ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಅದ್ದೂರಿ ತೆರೆ

Update: 2017-08-15 17:18 GMT
  • ಕೊನೆಯ ದಿನ ಭೇಟಿ ನೀಡಿದವರು: 2.13 ಲಕ್ಷಕ್ಕೂ ಅಧಿಕ
  • ಪ್ರದರ್ಶನಕ್ಕೆ ಖರ್ಚು ಮಾಡಿದ್ದ ಹಣ: 1.35 ಕೋಟಿ ರೂ.
  • ಆ.4 ರಿಂದ 15ರವರೆಗೆ ಭೇಟಿ ನೀಡಿದವರ ಸಂಖ್ಯೆ: 5.73 ಲಕ್ಷ
  • ಸಂಗ್ರಹವಾದ ಹಣ: 2.14 ಕೋಟಿ ರೂ.ಗಳು
  • ನಿರೀಕ್ಷೆ ಮೀರಿ ಭೇಟಿ ನೀಡಿದ ವೀಕ್ಷಕರು

ಬೆಂಗಳೂರು, ಆ.15: ಸ್ವಾತಂತ್ರ್ಯೋತ್ಸವ ಅಂಗವಾಗಿ ನಗರದ ಲಾಲ್‌ಬಾಗ್‌ನಲ್ಲಿ ಆ.4 ರಿಂದ ಆ.15 ರವರೆಗೆ ಆಯೋಜಿಸಿದ್ದ ಲಪುಷ್ಪ ಪ್ರದರ್ಶನಕ್ಕೆ ಮಂಗಳವಾರ ತೆರೆ ಕಂಡಿದೆ.

ಕುವೆಂಪು ನೆನಪಿನಾರ್ಥವಾಗಿ ಕುಪ್ಪಳ್ಳಿಯ ಕುವೆಂಪು ಅವರ ಮನೆ ಮಾದರಿಯ ಫಲಪುಷ್ಪ ಪ್ರದರ್ಶನದ ಕೊನೆ ದಿನದಂದು ನಿರೀಕ್ಷೆ ಮೀರಿ ಜನ ಸಾಗರ ವೀಕ್ಷಿಸಿದ್ದಾರೆ. ನಗರದ ವಿವಿಧ ಭಾಗಗಳಿಂದ ಅಲ್ಲದೆ, ರಾಜ್ಯದ ಬೇರೆ ಬೇರೆ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿದ್ದರು.
ಸ್ವಾತಂತ್ರ ದಿನದ ಅಂಗವಾಗಿ ಮಂಗಳವಾರ ಸರಕಾರಿ ರಜೆಯಿದ್ದರಿಂದ ಬೆಳಗ್ಗೆಯಿಂದಲೇ ಜನರು ಲಾಲ್‌ಬಾಗ್‌ಗೆ ಆಗಮಿಸಿದ್ದರು. ಆದರೆ, ಮಧ್ಯಾಹ್ನದ ವೇಳೆಗೆ ಮೋಡದ ವಾತಾವರಣವಿದ್ದರೂ, ಮಕ್ಕಳು, ಮುದುಕರು ಸೇರಿದಂತೆ ತಂಡೋಪತಂಡಗಳಾಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

ಲಾಲ್‌ಬಾಗ್‌ನ ನಾಲ್ಕು ಪ್ರವೇಶ ದ್ವಾರಗಳಲ್ಲಿ ಜಾತ್ರೆಯ ವಾತಾವರಣವಿತ್ತು. ಟಿಕೆಟ್ ಕೌಂಟರ್‌ಗಳ ಬಳಿ ಟಿಕೆಟ್‌ಗಾಗಿ ನೂಕುನುಗ್ಗಲಿತ್ತು. ಲಾಲ್‌ಬಾಗ್‌ನ ಮುಖ್ಯ ಗೇಟಿನ ರಸ್ತೆಯಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವ ಸಲುವಾಗಿ ಏಕಮುಖ ರಸ್ತೆಯನ್ನಾಗಿ ವಿಂಗಡನೆ ಮಾಡಲಾಗಿತ್ತು. ಆದರೂ, ರಸ್ತೆ ಬದಿಯಲ್ಲಿ ವ್ಯಾಪಾರಿಗಳು ಅಂಗಡಿಗಳನ್ನು ತೆರೆದಿದ್ದರಿಂದ ಸಂಚಾರ ದಟ್ಟಣೆ ನಿರ್ಮಾಣವಾಗುತ್ತಿತ್ತು. ಜನಸಂಖ್ಯೆ ಅಧಿಕವಾಗಿದ್ದರಿಂದ ವಾಹನ ಸಂಖ್ಯೆಯೂ ಹೆಚ್ಚಿತ್ತು.

