ಕೇಂದ್ರ ನಾಯಕರಿಗೆ ಶೋಕಿಯಾಗಿ ಕಾಣುತ್ತಿರುವ ರೈತರ ಕಣ್ಣೀರು

Update: 2017-06-23 19:02 GMT

‘‘ರೈತರ ಸಾಲ ಮನ್ನಾ ಈಗ ಶೋಕಿ ಅಥವಾ ಫ್ಯಾಶನ್ ಆಗುತ್ತಿದೆ. ರೈತರು ದಯನೀಯ ಪರಿಸ್ಥಿತಿಯಲ್ಲಿ ಇದ್ದರೆ ಮಾತ್ರ ಸಾಲ ಮನ್ನಾ ಮಾಡಬೇಕು’’ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯ ನಾಯ್ಡು ಹೇಳಿದ್ದಾರೆ. ರಾಜ್ಯ ಸರಕಾರ ರೈತರ ಸಾಲ ಮನ್ನಾ ಘೋಷಿಸಿದ ಒಂದು ದಿನದ ಬಳಿಕ ಅವರು ಇಂತಹದೊಂದು ಹೇಳಿಕೆಯನ್ನು ಹೊರಬಿಟ್ಟಿದ್ದಾರೆ. ಹಲವು ಬಾರಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ವೆಂಕಯ್ಯನಾಯ್ಡು ಕರ್ನಾಟಕದ ನೀರಿನ ಋಣವನ್ನು ತೀರಿಸಿದ ಬಗೆಯಿದು.

ಅವರ ಶೋಕೀ ಹೇಳಿಕೆ ಎರಡು ಅಂಶಗಳನ್ನು ಘೋಷಿಸಿದೆ. ಒಂದು, ಯಾವ ಕಾರಣಕ್ಕೂ ರೈತರ ಸಾಲವನ್ನು ಮನ್ನಾ ಮಾಡಬಾರದು. ಇನ್ನೊಂದು, ರೈತರು ದೇಶದಲ್ಲಿ ದಯನೀಯಸ್ಥಿತಿಯಲ್ಲಿಲ್ಲ. ಅವರು ಆರಾಮವಾಗಿ ಶೋಕಿ ಮಾಡುತ್ತಾ ಜೀವಿಸುತ್ತಿದ್ದಾರೆ. ತಮ್ಮ ಹೆಗಲಿನ ಹೊಣೆಗಾರಿಕೆಯಿಂದ ಜಾರಿಕೊಳ್ಳಲು ಬಿಜೆಪಿ ನಾಯಕರು ಜನರನ್ನು ಯಾವ ಮಟ್ಟಕ್ಕೆ ಮೂರ್ಖರಾಗಿಸಬಲ್ಲರು ಎನ್ನುವುದಕ್ಕೆ ನಾಯ್ಡು ಹೇಳಿಕೆ ಉದಾಹರಣೆಯಾಗಿದೆ. ಈ ಮೂಲಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಸಾಲ ಮನ್ನಾ ಮಾಡಿರುವುದನ್ನು ವ್ಯಂಗ್ಯ ಮಾಡಿ, ಇದೊಂದು ರಾಜಕೀಯ ತಂತ್ರ ಎಂದು ಜರಿಯುವುದು ಅವರ ಒಂದು ಉದ್ದೇಶ. ಇದೀಗ ರಾಜ್ಯದ ಪಾಲಿನ ಸಾಲವನ್ನು ರಾಜ್ಯ ಸರಕಾರ ಮನ್ನಾ ಮಾಡಿರುವುದರಿಂದ, ಈಗ ಚೆಂಡು ಕೇಂದ್ರದ ಅಂಗಳಕ್ಕೆ ಬಂದು ಬಿದ್ದಿದೆ. ರೈತರ ಉಳಿದ ಸಾಲವನ್ನು ಮನ್ನಾ ಮಾಡುವ ಹೊಣೆಗಾರಿಕೆ ಕೇಂದ್ರ ಸರಕಾರದ್ದಾಗಿದೆ. ಇದರಿಂದ ನುಣುಚಿಕೊಳ್ಳುವ ಪ್ರಯತ್ನವಾಗಿ, ರೈತರ ಸಾಲಮನ್ನಾ ಎನ್ನುವುದೇ ಒಂದು ಶೋಕಿ ಎಂದು ಕರೆದಿದ್ದಾರೆ. ಅಂದರೆ, ದೇಶಾದ್ಯಂತ ತಮ್ಮ ಸಾಲಮನ್ನಾ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ಬೀದಿಗಿಳಿದಿರುವ ರೈತರ ಹೋರಾಟದ ವಿಶ್ವಾಸಾರ್ಹತೆಯನ್ನೇ ಅವರು ವ್ಯಂಗ್ಯ ಮಾಡಿದ್ದಾರೆ.

