ಸಿಂಗ್ ದ್ವಂದ್ವ ಮತ್ತು ಸೋನಿಯಾ ಸಲಹೆ

Update: 2017-07-02 04:41 GMT

ಸಿಂಗ್ ದ್ವಂದ್ವ ಮತ್ತು ಸೋನಿಯಾ ಸಲಹೆ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಇತ್ತೀಚೆಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ, ಜೂನ್ 30ರ ಮಧ್ಯರಾತ್ರಿ ನಡೆಯುವ ಜಿಎಸ್‌ಟಿ ಚಾಲನಾ ಸಮಾರಂಭದಲ್ಲಿ ವೇದಿಕೆ ಹಂಚಿಕೊಳ್ಳುವುದಕ್ಕೆ ಪಕ್ಷದ ವಿರೋಧವಿದೆ ಎಂದು ಹೇಳಿದ್ದರು. ಸಿಂಗ್ ವಿಧೇಯತೆಯಿಂದ ಒಪ್ಪಿಕೊಂಡರು. ಎಂಎಂಎಸ್ ಆಂತರ್ಯದ ಅರ್ಥಶಾಸ್ತ್ರಜ್ಞನಿಗೆ ಜಿಎಸ್‌ಟಿ ಚಾಲನಾ ಸಭೆಯಲ್ಲಿ ಪಾಲ್ಗೊಂಡು ಗೌರವ ಪಡೆಯುವ ತುಡಿತವೇನೋ ಇತ್ತು. ಆದರೆ ಅದಕ್ಕೆ ಸೋನಿಯಾ ಅಡ್ಡಬಂದರು.

2016ರ ನವೆಂಬರ್‌ನ ನೋಟು ರದ್ದತಿ ಪ್ರಕರಣದಂತೆಯೇ ಆಯಿತು. ಸೋನಿಯಾ ಅಧೀನದ ಕಾಂಗ್ರೆಸ್ ಪಕ್ಷ, ತೃಣಮೂಲ ಕಾಂಗ್ರೆಸ್‌ನ್ನು ಬದಿಗೊತ್ತಿ ವಿರೋಧ ಪಕ್ಷಗಳ ಒಗ್ಗಟ್ಟಿಗೆ ಹೆಚ್ಚು ಒತ್ತು ನೀಡುವ ಮೂಲಕ ಜಿಎಸ್‌ಟಿ ಅನುಷ್ಠಾನದಿಂದಾಗುವ ತೊಂದರೆಗಳ ಲಾಭ ಎತ್ತುವ ಪ್ರಯತ್ನದಲ್ಲಿದೆ. ಮೋದಿ ಆಡಳಿತವನ್ನು ಮೂಲೆಗುಂಪು ಮಾಡಲು ಇದರಿಂದ ಅವಕಾಶ ಸಿಗಬಹುದು ಎಂಬ ಆಸೆ ಅವರದ್ದು. ನೋಟು ರದ್ದತಿಯನ್ನೂ ಕಾಂಗ್ರೆಸ್ ಪಕ್ಷ ವಿರೋಧಿಸಿದ್ದು ಇದೇ ಲೆಕ್ಕಾಚಾರದಲ್ಲಿ. ಆದರೆ ಅದರಿಂದ ಪಡೆದ ರಾಜಕೀಯ ಲಾಭ ಮಾತ್ರ ಶೂನ್ಯ. ಮನಮೋಹನ್ ಸಿಂಗ್ ಇದೀಗ ಅರ್ಥಶಾಸ್ತ್ರಜ್ಞನಿಗಿಂತ ಹೆಚ್ಚಾಗಿ ರಾಜಕಾರಣಿಯಾಗಿಬಿಟ್ಟಿದ್ದಾರೆ!.

ಒಗಟಾದ ನಿತೀಶ್

ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮ್‌ನಾಥ್ ಕೋವಿಂದ್ ಈ ಕ್ಷಣದ ವ್ಯಕ್ತಿ. ಹಾಗೆಂದು ಸುಮ್ಮನಿರುವಂತಿಲ್ಲ. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕೋವಿಂದ್ ನೆಮ್ಮದಿ ಕಸಿದುಕೊಂಡಿದ್ದಾರೆ. ನಿತೀಶ್ ಕುಮಾರ್ ಅವರ ಬದಲಾಗುತ್ತಿರುವ ನಿಲುವಿನಿಂದ ಮಿತ್ರರು ಹಾಗೂ ಶತ್ರುಗಳಿಬ್ಬರೂ ಕುತೂಹಲಿಗಳಾಗಿದ್ದಾರೆ. ಕಳೆದ ಎಪ್ರಿಲ್‌ನಲ್ಲಿ ನಿತೀಶ್, ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ, ದೇಶದ ಅತ್ಯುನ್ನತ ಹುದ್ದೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಂಬಂಧ ವಿರೋಧ ಪಕ್ಷಗಳ ಸಭೆ ಆಯೋಜಿಸುವಂತೆ ಕೋರಿದ್ದರು. ಸೋನಿಯಾ ಗಾಂಧಿಗೂ ಈ ಸಲಹೆ ಉಚಿತವೆನಿಸಿತು.

