×
Ad

ತುಳುನಾಡಿನ ಸ್ಥಳ ನಾಮಾಧ್ಯಯನ: ಡಾ.ರಘಪತಿ ಶೆಮ್ತೂರು

Update: 2017-06-18 16:28 IST

ನಿಷ್ಠ ಸಂಶೋಧಕ ಮತ್ತು ಶ್ರೇಷ್ಠ ವಿಮರ್ಶಕರಾದ ಡಾ. ರಘಪತಿ ಶೆಮ್ತೂರು (ಆರ್ಕೆ ಮಣಿಪಾಲ) ಅವರ ಸುಮಾರು ಮೂವತ್ತೈದು ವರ್ಷಗಳ ಹಿಂದಿನ (1980) ಪಿ.ಎಚ್.ಡಿ. ಮಹಾ ಪ್ರಬಂಧ ತುಳು ನಾಡಿನ ನಾಮಾಧ್ಯಯನ ಗ್ರಾಂಥಿಕ ರೂಪದಲ್ಲಿ ಪ್ರಕಟಗೊಂಡಿದೆ. ಕೆಲವರ ನಾಮ್ ಕೆ ವಾಸ್ತೆ ಪಿ.ಎಚ್. ಡಿ. ಪ್ರಬಂಧದಂತಾಗದೆ, ಸಂಶೋಧನೆಯನ್ನು ಗಂಭೀರವಾಗಿ ಪರಿಗಣಿಸಿ ಅದಕ್ಕಾಗಿ ಸಾಕಷ್ಟು ಕ್ಷೇತ್ರ ಕಾರ್ಯ ಹಾಗೂ ಅಳವಾಗಿ ಅಧ್ಯಯನ ಮಾಡಿದ ಒಬ್ಬ ವಿದ್ವಾಂಸನ ಬದ್ಧತೆ ಪುಸ್ತಕದ ಪ್ರತೀ ಪುಟಪುಟದಲ್ಲಿ ಎದ್ದು ಕಾಣುತ್ತದೆ. ಇವರ ಪ್ರತಿಭೆ ಪಾಂಡಿತ್ಯ ಕಲ್ಪನೆ ಊಹನೆ, ವಿಮರ್ಶೆ ಇವೆಲ್ಲವೂ ಸ್ಥಳನಾಮ ಅಧ್ಯಯನದಲ್ಲಿ ಸಂಶೋಧಕನನ್ನು ವಿಜ್ಞಾನಿಯ ಪೀಠಕ್ಕೆ ಏರಿಸಿದೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅಂದರೆ ತುಳುನಾಡಿನ ನಾಮಾಧ್ಯಯ ನವನ್ನು ಪ್ರಬುದ್ಧವಾಗಿ, ಸಮಗ್ರವಾಗಿ, ಆಳವಾಗಿ ಹಾಗೂ ಕರಾರುವಾಕ್ಕಾಗಿ ಮಾಡಲು ಪ್ರಯತ್ನಿಸಿದವರು ಕರ್ನಾಟಕದಲ್ಲಿ ಇನ್ನೊಬ್ಬರಿಲ್ಲ ಎಂದು ನನ್ನ ಭಾವನೆ. ಈ ಗುರುತರ ಕಾರ್ಯಕ್ಕಾಗಿ ಅವರು ತಮ್ಮನ್ನು ಹೀಗೆ ಸಮರ್ಪಿಸಿ ಕೊಂಡಿದ್ದರು ಎನ್ನುವುದಕ್ಕೆ ಪ್ರತೀ ಅಧ್ಯಾಯದ ಕೊನೆಗೆ ಅವರು ನೀಡಿರುವ ಪರಾಮರ್ಶನ ಪ್ರಸ್ತಕ, ಶಾಸನ, ಲೇಖನ ಇತ್ಯಾದಿ ಆಧಾರಗಳ ಟಿಪ್ಪಣಿಗಳೇ ಸಾಕ್ಷಿ.