ರೈತರ ಸಾಲ ಮನ್ನಾ ಶೋಕಿಯೇ ಆಗಿದ್ದರೆ, ಅಂತಹದೊಂದು ಶೋಕಿಗೆ ಉತ್ತರಪ್ರದೇಶದಲ್ಲಿ ಪ್ರಧಾನಿ ಯಾಕೆ ಅವಕಾಶಕೊಟ್ಟರು? ಎಂಬ ಪ್ರಶ್ನೆಗೆ ನಾಯ್ಡು ಉತ್ತರಿಸಬೇಕಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೇಂದ್ರದ ಸಹಕಾರದಿಂದ ಸಾಲ ಮನ್ನಾ ಮಾಡಿದರು. ಅಂದರೆ ವೆಂಕಯ್ಯ ನಾಯ್ಡು ಅವರು ಆದಿತ್ಯನಾಥ್ ಅವರ ಸಾಲಮನ್ನಾವನ್ನು ಒಂದು ರಾಜಕೀಯ ತಂತ್ರ ಎಂದು ಕರೆಯುತ್ತಿದ್ದಾರೆಯೇ? ಸಾಲಮನ್ನಾ ಶೋಕಿಯೇ ಆಗಿದ್ದರೆ ಅದನ್ನು ಉತ್ತರ ಪ್ರದೇಶದಲ್ಲಿ ತಡೆಯುವ ಮೂಲಕ, ಇತರ ರಾಜ್ಯಗಳಿಗೆ ಕೇಂದ್ರ ಸರಕಾರ ಒಂದು ಮಾದರಿಯನ್ನು ಹಾಕಿಕೊಡಬಹುದಿತ್ತಲ್ಲ. ಉತ್ತರ ಪ್ರದೇಶದ ಸಾಲಮನ್ನಾಕ್ಕೆ ಕೇಂದ್ರದ ನಿಧಿಯನ್ನು ಕೊಡುಗೆಯಾಗಿ ಕೊಟ್ಟು, ಇತರ ರಾಜ್ಯಗಳ ರೈತರ ಸಂಕಟಗಳ ಪ್ರಶ್ನೆ ಬಂದಾಗ ನಾಯ್ಡು ಅವರಿಗೆ ಅದೊಂದು ‘ಶೋಕಿ’ ಎಂದು ಯಾಕೆ ಅನ್ನಿಸುತ್ತದೆ? ಅದಿರಲಿ. ರಾಜ್ಯದಲ್ಲಿ ಇತ್ತೀಚೆಗೆ ಯಡಿಯೂರಪ್ಪ, ಈಶ್ವರಪ್ಪ ಮೊದಲಾದವರು ಬೀದಿಗಿಳಿದು ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಯಡಿಯೂರಪ್ಪ ಅವರಂತೂ ಒಂದು ಹೆಜ್ಜೆ ಮುಂದೆ ಹೋಗಿ, ಸಿದ್ದರಾಮಯ್ಯ ಅವರ ಮೂಗು ಹಿಡಿದು ರೈತರ ಸಾಲಮನ್ನಾ ಮಾಡಿಸುತ್ತೇವೆ ಎಂದು ಉತ್ತರ ಕುಮಾರನಂತೆ ಅಬ್ಬರಿಸಿದರು. ಅಂದರೆ ರಾಜ್ಯ ಬಿಜೆಪಿ ನಾಯಕರ ಸಾಲಮನ್ನಾ ಬೇಡಿಕೆಯೇ ಒಂದು ರಾಜಕೀಯ ಶೋಕಿಯಾಗಿತ್ತು ಎಂದು ರಾಜ್ಯದ ಜನರಿಗೆ ನಾಯ್ಡು ವಿವರಿಸುತ್ತಿದ್ದಾರೆಯೇ? ಸರಿ, ಇದೀಗ ರಾಜ್ಯ ಸರಕಾರ ತನ್ನ ಭರವಸೆಯನ್ನು ಈಡೇರಿಸಿದೆ. ಈಗ ಕೇಂದ್ರದಲ್ಲಿ ಯಡಿಯೂರಪ್ಪ ಅವರ ಸರಕಾರವೇ ಅಧಿಕಾರದಲ್ಲಿದೆ. ಅನಂತಕುಮಾರ್, ಯಡಿಯೂರಪ್ಪರಂತಹ ರಾಷ್ಟ್ರಮಟ್ಟದ ವರ್ಚಸ್ಸುಳ್ಳ ನಾಯಕರು ರಾಜ್ಯದಲ್ಲಿದ್ದಾರೆ. ಇವರೆಲ್ಲ ಒಟ್ಟಾಗಿ ದಿಲ್ಲಿಯಲ್ಲಿ ರೈತರ ಪರವಾಗಿ ಧ್ವನಿಯೆತ್ತಿದರೆ ಕೇಂದ್ರ ಸರಕಾರ ಖಂಡಿತವಾಗಿಯೂ ಅದನ್ನು ಗಂಭೀರವಾಗಿ ಸ್ವೀಕರಿಸಬಹುದು. ಕಳೆದ ಮಹಾಚುನಾವಣೆಯಲ್ಲಿ ಅತ್ಯಧಿಕ ಬಿಜೆಪಿ ಲೋಕಸಭಾ ಸದಸ್ಯರನ್ನು ಕರ್ನಾಟಕ ಮೋದಿ ಸರಕಾರಕ್ಕೆ ಕೊಟ್ಟಿದೆ. ಈ ಋಣವನ್ನು ತೀರಿಸುವುದಕ್ಕೆ ಮೋದಿಗೆ ಒಂದು ಉತ್ತಮ ಅವಕಾಶವಾಗಿದೆ.

