರು: ಐಟಿ ಅಧಿಕಾರಿಗಳು ವಶಪಡಿಸಿ ಕೊಂಡಿರುವ 4.8 ಕೋಟಿ ಹಣವನ್ನು ಮರಳಿಸಬೇಕು ಎಂದು ಚಿಕ್ಕಬಳ್ಳಾಪುರ ಸಂಸದೀಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರು ಎಂಸಿಸಿ ನೋಡಲ್ ಅಧಿಕಾರಿ ಮುನೀಶ್ ಮೌದ್ಗಿಲ್ ಅವರಿಗೆ ವಾಟ್ಸ್‌ಆ್ಯಪ್ ಕರೆ ಮಾಡಿ ಕೋರಿದ್ದರು.

ಮಾದಾವರ ಗೋವಿಂದಪ್ಪ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದ 4.8 ಕೋಟಿ ರೂ.ಗಳನ್ನು ಮರಳಿಸಬೇಕು ಎಂದು ಡಾ.ಕೆ.ಸುಧಾಕರ್ ಅವರು ವಾಟ್ಸ್‌ಆ್ಯಪ್ ಕರೆ ಮತ್ತು ಸಂದೇಶವನ್ನೂ ಕಳಿಸಿ ಕೋರಿದ್ದರು ಎಂದು ತಿಳಿದು ಬಂದಿದೆ. ಆದರೆ ಇದಕ್ಕೆ ಮುನೀಶ್ ಮೌದ್ಗಿಲ್ ಅವರು ಯಾವುದೇ ಸೊಪ್ಪು ಹಾಕಿರಲಿಲ್ಲ.

ಮಾದಾವಾರ ಗೋವಿಂದಪ್ಪ ಎಂಬವರ ನಿವಾಸದಲ್ಲಿ 10 ಕೋಟಿ ರೂ. ಸಂಗ್ರಹಿಸಿಡಲಾಗಿದೆ ಎಂಬ ಮಾಹಿತಿ ಮುನೀಶ್ ಮೌದ್ಗಿಲ್ ಅವರಿಗೆ ಮಾಹಿತಿ ಬಂದಿತ್ತು. ಇದನ್ನು ಖಚಿತಪಡಿಸಿಕೊಳ್ಳಲು ಮತ್ತೊಬ್ಬ ಅಧಿಕಾರಿಗೆ ಮುನೀಶ್ ಮೌದ್ಗಿಲ್ ಅವರು ಸೂಚಿಸಿದ್ದರು. ಜಿಪಿಎಸ್ ಲೊಕೇಷನ್ ಸೇರಿದಂತೆ ಉಳಿದ ಮಾಹಿತಿ ಖಚಿತಪಡಿಸಿಕೊಂಡ ನಂತರ ಐಆರ್‌ಎಸ್ ಮತ್ತು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು ಎಂದು ಗೊತ್ತಾಗಿದೆ.

ಈ ವೇಳೆ ಮುನೀಶ್ ಮೌದ್ಗಿಲ್ ಅವರಿಗೆ ಸ್ವತಃ ಡಾ.ಕೆ.ಸುಧಾಕರ್ ಅವರೇ ವಾಟ್ಸ್‌ಆ್ಯಪ್ ಕರೆ ಮಾಡಿದ್ದಾರೆ. ಈ ಅಂಶವನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

‘‘25.4.2024ರಂದು ಮಧ್ಯಾಹ್ನ 2:04 ಗಂಟೆಗೆ ಜಿಲ್ಲಾ ಎಂಸಿಸಿ ನೋಡಲ್ ಅಧಿಕಾರಿ ಮುನೀಶ್ ಮೌದ್ಗಿಲ್, ಐಎಎಸ್ ಅವರ 944819415 ಸಂಖ್ಯೆಗೆ 9845204040 ಸಂಖ್ಯೆಯಿಂದ ವಾಟ್ಸ್ ಆ್ಯಪ್ ಕರೆಬಂದಿದೆ. (WhatsAppನಲ್ಲಿ ಶ್ರೀ ಸುಧಾಕರ್ ಎಂದು ಗುರುತಿಸಿದ್ದಾರೆ) ಇದಲ್ಲದೇ ಈ ಸಂಖ್ಯೆಗೆ ಮೂರು ವಾಟ್ಸ್‌ಆ್ಯಪ್ ಸಂದೇಶಗಳನ್ನೂ ಮುನೀಶ್ ಮೌದ್ಗಿಲ್ ಅವರು ಪಡೆದಿದ್ದರು’’ ಎಂದು ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.

