×
Ad

ವೀರಶೈವ -ಲಿಂಗಾಯಿತ ಸಮುದಾಯಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ: ಕೇಂದ್ರಕ್ಕೆ ಶಿಫಾರಸ್ಸು

Update: 2017-06-14 21:12 IST

ಬೆಂಗಳೂರು, ಜೂ.14: ವೀರಶೈವ-ಲಿಂಗಾಯಿತ ಸಮುದಾಯಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ಕಲ್ಪಿಸಲು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಬುಧವಾರ ನಗರ ಅರಮನೆ ಮೈದಾನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಅವರು, ವೀರಶೈವ-ಲಿಂಗಾಯಿತ ಸಮುದಾಯವನ್ನು ಸ್ವತಂತ್ರ ಧರ್ಮವನ್ನಾಗಿ ಘೋಷಿಸುವ ಅಧಿಕಾರ ನನ್ನ ಕೈಯಲ್ಲಿಲ್ಲ. ಈ ಕುರಿತು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದರು.

ವೀರಶೈವ-ಲಿಂಗಾಯಿತ ಈ ಎರಡರಲ್ಲಿ ಯಾವುದಕ್ಕೆ ಧರ್ಮದ ಹೆಸರು ಸೂಚಿಸಬೇಕು ಎಂದು ಸಮುದಾಯದ ಮುಖಂಡರೆ ನಿರ್ಧರಿಸಬೇಕು. ಈ ಕುರಿತು ನಿಮ್ಮಲ್ಲೇ ಜಿಜ್ಞಾಸೆ ಮೂಡಬಾರದು. ಈ ಕುರಿತು ಒಮ್ಮತದ ನಿರ್ಧಾರ ಕೈಗೊಳ್ಳಿ ಎಂದು ಸೂಚಿಸಿದರು.

ಕೆಲ ರಾಜಕೀಯ ವಿರೋಧಿಗಳು ಸಿದ್ದರಾಮಯ್ಯ ಆ ಜಾತಿ ವಿರೋಧಿ ಈ ಜಾತಿ ವಿರೋಧಿ ಎಂದು ವರ್ಣಿಸುತ್ತಿದ್ದಾರೆ. ನಾನು ಯಾವುದೇ ಜಾತಿಯ ವಿರೋಧಿಯಲ್ಲ. ನಾವು ಯಾರೂ ಇಂತಹದ್ದೇ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಹುಟ್ಟುವುದಿಲ್ಲ. ನನ್ನ ಅಧಿಕಾರದ ಅವಧಿಯಲ್ಲಿ ಎಲ್ಲ ಸಮುದಾಯದ ಬಡವರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದು ತಿಳಿಸಿದರು.

ಮನುಕುಲ ಉದ್ಧಾರಕ್ಕಾಗಿ ನಮ್ಮಲ್ಲಿರುವ ಶ್ರೇಣೀಕೃತ ವ್ಯವಸ್ಥೆ ಮೊದಲು ನಾಶವಾಗಬೇಕು. ಅಂಧಶ್ರದ್ಧೆ, ಮೂಢನಂಬಿಕೆ ತೊಲಗಬೇಕು. ಬಸವಣ್ಣನವರು 850 ವರ್ಷಗಳ ಹಿಂದೆಯೇ ಸಮಾನತೆಯ ಬೀಜವನ್ನು ಸಮಾಜದಲ್ಲಿ ಬಿತ್ತಿದ್ದಾರೆ. ಬಸವಣ್ಣನವರ ಆಶಯದಂತೆ ಸಮ ಸಮಾಜ ನಿರ್ಮಾಣ ಮಾಡಲು ಎಲ್ಲರೂ ಕಾರ್ಯಗತಗೊಳ್ಳಬೇಕು ಎಂದರು.

ರಾಜಕೀಯ ಲಾಭಕ್ಕಾಗಿ ಸರಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಕೆ ಮತ್ತು ಮಹಿಳಾ ವಿವಿಗೆ ಅಕ್ಕ ಮಹಾದೇವಿಯವರ ಹೆಸರು ನಾಮಕರಣ ಮಾಡಿದ್ದಾರೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಇದರಿಂದ ರಾಜಕೀಯ ಲಾಭವಾಗುತ್ತಿದ್ದರೆ ಹಿಂದೆ ಯಾರೂ ಬೇಕಾದರೂ ಮಾಡಬಹುದಿತ್ತು. ನಾನು ಬಸವಣ್ಣನವರ ಅನುಯಾಯಿ. ಬಸವಣ್ಣನ ಬಗ್ಗೆ ಗೌರವ, ಶ್ರದ್ಧೆ ಇರುವುದರಿಂದ ನಾನು ಕಾರ್ಯ ಮಾಡಿದ್ದೇನೆ ವಿನಃ ತೋರ್ಪಡೆಗಾಗಿ ಅಲ್ಲ ಎಂದು ಸ್ಪಷ್ಟಪಡಿಸಿದರು.

ವಿಧಾನ ಪರಿಷತ್ತಿನ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಒಳಪಂಗಡಗಳ ಹಾವಳಿಯಿಂದ ವೀರಶೈವ ಲಿಂಗಾಯಿತ ಸಮುದಾಯಕ್ಕೆ ರಾಜಕೀಯದಲ್ಲಿ ಹಿನ್ನಡೆಯಾಗುತ್ತಿದೆ. ವೇದಿಕೆಯ ಭಾಷಣಗಳಲ್ಲಿ ನಾವು ಎಲ್ಲ ಒಂದೇ ಎಂದು ಹೇಳುವ ಹಾಗೇ ಮನಸ್ಸಿನಲ್ಲಿಯೂ ಇರಬೇಕು. ಸಮುದಾಯ ಒಂದೇ ಎಂಬ ಭಾವನೆ ಎಂದು ಮೂಡಿಸುವ ಕೆಲಸ ಲಿಂಗಾಯಿತ ನಾಯಕರು ಮತ್ತು ಸ್ವಾಮೀಜಿಗಳಿಂದಾಗಬೇಕು. ಅದನ್ನು ಬಿಟ್ಟು ಒಳಪಂಗಡಗಳ ಆಧಾರದ ಮೇಲೆ ವ್ಯಕ್ತಿಗಳಿಗೆ ಮಣೆ ಹಾಕುವುದು ಸರಿಯಲ್ಲ ಎಂದು ಸ್ವಾಮೀಜಿಗಳ ವಿರುದ್ಧ ಖೇದ ವ್ಯಕ್ತಪಡಿಸಿದರು.ಈ ಹೇಳಿಕೆ ಕುರಿತು ಕೆಲ ಸ್ವಾಮೀಜಿಗಳು ಸಿಟ್ಟುಗೊಂಡರು ನನಗೆ ಬೇಸರವಿಲ್ಲ. ಸಮಾಜವನ್ನು ಛಿದ್ರಗೊಳಿಸದೇ ಒಂದುಗೂಡಿಸವ ಕೆಲಸ ಮಾಡಲಿ ಎಂದು ವಿಧಾನ ಪರಿಷತ್ತಿನ ಸದಸ್ಯ ಬಸವರಾಜ ಹೊರಟ್ಟಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಮಾಜಿ ಸಛಿವ ಡಾ.ಭೀಮಣ್ಣ ಖಂಡ್ರೆ, ಮಾಜಿ ಸಭಾಪತಿ ಎನ್.ತಿಪ್ಪಣ್ಣ, ಸಚಿವರಾದ ಈಶ್ವರ್ ಖಂಡ್ರೆ, ಎಂಬಿ.ಪಾಟೀಲ, ಸುತ್ತೂರು ಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News