ಸ್ಥಳ ನಾಮ ಅಧ್ಯಯನ ಎಂಬ ಶಾಸ್ತ್ರ, ಆಕ್ಷೇತ್ರಕ್ಕೆ ಸಂಬಂಧಿಸಿದ ಭೂ ವಿವರ, ಶಾಸನ, ಭಾಷಾಶಾಸ್ತ್ರ, ಸಮಾಜ ಶಾಸ್ತ್ರ ಸಾಂಸ್ಕೃತಿಕ ಶಾಸ್ತ್ರ, ಜಾನಪದ ಇವುಗಳಿಗೆ ಸಂಬಂಧಿಸಿದೆ. ಹೆಸರಿನ ನಂಟು ಹಾಗೂ ಗಂಟುಗಳ ಅಧ್ಯಯನ ಪ್ರಕೃತಿಯ ಅವಲೋಕನ ಅವುಗಳ ವಿಶ್ಲೇಷಣೆ ಇವೆಲ್ಲ ಉಳಿದ ಶಾಸ್ತ್ರಗಳನ್ನು ಜೊತೆಯಲ್ಲಿರಿಸಿಕೊಂಡೇ ಸಾಗಬೇಕಾಗುತ್ತದೆ. ಅವೆಲ್ಲವುಗಳ ತಲಸ್ಪರ್ಶಿ ಜ್ಞಾನವೂ ಬೇಕಾಗುತ್ತದೆ. ನಾಮ ನಿಪ್ಪನ್ನ ಪ್ರಕ್ರಿಯೆಯಲ್ಲಿ ಈ ಆರು ಅಂಶಗಳನ್ನು ಎಲ್ಲೂ ಕಡೆಗಣಿಸುವಂತಿಲ್ಲ. ಕುಂಟ ಕುರುಡರ ಕತೆಯಂತೆ ಪರಸ್ಪರ ನೆರವಿನಿಂದ ಸ್ಥಳ ನಾಮ ನಿರ್ಣಯಿಸಬೇಕಾಗುತ್ತದೆ. ಅದ್ದರಿಂದ ಸಂಶೋಧನೆ ಅಷ್ಟೇ ಕುಶಾಗ್ರಮತಿಯಾಗಿರಬೇಕು. ಸ್ಥಳನಾಮಗಳ ಸಂಶೋಧನೆಯಿಂದಾಗುವ ಇನ್ನೊಂದು ಲಾಭವೆಂದರೆ ಯಾವ ನಿಘಂಟುಗಳೂ ಹೇಳದ ಹಲವಾರು ದೇಶಿ ಶಬ್ದಗಳು ಅರ್ಥ ವ್ಯಾಪ್ತಿಯೊಂದಿಗೆ ಮಿಂಚುತ್ತವೆ. ದ್ರಾವಿಡ ಭಾಷಾ ವಿಜ್ಞಾನಕ್ಕೆ ಇದೊಂದು ಅಪೂರ್ಣ ಕೊಡುಗೆ. ಸಂಶೋಧಕರು ತುಳು ಸ್ಥಳನಾಮ ಗಳನ್ನು ದ್ರಾವಿಡ ಮೂಲದ ಇತರ ಭಾಷೆಗಳೊಂದಿಗೆ, ಅನ್ಯ ಭಾಷಾ ಮೂಲ ಶಬ್ದಗಳೊಂದಿಗೆ ತುಲನೆ ಮಾಡಿ, ವಿಶ್ಲೇಷಿಸಿ ನಿರ್ದಿಷ್ಟ ಮತ್ತು ನಿರ್ದಿಷ್ಟ ಸ್ಥಳನಾಮಗಳನ್ನು ಯಾಕೆ? ಹೇಗೆ? ಎಂದು ವಿವರಿಸುತ್ತಾ ನಿರ್ವಚಿಸಲು ಪ್ರಯತ್ನಿಸಿದ್ದಾರೆ. ಆದುದರಿಂದ ಈ ಗ್ರಂಥಕ್ಕೆ ಸಾರ್ವಕಾಲಿಕ ವೌಲ್ಯವಿದೆ.