ತಕ್ಷಣ ಸಮಾನ ಮನಸ್ಕ ಪಕ್ಷಗಳ ಸಲಹೆ ಪಡೆಯಲಾರಂಭಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕವಿರುವ ವ್ಯಕ್ತಿಗಳನ್ನು ಎನ್‌ಡಿಎ ಕಣಕ್ಕಿಳಿಸಿದರೆ, ಪ್ರತಿಸ್ಪರ್ಧಿಯಾಗಿ ಕಣಕ್ಕೆ ಧುಮುಕಲು ನಿತೀಶ್ ಸಜ್ಜಾಗಿದ್ದರು. ಆದರೆ ಕೋವಿಂದ್ ಅವರ ಉಮೇದುವಾರಿಕೆ ಘೋಷಣೆ ಬಳಿಕ, ವಿರೋಧ ಪಕ್ಷಗಳಿಗೆ ‘ಸ್ಟಂಪ್’ ಮಾಡಿ, ಭಿನ್ನ ರಾಗ ಹಾಡುತ್ತಿದ್ದಾರೆ. ಇದರಿಂದ ಬೆಚ್ಚಿದ ಸೋನಿಯಾ, ಕುಮಾರ್ ಬಳಿಗೆ ಗುಲಾಂ ನಬಿ ಆಝಾದ್ ಅವರನ್ನು ಕಳುಹಿಸಿಕೊಟ್ಟಿದ್ದಾರೆ.

ಕೋವಿಂದ್ ಅವರನ್ನು ಬಿಹಾರ ರಾಜ್ಯಪಾಲರಾಗಿ ನೇಮಕ ಮಾಡುವ ವೇಳೆ, ನಿಮ್ಮ ಸಲಹೆ ಪಡೆದಿಲ್ಲ ಎನ್ನುವುದನ್ನು ಆಝಾದ್, ನಿತೀಶ್‌ಗೆ ನೆನಪಿಸಿಕೊಟ್ಟಿದ್ದಾರೆ. ಆದರೆ ಇದಕ್ಕೆ ನಿತೀಶ್ ತಲೆ ಕೆಡಿಸಿಕೊಂಡಿಲ್ಲ. ಮಹಾಘಟ್‌ಬಂಧನದ ಭವಿಷ್ಯವೇನು? ಅದು ಬಹಳಷ್ಟು ಸುರಕ್ಷಿತ; ಬಹಳಷ್ಟು ಮಂದಿ ಹೇಳುವಂತೆ, ನಿತೀಶ್‌ಗೆ ತೊಂದರೆ ಕೊಡಲು, ಲಾಲು ಪ್ರಸಾದ್ ಯಾದವ್ ಅವರಿಗೆ ತಕ್ಷಣಕ್ಕೆ ಅವರದ್ದೇ ಸಾಕಷ್ಟು ಸಮಸ್ಯೆಗಳಿವೆ.

ಪವಾರ್‌ಗೆ ಮೀರಾ ಸಮಸ್ಯೆ
ರಾಮ್‌ನಾಥ್ ಕೋವಿಂದ್ ಅವರ ಎದುರಾಳಿಯಾಗಿ ವಿರೋಧ ಪಕ್ಷಗಳು ಮೀರಾ ಕುಮಾರ್ ಅವರನ್ನು ಕಣಕ್ಕಿಳಿಸಿವೆ. ಆದರೆ ಪ್ರಭಾವಿ ಮರಾಠಾ ಮುಖಂಡ ಹಾಗೂ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ನಾಯಕ ಶರದ್ ಪವಾರ್ ಮಾತ್ರ, ಅಭ್ಯರ್ಥಿ ಘೋಷಣೆಯನ್ನು ಮುಂದಕ್ಕೆ ಹಾಕುವಂತೆ ಆಗ್ರಹಿಸುವ ಮೂಲಕ ವಿರೋಧ ಪಕ್ಷಗಳಿಗೆ ಆತಂಕ ಒಡ್ಡಿದರು. ತಕ್ಷಣ ಸೋನಿಯಾ, ಪವಾರ್ ಬಳಿಗೆ ಸಂಧಾನಕಾರರನ್ನು ಕಳುಹಿಸಿ ಅವರ ಮನವೊಲಿಸಲು ಮುಂದಾದರು. ರಾಷ್ಟ್ರದ ಅತ್ಯುನ್ನತ ಹುದ್ದೆಗೆ ಮೀರಾ ಉಮೇದುವಾರರಾಗಿರುವುದು ಪವಾರ್‌ಗೆ ಮಾತ್ರ ಸುತರಾಂ ಇಷ್ಟವಿಲ್ಲ.

