ವಿಮಾನ ನಿಲ್ದಾಣ ಆರೋಗ್ಯಾಧಿಕಾರಿಯ ಆದೇಶದ ವಿರುದ್ಧ ಅನಿವಾಸಿ ಭಾರತೀಯರ ಆಕ್ರೋಶ

Update: 2017-07-10 12:44 GMT

ದುಬೈ, ಜು.10: ಅನಿವಾಸಿ ಭಾರತೀಯರು ವಿದೇಶಗಳಲ್ಲಿ ಮೃತಪಟ್ಟರೆ ಅವರ ಮೃತದೇಹವನ್ನು ತಾಯ್ನಾಡಿಗೆ ತರಬೇಕಿದ್ದರೆ 48 ಗಂಟೆ ಮುಂಚಿತವಾಗಿ ಅನುಮತಿ ಪಡೆದಿರಬೇಕೆಂಬ ಕೇರಳದ ಕರಿಪ್ಪೂರ್ ವಿಮಾನ ನಿಲ್ದಾಣದ ಆರೋಗ್ಯಾಧಿಕಾರಿಯ ಆದೇಶದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮೊದಲೇ ಸರಕಾರಗಳ ಕಠಿಣ ಕಾನೂನುಗಳಿಂದ ಸಂಕಷ್ಟ ಅನುಭವಿಸುತ್ತಿರುವ ಅನಿವಾಸಿ ಭಾರತೀಯರಿಗೆ ಈ ನಿಯಮವು ಮತ್ತಷ್ಟು ಕಂಟಕವಾಗಿ ಪರಿಣಮಿಸಲಿದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಯುಎಇ ಯಲ್ಲಿ ಭಾರತೀಯರು ಮೃತಪಟ್ಟರೆ ಪೊಲೀಸ್ ವರದಿ ದಾಖಲಿಸಿ, ಆರೋಗ್ಯ ಅಧಿಕಾರಿಗಳಿಂದ ಮರಣೋತ್ತರ ಪರೀಕ್ಷೆ ನಡೆಸಬೇಕು. ವರದಿ ಬಂದ ಬಳಿಕ ಪೊಲೀಸರು ಯುಎಇ ಆರೋಗ್ಯ ಸಚಿವಾಲಯದಿಂದ ಮರಣ ಪ್ರಮಾಣ ಪತ್ರ ನೀಡಲು ನಿರಾಕ್ಷೇಪಣಾ ಪತ್ರ ನೀಡಿದ ಬಳಿಕ ಮರಣ ಪ್ರಮಾಣ ಪತ್ರ ಪಡೆದುಕೊಳ್ಳಬೇಕು. ನಂತರ ಯುಎಇ ಎಮಿಗ್ರಷನ್ ಕಚೇರಿಯಲ್ಲಿ ವೀಸಾವನ್ನು ರದ್ದುಪಡಿಸಬೇಕು. ಈ ಎಲ್ಲ ಪ್ರಕಿಯೆ ಮುಗಿದ ಬಳಿಕವೇ ಭಾರತೀಯ ದೂತವಾಸ ಕಚೇರಿಯು ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಿ ಮೃತ ವ್ಯಕ್ತಿಯ ಪಾಸ್ ಪೋರ್ಟನ್ನು ರದ್ದುಗೊಳಿಸಿ ಮರಣ ಪ್ರಮಾಣ ಪತ್ರವನ್ನು ನೀಡುತ್ತದೆ.

