ಪ್ರೇಯಸಿ ಮೇಲೆ ಹಲ್ಲೆ ನಡೆಸಲು ಸುಪಾರಿ
ಬೆಂಗಳೂರು, ಜೂ.28: ಯುವಕನೊಬ್ಬ ತನ್ನ ಪ್ರೇಯಸಿ ಮೇಲೆ ಹಲ್ಲೆ ನಡೆಸಲು ಸುಪಾರಿ ನೀಡಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಈ ಸಂಬಂಧ ಇಬ್ಬರನ್ನು ಇಲ್ಲಿನ ಕಾಟನ್ಪೇಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನಗರದ ಕಾಟನ್ಪೇಟೆಯ ಬಟ್ಟೆ ವ್ಯಾಪಾರಿ ಪ್ರಮೋದ್ (22) ಸುಪಾರಿ ಕೊಟ್ಟ ಪ್ರೇಮಿ ಎಂದು ಪೊಲೀಸರು ತಿಳಿಸಿದ್ದು, ಈತನಿಂದ ಸುಪಾರಿ ಪಡೆದಿದ್ದ ಕಾಟನ್ಪೇಟೆ ಬಂಗಿ ಕಾಲನಿ ನಿವಾಸಿ ಕುಮಾರ್ (27) ಮತ್ತು ಸುರೇಶ್(35)ನನ್ನು ಪೊಲೀಸರು ಸೆರೆಹಿಡಿದಿದ್ದಾರೆ.
ಪ್ರಕರಣದ ವಿವರ: ಬಾಣಸವಾಡಿಯ ಖಾಸಗಿ ಏರ್ಲೈನ್ಸ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಯುವತಿಗೆ ಮೇಲೆ ಜೂ.21ರಂದು ಕಾಟನ್ಪೇಟೆಯ ಬಳಿ ಮನೆ ಮುಂದೆಯೇ ದುಷ್ಕರ್ಮಿಯೊಬ್ಬ ಚಾಕುವಿನಿಂದ ಮೂರು ಬಾರಿ ಇರಿದು ನಾಪತ್ತೆಯಾಗಿದ್ದ. ಈ ಸಂಬಂಧ ಯುವತಿ ಕಾಟನ್ಪೇಟೆ ಠಾಣೆಗೆ ದೂರು ನೀಡಿದ್ದಳು.
ಗಾಯಗೊಂಡಿರುವ ಯುವತಿ ಕಾಟನ್ಪೇಟೆಯ ಪೊಲೀಸ್ ರಸ್ತೆ ನಿವಾಸಿಯಾಗಿದ್ದು, ಜೂ. 21 ರಂದು ಬಾಣಸವಾಡಿಯ ತನ್ನ ಕಚೇರಿಯಿಂದ ಮನೆಗೆ ಮರಳಿದ್ದಾರೆ. ನಂತರ ಬೈಕ್ನ್ನು ಮನೆ ಮುಂದೆ ನಿಂತಿದ್ದ ಅಪರಿಚಿತ ವ್ಯಕ್ತಿಯನ್ನು ಯಾರೆಂದು ಪ್ರಶ್ನಿಸಿದ್ದಾರೆ. ಇದಕ್ಕೆ ಆಕ್ರೋಶಗೊಂಡ ದುಷ್ಕರ್ಮಿ ಯುವತಿಗೆ ಮೂರು ಬಾರಿ ಚಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಗಾಯಗೊಂಡ ಯುವತಿ ಕೂಗಿಕೊಂಡಿದ್ದಾರೆ. ಸ್ಥಳೀಯರು ಸ್ಥಳಕ್ಕೆ ಬರುತ್ತಿದ್ದಂತೆ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿ ಕಾರ್ಯಾಚರಣೆ ನಡೆಸಿದಾಗ ಆರೋಪಿಗಳ ಸುಳಿವು ಪತ್ತೆಯಾಯಿತು. ಅಲ್ಲದೇ ಪ್ರಮೋದ್ ಬಗ್ಗೆ ಯುವತಿ ಅನುಮಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಮೋದ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಘಟನೆಯ ಸಂಪೂರ್ಣ ಚಿತ್ರಣ ಬೆಳಕಿಗೆ ಬಂದಿದೆ.