ಆದರೆ ಯಾವ ಕಾರಣಕ್ಕೂ ಸಾಲಮನ್ನಾ ಮಾಡುವುದಿಲ್ಲ ಎಂದು ಜೇಟ್ಲಿ ಹಟ ಹಿಡಿದಿದ್ದಾರೆ ಮತ್ತು ನಾಯ್ಡು ಅವರನ್ನು ಬೆಂಬಲಿಸಿದ್ದಾರೆ. ಯಡಿಯೂರಪ್ಪ ಅವರಿಗೆ ಸಿದ್ದರಾಮಯ್ಯ ಅವರ ಮೂಗು ಹಿಡಿಯಲು ಕೊನೆಗೂ ಅವಕಾಶ ಸಿಗಲಿಲ್ಲ. ಇದೀಗ ದಿಲ್ಲಿಗೆ ಹೋಗಿ ಜೇಟ್ಲಿಯ ಮೂಗು ಹಿಡಿದು, ರೈತರ ಉಳಿತ ಸಾಲವನ್ನು ಮನ್ನಾ ಮಾಡಿಸುವುದಕ್ಕೆ ಅವರಿಗೊಂದು ಅವಕಾಶ ಒದಗಿ ಬಂದಿದೆ. ಅಥವಾ ಕನಿಷ್ಠ, ರೈತರ ಕುರಿತಂತೆ ಅಗ್ಗದ ಹೇಳಿಕೆ ನೀಡಿದ ನಾಯ್ಡು ಅವರ ಮೂಗನ್ನಾದರೂ ಹಿಡಿದು ಎಳೆಯುವುದು ರೈತ ನಾಯಕನಾಗಿ ಯಡಿಯೂರಪ್ಪ ಅವರ ಕರ್ತವ್ಯವಾಗಿದೆ. ಇಲ್ಲವಾದರೆ ತಾವೇ ತಮ್ಮ ಮೂಗನ್ನು ಹಿಡಿದು, ನೆಲಕ್ಕೆ ಉಜ್ಜಿಕೊಳ್ಳಬೇಕಾದಂತಹ ಪರಿಸ್ಥಿತಿ ಮುಂದಿನ ಚುನಾವಣೆಯಲ್ಲಿ ಅವರಿಗೆ ಎದುರಾಗಬಹುದು.

