ಬಿಜೆಪಿ ಸರಕಾರ ಆಶ್ವಾಸನೆ ಕೊಟ್ಟಿತ್ತು, ಹಣ ಮೀಸಲಿಟ್ಟಿರಲಿಲ್ಲ: ರಾಯರೆಡ್ಡಿ
ಬೆಂಗಳೂರು, ಜೂ.16: ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಖ್ಯಾಡ ಗ್ರಾಮದಲ್ಲಿ ಲಲಿತಕಲಾ ವಿಶ್ವವಿದ್ಯಾಲಯ ಸ್ಥಾಪಿಸುವುದಾಗಿ ಆಶ್ವಾಸನೆ ನೀಡಿದ್ದ ಕಳೆದ ಬಿಜೆಪಿ ಸರಕಾರ ಬಜೆಟ್ನಲ್ಲಿ ಹಣ ಮೀಸಲಿಡಲಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ಶುಕ್ರವಾರ ವಿಧಾನ ಪರಿಷತ್ನ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ನಿರಾಣಿ ಹನಮಂತ್ ರುದ್ರಪ್ಪ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಕಳೆದ ಬಿಜೆಪಿ ಸರಕಾರ ಲಲಿತಕಲೆಯನ್ನು ಉಳಿಸಿ ಬೆಳೆಸುವುದಕ್ಕಾಗಿ ಖ್ಯಾಡ ಗ್ರಾಮದಲ್ಲಿ ಲಲಿತಕಲಾ ವಿವಿಯನ್ನು ಸ್ಥಾಪಿಸುವುದಾಗಿ ಆಶ್ವಾಸನೆ ನೀಡಿತ್ತು. ಆದರೆ, ಬಜೆಟ್ನಲ್ಲಿ ಹಣವನ್ನು ಮೀಸಲಿಡದೆ ಆಶ್ವಾಸನೆಯನ್ನು ಮರೆತಿದೆ ಎಂದು ಹೇಳಿದರು.
ಪ್ರಸ್ತುತ ವಿಶ್ವ ವಿದ್ಯಾಲಯದ ಪ್ರಾರಂಭಿಕ ಕಾರ್ಯಗಳನ್ನು ಬೆಂಗಳೂರಿನ ಕರ್ನಾಟಕ ರಾಜ್ಯ ಕೊಳಚೆ ನಿರ್ಮೂಲನಾ ಮಂಡಳಿಯ ಕಟ್ಟಡದಲ್ಲಿನ ತಾತ್ಕಾಲಿಕ ಕಚೇರಿಯಲ್ಲಿ ನಿರ್ವಹಿಸಲಾಗುತ್ತಿದೆ. ಈಗ ಅಗತ್ಯ ಜಮೀನು ಲಭ್ಯವಿರುವುದರಿಂದ, ಜಮೀನನ್ನು ಉನ್ನತ ಶಿಕ್ಷಣ ಇಲಾಖೆಯ ವಶಕ್ಕೆ ಪಡೆದ ನಂತರ ಖ್ಯಾಡ ಗ್ರಾಮದಲ್ಲಿ ಲಲಿತಕಲಾ ವಿಶ್ವವಿದ್ಯಾಲಯವನ್ನು ಪೂರ್ಣ ಪ್ರಮಾಣದಲ್ಲಿ ಸ್ಥಾಪಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.