ಪಾರ್ಕಿಂಗ್ ನೆಪದಲ್ಲಿ ಸುಲಿಗೆ: ಲಾಲ್‌ಬಾಗ್‌ನ ಸುತ್ತಲಿನ ರಸ್ತೆಗಳಲ್ಲಿ ಅಲ್ಪ ಸ್ವಲ್ಪ ಜಾಗವಿದ್ದರೂ ಅಲ್ಲಿನ ಮಾಲಕರು ಪಾರ್ಕಿಂಗ್ ಬೋರ್ಡ್ ಹಾಕಿ ವಾಹನಗಳ ನಿಲುಗಡೆಗಾಗಿ ದ್ವಿಚಕ್ರ ವಾಹನಗಳಿಗೆ 30-40, ಕಾರುಗಳಿಗೆ 100 ರೂ.ಗಳಿಗೂ ಮೇಲ್ಪಟ್ಟು ಹಣ ವಸೂಲಿ ಮಾಡುತ್ತಿದ್ದರು ಎಂದು ವೀಕ್ಷಣೆಗೆ ಆಗಮಿಸಿದ್ದವರು ಆರೋಪಿಸಿದರು.

ಉಸಿರುಗಟ್ಟಿಸಿದ ಗಾಜಿನ ಮನೆ: ಕೊನೆದಿನವಾದುದರಿಂದ ಕುವೆಂಪು ಮನೆ ವೀಕ್ಷಿಸಲು ಒಂದು ಕಡೆ ಸಾವಿರಾರು ಜನರು ಆಗಮಿಸಿದರೆ, ಮತ್ತೊಂದು ಕಡೆ ಶಾಲಾ-ಕಾಲೇಜುಗಳಲ್ಲಿ ಸ್ವಾತಂತ್ರ ದಿನಾಚರಣೆ ಮುಗಿಸಿದ ವಿದ್ಯಾರ್ಥಿಗಳೂ ನೇರವಾಗಿ ಲಾಲ್‌ಬಾಗ್‌ಗೆ ಆಗಮಿಸಿದ್ದರು. ಗಾಜಿನ ಮನೆಯಲ್ಲಿ ಉಸಿರುಗಟ್ಟುವಷ್ಟು ಜನ ಸೇರಿದ್ದು, ಹೂಗಳಿಂದ ನಿರ್ಮಿಸಿದ ಮನೆ ನೋಡುವುದರ ಬದಲಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಸಾರ್ವಜನಿಕರು ಮುಂದಾಗಿದ್ದರು. ಹೀಗಾಗಿ, ಇದನ್ನು ನಿಯಂತ್ರಿಸಲು ಅಲ್ಲಿನ ಸಿಬ್ಬಂದಿ ಹರಸಾಹಸ ಪಡುವಂತಾಯಿತು.

ಇನ್ನು ಬಂಡೆ ಮೇಲೆ, ಕೆರೆ ಏರಿ ಮೇಲೆ, ಬೋನ್ಸಾಯ್ ಗಾರ್ಡನ್, ತರಕಾರಿ ಗಾರ್ಡನ್, ಮಾರಾಟ ಮಳಿಗೆಗಳ ಬಳಿ ಜನವೋ ಜನ. ಸ್ನೇಹಿತರ ತಂಡ, ಕುಟುಂಬಗಳ ತಂಡ, ಯುವ ಜೋಡಿಗಳ ತಂಡ ಹೀಗೆ ಹಲವರು ಆಗಮಿಸಿದ್ದರು. ಗಾಜಿನ ಮನೆಯ ಸುತ್ತ ಲಾನ್‌ನಲ್ಲಿ ನಿರ್ಮಿಸಿದ್ದ ಅತ್ಯಾಕರ್ಷಕ ಹೂವಿನ ಅಲಂಕಾರಗಳು ಜನರನ್ನು ಸಂತಸಗೊಳಿಸಿದವು.

ವಾಹನ-ತ್ಯಾಜ್ಯದ ಅವ್ಯವಸ್ಥೆ: ಲಪುಷ್ಪ ಪ್ರದರ್ಶನ ವೀಕ್ಷಣೆಗೆ ಜನಸಾಗರ ಹರಿದು ಬಂದಿತ್ತು. ಜನರ ಆಗಮನಕ್ಕೆ ತಕ್ಕಂತೆ ಉದ್ಯಾನದಲ್ಲಿ ತ್ಯಾಜ್ಯದ ರಾಶಿಯೂ ತುಂಬಿತ್ತು. ತಿನಿಸುಗಳ ತ್ಯಾಜ್ಯ ಹಾಗೂ ಪ್ಲಾಸ್ಟಿಕ್ ಕವರ್‌ಗಳು ತುಂಬಿದ್ದವು. ಎಂದಿನಂತೆ ಆಯೋಜಕರಿಂದ ಅನಧಿಕೃತ ವ್ಯಾಪಾರಿಗಳ ಹಾವಳಿಯನ್ನು ಹತ್ತಿಕ್ಕಲಾಗಲಿಲ್ಲ ಎಂಬ ಆರೋಪ ಕೇಳಿ ಬರುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News