ಬಾರದ ಮಳೆ: ಭೀಕರ ಬರಗಾಲದತ್ತ ಮಲೆನಾಡು

Update: 2017-08-14 17:36 GMT

♦ಶಿವಮೊಗ್ಗ ಜಿಲ್ಲೆಯಲ್ಲಿ ಶೇ.31ರಷ್ಟು ಮಳೆ ಕೊರತೆ!  ♦ಜಿಲ್ಲೆಯಲ್ಲಿ ಭರ್ತಿಯಾಗದ ಕೆರೆಗಳು

ಶಿವಮೊಗ್ಗ, ಆ.14: ಕಳೆದೆರಡು ವರ್ಷಗಳ ರೀತಿಯಲ್ಲಿ ಪ್ರಸಕ್ತ ವರ್ಷವೂ ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಮಳೆ ಕೊರತೆ ಮುಂದುವರಿದಿದೆ. ಕಳೆದ ವರ್ಷ ಬಿದ್ದ ಮಳೆಯು ಕೂಡ ಈ ಬಾರಿ ಬಿದ್ದಿಲ್ಲ. ಪ್ರಮುಖ ಜಲಾಶಯ, ಕೆರೆಕಟ್ಟೆಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗಿಲ್ಲ. ಇದರಿಂದ ಕೃಷಿ ಚಟುವಟಿಕೆ ಮೇಲೆ ಗಂಭೀರ ಪರಿಣಾಮ ಬೀರುವಂತಾಗಿದೆ. ಕೃಷಿ ಇಲಾಖೆಯ ಮೂಲಗಳ ಪ್ರಕಾರ, ಇಲ್ಲಿಯವರೆಗೆ ಜಿಲ್ಲೆಯಲ್ಲಿ 1,444 ಮಿಲಿ ಮೀಟರ್ (ಮಿ.ಮೀ.) ವಾಡಿಕೆ ಮಳೆಯಾಗಬೇಕಾಗಿತ್ತು. ಆದರೆ 1,005 ಮಿ.ಮೀ. ಮಾತ್ರ ವರ್ಷಧಾರೆಯಾಗಿದೆ. ಒಟ್ಟಾರೆ ಶೇ.31 ರಷ್ಟು ಮಳೆ ಕೊರತೆಯಾಗಿದೆ. ಜಿಲ್ಲೆಯ ಯಾವುದೇ ತಾಲೂಕು ಗಳಲ್ಲಿಯೂ ವಾಡಿಕೆಯ ಮಳೆಯಾಗಿಲ್ಲ. ಮಳೆ ಕೊರತೆ ವಿವರ:  

ಶಿವಮೊಗ್ಗದಲ್ಲಿ ವಾಡಿಕೆ ಮಳೆ 539.8 ಮಿ.ಮೀ. ಆಗಿದ್ದು, 421.5 ಮಿ.ಮೀ. ಮಳೆಯಾಗಿದೆ. ಶೇ.22ರಷ್ಟು ಮಳೆ ಕೊರತೆ ಯಾಗಿದೆ. ಭದ್ರಾವತಿ ತಾಲೂಕಿನ ವಾಡಿಕೆ ಮಳೆ 447 ಮಿ.ಮೀ. ಆಗಿದ್ದು, 303 ಮಿ.ಮೀ. ವರ್ಷಧಾರೆಯಾಗಿದೆ. ಉಳಿದಂತೆ ಸಾಗರದ ವಾಡಿಕೆ ಮಳೆ 1,853 ಮಿ.ಮೀ. ಆಗಿದ್ದು, 1,449.8 ಮಿ.ಮೀ. ಮಳೆ ಯಾಗಿದೆ. ಶೇ.22ರಷ್ಟು ಮಳೆ ಕೊರತೆಯಾಗಿದೆ. ಸೊರಬದ ವಾಡಿಕೆ ಮಳೆ 1,168.5 ಮಿ.ಮೀ. ಆಗಿದ್ದು, 617.8 ಮಿ.ಮೀ. ಮಳೆಯಾಗಿದೆ. ಶೇ.47ರಷ್ಟು ಕೊರತೆ ಕಂಡುಬಂದಿದೆ. ತೀರ್ಥಹಳ್ಳಿಯ ವಾಡಿಕೆ ಮಳೆ 2,305 ಮಿ.ಮೀ.ಯಾಗಿದ್ದು, 1,457.1 ಮಿ. ಮೀ. ಮಳೆಯಾಗಿದೆ. ಕೊರತೆಯ ಪ್ರಮಾಣ ಶೇ.37ರಷ್ಟಿದೆ. 

