ಕೋಮು ಸೌಹಾರ್ದತೆ ನೆಲೆಸಲಿ: ಮುಫ್ತಿ ಇಫ್ತಿಕಾರ್
ಬೆಂಗಳೂರು, ಆ.13: ದೇಶದಲ್ಲಿ ಕೋಮು ಸೌಹಾರ್ದ ನೆಲೆಸಬೇಕು, ಎಲ್ಲ ವರ್ಗಗಳ ಜನರಿಗೆ ಅವರ ಧಾರ್ಮಿಕ ಆಚರಣೆಗಳಿಗೆ ಮುಕ್ತ ಅವಕಾಶಗಳು ಸಿಗಬೇಕೆಂದು ಜಮೀಯತ್ ಉಲೇಮಾ ಹಿಂದ್ ಕರ್ನಾಟಕ ಅಧ್ಯಕ್ಷ ಮುಫ್ತಿ ಇಫ್ತಿಕಾರ್ ಸಾಹೇಬ್ ಹೇಳಿದರು.
ರವಿವಾರ ನಗರದ ಪುರಭವನದಿಂದ ಸ್ವಾತಂತ್ರ ಉದ್ಯಾನದವreಗೆ ಜಮೀಯತ್ ಉಲೇಮಾ ಹಿಂದ್ ಕರ್ನಾಟಕ ವತಿಯಿಂದ ಕೋಮು ಸೌಹಾರ್ದತೆಗಾಗಿ ನಡೆದ ಶಾಂತಿಗಾಗಿ ಬೃಹತ್ ನಡಿಗೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಾತಿ, ಧರ್ಮದ ಹೆಸರಿನಲ್ಲಿ ಜನರಲ್ಲಿ ಒಡಕು ಮೂಡಿಸುವ ವ್ಯವಸ್ಥಿತ ಪ್ರಯತ್ನಗಳು ನಡೆಯುತ್ತಿರುವುದನ್ನು ನಾವು ಕಾಣಬಹುದಾಗಿದೆ ಎಂದರು.
ಭಾರತ ಜಾತ್ಯತೀತ ರಾಷ್ಟ್ರವಾಗಿದ್ದು, ಇಲ್ಲಿ ಜೀವನ ನಡೆಸುತ್ತಿರುವ ಪ್ರತಿಯೊಬ್ಬ ನಾಗರಿಕರ ಹಕ್ಕಾಗಿದೆ. ಆದರೆ, ಕೆಲವರು ರಾಜಕೀಯ ಲಾಭಕ್ಕಾಗಿ ಕೋಮುವಾದ ಹುಟ್ಟು ಹಾಕಿದ್ದಾರೆ. ಇಂತಹ ಪಿಡುಗಗಳ ವಿರುದ್ಧ ಎಲ್ಲರೂ ಧ್ವನಿಗೂಡಿಸಬೇಕು ಎಂದ ಅವರು, ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವ ಮುಸ್ಲಿಮರು ಸಮಾನ ಮನಸ್ಕ ಇತರ ವರ್ಗಗಳೊಂದಿಗೆ ಕೈ ಜೋಡಿಸಿ ಹೋರಾಟ ಮಾಡಬೇಕೆಂದು ಕರೆ ನೀಡಿದರು.
ಸಂವಿಧಾನಬದ್ಧವಾಗಿ ನಮಗೆ ಸಿಕ್ಕಿರುವ ಧಾರ್ಮಿಕ ಸ್ವಾತಂತ್ರದ ಹಕ್ಕನ್ನು ಯಾವುದೇ ಆಡಳಿತ ಕಸಿದುಕೊಳ್ಳಲು ಮುಂದಾಗಬಾರದು. ದೇಶದ ಅಭಿವೃದ್ಧಿಗೆ ಮುಸ್ಲಿಮರ ಕೊಡುಗೆ ಅಪಾರವಾದದ್ದು. ಈ ದೇಶವನ್ನು ಅಭಿವೃದ್ಧಿ ಹೊಂದಿದ ಸಶಕ್ತ ರಾಷ್ಟ್ರವನ್ನಾಗಿ ರೂಪಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ನುಡಿದರು.
ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮುಜಾಹಿದ್ ಪಾಶಾ ಮಾತನಾಡಿ, ದೇಶದಲ್ಲೆಡೆ ಅಲ್ಪಸಂಖ್ಯಾತರ ಹಾಗೂ ದಲಿತರ ಮೇಲೆ ಹಲ್ಲೆಗಳು ನಡೆಯುತ್ತಿವೆ. ಆದರೂ, ಸರಕಾರಗಳು ಕಠಿಣ ಕ್ರಮಗಳನ್ನು ಕೈಗೊಂಡಿಲ್ಲ. ಈಗಲೂ ಅಸಹಿಷ್ಣುತೆ ವಾತಾವರಣ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ದಲಿತ ಮತ್ತು ಮೈನಾರಿಟಿಸ್ ಸೇನೆ ಕಾರ್ಯಾಧ್ಯಕ್ಷ ಎ.ಜೆ.ಖಾನ್ ಮಾತನಾಡಿ, ದೇಶದಲ್ಲಿನ ಒಂದು ನಿಗದಿತ ವರ್ಗದ ಸಂಕುಚಿತ ಆಲೋಚನೆಯಿಂದಾಗಿ ಬಹುಪಾಲು ಜನರನ್ನು ಮೂಲಭೂತ ಸಮಸ್ಯೆಗಳ ಬಗ್ಗೆ ಗಮನಹರಿಸದಂತೆ ಹಾದಿ ತಪ್ಪಿಸಲಾಗುತ್ತಿದೆ. ಅಲ್ಲದೆ, ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಅಪರಾಧ ಕೃತ್ಯಗಳನ್ನು ತಡೆಯಲು ಸರಕಾರಗಳು ಕೈಗೊಂಡಿರುವ ಕ್ರಮಗಳೇನು ಎಂದು ಪ್ರಶ್ನಿಸಿದರು.
ಶಾಂತಿಗಾಗಿ ನಡೆದ ಮೆರವಣಿಗೆಯಲ್ಲಿ ಶಾವಲಿವಲ್ಲಾ ಮದ್ರಸಾದ ಮುಖ್ಯಸ್ಥ ಮೌಲಾನ ಝೈನುಲ್ ಆಬಿದೀನ್, ಜುಮ್ಮಾ ಮಸ್ಜಿದ್ ಟ್ರರ್ಸ್ಟ್ ಬೋರ್ಡ್ ಅಧ್ಯಕ್ಷ ಡಾ.ಅನ್ವರ್ ಶರೀಫ್, ಜಮೀಯತ್ ಉಲೇಮಾ ಹಿಂದ್ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತಫ್ಹೀಮುಲ್, ಮುಸ್ಲಿಮ್ ಮುತ್ತಹಿದ ಮಹಝ್ನ ಮುಖಂಡರು ಸೇರಿ ಪ್ರಮುಖರು ಹಾಜರಿದ್ದರು.