ತದನಂತರ ಈ ಎಲ್ಲಾ ದಾಖಲೆಗಳನ್ನು ಪೋಲೀಸ್ ಇಲಾಖೆಯು ಪರಿಶೀಲಿಸಿ ನಿರಾಕ್ಷೇಪಣಾ ಪತ್ರದೊಂದಿಗೆ, "ಎಂಬಾಲ್ಮಿಂಗ್" ನಡೆಸಲು ಮೃತದೇಹವನ್ನು ಬಿಟ್ಟುಕೊಡುತ್ತಾರೆ. ಶರೀರವನ್ನು ಆರೋಗ್ಯ ಕೇಂದ್ರದಲ್ಲಿ "ಎಂಬಾಲ್ಮಿಂಗ್" ನಡೆಸಿ, ಪ್ರಮಾಣ ಪತ್ರದೊಂದಿಗೆ ಪುನಃ ಭಾರತೀಯ ದೂತವಾಸ ಕಚೇರಿಗೆ ತೆರಳಿ ಎಲ್ಲಾ ದಾಖಲೆಗಳನ್ನು ಮರು ಪರಿಶೀಲನೆಗೆ ನೀಡಿ ಪ್ರಮಾಣ ಪತ್ರಕ್ಕೆ ರಾಯಭಾರಿ ಕಚೇರಿಯ ಅಧಿಕಾರಿಯ ಸಹಿ ಹಾಗೂ ಮುದ್ರೆಯನ್ನು ಪಡೆದುಕೊಳ್ಳಬೇಕು. ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿರುವ ಅಧಿಕಾರಿಗೆ ಎಲ್ಲಾ ದಾಖಲೆಗಳನ್ನು ನೀಡಿ ದೃಢೀಕರಿಸಿ, ನಂತರ ವಿಮಾನಯಾನ ಸಂಸ್ಥೆಯ ಅಧಿಕಾರಿಗಳಿಗೆ ಈ ಎಲ್ಲಾ ಪತ್ರಗಳೊಂದಿಗೆ ಕಾರ್ಗೋ ಬುಕ್ಕಿಂಗ್ ಹಾಗೂ ಮೃತದೇಹವನ್ನು ಊರಿಗೆ ಕೊಂಡೊಯ್ಯುವ ವ್ಯಕ್ತಿಯ ಟಿಕೆಟ್ ದಾಖಲೆಗಳನ್ನು ನೀಡಬೇಕಾಗುತ್ತದೆ. ಈ ಎಲ್ಲಾ ಕಾರ್ಯವಿಧಾನಗಳನ್ನು ಪೂರೈಸಲು ಒಂದಕ್ಕಿಂತ ಹೆಚ್ಚು ದಿನಗಳು ತಗಲುತ್ತದೆ. ವಾರಾಂತ್ಯದಲ್ಲೇನಾದರೂ ಮೃತಪಟ್ಟಲ್ಲಿ ಕನಿಷ್ಠ 4-5 ದಿನಗಳು ತಗಲುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ನಾಸಿರ್ ಕಾರಾಜೆ ಹೇಳುತ್ತಾರೆ.

ಯುಎಇಯಲ್ಲಿ ಸರಕಾರಿ ಕಚೇರಿಗಳ ಕೆಲಸದ ಸಮಯ ಅಪರಾಹ್ನ 2:30 ಕ್ಕೆ ಕೊನೆಗೊಳ್ಳುವುದರಿಂದ, ಈ ಎಲ್ಲಾ ಪ್ರಕ್ರಿಯೆಗಳು ನಡೆಸುವಾಗ ಹೆಚ್ಚು ಸಮಯ ತಗಲಿದರೆ ಕನಿಷ್ಠ 2-3 ದಿವಸಗಳ ಕಾಲ ಅನಿವಾಸಿಗಳು ತಮ್ಮ ಕೆಲಸಗಳಿಗೆ ಗೈರು ಹಾಜರಾಗಿ ಇದರ ಹಿಂದೆ ಅಲೆಯಬೇಕಾಗುತ್ತದೆ. ಈ ಎಲ್ಲಾ ಕೆಲಸಗಳು ಮುಗಿದು ಮೃತ ಶರೀರವನ್ನುಊರಿಗೆ ತಲುಪಿಸಲು ಕನಿಷ್ಠ 2ರಿಂದ 3 ದಿವಸಗಳು ಬೇಕಾಗುತ್ತದೆ. ಇಷ್ಟೆಲ್ಲಾ ಕೆಲಸಗಳಿರುವಾಗ ಕರಿಪ್ಪುರಂನ ಆರೋಗ್ಯಾಧಿಕಾರಿ ಹೊರಡಿಸಿರುವ ಆದೇಶ ಅನಿವಾಸಿ ಭಾರತೀಯರನ್ನು ಸಂಕಷ್ಟಕ್ಕೀಡು ಮಾಡಿದೆ ಎಂದವರು ಹೇಳಿದ್ದಾರೆ.

ಆದ್ದರಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೂಡಲೇ ಮಧ್ಯ ಪ್ರವೇಶಿಸಿ ಈ ಆದೇಶವನ್ನು ಮರುಪರಿಶೀಲಿಸಿ ಅನಿವಾಸಿ ಭಾರತೀಯರ ಸಮಸ್ಯೆಗೆ ಸ್ಪಂದಿಸಬೇಕು. ಸರಕಾರಗಳೊಂದಿಗೆ ಸಮಾಲೋಚನೆ ನಡೆಸದೆ ಸರ್ವಾಧಿಕಾರ ಪ್ರದರ್ಶಿಸಿದ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ನಾಸಿರ್ ಕಾರಾಜೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News