ಪ್ರೌಢ ಚಿಂತನೆಗೆ ಅನುಗುಣವಾದ ಸತ್ವಪೂರ್ಣಶೈಲಿ, ಪ್ರಾಮಾಣಿಕ ತರ್ಕ ಮತ್ತು ಸಮರ್ಥನೆ, ನಾಮ ಪ್ರಕ್ರಿಯೆಯನ್ನು ಸ್ಪಷ್ಟೀಕರಿಸಲು ಪಡುವ ಕಾಳಜಿ ಇವೆಲ್ಲಾ ಪುಸ್ತಕದ ಘನತೆಯನ್ನು ಹೆಚ್ಚಿಸಿವೆ.

ತುಳುನಾಡಿನ ಉದ್ದಗಲ ಸಂಚರಿಸಿ ಕ್ಷೇತ್ರ ಕಾರ್ಯಮಾಡಿ ಅಲ್ಲಿನ ಪ್ರಕೃತಿಯ ಭೂವಿವರಗಳನ್ನು ಸಂಶೋಧನಾ ದೃಷ್ಟಿಯಿಂದ ಪರೀಕ್ಷಿಸಿ, ಜಾನಪದೀಯ ಅಂಶಗಳನ್ನು ಅನುಲಕ್ಷಿಸಿಕೊಂಡು ಇಲ್ಲಿನ ಸ್ಥಳನಾಮಗಳ ಬೇರನ್ನು ಅಗೆದು ತೆಗೆದಿದ್ದಾರೆ. ಇವುಗಳೊಂದಿಗೆ ತಳಕು ಹಾಕಿಕೊಂಡು ಗತಕಾಲೀನ ಸ್ವಾರಸ್ಯ ಸಂಗತಿಗಳು ಓದುಗರನ್ನು ಚಿಂತನೆಗೆ ಹಚ್ಚುತ್ತದೆ. ಕೆಲವೊಮ್ಮೆ ವಿಸ್ಮಯ ಪಡಿಸುತ್ತವೆ. ಸ್ಥಳನಾಮ ಅಧ್ಯಯನದಲ್ಲಿ ಆಸಕ್ತರಾದವರಿಗೆ ಇದೊಂದು ಪೂರ್ಣ ಪ್ರಮಾಣದ ಪ್ರಮಾಣಿತ ಗ್ರಂಥ. ಇಂಥ ಅಧ್ಯಯನಕಾರರು ಇನ್ನಷ್ಟು ವೃದ್ಧಿಸಲಿ ಎಂಬುದಕ್ಕಾಗಿ ಡಾ. ಕೆಮ್ತೂರರು ತಮ್ಮ ಅನುಭವಗಳನ್ನು ಕ್ರೋಡೀಕರಿಸಿ ಸಾಕಷ್ಟು ಮಾಹಿತಿಗಳನ್ನು ದಾಖಲಿಸಿದ್ದಾರೆ. ಆದರೆ ಇಂಥ ತಪಸ್ಸಿಗೆ ಸಿದ್ಧರಾಗುವವರಿಷ್ಟು ಜನ ಎಂದು ಕಾದು ನೋಡಬೇಕಷ್ಟೇ.

ಕೆಲವು ಸಂದೇಹಗಳನ್ನು ಸ್ಥಳನಾಮ ವಿಜ್ಞಾನಿಗಳ ತೀರ್ಮಾನಕ್ಕೆ ಬಿಟ್ಟಿದ್ದಾರೆ. ಪುಸ್ತಕದ ಒಳಪುಟದಲ್ಲಿ ಅವಿಭಜಿತ ದ.ಕ.ದ ನಕ್ಷೆಯಲ್ಲಿ ಸುಳ್ಯ ಮತ್ತು ಬಂಟ್ವಾಳ ತಾಲೂಕುಗಳು ಬಿಟ್ಟು ಹೋಗಿರುವುದು ಮುದ್ರಣ ಸಂದರ್ಭದ ಆಕಸ್ಮಿಕವಿರಬಹುದು. ಉಳಿದಂತೆ ಮುದ್ರಣ ಕಾಗದ ಹೊದಿಕೆ-ಈ ಎಲ್ಲವುಗಳಿಂದ ಪುಸ್ತಕ ಸಂಶೋಧಿತ ಡಾ.ಕೆಮ್ತೂರರು, ತುಳುನಾಡವರು ಹೆಮ್ಮೆ ಪಡುವಂಥ ಅನರ್ಘ್ಯ ಕಾಣಿಕೆಯನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ.

