ಬಕಾವಲಿ ಹೂ

Update: 2017-08-12 17:52 GMT

ಭಾರತ ಉಪಖಂಡದಲ್ಲಿ ಬಲು ಜನಪ್ರಿಯ ವಾಗಿರುವ ‘ಗುಲ್-ಏ-ಬಕಾವಲಿ’ ಅಥವಾ ‘ಗುಲೇಬಕಾವಲಿ’ ಎಂಬ ಕಥಾನಕವು ಇದೀಗ ‘ಬಕವಲಿ ಹೂ’ ಎಂಬುದಾಗಿ ಮಿತ್ರ ಸುಧೀರ್ ಅತ್ತಾವರ್ ಅವರ ಸಶಕ್ತ ನಾಟಕೀಕರಣದ ಮೂಲಕ ಸಮಕಾಲೀನ ಕನ್ನಡ ನಾಟಕ ಸಾಹಿತ್ಯದಲ್ಲಿ ಸೇರ್ಪಡೆಗೊಂಡಿದೆ.

ಗುಲೇಬಕಾವಲಿ ಕಥಾಸಾರವು ಮೂಲತಃ ಭರತಖಂಡದಲ್ಲಿ ಹುಟ್ಟುಪಡೆದು, ತದನಂತ ರದಲ್ಲಿ ಮಧ್ಯಪ್ರಾಚ್ಯದಲ್ಲೂ ಪ್ರಸರಣಗೊಂಡು ಬಹುಸಂಸ್ಕೃತಿಯ- ಟ್ರಾನ್ಸ್ ಕಲ್ಚರ್-ಲೇಪನ ಅಂಟಿಸಿ ಕೊಂಡಿದೆ ಎಂದೆನಿಸುತ್ತದೆ ನನಗೆ. ನನ್ನ ಈ ಊಹಾವಾದವನ್ನು ಮಂಡಿಸಲು ಹೊರಡುವುದಾದರೆ, ಮೊದಲಿಗೆ ಬಕಾವಲಿ ಹೂ ನಾಟಕದ ನಾಯಕ ಪಾತ್ರ ತಾಜುಲ್ ಮುಲ್ಕ್ ಎನ್ನುವ ನಾಮಾಂಕಿತವನ್ನೇ ಗಮನಿಸಬಹುದು. ಈ ಹೆಸರು ಪುರಾತನ ಪರ್ಷಿಯಾ ಮೂಲದ್ದಾಗಿದ್ದು ಹನ್ನೊಂದನೆ ಶತಮಾನದಲ್ಲಿ ಲಿಖಿತರೂಪಕ್ಕಿಳಿದ ‘ಅಲಿಫ್ ಲೈಲಾ ವಾಹ್ ಲೈಲಾ’ (ಹಝಾರ್ ಅಫ್ಸಾನಾ. ಸಾವಿರದೊಂದು ರಾತ್ರಿಗಳು, ಅರೇಬಿಯನ್ ನೈಟ್ಸ್ ಮುಂತಾಗಿ ಪ್ರಖ್ಯಾತ) ಕೃತಿಯ ಎರಡನೆ ಅಧ್ಯಾಯದ ನೂರಾ ಒಂಬತ್ತನೆ ರಾತ್ರಿಯ ಕಥೆಯಲ್ಲಿ ಪ್ರಸ್ತಾಪವಾಗಿದೆ, ಆದರೆ ಈ ಪರ್ಷಿಯನ್ ವ್ಯಕ್ತಿ ನಾಮಾಂಕಿತಕ್ಕೆ ತದ್ವಿರುದ್ಧವಾಗಿ ಈ ಕಥೆ ಭಾರತದ್ದೇ ಎನ್ನುವುದನ್ನು ಸಾಧಿಸಲು ಇಲ್ಲಿ ಘಟಿಸುವ ಕಥಾ ಸನ್ನಿವೇಶಗಳ ಸ್ಥಳ ನಾಮಾಂಕಿತವನ್ನು ಹೆಸರಿಸಬಹುದು. ಈ ಕಥೆ ನಡೆಯುವ ಭೌಗೋಳಿಕ ಪರಿಸರವು ಭಾರತ ದೇಶದ ರೇವಾ ಪಟ್ಟಣವಾಗಿದೆ. (ಇಂದಿನ ರೀವಾ ಪಟ್ಟಣ, ಮಧ್ಯ ಪ್ರದೇಶ). ಇನ್ನೂ ವಿಚಿತ್ರವೆನ್ನಿಸುವ ಅಂಶವೆಂದರೆ - ಈ ಮುಸಲ್ಮಾನ ಧರ್ಮೀಯರು ಪಾತ್ರಗಳಿರುವ ಕೃತಿಯ ಹಿಂದಿನ ಕಥಾ ಗ್ರಹಿಕೆಯ ಬೇರು ಹಿಂದೂ ಪುರಾಣ ಕಥನಗಳಲ್ಲಿದೆ. ಉದಾಹರಣೆಗೆ, ಶಾಪ-ಉಪಶಾಪದ ಕಲ್ಪನೆಯನ್ನೇ ಗಮನಿಸಬಹುದು. ಶಕುಂತಲೆಗೆ ದೂರ್ವಾಸ ಮುನಿಯು ಶಾಪವನ್ನೂ ಅದಕ್ಕೆ ಉಪಶಾಪವನ್ನೂ ನೀಡುವುದರಿಂದ ಕೊನೆಯಲ್ಲಿ ಕಥೆಯು ಸುಖಾಂತ್ಯಗೊಳ್ಳುತ್ತದೆ. ಅಂತೆಯೇ, ಬಕಾವಲಿ ಹೂವಿನ ಪರ್ಷಿಯನ್ ಹೆಸರಿನ ಪಾತ್ರಗಳು, ಭಾರತೀಯ ಪೌರಾಣಿಕ ಕಥಾ ನ್ಯಾಯದಂತೆ - ವಿಧಿನಿಯಮ ಹಾಗೂ ಅದಕ್ಕೊಂದು ಪರಿಹಾರೋಪಾಯದ ವಿನ್ಯಾಸಕ್ಕೊಳಪಟ್ಟು - ತನ್ಮೂಲಕ ಸುಖಾಂತ್ಯದ ಭಾಗ್ಯ ಕಾಣುತ್ತವೆ.

