ಆ.5 ರಿಂದ ‘ಅಖಿಲ ಭಾರತ ವಿದ್ಯಾರ್ಥಿ ಹೋರಾಟಗಳ ಸಮಾವೇಶ’
ಬೆಂಗಳೂರು, ಜು.17: ಪ್ರಜಾಪ್ರಭುತ್ವದ ಆಶಯಗಳಿಗಾಗಿ ಹಾಗೂ ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳ ಉಳಿವಿಗಾಗಿ ಹೋರಾಡುತ್ತಿರುವ ಪ್ರಗತಿಪರ ವಿದ್ಯಾರ್ಥಿ ಸಂಘಟನೆಗಳ ‘ಅಖಿಲ ಭಾರತ ವಿದ್ಯಾರ್ಥಿ ಹೋರಾಟಗಳ ಸಮಾವೇಶ’ವನ್ನು ಆ.5 ಮತ್ತು 6 ರಂದು ನಗರದ ಶಿಕ್ಷಕರ ಸದನದಲ್ಲಿ ಹಮ್ಮಿಕೊಳ್ಳಲಾಗಿದೆ. ಇಂದಿಗೂ ಈಡೇರದ ಸ್ವಾತಂತ್ರ ಹೋರಾಟದ ಆಶಯಗಳಿಗಾಗಿ ಹಲವಾರು ಪ್ರಜ್ಞಾವಂತ ವಿದ್ಯಾರ್ಥಿ, ಯುವಜನರು ತಮ್ಮದೇ ರೀತಿಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಸಂವಿಧಾನದ ಆಶಯಗಳ ಈಡೇರಿಕೆಗಾಗಿ, ಸಮಾನತೆಯ ಹಾದಿಗಾಗಿ ನಿರಂತರವಾದ ಪ್ರಯತ್ನಗಳು ನಡೆಯುತ್ತಿವೆ.
ಈ ನಿಟ್ಟಿನಲ್ಲಿ ದೇಶದ ವಿದ್ಯಾರ್ಥಿ ಸಮೂಹವನ್ನು ಒಂದೇ ವೇದಿಕೆ ಮೂಲಕ ಸಂಘಟನಾತ್ಮಕ ಚಳವಳಿ ರೂಪಿಸುವ ಸಲುವಾಗಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ವಿದ್ಯಾರ್ಥಿ ಹೋರಾಟಗಳ ರಾಷ್ಟ್ರೀಯ ಸಮಾವೇಶ ಸಮಿತಿ ಅಧ್ಯಕ್ಷೆ ಇಂದಿರಾ ಕೃಷ್ಣಪ್ಪ ಹೇಳಿದರು. ಶಾಲಾ-ಕಾಲೇಜುಗಳಲ್ಲಿ ಅಥವಾ ವಸತಿ ನಿಲಯಗಳಲ್ಲಿ ಉತ್ತಮ ಸೌಲಭ್ಯಗಳಿಗಾಗಿ, ದಿಲ್ಲಿಯ ನಿರ್ಭಯಾ, ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ರೋಹಿತ್ ವೇಮುಲ ಪ್ರಕರಣ ಸೇರಿದಂತೆ ಜಾತಿ, ಧರ್ಮ, ವರ್ಗ, ಲಿಂಗ ಹಾಗೂ ಜನಾಂಗೀಯ ಹಿಂಸೆಗಳು, ಶಿಕ್ಷಣದ ಖಾಸಗೀಕರಣ, ಕೋಮುವಾದೀಕರಣ ವಿರುದ್ಧ ವಿದ್ಯಾರ್ಥಿಗಳನ್ನು ಸಂಘಟಿಸಿ ರಚನಾತ್ಮಕ ಚಳವಳಿಯನ್ನು ಕಟ್ಟುತ್ತಿರುವ ವಿದ್ಯಾರ್ಥಿ ಸಂಘಟನೆಗಳ ಸಂಪರ್ಕ, ಭಾಂದವ್ಯ, ಸಮನ್ವಯ ಇನ್ನಷ್ಟು ಗಟ್ಟಿಯಾಗಬೇಕಿದೆ ಎಂದರು.
ದೇಶದಲ್ಲಿ ಆಡಳಿತ ನಡೆಸುತ್ತಿರುವ ಸರಕಾರಗಳು ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಿ ಮನುವಾದವನ್ನು ಮರು ಸ್ಥಾಪಿಸುವ ಹುನ್ನಾರ ನಡೆಸುತ್ತಿದ್ದಾರೆ. ಜನಪರವಾದ, ವಿದ್ಯಾರ್ಥಿಗಳ ಪರವಾದ ನೀತಿಗಳನ್ನು ಜಾರಿ ಮಾಡುವ ಬದಲಿಗೆ ವಿರೋಧಿ ನೀತಿಗಳನ್ನು ಜಾರಿ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಆಳುವ ಸರಕಾರಗಳನ್ನು ಜಾಗೃತಗೊಳಿಸುವ ಹಾಗೂ ಪ್ರಶ್ನಿಸುವ ಸಲುವಾಗಿ ಈ ಸಮಾವೇಶದ ಮೂಲಕ ಒಮ್ಮತದ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಆ.5 ರಂದು ನಗರದ ಸಿಟಿ ರೈಲು ನಿಲ್ದಾಣದಿಂದ ಶಿಕ್ಷಕರ ಸದನದವರೆಗೆ ವಿದ್ಯಾರ್ಥಿಗಳ ರ್ಯಾಲಿ ಹಮ್ಮಿಕೊಳ್ಳಲಾಗಿದ್ದು, ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ರ್ಯಾಲಿಗೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮವನ್ನು ಹಿರಿಯ ಶಿಕ್ಷಣ ತಜ್ಞ ಪ್ರೊ.ಅನಿಲ್ ಸದ್ಗೋಪಾಲ್ ಉದ್ಘಾಟಿಸಲಿದ್ದು, ಯುಜಿಸಿ ಮಾಜಿ ನಿರ್ದೇಶಕ ಪ್ರೊ.ಸುಖದೇವ್ ಥೋರಟ್, ಲೇಖಕ ಶ್ರೀಪಾದ್ ಭಟ್ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಾನ ಶಿಕ್ಷಣಕ್ಕಾಗಿ ಜನಾಂದೋಲನದ ಶ್ರೀಪಾದ್ ಭಟ್, ಎಸ್ಐಓ ಝೀಶಾನ್, ಡಿಎಸ್ಎಫ್ನ ರಾಜ್ಗೋಪಾಲ್, ಎಐಎಸ್ಎಫ್ನ ಶಾಂತರಾಮ್ ಜೈನ್ ಉಪಸ್ಥಿತರಿದ್ದರು.