ಅಲ್ಲದೆ ‘Ps help will be great full to you’ ಎಂದು ಡಾ.ಕೆ.ಸುಧಾಕರ್ ಅವರು ವಾಟ್ಸ್‌ಆ್ಯಪ್‌ನಲ್ಲಿ ಮುನೀಶ್ ಮೌದ್ಗಿಲ್ ಅವರನ್ನು ಕೋರಿದ್ದರು. ಅದೇ ರೀತಿ ಮತ್ತೊಬ್ಬ ಅಧಿಕಾರಿ ಆನಂದ್ ರಟಕಲ್ ಅವರಿಗೂ ವಾಟ್ಸ್‌ಆ್ಯಪ್ ಸಂದೇಶವನ್ನು ಕಳಿಸಿದ್ದರು ಎಂಬುದು ಎಫ್‌ಐಆರ್‌ನಿಂದ ತಿಳಿದು ಬಂದಿದೆ.

ಚಿಕ್ಕಬಳ್ಳಾಪುರ ಸಂಸದೀಯ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಸುಧಾಕರ್, ನೋಡಲ್ ಅಧಿಕಾರಿ ಮುನೀಶ್ ಮೌದ್ಗಿಲ್ ಅವರಿಗೆ ವಾಟ್ಸ್‌ಆ್ಯಪ್ ಮೆಸೇಜ್‌ನ ಸ್ಕ್ರೀನ್ ಶಾಟ್ ಮತ್ತು ವಾಟ್ಸ್‌ಆ್ಯಪ್‌ನಲ್ಲಿ ಬಂದ ಫೋನ್ ಕರೆಯನ್ನೂ ದೂರಿನೊಂದಿಗೆ ಲಗತ್ತಿಸಿರುವುದು ಗೊತ್ತಾಗಿದೆ.

ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವ ಮೊಬೈಲ್ ಸಂಖ್ಯೆ 9845204040 ಯಾರಿಗೆ ಸೇರಿದೆ ಎಂದು the-file.in ತನಿಖಾ ತಂಡವು ಟ್ರೂ ಕಾಲರ್ ಮೂಲಕ ಪತ್ತೆ ಹಚ್ಚಿತ್ತು. ಇದರ ಪ್ರಕಾರ ಈ ಸಂಖ್ಯೆಯು ಡಾ.ಕೆ.ಸುಧಾಕರ್ ಅವರ ಹೆಸರಿನಲ್ಲಿರುವುದು ತಿಳಿದು ಬಂದಿದೆ.

ಸುಧಾಕರ್ ಅವರ ಆಪ್ತರು ಎನ್ನಲಾದ ಮಾದಾವರ ಗೋವಿಂದಪ್ಪ ನಿವಾಸದ ಮೇಲೆ ಐಟಿ ದಾಳಿ ನಡೆದಿತ್ತು. ಈ ವೇಳೆ 4.8 ಕೋಟಿ ರೂ. ಮೌಲ್ಯದ ನಗದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಡಾ.ಕೆ.ಸುಧಾಕರ್ ವಿರುದ್ಧ ಆರ್‌ಪಿ ಕಾಯ್ದೆ 1951ರ ಅಡಿಯಲ್ಲಿ ಅನುಚಿತ ಪ್ರಭಾವ, ಲಂಚ ಮತ್ತು ಭ್ರಷ್ಟಾಚಾರದ ಪ್ರಯತ್ನಕ್ಕಾಗಿ ಕಲಂ 171 ಬಿ, 171ಸಿ, 171 ಇ, 171 ಎಫ್ ಭಾರತೀಯ ದಂಡ ಸಂಹಿತೆ ಹಾಗೂ ಕಲಂ 123 ಆರ್‌ಪಿ ಕಾಯ್ದೆ 1951ರ ರೀತಿ ಪ್ರಕರಣವನ್ನು ದಾಖಲಿಸಿಕೊಂಡಿರುವುದು ಎಫ್‌ಐಆರ್‌ನಿಂದ ತಿಳಿದು ಬಂದಿದೆ.

ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷರೂ ಆಗಿರುವ ಗೋವಿಂದಪ್ಪನವರ ನೆಲಮಂಗಲದ ಮನೆಯಲ್ಲಿ ಹಣ ಇದೆ ಎಂದು ಖಚಿತಪಡಿಸಿಕೊಂಡ ನಂತರ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. 10 ಮಂದಿ ಐಟಿ ಅಧಿಕಾರಿಗಳ ತಂಡ ಮನೆಯನ್ನು ಪರಿಶೀಲಿಸಿದೆ ಎಂದು ಗೊತ್ತಾಗಿದೆ.

ದಾಳಿ ವೇಳೆ ಕೋಟ್ಯಂತರ ರೂ. ನಗದು ಹಾಗೂ ಚಿನ್ನಾಭರಣ ಪತ್ತೆಯಾಗಿದೆ. ನೋಟು ಎಣಿಕೆ ವೇಳೆ ಮನೆಯಲ್ಲಿ ದಾಖಲೆ ಇಲ್ಲದೆ ಬರೋಬ್ಬರಿ 4 ಕೋಟಿ 80 ಲಕ್ಷ ರೂ.ಯನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿರುವುದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - jafar sadik

contributor

Byline - ಜಿ. ಮಹಾಂತೇಶ್

contributor

Similar News