ರೈತನಿಗೆ ಪರಿಹಾರ ನೀಡಲು ತಕರಾರು: ಅರಣ್ಯ ಇಲಾಖೆ ಅಧಿಕಾರಿ ವಿರುದ್ಧ ಹೈಕೋರ್ಟ್ ಕಿಡಿ
ಬೆಂಗಳೂರು, ಜು.9: ರೈತನೊಬ್ಬನ ನಿವೇಶನವನ್ನು ಸ್ವಾಧೀನಪಡಿಸಿಕೊಂಡಿದ್ದಕ್ಕೆ ಪರಿಹಾರ ನೀಡುವ ವಿಷಯದಲ್ಲಿ ತಕರಾರು ತೆಗೆದು ಮೇಲ್ಮನವಿ ಸಲ್ಲಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯ ವೈಖರಿಗೆ ಹೈಕೋರ್ಟ್ ಕಿಡಿ ಕಾರಿದೆ.
ಭದ್ರಾ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಚಿಕ್ಕಮಗಳೂರು ಉಪ ವಿಭಾಗಾಧಿಕಾರಿಯೂ ಆದ ಭೂ ಸ್ವಾಧೀನ ಅಧಿಕಾರಿ, ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿಗಳು ಸಂತ್ರಸ್ತ ರೈತನಿಗೆ 25 ಸಾವಿರವನ್ನು ಒಂದು ತಿಂಗಳಿನಲ್ಲಿ ಪಾವತಿ ಮಾಡಬೇಕು ಎಂದು ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ಆದೇಶಿಸಿದೆ.
ಕಳೆದ ತಿಂಗಳ 21ರಂದು ಈ ಆದೇಶ ನೀಡಿದ್ದು, ಅಧಿಕಾರಿಗಳು ನ್ಯಾಯಾಲಯಗಳ ಮೇಲೆ ನಿರ್ಭಿಡೆಯ ಸವಾರಿ ಮಾಡುತ್ತಿದ್ದಾರೆ. ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಬೇಕು ಎಂದು ನ್ಯಾಯಪೀಠ ಸೂಚಿಸಿದೆ. ರಾಜ್ಯ ಸರಕಾರ ಪ್ರತಿಯೊಬ್ಬರ ಹಿತ ಕಾಯಬೇಕು. ಆದರೆ, ಪ್ರಕರಣದಲ್ಲಿ ಸಾರ್ವಜನಿಕರ ಮೇಲೆ ದೌರ್ಜನ್ಯ ನಡೆಸುತ್ತಿರುವುದು ಕಂಡು ಬಂದಿದೆ. ಅಧಿಕಾರಿಗಳು ಸಣ್ಣ ಪುಟ್ಟ ವಿಷಯಗಳಿಗೆ ಜನರ ಜೊತೆ ತಕರಾರು ತೆಗೆದು ಕೋರ್ಟ್ನಿಂದ ಕೋರ್ಟ್ಗಳಿಗೆ ಅಲೆಯುತ್ತಾ ಕಾನೂನಿಗೆ ಅಪಚಾರ ಎಸಗುತ್ತಿದ್ದಾರೆ ಎಂದು ಅತೃಪ್ತಿ ವ್ಯಕ್ತಪಡಿಸಲಾಗಿದೆ. ಅಧಿಕಾರಿಗಳ ಈ ನಡವಳಿಕೆ ಸಂವಿಧಾನದ 21 ಮತ್ತು 300-ಎ ವಿಧಿಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದೂ ಆದೇಶದಲ್ಲಿ ಹೇಳಲಾಗಿದೆ.