ಐಎಎಸ್ ಅಧಿಕಾರಿ ಮಹೇಂದ್ರ ಜೈನ್ ಬಂಧಿಸದಂತೆ ಎಸ್ಐಟಿಗೆ ಹೈಕೋರ್ಟ್ ನಿರ್ದೇಶನ
Update: 2017-06-23 15:47 GMT
ಬೆಂಗಳೂರು, ಜೂ.23: ಮೈಸೂರು ಮಿನರಲ್ ಲಿಮಿಟೆಡ್(ಎಂಎಂಎಲ್) ಅವ್ಯವಹಾರ ಪ್ರಕರಣದ ಹನ್ನೊಂದನೆಯ ಆರೋಪಿ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಅವರನ್ನು ಬಂಧಿಸದಂತೆ ಎಸ್ಐಟಿಗೆ ಹೈಕೋರ್ಟ್ ನಿರ್ದೇಶಿಸಿದೆ. ಈ ಸಂಬಂಧ ಮಹೇಂದ್ರ ಜೈನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರತ್ನಕಲಾ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು.
ಅರ್ಜಿದಾರರ ಪರ ವಾದಿಸಿದ ವಕೀಲರು, ಐಎಎಸ್ ಅಧಿಕಾರಿ ಮಹೇಂದ್ರ ಜೈನ್ ಅವರನ್ನು ಎಸ್ಐಟಿ ಅಧಿಕಾರಿಗಳು ನಾಲ್ಕು ಬಾರಿ ವಿಚಾರಣೆಗೆ ಕರೆದಾಗಲೂ ಹೋಗಿ ಸಹಕರಿಸಿದ್ದಾರೆ. ಹೀಗಾಗಿ, ಅವರನ್ನು ಬಂಧಿಸದಂತೆ ಎಸ್ಐಟಿಗೆ ನಿರ್ದೇಶಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು. ಅಲ್ಲದೆ, ಮಹೇಂದ್ರ ಜೈನ್ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನನ್ನೂ ಲೋಕಾಯುಕ್ತ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ. ಹೀಗಾಗಿ, ಜೈನ್ ಅವರನ್ನು ಬಂಧಿಸದಂತೆ ಎಸ್ಐಟಿಗೆ ನಿರ್ದೇಶಿಸಬೇಕೆಂದು ಮನವಿ ಮಾಡಿದರು.