ಹೊಸ ನಗರದ ವಾಡಿಕೆ ಮಳೆ 2,073 ಮಿ.ಮೀ ಆಗಿದ್ದು, 1,492 ಮಿ.ಮೀ. ಮಳೆ ಯಾಗಿದೆ. ಶೇ.28 ರಷ್ಟು ಕೊರತೆಯಿದೆ. ಶಿಕಾರಿಪುರದ ವಾಡಿಕೆ ಮಳೆ 583.4 ಮಿ.ಮೀ. ಆಗಿದ್ದು, 364.4 ಮಿ.ಮೀ. ವರ್ಷ ಧಾರೆಯಾಗಿದೆ. ಶೇ.38ರಷ್ಟು ಮಳೆ ಕೊರತೆ ಯಿದೆ. ಗಂಭೀರ ಪರಿಣಾಮ: ಜಿಲ್ಲೆಯ ಮುಕ್ಕಾಲು ಪಾಲು ಕೆರೆಗಳು ಇಲ್ಲಿಯವರೆಗೂ ಭರ್ತಿಯಾಗಿಲ್ಲ. ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗಿಲ್ಲ. ಹಾಗೆಯೇ ಲಿಂಗನಮಕ್ಕಿ, ಭದ್ರಾ ಜಲಾಶಯಗಳಲ್ಲಿ ಕಳೆದ ವರ್ಷ ಸಂಗ್ರಹವಾಗಿದ್ದಷ್ಟು ನೀರು ಕೂಡ ಪ್ರಸಕ್ತ ವರ್ಷ ಸಂಗ್ರಹವಾಗಿಲ್ಲ. ಇದು ರೈತರು ಮಾತ್ರವಲ್ಲದೆ ನಾಗರಿಕರಲ್ಲಿಯೂ ಆತಂಕ ಉಂಟು ಮಾಡಿದೆ. ಮಳೆ ಕೊರತೆಯು ವಿಶೇಷವಾಗಿ ಭತ್ತ ಬೆಳೆಯ ಮೇಲೆ ಗಂಭೀರ ಪರಿಣಾಮ ಉಂಟು ಮಾಡಿದೆ. ಇಲ್ಲಿಯವರೆಗೂ ಜಿಲ್ಲೆಯ ಹಲವೆಡೆ ಭತ್ತ ಬಿತ್ತನೆ, ನಾಟಿ ಪ್ರಕ್ರಿಯೆ ಆರಂಭವಾಗಿಲ್ಲ. ಮುಂದಿನ ಕೆಲ ದಿನಗಳಲ್ಲಿ ಉತ್ತಮ ಮಳೆಯಾಗಿ ಕೆರೆಕಟ್ಟೆ, ಜಲಾಶಯಗಳಿಗೆ ನೀರು ಹರಿದು ಬಂದರೆ ಮಾತ್ರ ಭತ್ತ ಬಿತ್ತನೆ, ನಾಟಿ ಪ್ರಕ್ರಿಯೆ ಚುರುಕುಗೊಳ್ಳುವ ಸಾಧ್ಯತೆಯಿದೆ. ಇಲ್ಲದಿದ್ದರೆ ಈ ಬಾರಿಯೂ ಭತ್ತ ಬೆಳೆಗಾರರಿಗೆ ಸಂಕಷ್ಟ ತಪ್ಪಿದ್ದಲ್ಲ ಎಂದು ಕೃಷಿ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ. ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಮಳೆ ಅಂಕಿಅಂಶದ ಪ್ರಕಾರ, ಸೋಮವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಬಿದ್ದ ಒಟ್ಟಾರೆ ಮಳೆಯ ಸರಾಸರಿ ಪ್ರಮಾಣ 0.00 ಮಿ.ಮೀ. ಆಗಿದೆ! ಜಿಲ್ಲೆಯ ಏಳು ತಾಲೂಕುಗಳಲ್ಲಿ ಒಣ ಹವೆ ಮುಂದುವರಿದಿದ್ದು, ಮಳೆ ಮಾಯವಾಗಿದೆ. ಉಳಿದಂತೆ ಲಿಂಗನಮಕ್ಕಿ ಜಲಾಶಯದ ಒಳಹರಿವು 4,590 ಕ್ಯೂಸೆಕ್ ಇದ್ದು, 2,377 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಡ್ಯಾಂನ ನೀರಿನ ಮಟ್ಟ 1,784.80 (ಗರಿಷ್ಠ ಮಟ್ಟ: 1,819) ಅಡಿಯಿದೆ. 4,590 ಕ್ಯೂಸೆಕ್ ಒಳಹರಿವಿದ್ದು, 2,377 ಕ್ಯೂಸೆಕ್ ಒಳಹರಿವಿದೆ. ಭದ್ರಾ ಡ್ಯಾಂನ ಒಳಹರಿವು 2,121.16 ಕ್ಯೂಸೆಕ್ ಇದ್ದು, 3,204 ಕ್ಯೂಸೆಕ್ ಹೊರಹರಿವಿದೆ. ಡ್ಯಾಂನ ನೀರಿನ ಮಟ್ಟ 149.20 (ಗರಿಷ್ಠ ಮಟ್ಟ: 186) ಅಡಿಯಿದೆ. ತುಂಗಾ ಜಲಾಶಯವು ಈಗಾಗಲೇ ಗರಿಷ್ಠ ಮಟ್ಟವಾದ 588.24 ಅಡಿ ತಲುಪಿದೆ. ಸದ್ಯ 7,575 ಕ್ಯೂಸೆಕ್ ಒಳಹರಿವಿದ್ದು, 5,987 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.

