ಯುಪಿಸಿಎಲ್ ವಿಸ್ತರಣೆಗೆ ಕೇಂದ್ರ ಪರಿಸರ ಇಲಾಖೆ ಹಸಿರು ನಿಶಾನೆ

Update: 2017-08-17 17:05 GMT

ಉಡುಪಿ, ಆ.17: ಪಡುಬಿದ್ರಿ ಸಮೀಪದ ಎಲ್ಲೂರಿನಲ್ಲಿ ಈಗಾಗಲೇ ತಲಾ 600 ಮೆಗಾವ್ಯಾಟ್‌ನ ಎರಡು ಘಟಕಗಳೊಂದಿಗೆ ಕಾರ್ಯಾಚರಿಸುತ್ತಿರುವ ಗೌತಮ್ ಅದಾನಿ ಮಾಲಕತ್ವದ ಉಡುಪಿ ಪವರ್ ಕಾರ್ಪೋರೇಷನ್ ಲಿ.(ಯುಪಿಸಿಎಲ್)ಗೆ ಇನ್ನೂ ತಲಾ 800 ಮೆ.ವ್ಯಾನ ಎರಡು ಘಟಕಗಳ ವಿಸ್ತರಣೆಗೆ ಕೇಂದ್ರದ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ತನ್ನ ಹಸಿರು ನಿಶಾನೆ ತೋರಿಸಿದೆ.

ಈ ಮೂಲಕ ಎಲ್ಲೂರು ಆಸುಪಾಸಿನ ಇನ್ನೂ 766 ಎಕರೆ ಪ್ರದೇಶವನ್ನು ಭೂಸ್ವಾಧೀನ ಪಡಿಸಿಕೊಂಡು ಕಲ್ಲಿದ್ದಲು ಆಧಾರಿತ 4 ಸೂಪರ್ ಕ್ರಿಟಿಕಲ್ ಘಟಕಗಳನ್ನು ಸ್ಥಾಪಿಸಿ ಅವುಗಳ ಮೂಲಕ ಒಟ್ಟು 2,800 ಮೆ.ವ್ಯಾ.ವಿದ್ಯುತ್ ಉತ್ಪಾದನೆ ಮಾಡಲು ಪರಿಸರ ನಿರಪೇಕ್ಷಣಾ ಪತ್ರವನ್ನು ಇದೇ ಆ.1ರಂದು ಪಡೆದುಕೊಂಡಿದೆ ಎಂದು ಅದಾನಿ ಯುಪಿಸಿಎಲ್ ಕಂಪೆನಿ ಇತ್ತೀಚೆಗೆ ಪತ್ರಿಕೆಗಳಿಗೆ ನೀಡಿದ ಜಾಹೀರಾತಿನಲ್ಲಿ ಹೇಳಿಕೊಂಡಿದೆ.

ಕಂಪೆನಿಯ ವಿಸ್ತರಣೆಗೆ ಅಗತ್ಯವಿರುವ ಜಾಗವು ಈಗಾಗಲೇ ಕೈಗಾರಿಕಾ ಪ್ರದೇಶವೆಂದು 1995 ಮತ್ತು 1998ರಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1966ರನ್ವಯ ಕರ್ನಾಟಕ ಗಜೆಟ್‌ನಲ್ಲಿ ಪ್ರಕಟಿಸಲಾಗಿದೆ ಎಂದೂ ತಿಳಿಸಿದೆ.

ಉದ್ದೇಶಿತ ಯೋಜನೆಯಲ್ಲಿ ಸೂಪರ್ ಕ್ರಿಟಿಕಲ್ ಹಾಗೂ ಅಲ್ಟಾ ಸೂಪರ್ ಕ್ರಿಟಿಕಲ್ ತಂತ್ರಜ್ಞಾನಗಳನ್ನು ಅಳವಡಿಸಲಾಗುವುದು. ಶೇ.70 ವಿದೇಶದಿಂದ ಆಮದಿತ ಹಾಗೂ ಶೇ.30 ದೇಶಿಯ ಕಲ್ಲಿದ್ದಲನ್ನು ಬಳಸುವ ಉದ್ದೇಶದಿಂದ ಬಾಯ್ಲರ್‌ನ್ನು (ಮಿಶ್ರಿತ ಕಲ್ಲಿದ್ದಲು) ವಿಶೇಷವಾಗಿ ವಿನ್ಯಾಸಗೊಳಿಸಲಾಗುವುದು. ಯುಪಿಸಿಎಲ್‌ಗೆ ದೇಶೀಯ ಕಲ್ಲಿದ್ದಲು ಕೇಂದ್ರ ಸರಕಾರದಿಂದ ಹಂಚಿಕೆ ಆಗುವವರೆಗೆ ಶೇ.100ರಷ್ಟು ಆಸ್ಟ್ರೇಲಿಯ ಹಾಗೂ ಇಂಡೋನೇಷಿಯಾದಿಂದ ಆಮದಿತ ಕಲ್ಲಿದ್ದಲನ್ನು ಬಳಕೆ ಮಾಡಲಾಗುವುದು ಎಂದು ಕಂಪೆನಿ ಹೇಳಿಕೊಂಡಿದೆ.

