ಮುಂಗಾರು ಮಳೆ ತೀವ್ರ ಕೊರತೆ: ಪ್ರಸಕ್ತ ಸಾಲಿನಲ್ಲೂ ಆವರಿಸಲಿರುವ ಬರದ ಛಾಯೆ?
ಬೆಂಗಳೂರು, ಜು. 29: ಮುಂಗಾರು ಹಂಗಾಮಿನಲ್ಲಿಯೂ ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದಲ್ಲಿ ತೀವ್ರ ಸ್ವರೂಪದ ಮಳೆ ಕೊರತೆ ಇದ್ದು, ರಾಜ್ಯದ 176 ತಾಲೂಕುಗಳ ಪೈಕಿ ಸುಮಾರು ನೂರು ತಾಲೂಕುಗಳಲ್ಲಿ ಮಳೆ ಅಭಾವ ಉಂಟಾಗಿದ್ದು, ಬರದ ಛಾಯೆ ಆವರಿಸಿದೆ.
ರಾಜ್ಯದ ಹತ್ತು ಜಿಲ್ಲೆಗಳಲ್ಲಿ ತೀವ್ರ ಮಳೆ ಕೊರತೆ ಇದ್ದು, ಮುಂಗಾರು ಮಳೆ ಕಣ್ಣಾಮುಚ್ಚಾಲೆ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳೆ ಆರಂಭವಾಗಿಲ್ಲ. ಕೆಲ ಪ್ರದೇಶಗಳಲ್ಲಿ ಬಿತ್ತನೆ ಕಾರ್ಯ ಆರಂಭವಾಗಿದ್ದರೂ, ಬಿತ್ತನೆ ಬೀಜ ಮೊಳಕೆಯೊಡೆದಿಲ್ಲ. ಇನ್ನು ಕೆಲವು ಕಡೆಗಳಲ್ಲಿ ಮೊಳಕೆಯೊಡೆದ ಪೈರು ಮಳೆ ಕೊರತೆಯಿಂದ ಬಾಡಿ ಹೋಗುತ್ತಿದೆ.
ಸತತ ನಾಲ್ಕು ವರ್ಷಗಳಿಂದ ಮಳೆ ಕೊರತೆ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ರೈತ ಸಮುದಾಯ, ಪ್ರಸಕ್ತ ಸಾಲಿನಲ್ಲಿಯೂ ಬರ ಪರಿಸ್ಥಿತಿಗೆ ಸಿಲುಕುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಆತಂಕಕ್ಕೆ ಒಳಗಾಗಿದ್ದು, ತಲೆ ಮೇಲೆ ಕೈಹೊತ್ತು ಕೂರುವ ದುಸ್ಥಿತಿ ಎದುರಾಗಿದೆ.
ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ಕಳೆದ ಜೂ.1ರಿಂದ ಇದುವರೆಗೆ ವಾಡಿಕೆ ಮಳೆ ಪ್ರಮಾಣ ರಾಜ್ಯದಲ್ಲಿ 185 ಮಿ.ಮೀ. ಆಗಿದ್ದು, ಮಳೆ ಬಿದ್ದಿರುವುದು ಕೇವಲ 179 ಮಿ.ಮೀ ಮಾತ್ರ. ಕರಾವಳಿ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ವಾಡಿಕೆ ಪ್ರಮಾಣದ ಮಳೆಯಾಗಿದ್ದರೆ, ದಕ್ಷಿಣ ಒಳನಾಡಿನಲ್ಲಿ ಶೇ.36ರಷ್ಟು ಹಾಗೂ ಮಲೆನಾಡಿನಲ್ಲಿ ಶೇ.15ರಷ್ಟು ಮಳೆ ಕೊರತೆ ಕಂಡುಬಂದಿದೆ.
ಜೂ.1ರಿಂದ ಜು.22ರವರೆಗಿನ ಮಾಹಿತಿ ಪ್ರಕಾರ ಕೇವಲ 8 ತಾಲೂಕುಗಳಲ್ಲಿ ಮಾತ್ರ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. 61ತಾಲೂಕುಗಳಲ್ಲಿ ವಾಡಿಕೆ ಪ್ರಮಾಣದ ಮಳೆಯಾಗಿದ್ದು, 97 ತಾಲೂಕುಗಳು ಬರ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ ಎಂದು ತಿಳಿದು ಬಂದಿದೆ.
ಬೆಂ.ನಗರ, ಬೆಂ.ಗ್ರಾಮಾಂತರ, ಮಂಡ್ಯ, ಚಾಮರಾಜನಗರ, ಮೈಸೂರು, ರಾಮನಗರ, ಹಾವೇರಿ, ಧಾರವಾಡ, ಗದಗ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ಕೋಲಾರ, ಚಿಕ್ಕಬಳ್ಳಾಪುರ, ಕೊಡುಗು ಜಿಲ್ಲೆಗಳಲ್ಲಿ ವಾಡಿಕೆಗಿಂತ ಮಳೆ ಕೊರತೆ ಉಂಟಾಗಿದೆ.
ಅದರಲ್ಲೂ ದಕ್ಷಿಣ ಒಳನಾಡಿನಲ್ಲಿ ಹೆಚ್ಚು ಮಳೆ ಕೊರತೆ ಕಂಡು ಬಂದಿದೆ. ರಾಜ್ಯದ 3602 ಸಣ್ಣ ಕೆರೆಗಳ ಪೈಕಿ ಭರ್ತಿಯಾಗಿರುವುದು ಕೇವಲ 17 ಕೆರೆಗಳು ಮಾತ್ರ. ಶೇ.50ಕ್ಕಿಂತ ಹೆಚ್ಚು ನೀರು ಸಂಗ್ರಹವಾಗಿರುವುದು 56 ಕೆರೆಗಳು. ಉಳಿದ ಕೆರೆಗಳು ಸತತವಾಗಿ ನಾಲ್ಕೈದು ವರ್ಷಗಳಿಂದ ನೀರಿನ ಕೊರತೆ ಎದುರಿಸುತ್ತಿವೆ.
ಜನರಿಗೆ ನೀರಿನ ಕೊರತೆ ಸೃಷ್ಟಿಯಾಗಿದ್ದು, ಜಾನುವಾರುಗಳಿಗೆ ಮೇವು ಮತ್ತು ನೀರಿಲ್ಲ ದುಸ್ಥಿತಿ ಸೃಷ್ಟಿಯಾಗಿದೆ. ಈ ಮಧ್ಯೆ ಬರ ಪೀಡಿತ ಪ್ರದೇಶಗಳ ಘೋಷಣೆ ಸಂಬಂಧ ಕೇಂದ್ರದ ಪರಿಷ್ಕೃತ ಮಾರ್ಗಸೂಚಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಬರೆ ಎಳೆಯುವಂತಿದೆ.
ಬರ ಪೀಡಿತ ತಾಲೂಕುಗಳ ಘೋಷಣೆ ಸಂಬಂಧ ಸಚಿವ ಸಂಪುಟ ಉಪ ಸಮಿತಿ ಸಭೆ ಸೇರಿ ಶೀಘ್ರದಲ್ಲೆ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯನ್ನು ಆಧರಿಸಿ ಬರ ಪೀಡಿತ ಪ್ರದೇಶಗಳ ಘೋಷಣೆ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.