ಸೋಮ್ದೇವ್ ನೇತೃತ್ವದಲ್ಲಿ ‘ಶ್ರೇಷ್ಠತೆಯ ಕೇಂದ್ರ’ ಸ್ಥಾಪನೆ
ಹೊಸದಿಲ್ಲಿ, ಜು.26: ಭಾರತದ ಮಾಜಿ ನಂ.1 ಆಟಗಾರ ಸೋಮ್ದೇವ್ ದೇವ ವರ್ಮನ್ ಮುಂದಾಳತ್ವದಲ್ಲಿ ದಿಲ್ಲಿ ಲಾನ್ ಟೆನಿಸ್ ಸಂಸ್ಥೆ(ಡಿಎಲ್ಟಿಎ)ಯಲ್ಲಿ ‘ಶ್ರೇಷ್ಠತೆಯ ಕೇಂದ್ರ’ ಸ್ಥಾಪಿಸಲು ಕೇಂದ್ರಸರಕಾರ ನಿರ್ಧರಿಸಿದೆ.
ಸರಕಾರದ ಕ್ರೀಡಾ ವೀಕ್ಷಕರಾಗಿರುವ ಸೋಮ್ದೇವ್ ಮೇಲುಸ್ತುವಾರಿಯಲ್ಲಿ ಅಖಿಲ ಭಾರತ ಟೆನಿಸ್ ಸಂಸ್ಥೆ(ಎಐಟಿಎ) ಕ್ರೀಡಾ ಸಚಿವಾಲಯಕ್ಕೆ ಸಮಗ್ರ ಯೋಜನೆೊಂದನ್ನು ಸಲ್ಲಿಸಿದ್ದು, ಅನುಮತಿಗಾಗಿ ಕಾಯುತ್ತಿದೆ. ವಿವಿಧ ವಯೋಮಿತಿಯವರಿಗೆ ವಿದೇಶಿ ಕೋಚ್ಗಳ ಮೂಲಕ ಕೋಚಿಂಗ್ ನೀಡುವ ಯೋಜನೆಯಿದ್ದು, ರಾಷ್ಟ್ರೀಯ ಟೆನಿಸ್ ಅಕಾಡಮಿಯಲ್ಲಿ ವಿಜ್ಞಾನ ಕೇಂದ್ರ ಸ್ಥಾಪನೆಗೆ ಚಿಂತನೆ ನಡೆದಿದೆ. ಆಟಗಾರರ ಸರ್ವಾಂಗೀಣ ಬೆಳವಣಿಗೆಗೆ ತಜ್ಞ ಫಿಸಿಯೊ ಹಾಗೂ ಕ್ರೀಡಾ ಫಿಜಿಯೋ ನೇಮಕಕ್ಕೆ ನಿರ್ಧರಿಸಲಾಗಿದೆ.
ಅಕಾಡಮಿಯು ತರಬೇತಿಗೆ ಸುಮಾರು 300 ಮಕ್ಕಳನ್ನು ಆಯ್ಕೆ ಮಾಡಲಿದ್ದು, ಕೇಂದ್ರ ಸರಕಾರ ಈ ಯೋಜನೆಗೆ ವಾರ್ಷಿಕವಾಗಿ 20 ಕೋ.ರೂ.ವ್ಯಯಿಸಬೇಕಾಗುತ್ತದೆ. ಈ ಯೋಜನೆಯನ್ನು ಕ್ರೀಡಾ ಸಚಿವಾಲಯ ಸೂಕ್ಷ್ಮವಾಗಿ ಪರೀಕ್ಷಿಸಲಿದೆ. ‘‘ಕಾಮನ್ವೆಲ್ತ್ ಗೇಮ್ಸ್ ಹಾಗೂ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ವಿಜೇತ ಸೋಮ್ದೇವ್ ಈ ಯೋಜನೆ ರೂಪಿಸಿದ್ದಾರೆ’’ಎಂದು ಎಐಟಿಎ ಕಾರ್ಯದರ್ಶಿ ಹಿರೋನ್ಮಯ್ ಚಟರ್ಜಿ ತಿಳಿಸಿದ್ದಾರೆ. ‘ಶ್ರೇಷ್ಠತೆಯ ಕೇಂದ್ರ’ಸ್ಥಾಪನೆಯಾದರೆ ಕಳೆದ 20 ವರ್ಷಗಳಿಂದ ಜೂನಿಯರ್ ಕೋಚಿಂಗ್ ಕಾರ್ಯಕ್ರಮ ನಡೆಸುತ್ತಿರುವ ಡಿಎಲ್ಟಿಎ ಭವಿಷ್ಯದ ಬಗ್ಗೆ ಪ್ರಶ್ನೆ ಉದ್ಬವಿಸಲಿದೆ. ಡಿಎಲ್ಟಿಎಯಲ್ಲಿ 20 ವರ್ಷಗಳಿಂದ ಸುಮಾರು 20 ಕೋಚ್ಗಳು ಕಾರ್ಯನಿರ್ವಹಿಸುತ್ತಿದ್ದಾರೆ.