ಆಂಧ್ರ ಸೀಮೆಯಲ್ಲಿ ಜನಪದ ಕತೆಯಾಗಿ ಪ್ರಚಲಿತವಾಗಿದ್ದ ಈ ಕಥೆಯನ್ನು 19ನೆ ಶತಮಾನದ ಕೊನೆಯ ಭಾಗದಲ್ಲೇ ಮಧಿರಾ ಸುಬ್ಬನ್ನ ದೀಕ್ಷಿತುಲು ಎಂಬ ವಿದ್ವಾಂಸರು ಸಂಗ್ರಹಿಸಿ ‘ಕಾಸಿ ಮಜಿಲ್ಲಿ ಕಥಾಲು’ ಎಂಬ ಗ್ರಂಥದಲ್ಲಿ ಪ್ರಕಟಿಸಿರುವುದು ಕಂಡು ಬರುತ್ತದೆ. ಈ ಕಥೆಯೇ ಮುಂದೆ 1924 ರ ತರುವಾಯ ಮೂಕಿ ಸಿನೆಮಾವಾಗಿಯೂ ಮೂಡಿದ್ದು, ಈ ಕಥೆಯ ಅಖಿಲ ಭಾರತ ಜನಪ್ರಿಯತೆಗೆ ಪುರಾವೆ. ಹೀಗಾಗಿ, ಆ ಕಾಲದ ಗುಬ್ಬಿ ಕಂಪೆನಿಯ ಕನ್ನಡ ನಾಟಕವಾಗಿ ಗುಲೇಬಕಾವಲಿ ಮೆರೆದದ್ದು ಕಾಕತಾಳೀಯವೇನಲ್ಲ!

ಬಕಾವಲಿ ಹೂ ನಾಟಕವು ಅಸಾಧ್ಯವನ್ನು ಸಾಧ್ಯವಾಗಿಸಲು ಹೊರಟ; ದೈವಿಕ ಅಶೀರ್ವಾದವಿರುವ; ಸ್ಪುರದ್ರೂಪಿ ಅನಾಥ ರಾಜಕುಮಾರ ತಾಜುಲ್ ಮುಲ್ಕ್ ನ ಕರುಣೆ, ತ್ಯಾಗ, ವಿವೇಕ, ಜಾಣ್ಮೆ, ಸಾಹಸ, ನವಿರು ಶೃಂಗಾರಗಳ ಕಥೆ.

