×
Ad

ಮೂಡಬಿದಿರೆ ಮಾರುಕಟ್ಟೆ ಕಟ್ಟಡ ನೆಲಸಮ: ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2017-07-18 21:09 IST

ಬೆಂಗಳೂರು, ಜು.18: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯಲ್ಲಿ ಪ್ರಾಚೀನ ಚೌಟರ ಅರಮನೆ ಸಮೀಪ ಹಳೆ ಮಾರುಕಟ್ಟೆ ಕಟ್ಟಡ ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಿಸಲು ನಗರ ಸಭೆ ಮುಂದಾಗಿರುವ ಕ್ರಮದ ಸಂಬಂಧ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ನಗರಸಭೆಯ ಕ್ರಮ ಪ್ರಶ್ನಿಸಿ ಜೇಸನ್ ಮಾರ್ಷಲ್ ನವಾರೇಸ್ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಮತ್ತು ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ಪೀಠ ಸರಕಾರ, ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಮೂಡಬಿದಿರೆ ನಗರಸಭೆಗೆ ನೋಟಿಸ್ ಜಾರಿ ಮಾಡಿತು.
      
ಅರ್ಜಿದಾರರ ಪರ ವಕೀಲರು ವಾದಿಸಿ, ಮೂಡಬಿದಿರೆಯಲ್ಲಿ ಪುರಾತನವಾದ ಚೌಟರ ಅರಮನೆ ಇದ್ದು, ಅದನ್ನು ಸ್ಮಾರಕವಾಗಿ ಪುರಾತತ್ವ ಇಲಾಖೆ ಅಲ್ಲದೆ, ಸಂರಕ್ಷಿತ ಸ್ಮಾರಕ ಎಂದು ಘೋಷಿಸಲಾಗಿದೆ. ಪುರಾತತ್ವ ಸ್ಮಾರಕ ಸಂರಕ್ಷಣಾ ನಿಯಮಗಳ ಪ್ರಕಾರ ಪ್ರಾಚೀನ ಸ್ಮಾರಕಗಳ ಸುತ್ತಲಿನ ಸಂರಕ್ಷಿತ ಪ್ರದೇಶದಿಂದ 200 ಮೀಟರ್ ಒಳಗೆ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ. ಆದರೆ, ಈ ಚೌಟರ ಅರಮನೆಯ 200 ಮೀಟರ್ ಮೂಡಬಿದಿರೆ ನಗರಸ ಸಭೆಗೆ ಸೇರಿದ 100 ವರ್ಷಕ್ಕೂ ಹಳೆಯ ಮಾರುಕಟ್ಟೆ ಕಟ್ಟಡ ಇದೆ. ಅದನ್ನು ಸದ್ಯ ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಿಸಲು ನಗರ ಸಭೆ ಮುಂದಾಗಿದ್ದು, ಈಗಾಗಲೆ ಕಾಮಗಾರಿಗೆ ಗುತ್ತಿಗೆದಾರದಿಂದ ಟೆಂಡರ್ ಆಹ್ವಾನಿಸಲಾಗಿದೆ. ಒಂದು ವೇಳೆ ಈ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣ ಆದ ಪಕ್ಷದಲ್ಲಿ ಈ ಸ್ಮಾರಕಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ. ಹೀಗಾಗಿ, ಮಾರುಕಟ್ಟೆ ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಾಣ ಮಾಡಬಾರದು ಎಂದು ಸರಕಾರ ಮತ್ತು ನಗರಸಭೆಗೆ ನಿರ್ದೇಶಿಸುವಂತೆ ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News