ಆದರೆ ಹಿರಿಯ ಎಐಸಿಸಿ ಪದಾಧಿಕಾರಿಗಳಾದ ಅಹ್ಮದ್ ಪಟೆಲ್ ಹಾಗೂ ಗುಲಾಂ ನಬಿ ಆಝಾದ್, ಸತತವಾಗಿ ಪವಾರ್ ಸಂಪರ್ಕದಲ್ಲಿದ್ದು, ಅಂತಿಮವಾಗಿ ಸಭೆಯಲ್ಲಿ ಭಾಗವಹಿಸುವಂತೆ ಎನ್‌ಸಿಪಿ ನಾಯಕನ ಮನವೊಲಿಸುವಲ್ಲಿ ಸಫಲರಾದರು. ಆದರೆ ಮೀರಾ ಬಗ್ಗೆ ಪವಾರ್ ವಿರೋಧ ವ್ಯಕ್ತಪಡಿಸುತ್ತಿರುವುದಾದರೂ ಏಕೆ? ವದಂತಿಗಳ ಪ್ರಕಾರ, ಹಳೆಯ ಕಹಿ ನೆನಪುಗಳ ಹಿನ್ನೆಲೆ ಇದಕ್ಕೆ ಕಾರಣ. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹುದ್ದೆಗೆ ಹಿಂದೆ ಪವಾರ್ ವಿರುದ್ಧ ಸೀತಾರಾಂ ಕೇಸರಿ ಕಣದಲ್ಲಿದ್ದಾಗ, ಮೀರಾ, ಕೇಸರಿಗೆ ನಿಷ್ಠರಾಗಿದ್ದರು ಎನ್ನುವುದು ಕಾರಣವಂತೆ.

ಪ್ರಭು ಮತ್ತು ಪ್ರತಿಕೂಲ ಹವಾಮಾನ
ರೈಲ್ವೆ ಸಚಿವ ಸುರೇಶ್ ಪ್ರಭು ಇತ್ತೀಚೆಗೆ ಟ್ವಟರ್‌ನಲ್ಲಿ ಮಂಕಾಗಿ ಕಾಣಿಸಿಕೊಂಡಿದ್ದರು. ಅದು ಲೆಹ್- ಮನಾಲಿ- ಬಿಲಾಸ್‌ಪುರ ಮಧ್ಯೆ ಹೊಸ ರೈಲ್ವೆ ಹಳಿ ಕಾಮಗಾರಿ ಸಮೀಕ್ಷೆಗೆ ಶಿಲಾನ್ಯಾಸ ಸಮಾರಂಭದ ಕ್ಷಣ. ಲೆಹ್‌ನಲ್ಲಿ ನಡೆದ ಸಮಾರಂಭದಲ್ಲಿ 157 ಕೋಟಿ ರೂಪಾಯಿ ಅಂದಾಜು ವೆಚ್ಚದ ಸಮೀಕ್ಷಾ ಕಾರ್ಯಕ್ಕೆ ಶಿಲಾನ್ಯಾಸ ಮಾಡಬೇಕಿತ್ತು. ಬಹುತೇಕ ರಕ್ಷಣಾ ಪಡೆಗಳಿಗೆ ಹೆಚ್ಚು ಬಳಕೆಯಾಗುವ ಯೋಜನೆ ಅದು. ಇದನ್ನು ಪ್ರಭು ಐತಿಹಾಸಿಕ ಎಂದು ಬಣ್ಣಿಸಿದರು. ಬಹಳಷ್ಟು ಮಂದಿ ಪ್ರಭುಗೆ ಅಭಿನಂದನೆಗಳನ್ನೂ ಸಲ್ಲಿಸಿದರು. ಆದರೆ ಲೆಹ್‌ಗೆ ಆಗಮಿಸುತ್ತಿದ್ದಂತೆ ಸುಮಾರು ಆರು ಗಂಟೆ ಕಾಲ ಪ್ರಭು ಅಸ್ವಸ್ಥರಾದರು. ಅತಿ ಎತ್ತರದ ಪ್ರದೇಶದಲ್ಲಿ ಇಡೀ ದಿನ ಉಸಿರಾಡುವುದೂ ಅವರಿಗೆ ಕಷ್ಟವಾಯಿತು. ಕೊನೆಗೆ ವಾತಾವರಣಕ್ಕೆ ಹೊಂದಿಕೊಂಡು, ಸಮಾರಂಭ ಉದ್ಘಾಟನೆಗೆ ಸಜ್ಜಾದರು. ಕೊನೆಗೂ ಎಲ್ಲವೂ ಸುಗಮ ಅಂತ್ಯ ಕಂಡಿತು ಎಂದು ಹೇಳುವಂತಾಯಿತು.