ಶಪಿತನಾಗಿ ಜನ ಸಾಮಾನ್ಯನಂತೆ ಬೆಳೆದ ಅನಾಥ ನತದೃಷ್ಟ ರಾಜಕುಮಾರನೊಬ್ಬ, ದೈವೀಕೃಪಾಶೀರ್ವಾದದ ಗೂಢ ಬೆಂಬಲದಿಂದಲೂ, ತನ್ನ ಸ್ವಯಂ ಯೋಗ್ಯತೆಯಿಂದಲೂ ಅದೃಷ್ಟವನ್ನು ಜಯಿಸಿಕೊಂಡ ಕಥಾನಕ ಇದು. ಕಥಾರಂಭದಲ್ಲೇ ಸಂಭಾವ್ಯ ದುರದೃಷ್ಟವನ್ನು ಮುಂಗಾಣಿಸುತ್ತ, ಆ ದುರದೃಷ್ಟವೇ ಅದೃಷ್ಟವಾಗಿ ಪರಿವರ್ತಿತವಾಗುವ; ಸತ್ಯಕ್ಕೇ ಜಯ ದೊರಕಿ ಸುಖಾಂತ್ಯಗೊಳ್ಳುವ ಕಾವ್ಯನ್ಯಾಯ ಕಥಾವಿನ್ಯಾಸ ಇಲ್ಲಿದೆ. ಮನುಷ್ಯತ್ವದ ಉದಾತ್ತತೆಯನ್ನು ಎತ್ತಿ ಮೆರೆಸುವ ‘ಅಸಾಮಾನ್ಯ ಸಾಮಾನ್ಯ’ನೊಬ್ಬನ ರೋಚಕ ಕಥೆ ಇದು. ಹೆಜ್ಜೆ ಹೆಜ್ಜೆಗೂ ತಿರುವು - ಕುತೂಹಲ; ಸವಾಲು-ಸಾಹಸ; ಕಣ್ಕಟ್ಟು - ಮಾಂತ್ರಿಕತೆ ಮುಂತಾದ ವಿಸ್ಮಯಕಾರೀ ಘಟನೆಗಳ ಸರಮಾಲೆಯೊಂದಿಗೆ ಭರಪೂರ ಮನರಂಜನೆಯನ್ನೀಯುತ್ತ ಸಾಗುವ ಈ ರೋಮಾಂಚಕಾರೀ ಕಥಾನಕವು ಫ್ಯಾಂಟಸಿ ಚಮತ್ಕಾರಗಳನ್ನು ಸುಲಭವಾಗಿ ಸೃಷ್ಟಿಸಲು ಸಾಧ್ಯವಾಗುವ ಸಿನೆಮಾ, ಸುಳ್ಳಿನ ಮೂಲಕ ಸತ್ಯವನ್ನು ಕಾಣಿಸುವ ರಂಗಭೂಮಿ- ಈ ಮಾಧ್ಯಮಗಳೆರಡಕ್ಕೂ ಆಪ್ತವೆನಿಸಿದ್ದು ಸಹಜವೇ ಆಗಿದೆ.

