ನಿರ್ಧಾರದ ಜಾಗದಲ್ಲಿ ಮಹಿಳೆಗಿರಲಿ ಸ್ಥಾನ: ದು.ಸರಸ್ವತಿ
ಬೆಂಗಳೂರು, ಆ.6: ಯಾವುದೇ ಜನಪರ ಚಳವಳಿಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಸ್ಥಾನದಲ್ಲಿ ಮಹಿಳೆಗೆ ಹೆಚ್ಚಿನ ಸ್ಥಾನವಿರಬೇಕು. ಆಗ ಮಾತ್ರ ಆ ಚಳವಳಿ ಚಲನಶೀಲತೆಯನ್ನು ಪಡೆದುಕೊಳ್ಳಲು ಸಾಧ್ಯವೆಂದು ಕವಿಯತ್ರಿ ದು.ಸರಸ್ವತಿ ಆಶಯ ವ್ಯಕ್ತಪಡಿಸಿದ್ದಾರೆ.
ರವಿವಾರ ಅಖಿಲ ಭಾರತ ಪ್ರಗತಿಪರ ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟ ನಗರದ ಶಿಕ್ಷಕರ ಸದನದಲ್ಲಿ ಆಯೋಜಿಸಿದ್ದ ‘ವಿದ್ಯಾರ್ಥಿ ಹೋರಾಟಗಳ ರಾಷ್ಟ್ರೀಯ ಸಮಾವೇಶ-2017 ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಗತಿ ಹಾಗೂ ದಲಿತಪರ ಚಳವಳಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ಕೊಡಬೇಕೆಂದು ಡಾ.ಬಿ.ಆರ್.ಅಂಬೇಡ್ಕರ್ರವರ ಮೂಲ ಆಶಯವಾಗಿತ್ತು. ಆದರೆ, ಇಲ್ಲಿಯವರೆಗೂ ಈ ಅಂಶವನ್ನು ಯಾರೂ ಗಂಭೀರವಾಗಿ ತೆಗೆದುಕೊಂಡಿಲ್ಲ. ಇನ್ನು ಮುಂದಾದರು ಈ ಬಗ್ಗೆ ಚಿಂತನೆ ನಡೆಸಬೇಕೆಂದು ಅವರು ಹೇಳಿದರು.
ಮಹಿಳೆಯನ್ನು ಚಳವಳಿಯ ಭಾಗವಾಗಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಪುರುಷ ಸಂಘಟಕರು ಹಾಗೂ ಸಂಘಟನೆಯ ಸ್ವರೂಪದವನ್ನೇ ಬದಲಾಯಿಸಬೇಕಾಗುತ್ತದೆ. ಮಹಿಳೆಗೆ ಸೂಕ್ತವಾಗುವಂತಹ ಸಮಯದಲ್ಲೇ ಸಂಘಟನೆಯ ಸಭೆಗಳನ್ನು ನಡೆಸಬೇಕಾಗುತ್ತದೆ. ಸಂಘಟನೆಯಲ್ಲಿರುವ ಮಂದಿ ತಮ್ಮ ಪತಿ, ಪತ್ನಿಯನ್ನು ಗೆಳೆಯರಂತೆ ನೋಡಿಕೊಂಡು ಪರಸ್ಪರ ಸಹಕರಿಸುತ್ತಾ ಜೀವನ ನಡೆಸಬೇಕು. ಆಗ ಮಹಿಳೆಯರು ಸಂಘಟನೆಯಲ್ಲಿ ಸಕ್ರೀಯವಾಗಿ ಭಾಗವಹಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ವಿದ್ಯಾರ್ಥಿ ಸಂಘಟನೆಯ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಕೆಲವೊಂದು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡು ಮಾದರಿ ಸಮಾಜವನ್ನು ನಿರ್ಮಿಸಬೇಕಾಗುತ್ತದೆ. ಯಾವುದೇ ಕಾರಣಕ್ಕೂ ವರದಕ್ಷಿಣೆ ತೆಗೆದುಕೊಳ್ಳುವುದಿಲ್ಲ. ಯಾವುದೇ ಹುಡುಗಿಯ, ಮಹಿಳೆಯ ದೇಹವನ್ನು ಅವರ ಅನುಮತಿಯಿಲ್ಲದೆ ಮುಟ್ಟಬಾರದು ಎಂದು ಶಪತ ಮಾಡಬೇಕು. ಆ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದು ಅವರು ಹೇಳಿದರು.
ಜನವಾದಿ ಸಂಘಟನೆಯ ನಾಯಕಿ ಕೆ.ನೀಲಾ ಮಾತನಾಡಿ, ಉತ್ತರ ಕರ್ನಾಟಕ ಭಾಗದ ಕೂಲಿಕಾರ್ಮಿಕರ, ದಲಿತರ, ಮಹಿಳೆಯರ ಬದುಕು ತೀರ ಶೋಚನೀಯವಾಗಿದೆ. ಹೀಗಾಗಿ ಅವರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಸಂಘಟನೆಗಳು ಆ ಭಾಗದ ಕಡೆಗೆ ಹೆಚ್ಚಿನ ಗಮನ ಕೊಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞ ಪ್ರೊ.ಹರಗೋಪಾಲ್, ಹಿರಿಯ ಸಂಶೋಧಕ ರಹಮತ್ ತರಿಕೆರೆ, ಎಸ್ಐಒ ಸಂಘಟನೆಯ ಮುಖಂಡ ರಫೀಕ್ ಸೇರಿದಂತೆ ಹಲವು ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.