 ನಾಯ್ಡು ಅವರ ಹೇಳಿಕೆ, ಈ ದೇಶದ ಪಾಲಿಗೆ ಅತ್ಯಂತ ಅಪಾಯಕಾರಿಯಾದುದು. ರೈತರನ್ನು ಉದ್ಧರಿಸುವಲ್ಲಿ ಸಾಲಮನ್ನಾ ನೇರಪಾತ್ರವನ್ನು ಹೊಂದಿಲ್ಲ ನಿಜ. ಹಾಗೆಯೇ ಸದ್ಯದ ಕೃಷಿ ವಲಯದ ಸಮಸ್ಯೆಗೂ ಸಾಲಮನ್ನಾ ಪರಿಹಾರವಲ್ಲ. ಆದರೆ ನೋಟು ನಿಷೇಧ ಮತ್ತು ಜಾನುವಾರು ಮಾರಾಟ ನಿಷೇಧದ ಬಳಿಕ ಕೃಷಿ ವಲಯದಲ್ಲಿ ಉಂಟಾದ ಏರುಪೇರಿಗೆ ಸಂಪೂರ್ಣ ಕೇಂದ್ರ ಸರಕಾರ ಹೊಣೆ ಎನ್ನುವುದನ್ನು ಪ್ರಧಾನಿ ಮೋದಿ ಮರೆಯಬಾರದು. ರೈತರು ದಯನೀಯ ಸ್ಥಿತಿಯಲ್ಲಿದ್ದರೆ ಮಾತ್ರ ಸಾಲಮನ್ನಾ ಮಾಡಬೇಕು ಎಂದು ಹೇಳುವ ಕೇಂದ್ರ ಸಚಿವರಿಗೆ, ದೇಶದ ರೈತರು ಸದ್ಯ ಎದುರಿಸುತ್ತಿರುವ ದಯನೀಯ ಸ್ಥಿತಿ ಮನವರಿಕೆಯಾಗಿಲ್ಲ ಎಂದಾಯಿತು. ರೈತರು ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ ಸಾಲು ಸಾಲಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅವರೆಲ್ಲರೂ ಶೋಕಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಚಿವರು ಭಾವಿಸಿದ್ದಾರೆಯೇ? ಈ ಹಿಂದೆ ಬಿಜೆಪಿಯ ಮುಖಂಡನೊಬ್ಬ ‘ರೈತರು ಕೃಷಿ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ’ ಎಂದು ಹೇಳಿ ವಿವಾದ ಸೃಷ್ಟಿಸಿದ್ದರು.

ಅದರ ಮುಂದುವರಿಕೆ ಭಾಗವಾಗಿದೆ ನಾಯ್ಡು ಹೇಳಿಕೆ. ಒಂದೆಡೆ ಮಲ್ಯನಂತಹ ಬೃಹತ್ ಉದ್ಯಮಿಗಳು ಸಾವಿರಾರು ಕೋಟಿ ರೂಪಾಯಿಗಳನ್ನು ವಂಚಿಸಿ ವಿದೇಶಗಳಲ್ಲಿ ಅಡಗಿ ಕುಳಿತಿದ್ದಾರೆ. ಎಸ್‌ಬಿಐ ಬ್ಯಾಂಕ್ ಇತ್ತೀಚೆಗೆ 7000 ಕೋಟಿಗೂ ಅಧಿಕ ಸಾಲವನ್ನು ರೈಟ್‌ಆಫ್ ಮಾಡಿದೆ. ಅಂದರೆ ಪರೋಕ್ಷವಾಗಿ ಈ ಹಣವನ್ನು ಬ್ಯಾಂಕ್ ಮನ್ನಾ ಮಾಡಿದೆ. ವಸೂಲಾತಿಯಿಂದ ಹೊರಗಿದೆ ಎಂದರೆ ಮನ್ನಾ ಮಾಡಿದಂತೆಯೇ ಅರ್ಥ. ಈ ಉದ್ಯಮಿಗಳೆಲ್ಲ ನಿಜವಾದ ಅರ್ಥದಲ್ಲಿ ವಿದೇಶಗಳಲ್ಲಿ ಶೋಕಿ ಮಾಡುತ್ತಿದ್ದಾರೆ.

ಇವರ ವಿರುದ್ಧ ದಿಟ್ಟವಾಗಿ ಒಂದು ಹೇಳಿಕೆ ನೀಡುವುದಕ್ಕ್ಕೆ ಧೈರ್ಯವಿಲ್ಲದ ನಾಯ್ಡು ಅವರು, ರೈತರ ಸಾಲಮನ್ನಾವನ್ನು ಶೋಕಿಯೆಂದು ಕರೆದಿರುವುದು ಅಮಾಯನವೀಯವಾಗಿದೆ. ಈಗಾಗಲೇ ದೇಶಾದ್ಯಂತ ರೈತರ ಪ್ರತಿಭಟನೆ ಬೆಂಕಿಯಂತೆ ವ್ಯಾಪಿಸತೊಡಗಿದೆ. ನಾಯ್ಡು ಆ ಬೆಂಕಿಗೆ ಇನ್ನಷ್ಟು ತುಪ್ಪವನ್ನು ಸುರಿದಿದ್ದಾರೆ. ರೈತರ ಗಾಯಕ್ಕೆ ಮುಲಾಮು ಸವರುವ ಬದಲು ಉಪ್ಪು ಸವರಿದ್ದಾರೆ. ಇದಕ್ಕಾಗಿ ನಾಯ್ಡು ದೇಶದ ರೈತರ ಕ್ಷಮೆಯಾಚನೆ ಮಾಡಬೇಕಾಗಿದೆ. ಇಲ್ಲವಾದರೆ ರೈತರ ಕಣ್ಣೀರು ಕಾರ್ಪೊರೇಟ್ ಸರಕಾರವನ್ನು ಸುಮ್ಮನೆ ಬಿಡಲಾರದು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News