ವಿಸ್ತರಣೆಯ ನಂತರ ವಾರ್ಷಿಕ ಕಲ್ಲಿದ್ದಲು ಅಗತ್ಯತೆ 6.20 ಮಿಲಿಯನ್‌ಟನ್ ಆಗಲಿದೆ.ಹೊರಬರುವ ಬೂದಿ ಮತ್ತು ಗಂಧಕದ ಪ್ರಮಾಣವು ಆಮದು ಕಲ್ಲಿದ್ದಲಿನಲ್ಲಿ ಅನುಕ್ರಮವಾಗಿ ಶೇ.25 ಹಾಗೂ ಶೇ.0.5ರ ಒಳಗಿರಬೇಕು. ಕಲ್ಲಿದ್ದಲು ಸಾಗಾಣಿಕೆಗೆ ಕಂಪೆನಿ ಕೊಂಕಣ ರೈಲ್ವೆಯೊಂದಿಗೆ ಸಂಪರ್ಕ ಹೊಂದಿದೆ ಎಂದು ಯುಪಿಸಿಎಲ್‌ನ ಪ್ರಕಟಣೆ ತಿಳಿಸಿದೆ.

ಅರಬಿ ಸಮುದ್ರದ ನೀರು: ಕಲ್ಲಿದ್ದಲು ಆಧಾರಿತ ಉಷ್ಣವಿದ್ಯುತ್ ಸ್ಥಾವರದ ಸಾಮರ್ಥ್ಯ 2800ಮೆ.ವ್ಯಾಟ್‌ಗೆ ವಿಸ್ತರಣೆಯಾದ ಮೇಲೆ ಅಗತ್ಯವಿರುವ ನೀರಿನ ಪ್ರಮಾಣ ಗಂಟೆಗೆ 24381ಮಿಲಿಯನ್‌ಕ್ಯೂಬ್ ಆಗಿದ್ದು, ಇದನ್ನು ಅರಬಿಸಮುದ್ರದಿಂದಲೇ ಪಡೆಯಲಾಗುವುದು. ಇದಕ್ಕಾಗಿ ಸಮುದ್ರದ ಪರಿಸರ ಪರಿಣಾಮ ಅಧ್ಯಯನವನ್ನು (ಇಐಎ) ಗೋವಾದ ಎನ್‌ಐಓ ಹಾಗೂ ಸಿಎಸ್‌ಐಆರ್ ನಡೆಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಾಲ್ಕು ಘಟಕಗಳಿಂದ ಉತ್ಪತ್ತಿಯಾಗುವ ಹಾರುಬೂದಿಯನ್ನು ಪ್ಲೈ ಆ್ಯಶ್ ಅಧಿಸೂಚನೆಯಂತೆ ಶೇ.100ರಷ್ಟು ಮರುಬಳಕೆ ಮಾಡಲಾಗುವುದು. ಇದಕ್ಕಾಗಿ ಸಿಮೆಂಟ್ ತಯಾರಿಕಾ ಘಟಕವನ್ನು ಕಂಪೆನಿ ವತಿಯಿಂದ ಸ್ಥಾಪಿಸಲಾಗುವುದು. ಪರಿಸರ ನಿರಪೇಕ್ಷಣಾ ಪತ್ರ ನೀಡುವ ಎಲ್ಲಾ ಷರತ್ತುಗಳನ್ನು, ಅಲ್ಲದೇ ವಿವಿಧ ಸಚಿವಾಲಯಗಳು ಕಾಲಕಾಲಕ್ಕೆ ಪ್ರಕಟಿಸುವ ಅಧಿಸೂಚನೆಗಳನ್ನು ಅನುಸರಣೆ ಮಾಡಲಾಗುವುದು ಎಂದೂ ಭರವಸೆ ನೀಡಲಾಗಿದೆ.