ನಾಟಕಕಾರರಾಗಿ ಸುಧೀರ್ ಅತ್ತಾವರ್ ಅವರ ಕಸಬುಗಾರಿಕೆಯ ಕುರಿತು ನನ್ನ ವಿಶೇಷ ಮೆಚ್ಚುಗೆ ಇದೆ. ಕಥೆಯೊಂದನ್ನು ನಾಟಕರೂಪಕ್ಕಿಳಿಸುವಾಗ ನಾಟಕಕಾರನು ಎದುರಿಸುವ ಮೊದಲ ಸವಾಲೆಂದರೆ ಆ ಕಥೆಯ ಕಾಲ-ದೇಶಗಳ ಮರು ಹೊಂದಾಣಿಕೆ ಹಾಗೂ ಜೋಡಣೆ. ಅಂದರೆ, ಪ್ರೇಕ್ಷಕನ ಮನಸ್ಸಿನಲ್ಲಿ ಮುಂದೇನು ಎಂಬ ಕಥಾಕುತೂಹಲ ಮೂಡಿಸುತ್ತ ಕಥನವು ಅನುಕ್ರಮವಾಗಿ ಹಿಗ್ಗುತ್ತ ಏರುಗತಿಯಲ್ಲಿ ಸಾಗುವಂತೆಯೂ, ಹಾಗೂ ಅದೇ ಕಾಲಕ್ಕೆ, ಪ್ರೇಕ್ಷಕನ ಕಣ್ಣಿದುರು ಪ್ರತ್ಯಕ್ಷ ಕಾಣುವ ಕಥಾ ಪ್ರದೇಶಗಳನ್ನು ಒಂದರ ಪಕ್ಕ ಇನ್ನೊಂದನ್ನಿಟ್ಟು ವೈವಿಧ್ಯಮಯ ದೃಶ್ಯಾವಳಿಗಳನ್ನಾಗಿಯೂ, ತಾಂತ್ರಿಕ ತಡೆಯೊಡ್ಡದೆ ಅವು ಸರಾಗ ಓಡುವಂತೆಯೂ ಹೆಣೆಯಬೇಕು. ಅರ್ಥಾತ್, ಪ್ರೇಕ್ಷಕನ ಮನಸ್ಸಿನಲ್ಲಿ ಬೆಳೆಯುವ ಅಮೂರ್ತ ವಿನ್ಯಾಸವನ್ನೂ ಅಂತೆಯೇ ಕಣ್ಣಿಗೆ ಕಾಣುವ ಮೂರ್ತ ದೃಶ್ಯ ವಿನ್ಯಾಸವನ್ನೂ - ಪರಸ್ಪರ ಹೊಂದಿಸಿ ಕಡೆದು ನಿಲ್ಲಿಸಬೇಕು. ಮಾತ್ರವಲ್ಲ, ನಾಟಕಕಾರನು ಕಥನ ಕಾಲ -ನರೇಟಿವ್ ಟೈಮ್‌ನ್ನು ಹಿಗ್ಗಿಸುತ್ತಲೂ ಕುಗ್ಗಿಸುತ್ತಲೂ; ದೃಶ್ಯ ಸ್ಥಳವನ್ನು ವಿಸ್ತರಿಸುತ್ತಲೂ - ನಿಯಂತ್ರಿಸುತ್ತಲೂ ಇರಬೇಕು. ಈ ರೀತಿಯ ಕಾಲ-ಸ್ಥಳಗಳ ಸರಾಗ ಹರಿಯುವಿಕೆಯನ್ನು ಅಪೇಕ್ಷಿಸುವ, ನಾಟಕೀಯ ಕಥನದ ಕಸಬುಗಾರಿಕೆಯಲ್ಲಿ ಸುಧೀರ್ ಅವರು ತಮ್ಮ ಚೊಚ್ಚಲ ನಾಟಕ ಕೃತಿಯಲ್ಲೇ ಪರಿಣಿತಿಯ ಕುರುಹು ತೋರಿಸಿದ್ದಾರೆ.

ಆದ್ದರಿಂದಲೇ ನಾಟಕ ಪಠ್ಯವನ್ನು ನಿರ್ದೇಶಕನ ಕಣ್ಣಿನಲ್ಲಿ ಅಳೆದು ನೋಡುವ ಅಭ್ಯಾಸವಾಗಿರುವ ನನಗೆ, ಬಕಾವಲಿಯ ಹೂ ನಾಟಕದಲ್ಲಿಯ ನಾಟಕೀಯತೆ, ಕಣ್ಣಿಗೆ ಅಚ್ಚೊತ್ತುವಂತಿರುವ ದೃಶ್ಯಾವಳಿಗಳು, ದೃಶ್ಯಗಳ ಸರಾಗ ಹರಿವು, ಚುರುಕು ಸಂಭಾಷಣೆ, ಕಾವ್ಯ ಪ್ರತಿಮೆ, ಗೇಯ ಗೀತಗಳು ಪ್ರದರ್ಶನವನ್ನು ಉತ್ಕಟಗೊಳಿಸುವ ಹಾಗೂ ಅನುಭವದ ಗಹನತೆಗೆ ಅನುವಾಗುವ ಅಂಶಗಳು ಎಂದೆನಿಸಿವೆ. ನಟರ ಭಾವಭಂಗಿ ರಸಾವೇಶಕ್ಕೆ ವಿಪುಲ ಅವಕಾಶವನ್ನು ನಾಟಕಕಾರರು ಒದಗಿಸಿದ್ದಾರೆ ಇಲ್ಲಿ.

ಸುಧೀರ್ ಅತ್ತಾವರ್ ಅವರ ಬಕಾವಲಿ ಹೂ ಸಮಕಾಲೀನ ರಂಗಭೂಮಿಯಲ್ಲಿ ಬಹುವಿಧ ಪ್ರಯೋಗಗಳಾಗಿ ಅರಳಲಿ ಎಂದು ಆಶಿಸುತ್ತೇನೆ.

Writer - ಸುರೇಶ ಆನಗಳ್ಳಿ

contributor

Editor - ಸುರೇಶ ಆನಗಳ್ಳಿ

contributor

Similar News