ಲಂಬಾಣಿ ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿಸಲು ಪತ್ರ ಚಳವಳಿ

Update: 2017-07-09 15:30 GMT

ಬೆಂಗಳೂರು, ಜು. 9: ಲಂಬಾಣಿ ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿಸುವ ರಾಜ್ಯದ ಮಸೂದೆಗೆ ಅನುಮೋದನೆ ನೀಡಲು ಒತ್ತಾಯಿಸಿ ರಾಜ್ಯವ್ಯಾಪಿ ಪತ್ರ ಚಳವಳಿ ನಡೆಯಿತು.

ಇದರ ಅಂಗವಾಗಿ ಬಂಜಾರ ಕಾರ್ಮಿಕರ ಒಕ್ಕೂಟದ ವತಿಯಿಂದ ಬೆಂಗಳೂರು ಹೊರವಲಯದ ಗೊಟ್ಟಿಗೆರೆಯ ಐಐಎಂಬಿ ಆವರಣದ ಅಂಚೆ ಕಚೇರಿಯಲ್ಲಿ ಬಂಜಾರ ಸಮುದಾಯದ ನೂರಾರು ಜನ ಜಮಾಯಿಸಿ ಪತ್ರಗಳನ್ನು ಪೋಸ್ಟ್ ಮಾಡಿದರು.

ಲಂಬಾಣಿ ಮತ್ತಿತರ ಶೋಷಿತ ದಲಿತ-ಬುಡಕಟ್ಟುಗಳ ತಾಂಡ, ಹಟ್ಟಿ, ಹಾಡಿ, ಪಲ್ಲಿ, ಗಲ್ಲಿ, ವಾಡಿ, ಪಾಳ್ಯ ವಾಸಿಗರಿಗೆ ಭೂ ಒಡೆತನ ಮತ್ತು ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿಸುವ ಉದ್ದೇಶದ ಕ್ರಮ ಸಂಖ್ಯೆ 37 ರ 'ಕರ್ನಾಟಕ ಭೂ ಸುಧಾರಣೆಗಳ ವಿಧೇಯಕ-2016' ಅನ್ನು ಅನುಮೋದಿಸಲು ರಾಷ್ಟ್ರಪತಿಯವರನ್ನು  ಕೋರಲಾಯಿತು.

‘ಸ್ವಾತಂತ್ರ್ಯ ಸಿಕ್ಕು ಏಳು ದಶಕ ಕಳೆದರು ಲಂಬಾಣಿ ಮತ್ತಿತರ ಸಮುದಾಯದ ಜನವಸತಿ ಪ್ರದೇಶಗಳು ಕಂದಾಯ ಗ್ರಾಮಗಳಾಗಿಲ್ಲ. ಹಾಗಾಗಿ ಯಾರದೊ ಖಾಸಗಿ ಮಾಲಿಕತ್ವದ ಜಮೀನಿನಲ್ಲಿ, ಅರಣ್ಯ ಭೂಮಿಯಲ್ಲಿ, ಬಗರ್ ಹುಕುಂ ಜಮೀನಿನಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿಯವರೆಗೆ ತಮ್ಮ ಮನೆಯ ಹಕ್ಕು ಪತ್ರ ಯಾರ ಹೆಸರಲ್ಲಿದೆ ಎಂಬ ಮಾಹಿತಿಯೆ ಈ ಸಮುದಾಯಗಳಿಗೆ ಇಲ್ಲ ಎಂದು ರಾಷ್ಟ್ರೀಯ ಕಾನೂನು ಶಾಲೆಯ ಪ್ರಾಧ್ಯಾಪಕ ಪ್ರದೀಪ್ ರಮಾವತ್ ತಿಳಿಸಿದರು. 

ಕಂದಾಯ ಗ್ರಾಮಗಳಾಗಿಲ್ಲದ ಕಾರಣಕ್ಕಾಗಿ ನಾಗರಿಕ ಸೌಲಭ್ಯಗಳಾದ ರಸ್ತೆ, ಸಾರಿಗೆ, ಸರ್ಕಾರಿ ಕಛೇರಿ, ವಿದ್ಯುತ್, ಕುಡಿಯುವ ನೀರು, ಆಸ್ಪತ್ರೆ, ಶಾಲೆ, ಅಂಗನವಾಡಿ, ಪಂಚಾಯತ, ಇತ್ಯಾದಿ ಮೂಲಸೌಕರ್ಯಗಳಿಂದ ಲಂಬಾಣಿಗರು ವಂಚಿತರಾಗಿದ್ದಾರೆ. ಜನವಸತಿಗೆ ಶಾಶ್ವತ ನೆಲೆ ಇಲ್ಲದ ಕಾರಣ ವಲಸೆ, ಅಲೆಮಾರಿಗಳಂತೆ ಈ ಸಮುದಾಯ ತಿರುಗಾಡುತ್ತಿದೆ. ಮಕ್ಕಳ ಮಾರಾಟ, ಮಹಿಳೆಯರ ಮಾರಾಟ ಪ್ರಕರಣಗಳು ಸಮುದಾಯದಲ್ಲಿ ಭೀಕರ ಬಡತನ ಅವರಿಸಿರುವುದನ್ನು ಎತ್ತಿ ತೋರಿಸುತ್ತಿದೆ. ಇತ್ತ ಮನೆಯ ಹಕ್ಕುಗಳು ಇಲ್ಲದೆ, ಅತ್ತ ಉಳುಮೆಗೆ ಭೂಮಿಯೂ ಇಲ್ಲದ ಲಂಬಾಣಿಗರು ಪರಕೀಯರಂತಾಗಿರೊದು ದೇಶಕ್ಕಾಗುವ ಅವಮಾನ ಅಷ್ಟೇ ಎಂದು   ಒಕ್ಕೂಟದ ಅಧ್ಯಕ್ಷ ವೆಂಕಟೇಶ್ ಬಂಜಾರ ತಿಳಿಸಿದರು.

ಬಹುದಿನದ ಹೋರಾಟಕ್ಕೆ ಮಣಿದು ರಾಜ್ಯ ಸರ್ಕಾರ ಸದನದಲ್ಲಿ ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿಸುವ ಮಸೂದೆ ಮಂಡಿಸಿತ್ತು. ರಾಜ್ಯಪಾಲರು  ಈ ಮಸೂದೆಯನ್ನು ಅನುಮೋದಿಸೊ ಬದಲಾಗಿ ರಾಷ್ಟ್ರಪತಿಯವರಿಗೆ ಯಾಕೆ ರವಾನಿಸಿದರು ಎಂದು ತಿಳಿಯದಾಗಿದ್ದೇವೆ. ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿಸುವಲ್ಲಿನ ವಿಳಂಬತನ ಸಮುದಾಯಗಳನ್ನು ಮತ್ತಷ್ಟು ಕುಗ್ಗಿಸುತ್ತಿದೆ ಎಂದು ಚಳವಳಿಗಾರರು  ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News