ಶಾಸ್ತ್ರೀಯ ತಳಹದಿಯಲ್ಲಿ ಶಿಸ್ತುಬದ್ಧವಾಗಿ ಕಟ್ಟಿ ನಿಲ್ಲಿಸಿದ ಈ ಸ್ಥಳ ನಾಮಾಧ್ಯಯನ ಗ್ರಂಥ ಒಂದು ಸಂಸ್ಥೆ ಮಾಡುಬಹುದಾದುದ್ದನ್ನು ಮಾಡಿದೆ. ಹಾಗೆಯೇ ಈ ಕೃತಿ ರತ್ನವನ್ನು ಅಚ್ಚುಕಟ್ಟಾಗಿ ಮುದ್ರಿಸಿ ಪ್ರಕಟಿಸಿ ಆಸಕ್ತ ವಾಚಕರಿಗೆ ಒದಗಿಸಿದ ಪ್ರೊ.ಟಿ. ಮುರುಗೇಶಿ, ಚರಿತ್ರೆ ಮತ್ತು ಪುರಾತತ್ವ ಶಾಸ್ತ್ರ ವಿಭಾಗ, ಎಂ.ಎಸ್.ಆರ್.ಎಸ್ ಕಾಲೇಜು ಶಿರ್ವ ಇವರು ಅಭಿನಂದನಾರ್ಹರು.

ಈಗಾಗಲೇ ಬೆಳ್ಳಿ ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ಆ ನೆನಪಿಗಾಗಿ ಸ್ಥಳನಾಮ ಸಂಶೋಧನೆಗೆಂದೇ ಯೋಜನೆಯೊಂದನ್ನು ಕೈಗೆತ್ತಿಕೊಂಡು, ಸಂಶೋಧಕ ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಟ್ಟರೆ, ರಾಜ್ಯದ ಬೇರೆ ಬೇರೆ ಪ್ರದೇಶಗಳ ಸ್ಥಳ ನಾಮ ಹಾಗೂ ಭಾಷೆಯ ವೈಜ್ಞಾನಿಕ ಮಾಹಿತಿಯ ಲಾಭ ಸಮಸ್ತ ಕನ್ನಡಿಗರಿಗೆ ಆಗುವುದಲ್ಲದೆ ಕನ್ನಡ ನಾಡು ನುಡಿಯ ಶ್ರೀಮಂತ ಇತಿಹಾಸ ವಿಜೃಂಭಿಸಬಹುದು. ಇಂತಹ ಕೃತಾರ್ಥ ಕಾರ್ಯದ ಬಗ್ಗೆ ಜಾನಪದ ವಿಶ್ವವಿದ್ಯಾನಿಲಯ ಚಿಂತಿಸಬಹುದು ಎಂಬುದು ನನ್ನ ನಂಬಿಕೆ.

 ಪ್ರಕಾಶಕರು;

ಪೋ.ಟಿ, ಮುರುಗೇಶಿ

 ಚರಿತ್ರೆ ಮತ್ತು ಪುರಾತತ್ವ ಶಾಸ್ತ್ರ ವಿಭಾಗ

 ಎಂ.ಎಸ್.ಆರ್.ಎಸ್. ಕಾಲೇಜು ಶಿರ್ವ, ಉಡುಪಿ

Writer - ಜಯಮ್ಮ ಜೆಟ್ಟಿಮಾಡ

contributor

Editor - ಜಯಮ್ಮ ಜೆಟ್ಟಿಮಾಡ

contributor

Similar News