ಬರಪೀಡಿತ ಘೋಷಣೆಗೆ ಜಿಪಂ ಅಧ್ಯಕ್ಷೆ ಆಗ್ರಹ

ಜಿಲ್ಲೆಯಲ್ಲಿ ಮುಂಗಾರು ಮಳೆಯ ಎರಡೂವರೆ ತಿಂಗಳ ಅವಧಿ ಪೂರ್ಣಗೊಳ್ಳುತ್ತಾ ಬಂದರೂ ನಿರೀಕ್ಷಿತ ಪ್ರಮಾಣದಲ್ಲಿ ವರ್ಷಧಾರೆಯಾಗಿಲ್ಲ. ಎಲ್ಲ ತಾಲೂಕುಗಳಲ್ಲಿಯೂ ಮಳೆ ಕೊರತೆ ಕಂಡುಬಂದಿದೆ. ಅಧಿಕಾರಿಗಳು ಹೇಳುವ ಮಾಹಿತಿಯನುಸಾರ, ಜಿಲ್ಲೆಯಲ್ಲಿ ಒಟ್ಟಾರೆ ಶೇ.31ರಷ್ಟು ಮಳೆ ಕೊರತೆಯಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್ ತಿಳಿಸಿದ್ದಾರೆ. ಸೋಮವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸದ್ಯದ ವಾತಾವರಣ ಗಮನಿಸಿದರೆ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗುವ ಸಾಧ್ಯತೆ ಅನುಮಾನವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮಳೆಗಾಲದ ಅವಧಿ ಪೂರ್ಣಗೊಳ್ಳುವವರೆಗೂ ಕಾಯದೆ ಜಿಲ್ಲೆಯ ರೈತರು, ಗ್ರಾಮೀಣ ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ಎದುರಾಗಬಹುದಾದ ಪರಿಸ್ಥಿತಿ ಎದುರಿ ಸುವ ಪೂರ್ವಭಾವಿ ತಯಾರಿ ಆರಂಭಿಸಬೇಕಾಗಿದೆ ಎಂದು ತಿಳಿಸಿದ್ದಾರೆ. ಈಗಾಗಲೇ ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಕಂಡುಬಂದ ಬರ ಪರಿಸ್ಥಿತಿಯಿಂದ ರೈತರು, ನಾಗರಿಕರು ತೀವ್ರ ತೊಂದರೆ ಅನುಭವಿಸಿದ್ದಾರೆ.  

ಪ್ರಸಕ್ತ ವರ್ಷವೂ ಬರದ ಕರಿಛಾಯೆ ಆವರಿಸಿ ರುವುದರಿಂದ ಮುಂದಿನ ದಿನಗಳಲ್ಲಿ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವುದು ನಿಶ್ಚಿತ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

‘ನವೆಂಬರ್ ನಂತರ ಬರ ಘೋಷಣೆ’

ನವೆಂಬರ್‌ವರೆಗೆ ಕಾದುನೋಡಿ ಬರ ಪರಿಸ್ಥಿತಿಯ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪಹೇಳಿದ್ದಾರೆ.
ಸುದ್ದಿಗಾರರೊಂದಿಗೆ ವಾತನಾಡಿದ ಅವರು, ಅಕ್ಟೋಬರ್ ವರೆಗೆ ಮಳೆಗಾಲ ಇರುವುದರಿಂದ ಸದ್ಯ ಯಾವುದೇ ತೀರ್ಮಾನ ಕೈಗೊಳ್ಳಲಾಗದು. ಆದರೆ ಬರ ಪರಿಸ್ಥಿತಿ ಎದುರಾಗಲಿದೆ ಎನ್ನುವುದು ಈಗಾಗಲೇ ಗೊತ್ತಾಗಿದೆ. ಅಪಾಯದ ಸೂಕ್ಷ್ಮ ಅರಿವಾಗಿದೆ ಎಂದರು.
ಮೋಡ ಬಿತ್ತನೆಯಿಂದ ವೈಜ್ಞಾನಿಕವಾಗಿ ಲಾಭವಿಲ್ಲ ಎಂಬ ಮಾತು ಕೇಳಿಬರುತ್ತಿರುವ ಬಗ್ಗೆ ಮಾತನಾಡಿದ ಅವರು, ಹಿನ್ನ್ನಡೆ-ಮುನ್ನಡೆ ಎಲ್ಲ ಕ್ಷೇತ್ರಗಳಲ್ಲೂ ಇದೆ. ಆದರೆ ಮೋಡ ಬಿತ್ತನೆಗೆ ನಿಗದಿತ ಕಾಲ ಮತ್ತು ಮೋಡದ ಅಗತ್ಯವಿದೆ. ಅದನ್ನು ನೋಡಿಕೊಂಡು ಮೋಡಬಿತ್ತನೆ ಮಾಡಲಾಗುವುದು ಎಂದರು.

Writer - ಬಿ.ರೇಣುಕೇಶ್

contributor

Editor - ಬಿ.ರೇಣುಕೇಶ್

contributor

Similar News