×
Ad

ನಗರೋತ್ಥಾನ ಯೋಜನೆಯ ಕಾಮಗಾರಿಗಳನ್ನು ವರ್ಷಾಂತ್ಯದೊಳಗೆ ಪೂರ್ಣಗೊಳಿಸಲು ಸಿಎಂ ಗಡುವು

Update: 2017-08-05 21:56 IST

ಬೆಂಗಳೂರು, ಆ.5: ಪಾಲಿಕೆ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳನ್ನು ವರ್ಷಾಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲಿಕೆ ಅಧಿಕಾರಿಗಳು ಮತ್ತು ಮುಖ್ಯ ಎಂಜಿನಿಯರ್‌ಗಳಿಗೆ ಸೂಚನೆ ನೀಡಿದ್ದಾರೆ.

ಶನಿವಾರ ನಗರ ಪ್ರದಕ್ಷಿಣೆಯ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರಿ ಅನುದಾನವನ್ನು ನಮ್ಮ ಸರಕಾರ ಒದಗಿಸಿದೆ. 7,300 ಕೋಟಿ ರೂ. ವೆಚ್ಚದಲ್ಲಿ ರಸ್ತೆ, ಪಾದಚಾರಿ ಮಾರ್ಗಗಳ ಅಭಿವೃದ್ಧಿ, ಮಳೆ ನೀರು ಹರಿಯುವ ಚರಂಡಿಗಳ ಪುನಶ್ಚೇತನ ಮತ್ತಿತರ ಕಾಮಗಾರಿಗಳು ಬಿರುಸಿನಿಂದ ಸಾಗಿದ್ದು, ಎಲ್ಲ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಮಹಾನಗರಕ್ಕೆ ಹೊಸ ರೂಪ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮಳೆ ನೀರು ಹರಿಯುವ ಚರಂಡಿಗಳಿಗೆ ಸಂಬಂಧಿಸಿದಂತೆ 408 ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ 223 ಕಾಮಗಾರಿ ಆರಂಭವಾಗಿದೆ. ಇದರಲ್ಲಿ 24 ಕಿ.ಮೀ. ಕಾಮಗಾರಿ ಮುಗಿದಿದ್ದು, 58 ಕಿ.ಮೀ. ಮಾರ್ಗದ ಕೆಲಸ ವಿವಿಧ ಹಂತದಲ್ಲಿದೆ. ಒಟ್ಟು 83 ಕಿ.ಮೀ. ಮಾರ್ಗದಲ್ಲಿ ಕಾಮಗಾರಿ ನಡೆಯುತ್ತಿದೆ. ಇದಕ್ಕಾಗಿ 800 ಕೋಟಿ ನೀಡಲಾಗಿದೆ ಎಂದು ವಿವರಿಸಿದರು.

ಮೆಟ್ರೋ ಪಾದಚಾರಿ ಮಾರ್ಗ ಅಭಿವೃದ್ಧಿ: ನಗರದಲ್ಲಿ 729 ಕಿ.ಮೀ. ಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ. ಎಂಟು ಪ್ರಮುಖ ರಸ್ತೆಗಳಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದೇವೆ. ಮುಖ್ಯವಾಗಿ ಮೆಟ್ರೋ ರೈಲ್ವೆ ನಿಲ್ದಾಣ ಇರುವ ಕಡೆ ಪಾದಚಾರಿ ಮಾರ್ಗಗಳು ಸುರಕ್ಷಿತವಾಗಿ ಇರಬೇಕು. ಸಾರ್ವಜನಿಕರ ಓಡಾಟಕ್ಕೆ ಅನುಕೂಲಕರವಾಗಿರಬೇಕು ಎಂಬುದು ನಮ್ಮ ಉದ್ದೇಶ. ಈ ಹಿನ್ನೆಲೆಯಲ್ಲಿ ಪಾದಚಾರಿ ಮಾರ್ಗಗಳನ್ನು ಉನ್ನತ ಮಟ್ಟಕ್ಕೆ ಏರಿಸಲು ನಿರ್ಧರಿಸಲಾಗಿದೆ ಎಂದು.

ಎಂಜಿ ರಸ್ತೆ ಅಭಿವೃದ್ಧಿ: ನಗರದ ವಾಣಿಜ್ಯ ಕೇಂದ್ರಬಿಂದುಗಳಾದ ಎಂ.ಜಿ.ರಸ್ತೆಯ ಪಾದಚಾರಿ ಮಾರ್ಗದ ಮೇಲ್ದರ್ಜೆ ಕಾಮಗಾರಿ, ಚರ್ಚ್ ಸ್ಟ್ರೀಟ್ ಸೇರಿದಂತೆ ಮತ್ತಿತರ 8 ಕಡೆ ಬಿಬಿಎಂಪಿ ಮತ್ತು ಬಿಎಂಆರ್‌ಸಿಎಲ್ ಜಂಟಿಯಾಗಿ 40 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಕೆಲಸ ಮುಗಿಯುವ ಹಂತದಲ್ಲಿದೆ. ಎಂ.ಜಿ ರಸ್ತೆಯ ಪಾದಚಾರಿ ಮಾರ್ಗದ ಮೇಲ್ದರ್ಜೆ ಕಾಮಗಾರಿ ಮತ್ತು ಚರ್ಚ್‌ಸ್ಟ್ರೀಟ್ ರಸ್ತೆಗಳಿಗೆ ಟೆಂಡರ್ ಶ್ಯೂರ್ ಕಾಮಗಾರಿಯನ್ನು ವಿದೇಶಿ ರಸ್ತೆಗಳ ಮಾದರಿಯಲ್ಲಿ ಗ್ರಾನೈಟ್ ಹಾಕಲಾಗುವುದು ಎಂದು ತಿಳಿಸಿದರು.

ಈಗಾಗಲೇ ಶೇ. 60ರಷ್ಟು ಕಾಮಗಾರಿ ಮುಗಿದಿದೆ. ಕೋರಮಂಗಲದ ಮೇಸ್ತ್ರಿಪಾಳ್ಯ ಉದ್ಯಾನವನದಲ್ಲಿ 7 ಕೋಟಿ ರೂ. ವೆಚ್ಚದ ಕಾಮಗಾರಿ ನಡೆಯುತ್ತಿದೆ. ಜೊತೆಗೆ ಅಲ್ಲಿನ ಕೆರೆ ಅಭಿವೃದ್ಧಿಪಡಿಸಲು ಸೂಚಿಸಿದೆ. ಅಕ್ಟೋಬರ್ ವೇಳೆಗೆ ಕೆಲಸ ಮುಗಿಸಲು ಆದೇಶ ನೀಡಲಾಗಿದೆ ಎಂದರು.

ಹೊರ ವರ್ತುಲ ರಸ್ತೆಯನ್ನು ಮೈಸೂರು ರಸ್ತೆಯಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ ಸಿಗ್ನಲ್ ಮುಕ್ತ ಕಾರಿಡಾರ್‌ಆಗಿ ಪರಿವರ್ತನೆ ಮಾಡಲಾಗುತ್ತಿದೆ. ಜಯದೇವ ಆಸ್ಪತ್ರೆ ಜಂಕ್ಷನ್ ಬಳಿ ನಡೆಯುತ್ತಿರುವ ಮೇಲು ರಸ್ತೆ ಕಾಮಗಾರಿಯನ್ನು ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News