ಕಳ್ಳತನದ ಚಿನ್ನಾಭರಣ ಪಡೆದು ಮಾರಾಟ ಆರೋಪ: ಪೊಲೀಸರಿಂದ ದಾಳಿ
ಬೆಂಗಳೂರು, ಜು.4: ಕಳ್ಳತನ ಮಾಡಿದ ಚಿನ್ನಾಭರಣ ಕಡಿಮೆ ಬೆಲೆಗೆ ಪಡೆದು ಮಾರಾಟ ಮಾಡುತ್ತಿದ್ದ ಆರೋಪ ಕೇಳಿಬಂದ ಬೆನ್ನಲ್ಲೇ ಅಟ್ಟಿಕಾ ಗೋಲ್ಡ್ ಕಚೇರಿಗಳ ಮೇಲೆ ನಗರದ ಪಶ್ಚಿಮ ವಿಭಾಗದ 30 ಕ್ಕೂ ಹೆಚ್ಚು ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ಮಂಗಳವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಅಟ್ಟಿಕಾ ಗೋಲ್ಡ್ ಪ್ರಧಾನ ಕಚೇರಿ ಸೇರಿ ನಗರದೆಲ್ಲೆಡೆ ಇರುವ ಕಚೇರಿಗಳ ಮೇಲೂ ಪೊಲೀಸರು ದಾಳಿ ನಡೆಸಿ ಚಿನ್ನಾಭರಣಗಳನ್ನು ಪರಿಶೀಲನೆ ಕೈಗೊಂಡರು.
ಕಳ್ಳರು ಚಿನ್ನಾಭರಣ ಕದ್ದು, ಅಟ್ಟಿಕಾ ಗೋಲ್ಡ್ಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಬಳಿಕ ಇದೇ ಕಂಪೆನಿ ಆಭರಣಗಳಿಗೆ ಪಾಲಿಶ್ ಮಾಡಿ ಗ್ರಾಹಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆ ಪೊಲೀಸರು ಏಕಾಏಕಿ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಮಾಲಕ ಪರಾರಿ: ಪ್ರಕರಣ ಸಂಬಂಧ ಪೊಲೀಸರು ದಾಳಿ ನಡೆಸಿದ್ದ ವೇಳೆ ಅಟ್ಟಿಕಾ ಗೋಲ್ಡ್ ಮಾಲಕ ಎನ್ನಲಾದ ಬೊಮ್ಮನಹಳ್ಳಿ ಬಾಬು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದ್ದು, ಈತನ ವಿರುದ್ಧ ಈ ಹಿಂದೆಯೂ ಮೊಕದ್ದಮೆ ದಾಖಲಾಗಿ ಬಂಧನವಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.