ಉದ್ದೇಶಿತ ಯೋಜನೆಯ ಪರಿಸರ ಪರಿಣಾಮ ಅಧ್ಯಯನವನ್ನು ನೀರಿ (ಎನ್‌ಇಇಆರ್‌ಐ) ಮಾಡಿದೆ. ಅದು ಮಾಡಿರುವ ಎಲ್ಲಾ ಶಿಫಾರಸ್ಸುಗಳನ್ನು ಜಾರಿಗೊಳಿಸಲಾಗುವುದು. ನೀರಿ ಮಾಡಿದ ಶಿಫಾರಸ್ಸಿನಂತೆ ಹಾರುಬೂದಿಯ ಮರುಬಳಕೆಗೆ ಸಿಮೆಂಟ್ ಗ್ಲೈಂಡಿಂಗ್ ಘಟಕ ಸ್ಥಾಪಿಸಲಾಗುವುದು.

ಸಿಆರ್‌ಝಡ್‌ನಿಂದ ಒಪ್ಪಿಗೆ: ಕರ್ನಾಟಕ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರವು ಕರಾವಳಿ ನಿಯಂತ್ರಿತ ವಲಯ (ಸಿಆರ್‌ಝಡ್) ನಿರಾಕ್ಷೇಪಣಾ ಪತ್ರವನ್ನು ನೀಡಿದೆ. ಇದು ಸಮುದ್ರ ನೀರನ್ನು ಯೋಜನೆಗೆ ಬಳಸಿಕೊಳ್ಳುವುದುಕ್ಕೆ (ಇನ್‌ಟೇಕ್) ಹಾಗೂ ಬಳಸಿ ಸಂಸ್ಕರಿಸಿದ ನೀರನ್ನು ಸಮುದ್ರಕ್ಕೆ ಬಿಡುವುದಕ್ಕೆ ಸಂಬಂಧಿಸಿದ್ದಾಗಿದೆ.

ವಿಸ್ತರಣೆಗಾಗಿ ಕಂಪೆನಿ ಒಟ್ಟು 14,500 ಕೋಟಿ ರೂ.ಗಳನ್ನು ವ್ಯಯಿಸಲಿದೆ. ಇದರಲ್ಲಿ ಯೋಜನೆಯ ಅಂದಾಜು ವೆಚ್ಚ 11,500ಕೋಟಿ ರೂ., ಪರಿಸರ ಮಾಲಿನ್ಯ ನಿಯಂತ್ರಣ ಕ್ರಮಗಳಿಗೆ 1,885.55 ಕೋಟಿ ರೂ., ಮರುಕಳಿಸುವ ವೆಚ್ಚಕ್ಕೆ 828.51 ಕೋಟಿ ರೂ., ಯೋಜನೆಯ ಅನುಷ್ಠಾನ ಅವಧಿಯಲ್ಲಿ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಿಗೆ 35 ಕೋಟಿ ರೂ.ವೆಚ್ಚ ಮಾಡು  ವ ಗುರಿಯನ್ನು ಹಾಕಿಕೊಳ್ಳಲಾಗಿದೆ.

ವಿಸ್ತರಣೆಗಾಗಿ ಕಂಪೆನಿ ಒಟ್ಟು 14,500 ಕೋಟಿ ರೂ.ಗಳನ್ನು ವ್ಯಯಿಸಲಿದೆ. ಇದರಲ್ಲಿ ಯೋಜನೆಯ ಅಂದಾಜು ವೆಚ್ಚ 11,500ಕೋಟಿ ರೂ., ಪರಿಸರ ಮಾಲಿನ್ಯ ನಿಯಂತ್ರಣ ಕ್ರಮಗಳಿಗೆ 1,885.55 ಕೋಟಿ ರೂ., ಮರುಕಳಿಸುವ ವೆಚ್ಚಕ್ಕೆ 828.51 ಕೋಟಿ ರೂ., ಯೋಜನೆಯ ಅನುಷ್ಠಾನ ಅವಧಿಯಲ್ಲಿ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಿಗೆ 35 ಕೋಟಿ ರೂ.ವೆಚ್ಚ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News