ಕೋವಿಂದ್ ಈಗ ಆಕರ್ಷಣೆಯ ಕೇಂದ್ರಬಿಂದು
ಸಾರ್ವಜನಿಕ ಜೀವನದಲ್ಲಿ ಸುದೀರ್ಘ ಕಾಲದಿಂದ ಇದ್ದರೂ, ರಾಷ್ಟ್ರಪತಿ ಹುದ್ದೆಗೆ ಎನ್‌ಡಿಎ ತನ್ನ ಅಭ್ಯರ್ಥಿಯನ್ನು ಘೋಷಿಸುವವರೆಗೆ ಬಹುತೇಕ ಯಾರೂ ರಾಮ್‌ನಾಥ್ ಕೋವಿಂದ್ ಅವರ ಹೆಸರು ಕೇಳಿರಲಿಲ್ಲ. ಶರದ್ ಹಾಗೂ ಪವಾರ್ ಅಥವಾ ಮಾಯಾವತಿ ಕೂಡಾ ಇದಕ್ಕೆ ಹೊರತಲ್ಲ. ಇದೀಗ ಕೋವಿಂದ್ ಅವರ ವಿವರಗಳು ಉರುಳುತ್ತಿವೆ. ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ಸದ್ದುಗದ್ದಲವಿಲ್ಲದೇ ಸಾರ್ವಜನಿಕ ಜೀವನದಲ್ಲಿದ್ದವರು. ಮೌನ ಬಂಗಾರ ಎಂಬ ಸಿದ್ಧಾಂತ ಅವರದ್ದು.

ಟಿವಿ ಸದ್ದುಗದ್ದಲಕ್ಕೆ ಅಸಹ್ಯಪಟ್ಟುಕೊಳ್ಳುವ ಆಶ್ಚರ್ಯಕರ ವ್ಯಕ್ತಿತ್ವ. ಕೆಲ ವರ್ಷಗಳ ಹಿಂದೆ ಬಿಜೆಪಿ ಪರವಾದ ‘ದಲಿತ್ ಆಂದೋಲನ ಪತ್ರಿಕಾ’ ಎಂಬ ನಿಯತಕಾಲಿಕ, ಅಸ್ತಿತ್ವ ಉಳಿಸಿಕೊಳ್ಳುವ ಹೋರಾಟದಲ್ಲಿದ್ದ ಸುದ್ದಿ ತಿಳಿದ ಕೋವಿಂದ್, ಸಂಕಷ್ಟದಿಂದ ಹೊರಬರಲು ಒಂದಷ್ಟು ಆರ್ಥಿಕ ಸಹಾಯ ಮಾಡಿದ್ದರು. ಕುತೂಹಲಕರವಾಗಿ ಮತ್ತೊಮ್ಮೆ ಕೋವಿಂದ್ ಸುದ್ದಿಯಾದದ್ದು ಲಾಲು ಮಗನ ತಪ್ಪುತಿದ್ದುವ ಮೂಲಕ. ಸಚಿವರಾಗಿ ತೇಜ್‌ಪ್ರತಾಪ್ ಪ್ರಮಾಣವಚನ ಸ್ವೀಕರಿಸುವ ವೇಳೆಗೆ, ಸಭಾಕಂಪನದಿಂದಾಗಿ ತೊದಲಿದ ಸಚಿವರ ಉಚ್ಚಾರವನ್ನು ರಾಜ್ಯಪಾಲರಾಗಿದ್ದ ಕೋವಿಂದ್ ಸರಿಪಡಿಸಿದ್ದರು. ಇದು ನಮ್ಮ ಭವಿಷ್ಯದ ರಾಷ್ಟ್ರಪತಿಯ ಘನತೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News